Thursday, 20 May 2010

Shivana Samudra

ಶಿವನಸಮುದ್ರ ನೋಡಲು ನಾನು ಮತ್ತು ಕಸ್ತೂರಿ ಆಗಸ್ಟ್ 26 ರಂದು KSRTC ಬಸ್ಸಿನಲ್ಲಿಹೊರಟೆವು. ಬೆಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ ಹೊರಟ ಬಸ್ಸು ಮೈಸೂರು ರಸ್ತೆ ಯಲ್ಲಿ  ಮದ್ದೂರಿಗೆ ಬಂದು ಸ್ವಲ್ಪ ಮುಂದೆ ಎಡಕ್ಕೆ ತಿರುಗಿ ಮಳವಳ್ಳಿ ಮಾರ್ಗವಾಗಿ ನೇರ ಶಿವನಸಮುದ್ರಕ್ಕೆ ಬಂದು ತಲುಪಿತು. ನಾವು ಬಸ್ಸಿಳಿದು ಅಲ್ಲೇ ಪಕ್ಕದ ಅಂಗಡಿಯಲ್ಲಿ ಮುಂದೆ ಯಾವಾಗ ಬಸ್ಸು ಬರುವುದು ಎಂದು ವಿಚಾರಿಸಿದೆವು. 'ಇಲ್ಲ ಸಾರ್ ಈ ಬಸ್ಸು ಈವಾಗ ಹೊರಟುಬಿಡುತ್ತದೆ, ಆಮೇಲೆ ಇಲ್ಲಿಗೆ ಬಸ್ಸು ಬರುವುದಿಲ್ಲ ಎಂದರು' ಹಾಗಾದರೆ ನಾವೇನು ಮಾಡುವುದು? ಎಂದು ಯೋಚಿಸುತ್ತಿರುವಾಗಲೇ ಅವರು ಹೇಳಿದರು 'ಇಲ್ಲಿಂದ ಬೇಕಾದಷ್ಟು ಅಟೋಗಳು, ಜೀಪು ಮುಂದೆ ಕ್ರಾಸ್ ನವರೆಗೆ ಹೋಗುತ್ತವೆ,ಆಲ್ಲಿಂದ ನಿಮಗೆ ಬೆಂಗಳೂರಿಗೆ ಬಸ್ಸು ಸಿಗುತ್ತವೆ'' ಎಂದು  ಹೇಳಿದಾಗ  ನಮ್ಮ ಆತಂಕ ಕಡಿಮೆ ಆಯಿತು. ನಾವು ಬಸ್ಸು ಇಳಿದದ್ದು ಒಂದು ದರ್ಗಾದ ಹತ್ತಿರ. ಅಲ್ಲಿ ವಿಶಾಲವಾದ ಕಾರ್ ಪಾರ್ಕ್ ಇದೆ, ಕೆಲವು ಅಂಗಡಿಗಳು ಸಹಾ  ಇವೆ . ಆದರೆ ಉತ್ತಮವಾದ ಹೋಟೆಲ್ ಇಲ್ಲ. ನಮ್ಮ ಎದುರಿಗೇನೆ  ಶಿವನಸಮುದ್ರ ಕಾಣಿಸುತ್ತಿದೆ. ಇದಕ್ಕೆ ಗಗನ ಚುಕ್ಕಿ ಜಲಪಾತ  ಎಂತಲೂ ಕರೆಯುತ್ತಾರೆ. ಬಹಳ ಸುಂದರ ಜಲಪಾತವಿದು.




ಬೆಂಗಳೂರಿನಿಂದ 139 Km.ದೂರದಲ್ಲಿ  ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತವು ಸುಮಾರು 322 ಅಡಿ ಕೆಳಕ್ಕೆ ದುಮುಕುತ್ತದೆ. ಕರ್ನಾಟಕದ ಜೀವನದಿ ಕಾವೇರಿಯು ಇಲ್ಲಿ ತನ್ನ ಇನ್ನೊಂದು ರೂಪವನ್ನು ತೋರುತಿದ್ದಾಳೆ. ಸಕಲ ಒನಪು ವಯ್ಯಾರಗಳನ್ನು ಬಿಂಬಿಸುತಿದ್ದಾಳೆ. ಗಗನಚುಕ್ಕಿಗೆ ಸಂಗಾತಿಯಾಗಿ ಭರಚುಕ್ಕಿ ಎಂಬ ಜಲಪಾತವೂ ಇಲ್ಲಿಂದ 2 Km. ದೂರದಲ್ಲಿದೆ. ಗಗನಚುಕ್ಕಿಗೆ ಅಡ್ಡಲಾಗಿ ಎಡಗಡೆಯಿಂದ ಇನ್ನೊದು ಜಲಪಾತವೂ ಬಂದು ಅದೇ ಗುಂಡಿಗೆ ಬೀಳುತ್ತದೆ. ಆದರೆ ಅದರ ಪೂರ್ಣ ಸ್ವರೂಪವನ್ನು ನೋಡಲು ಜಲಪಾತದ ತಳಕ್ಕೆನೆ ಹೋಗಬೇಕು. ಮೇಲಿಂದ ಬರೇ ಮಂಜಿನ ರೂಪ ಮಾತ್ರ ಕಾಣಿಸುತ್ತದೆ.



ಇಲ್ಲೇ ಶಿಂಶಾ ಎಂಬಲ್ಲಿ ಜಲವಿದ್ಯುತ್ ಯೋಜನೆ ಯು 1902 ರಿಂದಲೇ ಆರಂಭವಾಗಿದೆ. ಮೈಸೂರು ಅರಸರ ಕಾಲದಿಂದಲೇ ಇಲ್ಲಿ ವಿದ್ಯುತ್ ಉತ್ಪಾದಿಸುತಿದ್ದಾರೆ! ಇಲ್ಲಿನ ವೀಕ್ಷಣಾ ಗೋಪುರದ ಮೇಲಿಂದ ಈ ಎರಡೂ ಜಲಪಾತ ನೋಡಲು ಸಾಧ್ಯ. ಸ್ವಂತ ವಾಹನದಲ್ಲಿ ಬಂದರೆ ಇಲ್ಲೆಲ್ಲಾ ನೋಡಿಬರಲು ಅನುಕೂಲವಾಗುತ್ತದೆ.
ಮನದಣಿಯೆ ಜಲಪಾತದ ಸೊಬಗನ್ನು ನೋಡಿ ಸಂತಸಪಟ್ಟು ಪಕ್ಕದಲ್ಲಿ ನೋಡಿದರೆ ಆಳವಾದ ಕಣಿವೆಯಲ್ಲಿ ಕಾವೇರಿ ಹರಿಯುವುದು ಕಾಣಿಸುತ್ತದೆ.




ಆದರೆ ಇಲ್ಲಿ ಬಹಳ ಹೊತ್ತು ನಿಲ್ಲಲಾಗುವುದಿಲ್ಲ, ಬಿಸಿಲು ಮತ್ತು ಕೆಳಗೆ ಎಸೆದಿರುವ ಕಸ ಕಡ್ಡಿಗಳ ದುರ್ವಾಸನೆ. ಆಲ್ಲಿಂದ ನಾವು ದರ್ಗಾದ ಪಕ್ಕದಲ್ಲಿರುವ ಕಾಲ್ದಾರಿಯಲ್ಲಿ ಇಳಿದೆವು. ಇಲ್ಲಿ ಬಹಳ ನಿಧಾನವಾಗಿ ಇಳಿಯಬೇಕು.ಕೆಳಗೆ ತಲಪುವಷ್ಟರಲ್ಲಿ ನಮಗೆ ಒಂದು ಸಮಾಧಿ ಎದುರಾಗುತ್ತದೆ. ಆಲ್ಲಿಂದ ಬಂಡೆಗಳನ್ನು ದಾಟಿ ನದಿ ಪಾತ್ರಕ್ಕೆ ಬಂದಾಗ ನಿಜವಾಗಲೂ ಸಾರ್ಥಕ ಎನಿಸುತ್ತದೆ. ಎಲ್ಲಿ ನೋಡಿದರೂ ನೀರು, ಜಲಪಾತಗಳು! ಚಿಕ್ಕದು, ಸ್ವಲ್ಪ ದೊಡ್ಡದು, ಪುಟ್ಟದು ಇತ್ಯಾದಿ.





ಜಾಗರೂಕತೆಯಿಂದ ಹೆಜ್ಜೆಯಿಟ್ಟು ಮುಂದೆ ಹೋಗಬೇಕು. ಬಂಡೆಗಳು ತುಂಬಾ ನುಣುಪು, ಜಾರುತ್ತದೆಮತ್ತು ನೀರಿನ ಸೆಳವು ಸಹಾ ತುಂಬಾ ಜಾಸ್ತಿ. ಆದರೂ ಇಲ್ಲಿ ತುಂಬಾ ಜನ ಪ್ರವಾಸಿಗರು ನೀರಿಗೆ ಇಳಿದು ಸ್ನಾನ ಮಾಡುತಿದ್ದರು.ಅಪಾಯದ ಅರಿವಿದ್ದು ಎಚ್ಚರಿಕೆಯಿಂದ ಇದ್ದರೆ ಸರಿ, ಇಲ್ಲವಾದರೆ ಶಿವನಸಮುದ್ರದಲ್ಲಿ ನೇರ ಶಿವನ ಪಾದ ಸೇರಬಹುದು. ಅಷ್ಟೊಂದು ನೀರಿನ ಸೆಳವು ಇದೆ.



ನಾವು ಅಲ್ಲೇ ಕುಳಿತುಕೊಂಡು ನೀರಿನ ಚೆಲ್ಲಾಟವನ್ನು ನೋಡುತ್ತಾ ಆನ್ದಿಒಸುತಿದ್ದೆವು.ಇಲ್ಲಿ ಬಿಸಿಲು ಜೋರಾಗಿದ್ದರು ಸಹಾ ನೀರಿನ ಹನಿಗಳ ತಂಪು ಮೈ ಎಲ್ಲಾ ಆವರಿಸಿರುತ್ತದೆ. ಹಾಗಾಗಿ ಏನು ಕಷ್ಟವಾಗುವುದಿಲ್ಲ. ಎಷ್ಟು ನೋಡಿದರೂ ಸಾಕೆನಿಸುವುದೇ ಇಲ್ಲ. ಬೇಕಾದಷ್ಟು ಫೋಟೋ ತೆಗೆದೆವು. ನೀರಿಗೆ ಕಾಲಿಳಿಸಿ ಹಾಯಾಗಿ ಕುಳಿತೆವು. ಅಲ್ಲೇ ನಾವು ತಂದ ತಿಂಡಿ ತಿಂದೆವು. ಬಂಡೆಗೆ ಒರಗಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
ಬೇರೆ ಬೇರೆ ಕೋನಗಳಿಂದ ಕಾವೇರಿಯ ಸೊಬಗನ್ನು ಸೆರೆ ಹಿಡಿದೆವು. ಮನೆಗೆ ಬಂದಮೇಲೆನೋಡಲು ವಿಡಿಯೋ ಸಹಾ ಮಾಡಿದೆವು.
ಇಲ್ಲಿದೆ ನೋಡಿ ಶಿವನಸಮುದ್ರದ ಕೆಲ ದೃಶ್ಯಗಳು!














ಸರಿ ಇನ್ನು ಹೊರಡೋಣ ಎಂದುಕೊಂಡು ಮೇಲೇರಿ ಬಂದೆವು. ನಮ್ಮ ಅದೃಷ್ಟಕ್ಕೆ ಒಂದು ಆಟೋರಿಕ್ಷಾ ರೆಡಿ ಆಗಿತ್ತು ಅದರಲ್ಲಿ ಹತ್ತಿ ಬಸ್ಸು ಬರುವ ಕ್ರಾಸ್ ಗೆ ಬಂದೆವು. ಸ್ವಲ್ಪಹೊತ್ತಲ್ಲೇ ಬಸ್ಸು ಬಂತು ನಾವು ಬೆಂಗಳೂರು ತಲುಪಿದೆವು. 



1 comment: