Thursday, 20 May 2010

Shivana Samudra

ಶಿವನಸಮುದ್ರ ನೋಡಲು ನಾನು ಮತ್ತು ಕಸ್ತೂರಿ ಆಗಸ್ಟ್ 26 ರಂದು KSRTC ಬಸ್ಸಿನಲ್ಲಿಹೊರಟೆವು. ಬೆಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ ಹೊರಟ ಬಸ್ಸು ಮೈಸೂರು ರಸ್ತೆ ಯಲ್ಲಿ  ಮದ್ದೂರಿಗೆ ಬಂದು ಸ್ವಲ್ಪ ಮುಂದೆ ಎಡಕ್ಕೆ ತಿರುಗಿ ಮಳವಳ್ಳಿ ಮಾರ್ಗವಾಗಿ ನೇರ ಶಿವನಸಮುದ್ರಕ್ಕೆ ಬಂದು ತಲುಪಿತು. ನಾವು ಬಸ್ಸಿಳಿದು ಅಲ್ಲೇ ಪಕ್ಕದ ಅಂಗಡಿಯಲ್ಲಿ ಮುಂದೆ ಯಾವಾಗ ಬಸ್ಸು ಬರುವುದು ಎಂದು ವಿಚಾರಿಸಿದೆವು. 'ಇಲ್ಲ ಸಾರ್ ಈ ಬಸ್ಸು ಈವಾಗ ಹೊರಟುಬಿಡುತ್ತದೆ, ಆಮೇಲೆ ಇಲ್ಲಿಗೆ ಬಸ್ಸು ಬರುವುದಿಲ್ಲ ಎಂದರು' ಹಾಗಾದರೆ ನಾವೇನು ಮಾಡುವುದು? ಎಂದು ಯೋಚಿಸುತ್ತಿರುವಾಗಲೇ ಅವರು ಹೇಳಿದರು 'ಇಲ್ಲಿಂದ ಬೇಕಾದಷ್ಟು ಅಟೋಗಳು, ಜೀಪು ಮುಂದೆ ಕ್ರಾಸ್ ನವರೆಗೆ ಹೋಗುತ್ತವೆ,ಆಲ್ಲಿಂದ ನಿಮಗೆ ಬೆಂಗಳೂರಿಗೆ ಬಸ್ಸು ಸಿಗುತ್ತವೆ'' ಎಂದು  ಹೇಳಿದಾಗ  ನಮ್ಮ ಆತಂಕ ಕಡಿಮೆ ಆಯಿತು. ನಾವು ಬಸ್ಸು ಇಳಿದದ್ದು ಒಂದು ದರ್ಗಾದ ಹತ್ತಿರ. ಅಲ್ಲಿ ವಿಶಾಲವಾದ ಕಾರ್ ಪಾರ್ಕ್ ಇದೆ, ಕೆಲವು ಅಂಗಡಿಗಳು ಸಹಾ  ಇವೆ . ಆದರೆ ಉತ್ತಮವಾದ ಹೋಟೆಲ್ ಇಲ್ಲ. ನಮ್ಮ ಎದುರಿಗೇನೆ  ಶಿವನಸಮುದ್ರ ಕಾಣಿಸುತ್ತಿದೆ. ಇದಕ್ಕೆ ಗಗನ ಚುಕ್ಕಿ ಜಲಪಾತ  ಎಂತಲೂ ಕರೆಯುತ್ತಾರೆ. ಬಹಳ ಸುಂದರ ಜಲಪಾತವಿದು.




ಬೆಂಗಳೂರಿನಿಂದ 139 Km.ದೂರದಲ್ಲಿ  ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತವು ಸುಮಾರು 322 ಅಡಿ ಕೆಳಕ್ಕೆ ದುಮುಕುತ್ತದೆ. ಕರ್ನಾಟಕದ ಜೀವನದಿ ಕಾವೇರಿಯು ಇಲ್ಲಿ ತನ್ನ ಇನ್ನೊಂದು ರೂಪವನ್ನು ತೋರುತಿದ್ದಾಳೆ. ಸಕಲ ಒನಪು ವಯ್ಯಾರಗಳನ್ನು ಬಿಂಬಿಸುತಿದ್ದಾಳೆ. ಗಗನಚುಕ್ಕಿಗೆ ಸಂಗಾತಿಯಾಗಿ ಭರಚುಕ್ಕಿ ಎಂಬ ಜಲಪಾತವೂ ಇಲ್ಲಿಂದ 2 Km. ದೂರದಲ್ಲಿದೆ. ಗಗನಚುಕ್ಕಿಗೆ ಅಡ್ಡಲಾಗಿ ಎಡಗಡೆಯಿಂದ ಇನ್ನೊದು ಜಲಪಾತವೂ ಬಂದು ಅದೇ ಗುಂಡಿಗೆ ಬೀಳುತ್ತದೆ. ಆದರೆ ಅದರ ಪೂರ್ಣ ಸ್ವರೂಪವನ್ನು ನೋಡಲು ಜಲಪಾತದ ತಳಕ್ಕೆನೆ ಹೋಗಬೇಕು. ಮೇಲಿಂದ ಬರೇ ಮಂಜಿನ ರೂಪ ಮಾತ್ರ ಕಾಣಿಸುತ್ತದೆ.



ಇಲ್ಲೇ ಶಿಂಶಾ ಎಂಬಲ್ಲಿ ಜಲವಿದ್ಯುತ್ ಯೋಜನೆ ಯು 1902 ರಿಂದಲೇ ಆರಂಭವಾಗಿದೆ. ಮೈಸೂರು ಅರಸರ ಕಾಲದಿಂದಲೇ ಇಲ್ಲಿ ವಿದ್ಯುತ್ ಉತ್ಪಾದಿಸುತಿದ್ದಾರೆ! ಇಲ್ಲಿನ ವೀಕ್ಷಣಾ ಗೋಪುರದ ಮೇಲಿಂದ ಈ ಎರಡೂ ಜಲಪಾತ ನೋಡಲು ಸಾಧ್ಯ. ಸ್ವಂತ ವಾಹನದಲ್ಲಿ ಬಂದರೆ ಇಲ್ಲೆಲ್ಲಾ ನೋಡಿಬರಲು ಅನುಕೂಲವಾಗುತ್ತದೆ.
ಮನದಣಿಯೆ ಜಲಪಾತದ ಸೊಬಗನ್ನು ನೋಡಿ ಸಂತಸಪಟ್ಟು ಪಕ್ಕದಲ್ಲಿ ನೋಡಿದರೆ ಆಳವಾದ ಕಣಿವೆಯಲ್ಲಿ ಕಾವೇರಿ ಹರಿಯುವುದು ಕಾಣಿಸುತ್ತದೆ.




ಆದರೆ ಇಲ್ಲಿ ಬಹಳ ಹೊತ್ತು ನಿಲ್ಲಲಾಗುವುದಿಲ್ಲ, ಬಿಸಿಲು ಮತ್ತು ಕೆಳಗೆ ಎಸೆದಿರುವ ಕಸ ಕಡ್ಡಿಗಳ ದುರ್ವಾಸನೆ. ಆಲ್ಲಿಂದ ನಾವು ದರ್ಗಾದ ಪಕ್ಕದಲ್ಲಿರುವ ಕಾಲ್ದಾರಿಯಲ್ಲಿ ಇಳಿದೆವು. ಇಲ್ಲಿ ಬಹಳ ನಿಧಾನವಾಗಿ ಇಳಿಯಬೇಕು.ಕೆಳಗೆ ತಲಪುವಷ್ಟರಲ್ಲಿ ನಮಗೆ ಒಂದು ಸಮಾಧಿ ಎದುರಾಗುತ್ತದೆ. ಆಲ್ಲಿಂದ ಬಂಡೆಗಳನ್ನು ದಾಟಿ ನದಿ ಪಾತ್ರಕ್ಕೆ ಬಂದಾಗ ನಿಜವಾಗಲೂ ಸಾರ್ಥಕ ಎನಿಸುತ್ತದೆ. ಎಲ್ಲಿ ನೋಡಿದರೂ ನೀರು, ಜಲಪಾತಗಳು! ಚಿಕ್ಕದು, ಸ್ವಲ್ಪ ದೊಡ್ಡದು, ಪುಟ್ಟದು ಇತ್ಯಾದಿ.





ಜಾಗರೂಕತೆಯಿಂದ ಹೆಜ್ಜೆಯಿಟ್ಟು ಮುಂದೆ ಹೋಗಬೇಕು. ಬಂಡೆಗಳು ತುಂಬಾ ನುಣುಪು, ಜಾರುತ್ತದೆಮತ್ತು ನೀರಿನ ಸೆಳವು ಸಹಾ ತುಂಬಾ ಜಾಸ್ತಿ. ಆದರೂ ಇಲ್ಲಿ ತುಂಬಾ ಜನ ಪ್ರವಾಸಿಗರು ನೀರಿಗೆ ಇಳಿದು ಸ್ನಾನ ಮಾಡುತಿದ್ದರು.ಅಪಾಯದ ಅರಿವಿದ್ದು ಎಚ್ಚರಿಕೆಯಿಂದ ಇದ್ದರೆ ಸರಿ, ಇಲ್ಲವಾದರೆ ಶಿವನಸಮುದ್ರದಲ್ಲಿ ನೇರ ಶಿವನ ಪಾದ ಸೇರಬಹುದು. ಅಷ್ಟೊಂದು ನೀರಿನ ಸೆಳವು ಇದೆ.



ನಾವು ಅಲ್ಲೇ ಕುಳಿತುಕೊಂಡು ನೀರಿನ ಚೆಲ್ಲಾಟವನ್ನು ನೋಡುತ್ತಾ ಆನ್ದಿಒಸುತಿದ್ದೆವು.ಇಲ್ಲಿ ಬಿಸಿಲು ಜೋರಾಗಿದ್ದರು ಸಹಾ ನೀರಿನ ಹನಿಗಳ ತಂಪು ಮೈ ಎಲ್ಲಾ ಆವರಿಸಿರುತ್ತದೆ. ಹಾಗಾಗಿ ಏನು ಕಷ್ಟವಾಗುವುದಿಲ್ಲ. ಎಷ್ಟು ನೋಡಿದರೂ ಸಾಕೆನಿಸುವುದೇ ಇಲ್ಲ. ಬೇಕಾದಷ್ಟು ಫೋಟೋ ತೆಗೆದೆವು. ನೀರಿಗೆ ಕಾಲಿಳಿಸಿ ಹಾಯಾಗಿ ಕುಳಿತೆವು. ಅಲ್ಲೇ ನಾವು ತಂದ ತಿಂಡಿ ತಿಂದೆವು. ಬಂಡೆಗೆ ಒರಗಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
ಬೇರೆ ಬೇರೆ ಕೋನಗಳಿಂದ ಕಾವೇರಿಯ ಸೊಬಗನ್ನು ಸೆರೆ ಹಿಡಿದೆವು. ಮನೆಗೆ ಬಂದಮೇಲೆನೋಡಲು ವಿಡಿಯೋ ಸಹಾ ಮಾಡಿದೆವು.
ಇಲ್ಲಿದೆ ನೋಡಿ ಶಿವನಸಮುದ್ರದ ಕೆಲ ದೃಶ್ಯಗಳು!














ಸರಿ ಇನ್ನು ಹೊರಡೋಣ ಎಂದುಕೊಂಡು ಮೇಲೇರಿ ಬಂದೆವು. ನಮ್ಮ ಅದೃಷ್ಟಕ್ಕೆ ಒಂದು ಆಟೋರಿಕ್ಷಾ ರೆಡಿ ಆಗಿತ್ತು ಅದರಲ್ಲಿ ಹತ್ತಿ ಬಸ್ಸು ಬರುವ ಕ್ರಾಸ್ ಗೆ ಬಂದೆವು. ಸ್ವಲ್ಪಹೊತ್ತಲ್ಲೇ ಬಸ್ಸು ಬಂತು ನಾವು ಬೆಂಗಳೂರು ತಲುಪಿದೆವು. 



Wednesday, 19 May 2010

Kemmannu Gundi & Hebbe Falls

ಕೆಮ್ಮಣ್ಣುಗುಂಡಿ ನೋಡಬೇಕೆಂದು  ಆಸೆ ಪಟ್ಟು ವರ್ಷಗಳೇ ಕಳೆದವು, ಯಾಕೋ ಕೂಡಿ ಬರಲಿಲ್ಲ. ನಮ್ಮ ಪುಟ್ಟ ತಂಡ ನಮ್ಮ ಮನೆಯಲ್ಲಿ ಸೇರಿದಾಗ ಕೆಮ್ಮಣ್ಣುಗುಂಡಿಗೆ  ಹೋಗೋಣ ಎಂತ ನಿಶ್ಚಯ ಮಾಡಿದೆವು. ಅಂತೆಯೇ ಮುಂದಿನ ಶನಿವಾರ ಹೋಗೋಣ ಎಂದುಕೊಂಡೆವು. ತೋಟಗಾರಿಕಾ ಇಲಾಖೆಯಲ್ಲಿ ವಿಚಾರಿಸಿದಾಗ ನಮಗೆ ಕೆಮ್ಮಣ್ಣುಗುಂಡಿ ಗೆಸ್ಟ್ ಹೌಸ್ ನ ಫೋನ್ ನಂಬರ್ ಸಿಕ್ಕಿತು. ಅದೃಷ್ಟದಿಂದ ಅಲ್ಲಿ ಕಾಟೇಜು ಸಹಾ ಬುಕ್ ಆಯಿತು.
ನಾನು, ಕಸ್ತೂರಿ, ವೀಣಾ, ವಿಷು, ಅರು ಮತ್ತು ಶ್ರುತಿ, ಮಾರುತಿ ಸ್ವಿಫ್ಟ್ ನಲ್ಲಿ ಬೆಂಗಳೂರಿನಿಂದ  ಪ್ರಯಾಣ ಹೊರಟೆವು. ಬೆಳಗ್ಗೆ ಸುಮಾರು 8 ಗಂಟೆಗೆ ಒಂದೆಡೆ  ಕಾರು ನಿಲ್ಲಿಸಿ ಬೆಳಗ್ಗಿನ ಉಪಹಾರ ಮುಗಿಸಿದೆವು. ಮತ್ತೆ ಮುಂದುವರೆದು ಹಾಸನ ತಲುಪಿ ನಂತರ  ಚಿಕ್ಕಮಗಳೂರು ತಲಪುವಾಗ ಮಧ್ಯಾಹ್ನವಾಗಿತ್ತು. ಅಲ್ಲೇ ಊಟ ಎಲ್ಲಾ ಮುಗಿಸಿ ಪಕ್ಕದ ಮಾರ್ಕೆಟ್ ನಿಂದ ನಮಗೆ ಬೇಕಾದ ಹಣ್ಣು, ಸೌತೆಕಾಯಿ, ತರಕಾರಿ, ಬಿಸ್ಕೆಟ್, ಹಾಲು ಎಲ್ಲಾ ತೆಗೆದುಕೊಂಡೆವು. ನಮ್ಮಲ್ಲಿ ಪೋರ್ಟೆಬಲ್ ಗ್ಯಾಸ್ ಸ್ಟೋವ್ ಇದ್ದುದರಿಂದ ನಮಗೆ ಬೇಕಾದಾಗ ಕಾಫಿ ಊಟ ಎಲ್ಲಾ ನಾವೇ ಮಾಡಿಕೊಳ್ಳುತ್ತಿದ್ದೆವು.  
ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗವಾಗಿ ನಾವು ಮುಂದುವರೆದೆವು. ಸುಮಾರು 28 Km  ದೂರ. ಆಗಲೇ ನಮಗೆ ಮಲೆನಾಡಿನ ಸೌಂದರ್ಯ ಗೋಚರವಾದದ್ದು. ಏರುದಾರಿಯ ಎರಡೂ ಪಕ್ಕದಲ್ಲೂ ಕಾಡಿನ ಸೊಬಗು, ಅಲ್ಲಲ್ಲಿ ಸಿಗುವ ಪುಟ್ಟ ಜಲಪಾತಗಳು, ನಿರ್ಜನ ದಾರಿ ಎಲ್ಲಾ ಒಂದು ಬಗೆಯ ಬೇರೆಯೇ ಅನುಭವ ಕೊಡುತ್ತಿತ್ತು.



 ರಸ್ತೆಯ ಎಡಕ್ಕೆ ಮುಳ್ಳಯ್ಯನ ಗಿರಿಗೆ ದಾರಿ, ಎಂಬ ಕೈ ಫಲಕ ಕಾಣಿಸಿತು. ಆಲ್ಲಿಂದ ಮುಂದೆ ತುಂಬಾ ಏರು ದಾರಿ. ರಸ್ತೆಯು ತುಂಬಾ ಕೆಟ್ಟು ಹೋಗಿತ್ತು, ಅದಕ್ಕೆ ಡಾಮರು ಸೋಕಿಸದೆ ಯಾವ ಕಾಲವಾಗಿತ್ತೋ ಏನೋ? ಅಲ್ಲಿ ಯಾವ ವಾಹನಗಳೂ   ಸಂಚರಿಸುತ್ತಿರಲಿಲ್ಲ.



ಸ್ವಲ್ಪ ದೂರದಲ್ಲಿ ದಾರಿ ಕವಲೊಡೆಯುತ್ತದೆ, ಒಂದುದಾರಿ ಕೆಮ್ಮಣ್ಣುಗುಂಡಿಗೆ, ಇನ್ನೊಂದು ಬಾಬಾ ಬುಡನ್ ಗಿರಿಗೆ. ನಾವು ಬಾಬಾ ಬುಡನ್ ಗಿರಿ ನೋಡಲು ಮುಂದುವರೆದೆವು. ಅಲ್ಲಿಗೆ ತಲುಪಿದಾಗ ನಮಗೆ ಪೋಲಿಸರಿಂದ ಸ್ವಾಗತ! ಎಲ್ಲಿಂದ ಬಂದದ್ದು? ಯಾಕೆ ಬಂದಿರಿ? ಎಂದೆಲ್ಲ ಕುಶಲ ವಿಚಾರಿಸಿದರು. ಆಲ್ಲಿಂದ ಮುಂದೆ ಬೆಟ್ಟದ ತುದಿ ತಲಪಿದೆವು. ಆಹಾ ಎಷ್ಟು ಸುಂದರ ಸ್ಥಳ. ಬಾಬಾಬುಡನ್ ಗಿರಿ ಶ್ರೇಣಿಯು ಪಶ್ಚಿಮ ಘಟ್ಟಗಳ ಚಂದ್ರ ಧ್ರೋಣ ಪರ್ವತ ಮಾಲೆಯಲ್ಲಿ ಇದೆ. ಸಮುದ್ರ ಪಾತಳಿಯಿಂದ ಸುಮಾರು 1434 ಮೀಟರು ಎತ್ತರದಲ್ಲಿದ್ದು ಕೆಮ್ಮಣ್ಣುಗುಂಡಿ ಗಿರಿಧಾಮವು ಕರ್ನಾಟಕದ ಊಟಿ ಎಂದು ಕರೆಸಿಕೊಳ್ಳುತ್ತದೆ. ಹಿಂದೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಿಯವಾದ ಬೇಸಿಗೆ ತಾಣವಾಗಿತ್ತು.


ಇಲ್ಲಿಂದ ತುಂಬಾ ದೊರದವರೆಗೆ ಹಲವು ಹಳ್ಳಿಗಳು ಹೊಲ ಗದ್ದೆಗಳು ಕಾಣುತ್ತವೆ. ಇಲ್ಲಿ ಆರಾಮವಾಗಿ ನೋಡಲು ವ್ಯೂ ಪಾಯಿಂಟ್ ನಿರ್ಮಿಸಿದ್ದಾರೆ, ಅನತಿ ದೊರದಲ್ಲಿ ಕಡಿದಾದ ಒಂದು ಪರ್ವತವಿದೆ ಮತ್ತು ಸ್ವಲ್ಪ ಕೆಳಗೆ ಇಳಿದರೆ ಮಾಣಿಕ್ಯಧಾರಾ ಜಲಪಾತ ಕಾಣಿಸುತ್ತದೆ.



ಆದರೆ ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ಅಲ್ಲಿ ತುಂಬಾ ಜನ ಸ್ನಾನ ಮಾಡುತಿದ್ದರು, ದೂರದಿಂದಲೇ ನೋಡಿ ಹಿಂತಿರುಗಿದೆವು. ಮತ್ತೆ ಬಂದ ದಾರಿಯಲ್ಲೇ ವಾಪಸು ಬಾಬಾ ಬುಡನ್ ಗುಹೆ ನೋಡಲು ಹೋದೆವು. ಫೋಟೋ ತೆಗೆಯಲು  ಅವಕಾಶ ಇರಲಿಲ್ಲ. ಒಳಗೆ ಹೋಗಿ ದತ್ತ ಗುರು ಮತ್ತು ಬಾಬಾ ನ ತೀರ್ಥ ಪಡೆದು ಹೊರ ಬಂದೆವು. ತುಂಬಾ ಚಳಿ, ತುಂತುರು ಮಳೆ. ಈಗ ಕೆಮ್ಮಣ್ಣು ಗುಂಡಿಗೆ ಪ್ರಯಾಣ. ಅದೇ ಕೆಟ್ಟ ದಾರಿ, ಆದರೆ ಹೋಗಲೇ ಬೇಕಲ್ಲ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋದೆವು.




ಕೆಮ್ಮಣ್ಣು ಗುಂಡಿ ಬಂದೇ ಬಿಟ್ಟಿತು. ನಮಗೆ ಕಾದಿರಿಸಲಾದ  ತುಂಗಭದ್ರಾ ಕಾಟೇಜ್ ನಲ್ಲಿ  ಇಳಿದುಕೊಂಡೆವು. ಕಾಟೇಜ್ ಹಳೆಯ ಕಟ್ಟಡ, ಮೇಲೆ ಟಿನ್ ಹಾಕಿದ ಮಾಡು, ಗೋಡೆಯ ತುಂಬಾ ಮಳೆ ನೀರು ಇಳಿದು, ರಚಿಸಿದ ಭೂಪಟಗಳು!  ಹೊರಗಡೆ ನಟ್ಟು  ಬೆಳೆಸಿದ ಹೂಗಿಡಗಳು, ಪಕ್ಕದಲ್ಲೇ ಒಂದು ಅನುಪಯುಕ್ತ,  ಮುರಿದ ಕಾಟೇಜು! ಅಂತೂ ಅದರಲ್ಲಿ ಸ್ವಲ್ಪ ವಿಶ್ರಮಿಸಿ, ಬೆಟ್ಟದ ಮೇಲೆ ಇದ್ದ  ರಾಜಭವನ ಗೆಸ್ಟ್ ಹೌಸ್ ನೋಡಲು ಹೋದೆವು. ಅಲ್ಲಿ ಒಳ್ಳೆಯ ಹೂ ತೋಟ ಬೆಳೆಸಿದ್ದಾರೆ. ರಾತ್ರಿ ಸ್ವಲ್ಪ ಮಳೆ ಬಂತು, ಅದು ಟಿನ್ ಮಾಡಿನ ಮೇಲೆ ಬೀಳುವಾಗ ನಾವು ಹೆಬ್ಬೆ ಜಲಪಾತದ ಹತ್ತಿರವೇ ಇದ್ದೇವೆ ಎನ್ನುವ ಅನುಭವ. ಒಂದೆರಡು ತೊಟ್ಟು ನೀರು ಮೈ ಮೇಲೆ ಬಿತ್ತು. ಅಷ್ಟಕ್ಕೇ ಮಳೆ ನಿಂತಿತು, ಬೆಳಿಗ್ಗೆ ಧಭ ಧಭ ಶಬ್ದ! ಕೋತಿಗಳು ನಮ್ಮನ್ನು ಎಬ್ಬಿಸಲು ಪ್ರಯತ್ನಿಸುತ್ತಿವೆ. 'ಸಾಕು ಮಲಗಿದ್ದು, ಇನ್ನು ಹೊರಡಿ ಹೆಬ್ಬೆ ನೋಡಲು' ಎಂದು ಹೇಳುತ್ತಿವೆ.
ಅಂತೂ ಬೆಳಗಿನ ಉಪಹಾರ ಮುಗಿಸಿ ಬುತ್ತಿ ಕಟ್ಟಿಕೊಂಡು ಬೆನ್ನ ಮೇಲೆ ಹೊರೆ ಏರಿಸಿ ಚಾರಣ  ಹೊರಟೆವು. ಇಲ್ಲಿಂದ ಹೆಬ್ಬೆ ಜಲಪಾತ ಸುಮಾರು 8 Km ದೂರದಲ್ಲಿ ಇದೆ. ಅಲ್ಲಿಗೆ ಹೋಗಲು ಜೀಪುಗಳು ಕಾದಿರುತ್ತವೆ. ಹೋಗಿಬರಲು 750 - 1250  ರು. ಕೇಳುತ್ತಾರೆ. ನಾವು ಚಾರಣ ಮಾಡಲು ಬಂದವರು, ನಮಗೆ ಅದೇ ಇಷ್ಟ, ಹಾಗಾಗಿ ನಡೆಯಲು ಆರಂಭಿಸಿದೆವು. ಅಷ್ಟೇನೂ ಕಷ್ಟಕರ ದಾರಿಯಲ್ಲ. ಸುಮಾರು ದೂರದ ವರೆಗೆ ಮಣ್ಣಿನ ರಸ್ತೆ ಇದೆ. ಪಕ್ಕದಲ್ಲೇ ಹಿಂದಿನ ಕಾಲದ ಕಬ್ಬಿಣ ಗಣಿಗಾರಿಕೆ ಮಾಡಿದ ಜಾಗಗಳು ನೋಡ ಸಿಗುತ್ತವೆ.







ಬೆಳಗಿನ ಎಳೆ ಬಿಸಿಲು, ಹಿತವಾದ ತಂಗಾಳಿ ಆಯಾಸವಿಲ್ಲದೆ ಮುಂದೆ ಹೋಗಲು ಸಹಾಯ ಮಾಡುತಿತ್ತು. ನಾವು ಕಂಡ ಕಂಡ ಕಾಡು ಹೂವುಗಳ ಫೋಟೋ ತೆಗೆಯುತಿದ್ದೆವು, ದೂರ ದೂರದ ದೃಶ್ಯಗಳನ್ನು ನಮ್ಮ ಕೆಮರಾದಲ್ಲಿ ಸೆರೆ ಹಿಡಿಯುತಿದ್ದೆವು. ಅರು ಮತ್ತು ಶ್ರುತಿ ಪರಸ್ಪರ ಕೀಟಲೆ ಮಾಡುತ್ತಾ ನಮಗೆ ಮನರಂಜನೆ ಮಾಡುತಿದ್ದರು.









ಅಲ್ಲೊಂದು ಕಡೆ ರಸ್ತೆ ತಿರುವು ಪಡೆಯುತ್ತದೆ. ಅಲ್ಲಿ ಒಬ್ಬ ಹುಡುಗ ನಿಂತಿದ್ದ, ಅವನು ಬಂದು, ಸಾರ್ ಇಲ್ಲೇ ಕೆಳಗಿಳಿದು ಹೋದರೆ ನಿಮಗೆ ತುಂಬಾ ಶಾರ್ಟ್ ಕಟ್ ಆಗುತ್ತದೆ ಎಂದನು, ಅವನಿಗೆ ಥ್ಯಾಂಕ್ಸ್ ಹೇಳಿ ನಮ್ಮಲ್ಲಿದ್ದ ಕೆಲವು ಚಾಕ್ಲೆಟ್ ಕೊಟ್ಟು ಮುಂದೆ ಹೋದೆವು, ಹೌದು ಅವನು ಹೇಳಿದ್ದು ನಿಜ, ಸುಮಾರು 1Km. ಕಡಿಮೆ ಆಗುತ್ತದೆ. ಹಾಗೆಯೇ ಮುಂದುವರೆದಾಗ ನಮಗೆ ಹೆಬ್ಬೆ ಜಲಪಾತದ ದೂರ ನೋಟ ಕಾಣುತ್ತದೆ.



ಅಲ್ಲಿ ಸ್ವಲ್ಪ ಹೊತ್ತು ನಿಂತು ಸುದಾರಿಸಿಕೊಂಡೆವು. ಫೋಟೋ, ವಿಡಿಯೋ ಎಲ್ಲಾ ಆಯಿತು. ಅಷ್ಟರಲ್ಲಿ ಅಲ್ಲಿಗೆ ನಮ್ಮ ಹಾಗೆ ಚಾರಣ  ಮಾಡುವ ಹುಡುಗರ ಗುಂಪು ಒಂದು ಬಂದಿತು. ಅವರು  ಅಲ್ಲೇ ಪಕ್ಕದಲ್ಲಿದ್ದ ತುಂಬಾ ಇಳಿಜಾರಾಗಿರುವ ಕಾಡು ದಾರಿಯಲ್ಲಿ ಇಳಿದರು. ನಮಗೂ  ಅದರಲ್ಲಿ ಹೋಗುವ ಆಸೆ, ಆದರೆ ಶ್ರುತಿಗೆ ಭಯ, ಕಡೆಗೆ ಆ ಹುಡುಗರಲ್ಲಿ ರಿಕ್ವೆಸ್ಟ್ ಮಾಡಿದೆವು-- ದಾರಿ ಸರಿ ಇದ್ದರೆ ಆಲ್ಲಿಂದ ಒಂದು ಶಿಳ್ಳು ಹಾಕಿರಿ ಆಗ ನಾವು ಸಹಾ ಇಳಿದು ಬರುತ್ತೇವೆ ಎಂತ. ಹಾಗೆ ಸ್ವಲ್ಪ ಹೊತ್ತಲ್ಲಿ ಶಿಳ್ಳು ಕೇಳಿಸಿತು, ನಾವೂ ಅದರಲ್ಲಿ ಇಳಿದೆವು.  ತುಂಬಾ ಇಳಿಜಾರು,  ಅಲ್ಲಲ್ಲಿ ಸಿಗುವ ಮರ, ಬಳ್ಳಿ ಹಿಡಿದುಕೊಂಡು ಇಳಿದೆವು. ಶ್ರುತಿ 2-3  ಬಾರಿ ಜಾರಿದಳು, ಆದರೆ ಅರವಿಂದನ ರಕ್ಷಣೆಯಲ್ಲಿ ಅವಳಿಗೇನೂ ತೊಂದರೆ ಆಗಲಿಲ್ಲ. ಈ ಸಾಹಸದಿಂದ ನಮಗೆ ಸುಮಾರು 1/2 Km. ಲಾಭವಾಯಿತು. ಮತ್ತೆ ಸ್ವಲ್ಪ ರೆಸ್ಟು.



ಮುಂದೆ ಹೋದಂತೆಲ್ಲ ಕಾಫಿ ತೋಟಗಳು, ಯಾಲಕ್ಕಿ ತೋಟ, ವೆನಿಲ್ಲಾ ಬಳ್ಳಿಗಳು, ಕಿತ್ತಳೆ ಮರಗಳು, ಅಲ್ಲಲ್ಲಿ ಸಣ್ಣ ಮನೆಗಳು ಎಲ್ಲಾ ಸಿಗುತ್ತವೆ. ಕೊನೆಗೆ ದೊಡ್ಡದೊಂದು ಎಸ್ಟೇಟ್ ನ ಎದುರಿನಿಂದ ಕೆಳಗಿಳಿದರೆ ನೀರಿನ ಪುಟ್ಟ ಹೊಳೆ ಎದುರಾಗುತ್ತದೆ. ಅದನ್ನು ನಡೆದೇ ದಾಟಬೇಕು, ಮತ್ತೊಮ್ಮೆ ಅದೇ ಹೊಳೆ ದಾಟಬೇಕಾಗುತ್ತದೆ. ಆಮೇಲೆ ಅದರ ದಂಡೆಯಲ್ಲೇ ನಡೆದರೆ ನಮಗೆ ನೆಟ್ಟಗೆ ಹೆಬ್ಬೆ ಜಲಪಾತದ ತಳಕ್ಕೆತಲುಪಬಹುದು.







ಅಲ್ಲಿಗೆ ಹೋಗುವಾಗಲೇ ನೀರ ಹನಿಗಳ ಸಿಂಚನವಾಗುತ್ತದೆ. ಮೈ ಎಲ್ಲಾ ನವಿರೇಳುತ್ತದೆ. ಅಲ್ಲಿ ತುಂಬಾ ಜನ ಸ್ನಾನ ಮಾಡುತ್ತಿದ್ದರು. ನಾನು ಮತ್ತು ವಿಷು ಇಬ್ಬರೂ ನೀರಿಗೆ ಇಳಿದೇಬಿಟ್ಟೆವು. ನನಗಂತೂ ಜಲಪಾತದ ನೇರ ಕೆಳಗಡೆ ಮೀಯುವ ಪ್ರಥಮ ಅನುಭವ! ಆಹಾ ಏನು ಖುಷಿ, ಆ ಥಂಡಿ, ಆ ಭೋರ್ಗರೆಯುವ ಶಬ್ದ ನಿಜವಾಗಿಯೂ ಅದನ್ನು ಅನುಭವಿಸಿಯೇ ತಿಳಿಯಬೇಕು. ನೀರಾಟ ಆದ ಮೇಲೆ ಸ್ವಲ್ಪ ಈಕಡೆ ಬಂದು ಹೊಳೆಯ ಮಧ್ಯದಲ್ಲಿರುವ ಬಂಡೆಯಲ್ಲಿ ಕುಳಿತು ವಿಶ್ರಮಿಸಿ ತಿಂಡಿ ತಿಂದೆವು. ನಿಂಬೆ ಪಾನಕ ಮಾಡಿ ದಾಹ ನೀಗಿಸಿಕೊಂಡೆವು. ಆಯಾಸ ಎಲ್ಲಾ ಹೋಯಿತು.



ಇಲ್ಲಿಂದ ಹೆಬ್ಬೆ ಜಲಪಾತದ ಮೇಲಿನ ಭಾಗ ಸಹಾ ಕಾಣುತ್ತದೆ. ಇಡೀ ಜಲಪಾತವು ಸುಮಾರು 168 ಮೀಟರು ಎತ್ತರವಿದ್ದು 2 ಮಜಲುಗಳಾಗಿ ಧುಮುಕುತ್ತಿದೆ.



ಇನ್ನೇನು ಹೊರಡುವ ಹೊತ್ತಾಯಿತು, ನಿಧಾನವಾಗಿ ಹೊರಟೆವು. ಈಗ ಏರು ದಾರಿ ಅಲ್ಲಲ್ಲಿ ನಿಂತು ಸಾಗುತ್ತ ಹೋದಂತೆ ಕಟ್ಟಲಾಗುತ್ತ ಬಂತು. ನಮ್ಮಲ್ಲಿ ಟಾರ್ಚು ಲೈಟು ಇರಲಿಲ್ಲ. ಸುಮಾರು 2 Km. ದೂರವನ್ನು ನಾವು ಮೊಬೈಲ್ ನಲ್ಲಿರುವ ಪುಟ್ಟ ಟಾರ್ಚ್ ಬೆಳಕಿನಲ್ಲಿ ನಡೆದು ನಮ್ಮ ಕಾಟೇಜ್ ತಲುಪಿದೆವು. ಎಲ್ಲರಿಗೂ ತುಂಬಾ ಸುಸ್ತು. ರಾತ್ರಿ ಊಟ ಮಾಡಿ ಮಲಗಿದವರಿಗೆ ಒಳ್ಳೆಯ ನಿದ್ರೆ. ಬೆಳಗ್ಗೆ ಎದ್ದು ಕಾಫಿ ತಿಂಡಿ ತಿಂದು ವಾಪಸು ಹೊರಟೆವು. ಈ ಸಲ ಬೇರೆಯೇ ದಾರಿಯಲ್ಲಿ ಹೊರಟೆವು.  ಕೆಮ್ಮಣ್ಣುಗುಂಡಿ ಲಿಂಗದ ಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ತಲುಪಿದೆವು. ಈ ದಾರಿ ಸ್ವಲ್ಪ ದೂರ, 54 Km. ಆಗುತ್ತದೆ. ಆದರೆ ರಸ್ತೆ ಚೆನ್ನಾಗಿದೆ. ಬರುವಾಗ ದೂರದಲ್ಲಿ ಕಲ್ಹತ್ತಿ ಜಲಪಾತ ನೋಡಿದೆವು. ಮುಂದೆ  ಬೇಲೂರು ಚನ್ನಕೇಶವ ದೇವಾಲಯ ನೋಡಿಕೊಂಡು ಆಮೇಲೆ ಶ್ರವಣಬೆಳುಗೊಳ ಸಹಾ ನೋಡಿಕೊಂಡು ಬೆಂಗಳೂರಿಗೆ ಬಂದೆವು.








Monday, 17 May 2010

Lepakshi



ಲೇಪಾಕ್ಷಿಯ ಸುಂದರ ದೇವಾಲಯವಿರುವುದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ಎಂಬ ಹಳ್ಳಿಯಲ್ಲಿ. ಬೆಂಗಳೂರಿನಿಂದ ಸುಮಾರು 120 Km. ದೂರದಲ್ಲಿದೆ. ಇಲ್ಲಿಗೆ ಬರಲು ಎರಡು ದಾರಿಗಳಿವೆ. ಬೆಂಗಳೂರಿನಿಂದ ಹಿಂದೂಪುರಕ್ಕೆ ಬಂದು ಬಲಕ್ಕೆ 15 Km. ಅಥವಾ ಬೆಂಗಳೂರು-ಹೈದರಾಬಾದ್ ಹೈವೆ (NH-7) ನಲ್ಲಿ ಕೊಡಿಕೊಂಡ ಚಕ್ ಪೋಸ್ಟ್ ನಿಂದ ಎಡಕ್ಕೆ ಸುಮಾರು 12 Km. ಕ್ರಮಿಸಿದರೆ ಲೇಪಾಕ್ಷಿ ತಲುಪಬಹುದು.

ದೇವಾಲಯದ ಮುಂದುಗಡೆ ವಾಹನ ನಿಲ್ಲಿಸಿ ಮುಂದೆ ನಡೆದಾಗ ಮೆಟ್ಟಲುಗಳು ಸಿಗುತ್ತವೆ ಮತ್ತು ಎದುರುಗಡೆ ಸುಂದರ ಉದ್ಯಾನ ಸ್ವಾಗತ ಬಯಸುತ್ತದೆ.

ಅಲ್ಲೇ ಕೈ ಕಾಲು ತೊಳೆದುಕೊಂಡು ಆಯಾಸ ಪರಿಹಾರ ಮಾಡಿಕೊಂಡು ಮುಂದೆ ಮುಖ್ಯಗೋಪುರವನ್ನು ಪ್ರವೇಶಿಸಿದರೆ ಲೇಪಾಕ್ಷಿಯ ಹೊರ ಆವರಣವನ್ನು ಸೇರುತ್ತೇವೆ.

ಇಲ್ಲಿ ಉತ್ಸವ ಸಮಯದಲ್ಲಿ ಜನರಿಗೆ ಕುಳಿತುಕೊಳ್ಳಲು, ವಿಶ್ರಮಿಸಲು ನಾಲ್ಕು ಸುತ್ತಲೂ ಕೆತ್ತನೆ ಸ್ಥಂಭಗಳಿಂದ ಕೂಡಿದ ಪೌಳಿ ಗಳಿವೆ.



ಈ ಆವರಣವನ್ನು ದಾಟಿ ಮುಂದೆ ಹೋದಾಗ ನಮಗೆ ಮುಖ್ಯ ಮಂಟಪ ಎದುರಾಗುತ್ತದೆ. ಇದರಲ್ಲಿ ಬಹಳ ಸುಂದರವಾದ ಕೆತ್ತನೆಗಳುಳ್ಳ ಶಿಲಾಸ್ಥಂಭ ಗಳಿವೆ.ಒಂದೊಂದು ಸ್ಥಂಭವೂ ವಿಭಿನ್ನವಾಗಿದ್ದು ಎಲ್ಲದರಲ್ಲೂ ಶಿವನ ನಾನಾ ರೂಪಗಳನ್ನು ಕೆತ್ತಲಾಗಿದೆ. ಒಂದು ಸ್ಥಂಭವಂತೂ ತೂಗಾಡುತ್ತಿದೆಯೇನೋ ಎಂಬಂತೆ ಕಾಣುತ್ತದೆ. ಅದರ ಅಡಿ ಭಾಗವು ನೆಲಕ್ಕೆ ತಗಲಿದೆ-ಇಲ್ಲ, ಎಂಬಂತಿದೆ. ಈ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಇಲ್ಲಿಂದ ಪ್ರದಕ್ಷಿಣಾ ಪಥದಲ್ಲಿ ಬಂದರೆ ಮುಖ್ಯ ದೇವಾಲಯಕ್ಕೆ ತಾಗಿಕೊಂಡು ಒಂದು ಹೆಬ್ಬಂಡೆ ಇದೆ. ಅದರ ಮುಂಭಾಗದಲ್ಲಿ ಒಂದು ಗುಡಿ.



ಲೇಪಾಕ್ಷಿ ದೇವಾಲಯವನ್ನು ಕೂರ್ಮಾಕೃತಿಯ ಬಂಡೆಯ ಮೇಲೆ ಕಟ್ಟಿದ್ದಾರೆ. ಇಲ್ಲಿನ ಇತಿಹಾಸದ ಪ್ರಕಾರ ಲೇಪಾಕ್ಷಿಯನ್ನು 16 ನೆ ಶತಮಾನದಲ್ಲಿ ವಿಜಯನಗರ ಅರಸರ ಬೊಕ್ಕಸದ ಖಜಾಂಜಿಯಾಗಿದ್ದ ವಿರುಪಣ್ಣ ಎಂಬಾತನು ಕಟ್ಟಿಸಿದ್ದನು. ವಿಜಯನಗರ ಅರಸರು ಶತ್ರುಗಳ ಮೇಲೆ ದಂಡೆತ್ತಿ ಹೋಗಿರುವ ಸಮಯದಲ್ಲಿ ವಿರುಪಣ್ಣನು ಬೊಕ್ಕಸದ ಹಣವನ್ನು ವ್ಯಯಿಸಿ ದೇವಾಲಯವನ್ನು ಕಟ್ಟಿಸಿದ್ದನಂತೆ. ಇದರಿಂದ ಬೊಕ್ಕಸವು ಖಾಲಿ ಆಯಿತೆಂದು ಕುಪಿತರಾದ ಅರಸರು ಆತನ ಕಣ್ಣುಗಳನ್ನು ಕೀಳಿಸಲು ಆಜ್ಞಾಪಿಸಿದರಂತೆ, ಇದನ್ನು ತಿಳಿದ ವಿರುಪಣ್ಣನು ತಾನೇ ಸ್ವತಹ ತನ್ನಹಣೆಯನ್ನು ದೇವಾಲಯದ ಗೋಡೆಗೆ ಘಟ್ಟಿಸಿಕೊಂಡು ತನ್ನ ಕಣ್ಣುಗಳನ್ನು ಕಳೆದುಕೊಂಡನೆಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಆತನು ತನ್ನ ಕಣ್ಣುಗಳನ್ನು ಕಳೆದುಕೊಂಡ ಗೋಡೆಯ ಮೇಲೆ ರಕ್ತದ ಕಲೆಯು ಈಗಲೂ ಇದೆಯಂತೆ.
ಹಾಗಾಗಿ ಕಣ್ಣುಗಳನ್ನು ಕಳೆದುಕೊಂಡ ಈ ದೇವಾಲಯಕ್ಕೆ ಲೇಪಾಕ್ಷಿ ಎಂತ ಹೆಸರು ಬಂತೆಂದು ಹೇಳುತ್ತಾರೆ.
ಇಲ್ಲಿರುವ ಏಕಶಿಲಾ ನಾಗಲಿಂಗವಂತೂ ಇಲ್ಲಿನ ಮುಖ್ಯ ಆಕರ್ಷಣೆ. ಇಷ್ಟು ದೊಡ್ಡ ನಾಗಲಿಂಗ ಬೇರೆಲ್ಲೂ ಇಲ್ಲ.



ಇದನ್ನು ನೋಡಿ ಮುಂದುವರೆದಾಗ ಕಲ್ಯಾಣ ಮಂಟಪ ಎದುರಾಗುತ್ತದೆ, ಆದರೆ ಇದನ್ನು ನೋಡುವಾಗ ತುಂಬಾ ವ್ಯಸನವಾಗುತ್ತದೆ. ಇದೊಂದು ಅಪೂರ್ಣ ಕಟ್ಟಡ.
ಸ್ಥಂಭಗಳು ಕೆತ್ತನೆಗಳಿಂದ ಅಲಂಕೃತವಾಗಿ ನಿಂತಿವೆ ಆದರೆ ಮೇಲ್ಚಾವಣಿ ಇಲ್ಲವೇ ಇಲ್ಲ.






ಇದನ್ನು ನೋಡುವಾಗ ವಿರುಪಣ್ಣನ ಕಥೆ ನಿಜವಿರಬೇಕು ಎನಿಸುತ್ತದೆ. ಆತನ ಅವಸಾನವಾಗಿರಬೇಕು, ಆಮೇಲೆ ಇದನ್ನು ಕೇಳುವವರಿಲ್ಲದಾಗಿರಬೇಕು. ಈ ಕಂಭ ಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿದ್ದಾರೆ. ಅನಂತಶಯನ, ದತ್ತಾತ್ರೇಯ, ಚತುರ್ಮುಖ ಬ್ರಹ್ಮ, ತುಂಬುರ, ನಾರದ ಮತ್ತು ರಂಭಾ ಇವರೆಲ್ಲರೂ ಶಿವ ಪಾರ್ವತಿ ಯರ ವಿವಾಹಕ್ಕೆ ಬಂದಿರುವ ಸನ್ನಿವೇಶವನ್ನು ಇಲ್ಲಿ ಕೆತ್ತಿದ್ದಾರೆ.



ಆಲ್ಲಿಂದ ಸ್ವಲ್ಪ ಕೆಳಗೆ ಇಳಿದು ಬಂದರೆ ಇನ್ನೊಂದು ಮಂಟಪ ಸಿಗುತ್ತದೆ.

ಎಲ್ಲವನ್ನೂ ನೋಡಿ ಗರ್ಭ ಗೃಹವನ್ನು ಪ್ರವೇಶಿಸಿದಾಗ ಮುಖ್ಯ ಪ್ರತಿಷ್ಠೆಯಾದ ವೀರಭದ್ರ ದೇವರ ದರ್ಶನವಾಗುತ್ತದೆ.



ನವಗ್ರಹ, ಮತ್ತು ಇತರ ದೇವರುಗಳ ಗುಡಿಯೂ ಇಲ್ಲೇ ಇದೆ. ಒಳಗಡೆ ಸಹಾ ತುಂಬಾ ಶಿಲ್ಪಗಳಿವೆ. 
ದೇವಾಲಯದ ಹೊರಗಡೆ ಬಹಳ ದೊಡ್ಡದಾದ ಒಂದು ನಂದಿ ವಿಗ್ರಹವಿದ್ದು ಇದು ಅತಿ ದೊಡ್ಡ ಏಕಶಿಲಾ ನಂದಿ ಎಂದು ಹೆಸರುವಾಸಿಯಾಗಿದೆ.
ಬೆಂಗಳೂರಿನಿಂದ ಲೇಪಾಕ್ಷಿಗೆ ಬಸ್ಸು ಸೌಕರ್ಯವಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಜಾಗ.



Sunday, 16 May 2010

ಹಿಮವದ್ ಗೋಪಾಲಸ್ವಾಮಿ ಬೆಟ್ಟ

 ನಿಮಗೆ ಕಡು ಬೇಸಿಗೆಯಲ್ಲೂ ಮಂಜಿನ ಸ್ಪರ್ಶವಾಗಬೇಕೆ? ಚುಮು ಚುಮು ಚಳಿಯಲ್ಲಿ ಪ್ರಕೃತಿಯೊಂದಿಗೆ ಲೀನವಾಗಬೇಕೆ? ಪ್ರಶಾಂತತೆಯಲ್ಲಿ ಭಗವಂತನ ಧ್ಯಾನದಲ್ಲಿ ನಿರತವಾಗಬೇಕೆ? ಎಲ್ಲಾ ಜಂಜಾಟಗಳನ್ನು ಮರೆತು ಒಂದಿಷ್ಟು ಹೊತ್ತು ಆರಾಮವಾಗಿರಬೇಕೆ? 
ಇವೆಲ್ಲಾ ಒಟ್ಟಾಗಿ ಒಂದೆಡೆಯಲ್ಲೇ  ದೊರೆಯುವುದು ಅಷ್ಟು ಸುಲಭವಲ್ಲ, ಆದರೆ ನೀವು ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಇವೆಲ್ಲವೂ ನಿಮಗೆ ಲಭ್ಯ! 
ಗೋಪಾಲಸ್ವಾಮಿ ಬೆಟ್ಟವಿರುವುದು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ. ಬೆಂಗಳೂರಿನಿಂದ 220 Km. ಹಾಗೂ ಮೈಸೂರಿನಿಂದ 80 Km. ಮತ್ತು ಗುಂಡ್ಲುಪೇಟೆಯಿಂದ 12 Km. ದೂರದಲ್ಲಿದೆ. ಮೈಸೂರು ಊಟಿ ರಸ್ತೆಯಲ್ಲಿ ಗುಂಡ್ಲುಪೇಟೆಯಿಂದ ಮುಂದೆ  ಹಂಗಳ ಎಂಬ ಹಳ್ಳಿಯಲ್ಲಿ ಬಲಕ್ಕೆ ತಿರುಗಿ ಸುಮಾರು 10 Km. ಪಯಣಿಸಿದರೆ ಗೋಪಾಲಸ್ವಾಮಿ ಬೆಟ್ಟದ ಮೇಲೆ ಇರುತ್ತೀರಿ. ಬೆಟ್ಟವನ್ನು ಏರಲು ಕಡಿದಾದ ತಿರುವುಗಳ ಉತ್ತಮ ರಸ್ತೆ ಇದ್ದು ಎರಡೂ ಪಕ್ಕಗಳಲ್ಲಿ ಬಂಡೀಪುರದ ಕಾಡು ಹಬ್ಬಿಕೊಂಡಿದೆ. ಇದು ಬಂಡೀಪುರ ವನ್ಯಧಾಮದ ಅತ್ಯುನ್ನತ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1454 ಮೀಟರು ಎತ್ತರದಲ್ಲಿದೆ. ಸುತ್ತಲೂ ಕಾಣುವ ಹಸಿರು ಕಾಡಿನಲ್ಲಿ ವನ್ಯ ಮೃಗಗಳು ತುಂಬಾ ಇವೆ. ಆನೆಗಳ ಹಿಂಡು ಸಾಮನ್ಯವಾಗಿ ಕಾಣಸಿಗುತ್ತವೆ. ಜಿಂಕೆಗಳ, ಕಾಡು ಕುರಿಗಳ ಗುಂಪು ಸಹಾ ಕಾಣಬಹುದು. ಇನ್ನು ಚಿರತೆ, ಕರಡಿಗಳು ಸಹಾ ಇವೆ ಎಂದು ಫಾರೆಸ್ಟ್ ಗಾರ್ಡುಗಳು ಹೇಳುತ್ತಾರೆ.
ಬೆಟ್ಟದ ಮೇಲೆ ವರ್ಷದ ಎಲ್ಲಾ ದಿನಗಳಲ್ಲಿ ಮಂಜು ಹಬ್ಬಿರುವ ಕಾರಣ ಇದನ್ನು ಹಿಮವದ್ ಗೋಪಾಲಸ್ವಾಮಿ ಎಂದು ಕರೆಯುತ್ತಾರೆ. ಇಲ್ಲಿಂದ ಮೈಲುಗಳ ದೂರ ವಿಸ್ತಾರವಾಗಿ ಹಬ್ಬಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ವನ್ನು ಕಾಣಬಹುದು. ಅಂತೆಯೇ ಇದು ವನ್ಯಧಾಮದ ವ್ಯಾಪ್ತಿ ಯಲ್ಲಿ ಬರುವ ಕಾರಣ ಇಲ್ಲಿ ಸಂಜೆ 6 ರ ನಂತರ ಯಾರನ್ನೂ ಇರಲು ಬಿಡುವುದಿಲ್ಲ. ಬೆಟ್ಟದ ಕೆಳಗಿನಿಂದಲೇ ಪ್ರವೇಶ ಧನ ಕೊಟ್ಟು ಮೇಲೇರಬೇಕು. ದೇವಾಲಯದ ತನಕ ಉತ್ತಮ ರಸ್ತೆ ಇದೆ. ಇದರಲ್ಲಿ ಮೇಲೇರುವುದೇ ಒಂದು ರೋಚಕ ಅನುಭವ.
ಮೇಲೆ ಹೋಗುತ್ತಿದಂತೆ ಸುತ್ತಲಿನ ಹಳ್ಳಿಗಳು ಹೊಲ ಗದ್ದೆಗಳು ಚಿತ್ತಾರದಂತೆ ಕಾಣುತ್ತವೆ. ವಾಹನದಿಂದ ಇಳಿದಾಕ್ಷಣ ದೇವಾಲಯದ ಮೆಟ್ಟಿಲುಗಳು ಸಿಗುತ್ತವೆ. ಇದರಲ್ಲಿ ಮೇಲೆ ಹತ್ತಿದಾಗ ಗೋಪಾಲಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಇರುತ್ತೀರಿ.
ಆಗಲೇ ನಮಗೆ ಮಂಜಿನ ಅನುಭವವಾಗುತ್ತದೆ. ಛಳಿಯ ಅನುಭವ ಬಹಳ ಹಿತಕರವಾಗಿರುತ್ತದೆ. ಮೋಡ ಮುಸುಕಿದ್ದರೆ ಸುತ್ತಲೂ ಏನೇನೂ ಕಾಣಿಸದು, ಬರೇ ಮಸುಕು. ಬಿಸಿಲಿದ್ದರೆ ಸುತ್ತಲಿನ ದೃಶ್ಯಗಳನ್ನು ನೋಡಬಹುದು. ಎಲ್ಲೆಲ್ಲಿ ನೋಡಿದರೂ ಹಸಿರು ಬೆಟ್ಟ, ಕಾಡುಗಳು.
ಪ್ರಕೃತಿಯ ಮಧ್ಯದಲ್ಲಿ ನೆಲೆಗೊಂಡಿರುವ ವೇಣುಗೋಪಾಲಸ್ವಾಮಿ ದೇವಾಲಯವು ಬಹಳ ಪುರಾತನವಾಗಿದ್ದು ಸುಮಾರು 1315 ನೆ ಇಸವಿಯಲ್ಲಿ ಚೋಳ, ಬಲ್ಲಾಳನು ಕಟ್ಟಿಸಿದ್ದೆನ್ನಲಾಗಿದೆ. ನಂತರ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟು ದತ್ತಿ, ಜೀರ್ಣೋದ್ಧಾರಗಳನ್ನು ಪಡೆದು ಈಗಿರುವ ಸ್ಥಿತಿಯನ್ನು ಹೊಂದಿದೆ.
ಸುತ್ತಲೂ ಪ್ರಾಕಾರವಿದ್ದು ದ್ವಜಸ್ಥಂಭ ಮತ್ತು ಗೋಪುರಗಳನ್ನು ಹೊಂದಿದೆ. ಗರ್ಭಗೃಹ ದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮತ್ತು ರುಕ್ಮಿಣಿ, ಸತ್ಯಭಾಮೆಯರ ವಿಗ್ರಹಗಳಿವೆ. ಮೇಲಿನಿಂದ ನೀರು ಹನಿ ಹನಿಯಾಗಿ ದೇವರ ಮೇಲೆ ತೊಟ್ಟಿಕ್ಕುತ್ತದೆ. ಈ ನೀರು ಹೇಗೆ, ಎಲ್ಲಿಂದ  ಬರುತ್ತದೆ ಎಂದು ತಿಳಿಯುವುದಿಲ್ಲ. ಬಹಳ ಪ್ರಶಾಂತವಾದ ಈ ದೇವಾಲಯ ಮತ್ತು ಇದರ ಪರಿಸರ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ದೇವರ ದರ್ಶನ ಮಾಡಿ ಸ್ವಲ್ಪ ಹೊತ್ತು ಧ್ಯಾನ ಮಾಡಿ ಹೊರಬಂದರೆ ಪ್ರಕೃತಿಯು ನಮ್ಮನ್ನು ಕೈ ಚಾಚಿ ಕರೆಯುತ್ತಿರುತ್ತಾಳೆ.
ಪಕ್ಕದಲ್ಲೇ ಇರುವ ಕಾಲು ದಾರಿಯಲ್ಲಿ ಹೆಜ್ಜೆ ಹಾಕಿದರೆ ಅನತಿ ದೂರದಲ್ಲಿ ಕಾಣುವ ಬೆಟ್ಟದ ಕಡೆಗೆ ಚಾರಣ ಮಾಡಬಹುದು. ಇಲ್ಲಿಂದ ಕಾಡಿನ ಕಣಿವೆ ಮತ್ತು ಆಲ್ಲಿಂದ ಮೇಲೆ ಏರಿಬರುವ ಮಂಜಿನ ದರ್ಶನವಾಗುತ್ತದೆ. ಮೈ ಎಲ್ಲಾ ಮಂಜಿನಿಂದ ಆವರಿಸಿದಾಗ  ಪುಳಕಿತಗೊಳ್ಳುತ್ತದೆ.
ಇಲ್ಲಿ ಸ್ವಲ್ಪ ದೂರದವರೆಗೆ ಮಾತ್ರ ಮುಂದೆ ಹೋಗಲು ಅವಕಾಶ. ಮತ್ತೆ ಹೋಗಬೇಕಾದರೆ ಫಾರೆಸ್ಟ್ ನವರ ಅನುಮತಿ ಬೇಕು. ಇಲ್ಲಿ ಫಾರೆಸ್ಟ್ ಗೆಸ್ಟ್ ಹೌಸ್ ಸಹಾ ಇದೆ ಆದರೆ ಇದರಲ್ಲಿ ಉಳಕೊಳ್ಳಲು ಗುಂಡ್ಲುಪೇಟೆಯಲ್ಲಿರುವ ಫಾರೆಸ್ಟ್ ಇಲಾಖೆಯಿಂದ ಮುಂಚಿತ ಅನುಮತಿ ಪಡ ಕೊಳ್ಳಬೇಕು.
ಇಲ್ಲಿ ಬೆಟ್ಟದಮೇಲೆ ಯಾವುದೇ ಹೋಟೆಲುಗಳು ಇಲ್ಲವಾದ್ದರಿಂದ ಪ್ರವಾಸಿಗರು ಬರುವಾಗ ಸಾಕಷ್ಟು ತಿಂಡಿ ಊಟಗಳನ್ನು ತರುವುದು ಒಳ್ಳೆಯದು. ತಿಂಡಿ ತಿಂದು ಸಂಜೆಯವರೆಗೆ ಇಲ್ಲಿದ್ದು ವಾಪಸು ಹೋಗಬಹುದು.
ಗೋಪಾಲಸ್ವಾಮಿ ಬೆಟ್ಟಕ್ಕೆ ಇತ್ತೀಚೆಗೆ ಬೆಂಗಳೂರಿನಿಂದ ಪ್ರತಿದಿನ ಹೊರಡುವ KSRTC ಬಸ್ಸು ಸೌಕರ್ಯವಿದೆ. ಇಲ್ಲಿಗೆ ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ಬರಬಹುದು.ಯಾವುದೇ ತರದ ಅಪಾಯವಿಲ್ಲ.
ಇಲ್ಲಿಂದ ಮುಂದೆ ಪಯಣಿಸಿದರೆ ಬಂಡೀಪುರ ವನ್ಯಧಾಮ, ಮದುಮಲೈ ವನ್ಯಧಾಮ ಮತ್ತು ಊಟಿ ಗೆ ಸಹಾ ಹೋಗಬಹುದು. ಅಂತೆಯೇ ಇನ್ನೊದು ಮಾರ್ಗವಾಗಿ ವಯನಾಡು ವನ್ಯಧಾಮ, ಸುಲ್ತಾನ್ ಬತ್ತೇರಿಗೆ ಸಹಾ ಹೋಗಬಹುದು.
ಆದರೆ ಇತ್ತೀಚೆಗೆ ಈ ರಸ್ತೆಗಳಲ್ಲಿ   ರಾತ್ರಿ ಪ್ರಯಾಣ ನಿಷೇದಿಸಲಾಗಿದೆ.