Friday, 29 May 2020

Tanjaavur


ತಂಜಾವೂರು

ಚಿದಂಬರಂನಿಂದ ಹೊರಟೆವು. ಇಲ್ಲಿಂದ 110 ಕಿ.ಮಿ. ದೂರ ಪ್ರಯಾಣಿಸಬೇಕು. ಸ್ವಲ್ಪ ದೂರ ಹೋಗುವಾಗಲೇ ನಿದ್ದೆ ತೂಗತೊಡಗಿತು. ಅಲ್ಲೆಲ್ಲೋ ಕಾರ್ ನಿಂತಾಗಲೇ ಎಚ್ಚರ. ಟ್ರಾಫಿಕ್ ಜಾಮ್ . ಪಕ್ಕದಲ್ಲಿ ನೋಡುತ್ತೇನೆ ಒಂದು ದೇವಾಲಯ. ಅಲ್ಲೇ ಸಾಗುತ್ತಿದ್ದವನೊಡನೆ ವಿಚಾರಿಸಿದೆ ಯಾವ ದೇವಾಲಯ ಎಂತ. ವೈದೀಶ್ವರನ್ ಕೋಯಿಲ್ ಎಂದ.




 ಕಾರ್ ತಿರುಗಿಸಿದ ಮುರಳಿ. ಒಳ ಹೋದೆವು. ಬಹಳ ದೊಡ್ಡದಾದ ಆಲಯ. ನಾವು 25 ಕಿ. ಮಿ. ಪ್ರಯಾಣಿಸಿದ್ದೆವು. ಇಲ್ಲಿನ ದೇವರು ಶಿವ, ಎಲ್ಲಾ ರೋಗಗಳನ್ನು ಗುಣಪಡಿಸುವ ವೈದ್ಯ. ಅದಕ್ಕಾಗಿ ವೈದ್ಯನಾಥ ಎಂಬ ಹೆಸರು. ಇತರ ದೇವರುಗಳೊಂದಿಗೆ ದನ್ವಂತರಿ ದೇವರು ಸಹಾ ಇದ್ದಾರೆ. ಒಂದು ಕಲ್ಯಾಣಿ ಇದೆ. ಇದರ ನೀರಿಗೆ ಔಷಧ ಗುಣವಿದೆಯಂತೆ.
ಅಲ್ಲಿಂದ ಮುಂದೆ ಹೋದಾಗ ಕುಂಭಕೋಣ ಕ್ಕೆ ಹೊಗುವ ದಾರಿ ಎಡಕ್ಕೆ ಸಿಗುತ್ತದೆ. ಮತ್ತೂ ಸ್ವಲ್ಪ ದೂರದಲ್ಲಿ ಬಲಕ್ಕೆ ತಿರುಗಿದರೆ ಗಂಗೈಕೊಂಡ ಚೋಳಪುರ ಸಿಗುತ್ತದೆ. ಇಲ್ಲಿಂದ ವೆಲ್ಲಾಂಗಣ್ಣಿ ಗೂ ಹತ್ತಿರ. ಅದೆಲ್ಲಾ ಇನ್ನೊಮ್ಮೆ ನೋಡೋಣ ಎಂದುಕೊಂಡು ಮುಂದುವರಿದೆವು. ತಂಜಾವೂರು ಹತ್ತಿರವಾಯಿತು. ಇಲ್ಲೆಲ್ಲಾ ಬತ್ತದ ಕೃಷಿ ಜಾಸ್ತಿ. ಎಲ್ಲಿ ನೋಡಿದರೂ ಬತ್ತದ ಹೊಲಗಳು. ಅದಕ್ಕೇ ತಂಜಾವೂರನ್ನು ಬತ್ತದ ಕಣಜ ಎನ್ನುತ್ತಾರೆ. ನಾವು ಪಟ್ಟಣ ತಲುಪುವಾಗ ಬಹಳ ಜೋರಾದ ಜಡಿಮಳೆ, ಸಿಡಿಲು ಮಿಂಚು ಗಾಳಿ ಎಲ್ಲಾ ಒಮ್ಮೆಲೇ ಧಾಳಿ ಇಟ್ಟವು. ನಾವು ಪುಣ್ಯಕ್ಕೆ ಒಂದು ಲಾಡ್ಜ್ ನ ಒಳಗೆ ಇದ್ದೆವು. ರೂಮ್ ಸಾದಾರಣವಿತ್ತು. ನಮಗೆ ಅಗತ್ಯವಾಗಿ ಬೇಕಾದ್ದು ಕಾರ್ ಪಾರ್ಕಿಂಗ್. ಅದು ಅಲ್ಲಿತ್ತು. ಕಾಫಿ ಕುಡಿದು ವಿಶ್ರಾಮ. ರಾತ್ರಿಯ ಊಟ ಯಾರಿಗೂ ಬೇಡ ಎಂದರು. ಸರಿ ಮಾವಿನ ಹಣ್ಣಿನಲ್ಲಿ ಸುಧಾರಿಸುವಾ ಎಂದುಕೊಂಡೆವು. ಎಲ್ಲರೂ ಹೊಟ್ಟೆ ತುಂಬಾ ಬಗೆ ಬಗೆಯ ಮಾವಿನ ಹಣ್ಣಿನ ಕಾಳಗ ಹೊಡೆದೆವು. ಬೇಗನೇ ನಿದ್ದೆ ಬಂತು. 
ಬೆಳಗ್ಗೆ ಬೇಗನೇ ಎದ್ದು ಎಲ್ಲಾ ಕಾರ್ಯ ಮುಗಿಸಿ ಬೃಹದೀಶ್ವರನನ್ನು ಕಾಣಲು ಹೊರಟೆವು. ಸಮೀಪದ ಒಂದು ಒಳ್ಳೆಯ ಹೋಟೆಲ್ ನಲ್ಲಿ ಇಡ್ಲಿ ವಡೆ ಕಾಫಿ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ದೇವಾಲಯಕ್ಕೆ ಸ್ವಲ್ಪ ದೂರ. ಇದು ಕಾವೇರಿ ನದಿಯ ಎಡ ದಂಡೆಯಲ್ಲಿದೆ. ಅದೋ ದೇವಸ್ಥಾನ ಕಂಡಿತು. ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿ ಒಳಗೆ ಹೋದೆವು.




 ಇಲ್ಲಿ ಒಂದಾದಮೇಲೆ ಇನ್ನೊಂದು ಹೀಗೆ 3 ದ್ವಾರಗಳಿವೆ. ಮೊದಲನೆಯದು ಚಿಕ್ಕದು ಆ ಮೇಲೆ 2 ದೊಡ್ಡ ದ್ವಾರ. ಅದಕ್ಕೆ ಸ್ವಲ್ಪ ಕುಬ್ಜವಾದ ಗೋಪುರ. ನಂತರ ವಿಶಾಲವಾದ ರಾಜಾಂಗಣ. ಇದು ಸುಮಾರು 240/120 ಮೀಟರ್ ವಿಶಾಲವಾಗಿದೆ. ಎದುರುಗಡೆ ದೊಡ್ಡ ನಂದೀಮಂಟಪವಿದೆ. ಏಕಶಿಲಾ ನಂದಿಯ ವಿಗ್ರಹವಿದೆ. ಅದರಾಚೆ ಬೃಹದೀಶ್ವರನ ಭವ್ಯ ದೇವಾಲಯ. ಇಲ್ಲಿರುವುದೆಲ್ಲಾ ದೊಡ್ಡ ದೊಡ್ಡ ಆಕೃತಿಗಳೇ. ಈ ದೇವಾಲಯವನ್ನು ಚೋಳ ಚಕ್ರವರ್ತಿ ರಾಜ ರಾಜ ಚೋಳನು 1010 ರಲ್ಲಿ ಕಟ್ಟಿಸಿದನು. ಇಲ್ಲಿನ ಗೋಪುರ ವಿಶಿಷ್ಟವಾದದ್ದು. ಎಲ್ಲಾ ಕಡೆ ಹೊರಗಿನ ಗೋಪುರ ದೊಡ್ಡದಾಗಿದ್ದರೆ ಇಲ್ಲಿ ಹಾಗಲ್ಲ, ಮುಖ್ಯ ದೇವಾಲಯದ ಗೋಪುರವೇ ಅತೀ ಎತ್ತರವಾಗಿದೆ. ಇದರ ಎತ್ತರ 66 ಮೀಟರ್, ಅದರ ಮೇಲೆ 25 ಟನ್ ಭಾರವಿರುವ ಏಕ ಶಿಲಾ ಮುಕುಟ ಅದರ ಮೇಲೆ ಸ್ವರ್ಣಮಯ ಕಳಶ.




 ಎದುರುಗಡೆ ಮುಖಮಂಟಪ ಮತ್ತು ತುಂಬಾ ಪಾವಟಿಕೆಗಳಿರುವ ಸೋಪಾನ. ದ್ವಾರದಲ್ಲಿ ದೊಡ್ಡದಾದ ದ್ವಾರಪಾಲಕರು!




 ನಾವು ಮೊದಲಿಗೆ ಇದರ ಹೊರಭಾಗವನ್ನು ನೋಡಲು ಒಂದು ಸುತ್ತು ಬಂದೆವು. ಇಲ್ಲಿನ ಭಿತ್ತಿಯಲ್ಲಿ ಹಲವಾರು ವಿಗ್ರಹಗಳನ್ನು ಇರಿಸಿದ್ದಾರೆ. ಗಣೇಶ, ಕುಮಾರಸ್ವಾಮಿ,ಪಾರ್ವತಿ, ವೀರಭದ್ರ, ಸೂರ್ಯ,ಮಹಾವಿಷ್ಣು ವರಾಹಿ ಮತ್ತು ದಕ್ಷಿಣಾಮೂರ್ತಿ ಇವು ಪ್ರಮುಖವಾದವು.










 ಇದಲ್ಲದೆ ಗಣಪತಿ, ಪಾರ್ವತಿ, ವೀರಭದ್ರ ಮತ್ತು ಕುಮಾರಸ್ವಾಮಿಯರಿಗೆ ಪ್ರತ್ಯೇಕ ಆಲಯಗಳಿವೆ.

 ನಿನ್ನೆ ಒಳ್ಳೆಯ ಮಳೆಬಂದ ಕಾರಣ ಹವೆ ಬಹಳ ತಂಪಾಗಿತ್ತು. ಜಾಸ್ತಿ ಜನರೂ ಇರಲಿಲ್ಲ. ಎಲ್ಲಾ ಕಡೆ ಆರಾಮವಾಗಿ ನೋಡಿದೆವು. ಹೊರಗಿನ ಪೌಳಿ ಪ್ರಾಕಾರಗಳು ಈ ದೇವಾಲಯಕ್ಕೆ ಅಪೂರ್ವ ಶೋಭೆಯನ್ನು ಕೊಡುತಿತ್ತು. ದಕ್ಷಿಣಾಮೂರ್ತಿಯನ್ನು ನೋಡಲು ಒಂದು ಏಣಿ ಹತ್ತಿ ಹೋಗಬೇಕು. ಉಳಿದ ಬೇರೆ ದೇವಾಲಯಗಳಲ್ಲಿ ಕಂಡುಬರುವ ಮುಕ್ಕಾದ ವಿಗ್ರಹಗಳು ಇಲ್ಲಿಲ್ಲ. ಚೋಳರ ಪರಾಕ್ರಮಕ್ಕೆ ಹೆದರಿ ಇಲ್ಲಿ ಹೆಚ್ಚು ಆಕ್ರಮಣಗಳು ಆಗದ ಕಾರಣ ಯಾರೂ ಇದನ್ನು ಹಾಳುಗೆಡವಲು ಪ್ರಯತ್ನಿಸಲಿಲ್ಲ.


ಕಾಲನ ಹೊಡೆತಕ್ಕೆ ಅಲ್ಪ ಸ್ವಲ್ಪ ಹಾಳಾಗಿದ್ದರೂ ಅದನ್ನು ಸರಿಪಡಿಸುವ ಕಾರ್ಯ ಈಗಲೂ ನಡೆಯುತ್ತಿದೆ. ದೇವಾಲಯದ ಗೋಪುರಗಳು ಮತ್ತು ಕಟ್ಟಡಗಳು ಶ್ರೀಗಂಧದ ವರ್ಣದಲ್ಲಿ ಕಂಗೊಳಿಸುತ್ತಿವೆ.








 ಇದನ್ನು ನೋಡಲು ಬಹಳ ಸುಂದರ ಅನುಭವವಾಗುತ್ತದೆ. ಬಣ್ಣಗಳ ಗೋಜಲು ಇಲ್ಲಿಲ್ಲ. ದೇವಾಲಯದ ಸುತ್ತಲೂ ಕಲ್ಲಿನಲ್ಲಿ ಕೊರೆದಿರುವ ಶಿಲಾ ಶಾಸನಗಳಿವೆ. ಸ್ವತಃ ರಾಜ ರಾಜ ಚೋಳನೇ ಬರೆದಿರುವ ತಮಿಳು ಲಿಪಿಯಲ್ಲಿರುವ ಸಂಸ್ಕೃತ ಬರವಣಿಗೆಯನ್ನು ಇಲ್ಲಿ ಕಲ್ಲಿನಲ್ಲಿ ಬರೆದಿದ್ದಾರೆ. ಒಂದು ಸುತ್ತು ಬಂದಾಯ್ತು. ಇಲ್ಲೇ ಬಲಗಡೆ ಇರುವ ಒಂದು ಮಂಟಪದಲ್ಲಿ ತಂಜಾವೂರು ಶೈಲಿಯ ಚಿತ್ರಕಲೆ ನೋಡಿದೆವು. ಕಾಲನ ಹೊಡೆತಕ್ಕೆ ಎಲ್ಲಾ ಮಸುಕು ಮಸುಕಾಗಿದೆ. ಅಲ್ಲೇ ಸ್ವಲ್ಪ ಕುಳಿತೆವು, ದಣಿವಾಗಿತ್ತು. ಗೋಪುರದ ಮೇಲೆ ಕುಳ್ಳಿರಿಸಿದ ಮುಕುಟ ಶಿಲೆಯನ್ನು ಆಚ್ಚರಿಯಿಂದ ನೊಡುತಿದ್ದೆವು. 25 ಟನ್ ಭಾರವಿರುವ ಇದನ್ನು ಅಷ್ಟು ಎತ್ತರಕ್ಕೆ ಹೇಗೆ ಏರಿಸಿದರು ಎಂಬ ಕುತೂಹಲ ನಮಗೆಲ್ಲಾ. ನಾನು ಹಿಂದೆ ನ್ಯಾಷನಲ್ ಜಿಯೋಗ್ರಫಿ ಛಾನಲ್ ನಲ್ಲಿ ಒಂದು ಕಾರ್ಯಕ್ರಮ ನೋಡಿದ್ದೆ. ದೊಡ್ಡದಾದ ಶಿಲೆಯನ್ನು ಬಹಳ ದೂರದಿಂದ ಆನೆಗಳ ಸಹಾಯದಿಂದ ಎಳೆದು ತಂದಿರಬಹುದು ಎಂದು ಅವರ ಅಂಬೋಣ. ಅದಕ್ಕಾಗಿ ಅವರು ಒಂದು ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದರು. ಅಗಲವಾದ ಮಾರ್ಗವನ್ನು ಮಾಡಿ ಕೆಳಗಡೆ ಮರದ ದಿಂಡುಗಳನ್ನು ಹಾಸಿ ಅದರ ಮೇಲೆ ಈ ಕಲ್ಲನ್ನು ಇರಿಸಿ ಆನೆಗಳು ಮತ್ತು ಮನುಷ್ಯ ಪ್ರಯತ್ನದಿಂದ ಇಲ್ಲಿಯವರೆಗೆ ಎಳೆದು ತಂದರು. ಆಮೇಲೆ ಇದನ್ನು ಅಷ್ಟು ಎತ್ತರಕ್ಕೆ ಹೇಗೆ ಸಾಗಿಸಿದರು? ಇದೇ ಯಕ್ಷಪ್ರಶ್ನೆ. ಅವರ ಅಂದಾಜಿನಂತೆ ಕೆಳಗಿನ ನೆಲ ಮಟ್ಟದಿಂದ 16 ಅಂತಸ್ತಿನ ತುತ್ತ ತುದಿಯವರೆಗೆ ಇಳಿಜಾರು ಆಗಿರುವ ಒಂದು ಮಾರ್ಗ ರಚಿಸಿರಬೇಕು. ಅದರಲ್ಲಿ ಸನ್ನೆಗಳ ಮತ್ತು ರಾಟೆಗಳ ಸಹಾಯದಿಂದ ಬಲವಾದ ಹಗ್ಗ ಕಟ್ಟಿ ಆನೆಗಳಿಂದ ಎಳೆಸಿರಬೇಕು ಎಂದು. ಇರಬಹುದು ಅಂತ ನನಗೆ ಅನ್ನಿಸಿತು. ಆ ಕಾಲದಲ್ಲಿ ಕ್ರೇನ್ ಇರಲಿಲ್ಲವಲ್ಲಾ.
ಇನ್ನು ಒಳಗಡೆ ಹೋದೆವು. ದ್ವಾರದ ಇಕ್ಕೆಲಗಳಲ್ಲಿ ಶಿವಗಣಗಳ ದ್ವಾರಪಾಲಕರು. ಬಹಳ ಗಂಭೀರವಾದ್ದವು.


 ಒಳ ಪ್ರವೇಶಿಸುವಾಗ ವಿಶಾಲವಾದ ನಾಟ್ಯ ಮಂಟಪ. ಅದರಲ್ಲಿ ಆ ಕಾಲದಲ್ಲಿ ನೃತ್ಯ ಸೇವೆ ಸಂಗೀತ ಸೇವೆ ನಡೆಯುತಿತ್ತು. ಸುಮಾರು 400 ಮಂದಿ ನೃತ್ಯಾಂಗನೆಯರು ಅಲ್ಲಿದ್ದರಂತೆ. ಸಂಗೀತ ಮತ್ತು ನಾಟ್ಯ ಮತ್ತು ಚಿತ್ರಕಲೆಗಳು ಇಲ್ಲಿ ಹೆಸರುವಾಸಿಯಾಗಿದೆ. ನನ್ನ ಮಾವನವರು, ದಿವಂಗತ ಗೊಪಾಲಕೃಷ್ಣ ಶ್ಯಾನುಭಾಗರು ಅವರ ಬಾಲ್ಯದಲ್ಲಿ ಪಿಟೀಲು ಕಲಿಯಲು ಮತ್ತು ಚಿತ್ರಕಲೆ ಕಲಿಯಲು ಕಾಸರಗೋಡಿನಿಂದ ಇಲ್ಲಿಗೆ ಬಂದಿದ್ದರಂತೆ. ಅವರು ಇಲ್ಲೆಲ್ಲಾ ಎಷ್ಟು ಸಲ ಬಂದಿರಬಹುದು ನಡೆದಾಡಿರಬಹುದು ಎಂದು ಯೋಚಿಸುವಾಗ ಮೈ ನವಿರೆದ್ದಿತು. ಇಲ್ಲಿನ ಗೋಡೆಗಳಲ್ಲಿ ತಂಜಾವೂರು ಚಿತ್ರಕಲೆಗಳು ಬಹಳ ಇವೆ. ಆದರೆ ಎಲ್ಲಾ ಎಣ್ಣೆಯ ಮತ್ತು ಕರ್ಪೂರದ ಹೊಗೆಯಿಂದಾಗಿ ಮಸುಕುಗೊಂಡಿವೆ. ಸಾಲದ್ದಕ್ಕೆ ಸಾಕಷ್ಟು ಬೆಳಕೂ ಇರಲಿಲ್ಲ. ಮುಂದೆ ಗರ್ಭ ಗುಡಿಯಲ್ಲಿ ಶಿವಲಿಂಗ ಧರ್ಷನವಾಯಿತು. ಇದೇ ಬೃಹದೀಶ್ವರ ಲಿಂಗ. ಇಡೀ ಭಾರತದಲ್ಲೇ ಇಷ್ಟು ದೊಡ್ಡ ಶಿವಲಿಂಗ ಬೇರಿಲ್ಲ. ಬರೊಬ್ಬರಿ 29 ಅಡಿಗಳ ಕರಿಯ ಶಿಲೆಯಲ್ಲಿ ಮಾಡಿದ ಶಿವಲಿಂಗ. ಇದಕ್ಕೆ ಅಭಿಶೇಕ ಮಾಡಲು ಲಿಂಗದ ಹಿಂದುಗಡೆ ಉಕ್ಕಿನ ಒಂದು ಅಟ್ಟಳಿಗೆಯೇ ಇದೆ. ಅರ್ಚಕರು ಇದನ್ನು ಏರಿ ಶಿವನಿಗೆ ಅಭಿಶೇಕ ಮಾಡುತ್ತಾರೆ. ಹೂವಿನ ಅಲಂಕಾರ ಗಂಧ ಚಂದನ ಹಚ್ಚುತ್ತಾರೆ. ನಾವು ಭಕ್ತಿಯಿಂದ ಅಡ್ಡಬಿದ್ದು ಪ್ರಾರ್ಥನೆ ಸಲ್ಲಿಸಿದೆವು. ಹಣ್ಣುಕಾಯಿ ಅರ್ಪಿಸಿದೆವು. ಪ್ರಸಾದ ಸ್ವೀಕರಿಸಿದೆವು. ಮನಸ್ಸಿಗೆ ಒಂದು ಧನ್ಯತಾ ಭಾವ ಆವರಿಸಿತು. ಸ್ವಲ್ಪ ಹೊತ್ತು ಅಲ್ಲಿ ಕುಳಿತು ಧ್ಯಾನ ಮಾಡಿದೆವು. ಹೊರಬರಲು ಮನಸ್ಸೇ ಬರಲಿಲ್ಲ. ಆದರೂ ಹೊರಡಲೇಬೇಕಲ್ಲಾ. ಅಲ್ಲಿ ಮುಖ್ಯ ದ್ವಾರದಲ್ಲಿ ದೇವರ ಆನೆ ನಿಲ್ಲಿಸಿದ್ದರು. ನಮ್ಮ ಸಚಿನ್ ಗೆ ಅದನ್ನು ನೋಡಿದ ಕೂಡಲೇ ಅಲ್ಲಿಗೆ ಬೇಗನೇ ತಲುಪುವ ಆತುರ. ಅವನಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಅಲ್ಲಿಗೆ ಹೋದ ಕೂಡಲೇ ಆನೆಗೆ ಬಾಳೆ ಹಣ್ಣು ತಿನ್ನಿಸುವ ಕಾರ್ಯಕ್ರಮ.



 ಕೈನಲ್ಲಿದ್ದ ಬಾಳೆ ಹಣ್ಣು ಎಲ್ಲಾ ಮುಗಿಯಿತು. ಇನ್ನೂ ಕೊಡಬೇಕೆಂದು ಹಠ. ಸರಿ ಹೊರಗೆ ಹೋಗಿ ಒಂದು ಚಿಪ್ಪು ಹಣ್ಣು ತಂದು ಆನೆಗೆ ಕೊಟ್ಟನು. ಆನೆಯಿಂದ ಆಶೀರ್ವಾದ ಪಡೆದನು.











ನಾವು ಅಲ್ಲಿಂದ ಹೊರಟು ರೂಮ್ ಗೆ ಬಂದು ನಮ್ಮ ಸಾಮಾನು ಎಲ್ಲಾ ತೆಗೆದುಕೊಂಡು ಖಾಲಿ ಮಾಡಿದೆವು. ಒಂದು ಒಳ್ಳೆಯ ಹೊಟೆಲ್ ನಲ್ಲಿ ಊಟ ಮಾಡಿ ಹೊರಟೆವು. ನಮ್ಮ ಮುಂದಿನ ತಾಣ ತಿರುಚಿನಾಪಳ್ಳಿ, ಶ್ರೀರಂಗಂ.




No comments:

Post a Comment