Tuesday, 3 May 2011

London City

 ಈ ಸಲ ಇಂಗ್ಲೆಂಡ್ ಗೆ ಹೋಗಿ ಹಿಂತಿರುಗಿ ಬರುವಾಗ ನಾವು ಲಂಡನ್ ನಗರದ ಹೆಚ್ಚಿನ ಜಾಗಗಳನ್ನು ನೋಡಿ ಬಂದೆವು. ಬ್ರಿಟನ್ನಿನ ದಕ್ಷಿಣ-ಪಕ್ಷಿಮ ಕೊನೆಯಲ್ಲಿ ಕೊರ್ನ್ವಾಲ್ ಕೌಂಟಿ ಇದೆ. ಅಲ್ಲಿ ಟ್ರೂರೋ ಎಂಬ ಪಟ್ಟಣದ ಹತ್ತಿರ ಸ್ಟಿತಿಯನ್ಸ್ ಎಂಬ ಸುಂದರ ಪ್ರದೇಶದಲ್ಲಿದೆ ನಮ್ಮ ಮಗಳ ಮನೆ. ನಾವು 6 ತಿಂಗಳು ಅಲ್ಲಿದ್ದು ಬಹಳಷ್ಟು ಸುಂದರ ತಾಣಗಳಿಗೆ ಭೇಟಿಯಿತ್ತಿದ್ದೆವು. ನಮ್ಮ ವೀಸಾದ ಅವಧಿ ಮುಗಿಯುತಿದ್ದಂತೆ ಅಲ್ಲಿಂದ ಹೊರಟೆವು. ಸ್ಟಿತಿಯನ್ಸ್ನಿಂದ ಲಂಡನ್ ಗೆ ಸುಮಾರು 5 ಘಂಟೆಗಳ ಪ್ರಯಾಣ. ನಮ್ಮ ವಿಮಾನ ರಾತ್ರಿ 10 ಘಂಟೆಗೆ. ನಾವು ರಾತ್ರಿ 2 ಘಂಟೆಗೆ ಮನೆ ಬಿಟ್ಟೆವು. ನನ್ನ ಮಗಳು ಸೌಮ್ಯ, ಅವಳ ಪತಿ ರೋಹಿತ್  ನನ್ನ ಪತ್ನಿ ಕಸ್ತೂರಿ ಮತ್ತು ನಾನು, ಓಟ್ಟು 4 ಜನ ಅವರ ಜಾಗ್ವಾರ್  ಕಾರಿನಲ್ಲಿ ಲಂಡನ್ ಗೆ ಬೆಳಿಗ್ಗೆ 7ಕ್ಕೆ ತಲುಪಿದೆವು. ನಮಗೆಲ್ಲಾ ಒಳ್ಳೆಯ ನಿದ್ರೆ. ಪಾಪ ರೋಹಿತ್ ಗೆ ನಿದ್ರೆಯಿಲ್ಲ. ಅವರಿಗೆ ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿತ್ತು. ನಮ್ಮ ದೊಡ್ಡ ದೊಡ್ಡ 2 ಬ್ಯಾಗು ಮತ್ತು ಇತರ ಲಗ್ಗೇಜ್ ಗಳನ್ನು ಹೀಥ್ರೂ ವಿಮಾನ ನಿಲ್ದಾಣದ ಕ್ಲಾಕ್ ರೂಂನಲ್ಲಿಟ್ಟು ಲಂಡನ್ ನಗರ ನೋಡಲು ಹೊರಟೆವು.
ಹೀಥ್ರೂ ನಲ್ಲೆ ಟ್ಯೂಬ್ ರೈಲ್ ಸ್ಟೇಷನ್ ಇದೆ. ಅಲ್ಲಿ ಟಿಕೆಟ್ ಕೊಂಡು ಹತ್ತಿದೆವು. ಟ್ಯೂಬ್ ರೈಲ್ ಹೆಚ್ಚಿನೆಡೆ ಭೂಗರ್ಭದಲ್ಲೇ ಸಂಚರಿಸುತ್ತದೆ. ಕೆಲವು ಕಡೆ ಮಾತ್ರ ಮೇಲ್ಗಡೆ ಸಾಗುತ್ತದೆ. ಎಯರ್ ಕಂಡಿಶನ್ ಭೋಗಿಗಳು. ಅದರಲ್ಲೇ ರೈಲು ಯಾವ ಸ್ಥಳಕ್ಕೆ ತಲುಪಿತು, ಮುಂದಿನ ಸ್ಥಳ  ಯಾವುದು ಎಂಬುದೆಲ್ಲಾ ಕಾಣುತ್ತಿರುತ್ತದೆ. ಮೊದಲಿಗೆ ನಾವು ಲಂಡನ್ ಟವರ್ ಸ್ಟೇಷನ್ ನಲ್ಲಿ ಇಳಿದೆವು. ಅಲ್ಲಿದ ಹೊರಗೆ ಬಂದು ನೋಡುತ್ತೇವೆ ತುಂತುರು ಮಳೆ! ಅಯ್ಯೋ ಇದೇನು ಗ್ರಹಚಾರ ಎಂತ ಗೊಣಗುವಷ್ಟರಲ್ಲೇ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಂದು ನಮಗೆ 2 ಛತ್ರಿಗಳನ್ನು ಕೊಟ್ಟು, ನಮ್ಮೂರು ನೋಡಿಬನ್ನಿ ಎಂದು ಲಂಡನ್ ಗೆ ಸ್ವಾಗತ ಬಯಸಿದರು. ಅವರಿಗೆ ತುಂಬಾ ಥ್ಯಾಂಕ್ಸ್ ಹೇಳಿ ಮುಂದುವರಿದೆವು. ಅವರ ಸೌಜನ್ಯ ನಮ್ಮನ್ನು ಬೆರಗು ಗೊಳಿಸಿತು. ಪ್ರವಾಸೋದ್ಯಮ ಬೆಳೆಸುವುದು ಎಂದರೆ ಹೀಗೆ! ಬರಿದೇ ಮಾದ್ಯಮಗಳಲ್ಲಿ ಜಾಹೀರಾತು ಮಾಡಿದರೆ ಸಾಲದು. ಬಂದಂಥಹ ಅತಿಥಿಗಳಿಗೆ ನಮ್ಮಿಂದ ಆದಷ್ಟು ಸಹಾಯ, ಸಹಕಾರ ಕೊಡಬೇಕು.
ಅವರಿತ್ತ ಛತ್ರಿ ಹಿಡಿದುಕೊಂಡು ಲಂಡನ್ ಟವರ್ ನೋಡಲು ಹೋದೆವು. ದಾರಿಯಲ್ಲೇ ಒಂದು ರೋಮನ್ ಪುತ್ಥಳಿ ಕಂಡೆವು. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಟವರ್ ಕಾಣಿಸಿತು. ಇಲ್ಲೇ ಬ್ರಿಟಿಶ್ ರಾಜವಂಶದ ಆಭರಣಗಳನ್ನು ಇರಿಸಿದ್ದಾರಂತೆ. ಜಗತ್ ಪ್ರಸಿದ್ಧ ಕೊಹಿನೂರ್ ವಜ್ರವೂ, ಇತರ ರತ್ನಾಭಾರಣಗಳೂ ಇಲ್ಲಿಯೇ ಇರುವುದಂತೆ. ಸಾರ್ವಜನಿಕರಿಗೆ ದರ್ಶನದ ಸಮಯಕ್ಕೆ ಇನ್ನೂ ಕೆಲ ಘಂಟೆ ಕಾಯಬೇಕು. ಹಾಗಾಗಿ ಹೊರಗಿನಿಂದಲೇ ಆ ಕೋಟೆಯನ್ನು ನೋಡಿದೆವು. ಹಿಂದಿನ ಕಾಲದಲ್ಲಿ ಅದನ್ನು ಟಂಕಸಾಲೆಯಾಗಿಯೂ,ರಾಜಕೀಯ ಬಂದೀಖಾನೆಯನ್ನಾಗಿಯೂ ಬಳಸುತಿದ್ದರು.
ಟವರ್ ನ ಎಲ್ಲಾ ಮಾಹಿತಿಗಳನ್ನು ಫಲಕಗಳಲ್ಲಿ ಬರೆದಿರಿಸಿದ್ದಾರೆ. ಸುಮಾರು 1100ನೇ ಇಸವಿಯಲ್ಲಿ ಇದರ ನಿರ್ಮಾಣವಾಯಿತು. ಹಿಂದೆ, ಇದರ ಸುತ್ತಲೂ ನೀರು ತುಂಬಿದ ಕಂದಕವಿತ್ತು.
ಈವಾಗ ನೀರಿಲ್ಲ, ಬದಲಾಗಿ ಹಸಿರು ಹುಲ್ಲು ಬೆಳೆಸಿದ್ದಾರೆ. ಬಂಡೆಕಲ್ಲಿನ ಕೋಟೆಗೆ ಇದು ಬಹಳ ಚೆನ್ನಾಗಿ ಹೊಂದುತ್ತದೆ. ಸುತ್ತಲೂ ಹೂಗಿಡಗಳೂ, ಸುಂದರವಾದ ಮರಗಳೂ ಇದರ ಶೋಭೆಯನ್ನು ಹೆಚ್ಚಿಸುತ್ತಿದೆ. ಒಂದೇ ಒಂದು ಕಸ-ಕಡ್ಡಿ ಇಲ್ಲ.ಅಷ್ಟು ಚೆನ್ನಾಗಿ ಇರಿಸಿದ್ದಾರೆ.
ಮುಂದೆ ಹೋದಂತೆಲ್ಲಾ ನಮಗೆ ಇಂಗ್ಲೆಂಡಿನ ಜೀವನಾಡಿಯಾಗಿರುವ ಥೇಮ್ಸ್ ನದಿ ಗೋಚರಿಸುತ್ತದೆ. ಇದರ ಎರಡೂ ಪಕ್ಕದಲ್ಲಿ ತುಂಬಾ ಬೋಟ್ ಗಳನ್ನು ನಿಲ್ಲಿಸಿದ್ದಾರೆ. ಹೊತ್ತೇರಿದಂತೆಲ್ಲಾ ಇವುಗಳ ಕಾರ್ಯ ಪ್ರಾರಂಭವಾಗಬಹುದು. ಇದರಲ್ಲಿ ಕುಳಿತು ಥೇಮ್ಸ್ ನದಿಯಲ್ಲಿ ವಿಹರಿಸಬಹುದು. ಈ ನದಿಗೆ ಅಡ್ಡಲಾಗಿ ಹಲವಾರು ಸೇತುವೆಗಳಿವೆ.ಅವುಗಳಲ್ಲಿ ಪ್ರಮುಖವಾದದ್ದು ಟವರ್ ಬ್ರಿಡ್ಜ್ .
ಬಹಳ ಹಳೆಯದು ಮತ್ತು ಪ್ರಸಿದ್ಧವಾದದ್ದು. ಈಗಲೂ ಹೊಚ್ಹ ಹೊಸದರಂತೆ ಇದೆ. ನದಿಯಲ್ಲಿ ಸಾಗುವ ದೊಡ್ಡ ನಾವೆಗಳು ಇದರಡಿಯಲ್ಲಿ ಹೋಗಬೇಕಾದರೆ ಸೇತುವೆಯನ್ನು ಮಧ್ಯದಲ್ಲಿ ಮೇಲಕ್ಕೆ ಎತ್ತುತ್ತಾರೆ. ನಾವೆಗಳು ಆಕಡೆಗೆ ದಾಟಿದ ಮೇಲೆ ಮತ್ತೆ ಯಥಾಸ್ಥಿತಿಗೆ ತರಲಾಗುತ್ತದೆ. ನಾವು ಅಲ್ಲಿ ತುಂಬಾ ಫೋಟೋ ಹಿಡಿದೆವು.
ಆಮೇಲೆ ಸ್ವಲ್ಪ ದೂರ ನಡೆದು ಸೇತುವೆಯ ಮೇಲೆ ನಡೆದು ಅಲ್ಲಿಂದ ತೋರುವ ದೃಶ್ಯಗಳನ್ನು ಕಂಡು ತೃಪ್ತಿಪಟ್ಟೆವು.
ಈ ನದಿಯ ದಂಡೆಯಲ್ಲೇ ಈಸ್ಟ್ ಇಂಡಿಯಾ ಕಂಪನಿಯ ಕಟ್ಟಡವಿದ್ದು ಈಗಲೂ ಕಾರ್ಯವೆಸಗುತ್ತಿದೆ. ನದಿಯ ದಂಡೆಗಳಲ್ಲಿ ಅತ್ಯಾಧುನಿಕ ಕಟ್ಟಡಗಳಿವೆ.
ಲಂಡನ್ ನಗರವು, ಜಗತ್ತಿನ ಅತಿ ದೊಡ್ಡ ವ್ಯಾಪಾರ ವಹಿವಾಟನ್ನು ಹೊಂದಿದ ಪ್ರದೇಶ.
ಇದೇ ನದಿಯ ಒಂದು ದಂಡೆಯಲ್ಲಿ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಸುತ್ತು ತಿರುಗುವ ಚಕ್ರವೊಂದಿದೆ.
ಜಯಂಟ್ ವೀಲ್ ನಂತೆ ಇದು ತಿರುಗುತ್ತದೆ. ಇದಕ್ಕೆ ಲಂಡನ್ ಐ ಎಂದು ಕರೆಯುತ್ತಾರೆ. ಇದರಲ್ಲಿ ಕುಳಿತುಕೊಳ್ಳುವ ಹಲವಾರು ಕ್ಯಾಬಿನ್ ಗಳಿದ್ದು ಅದರಲ್ಲಿ ಕುಳಿತು ನಿಧಾನವಾಗಿ ಸುತ್ತುತ್ತಾ ಲಂಡನ್ ನಗರದ ಪೂರ್ತಿ ವೀಕ್ಷಣೆ ಮಾಡಬಹುದು.
ಅಲ್ಲಿಂದ ನಾವು ಹೊರಟು  ಟ್ಯೂಬ್ ರೈಲ್ ಸ್ಟೇಷನ್ ಗೆ ಬಂದೆವು. ನಮಗೆ ಛತ್ರಿ ಯನ್ನು ಕೊಟ್ಟ ಮಹಿಳೆಯನ್ನು ಕಂಡು ಅದನ್ನು ನಮ್ಮ ಧನ್ಯವಾದ ಸಹಿತ ಹಿಂತಿರುಗಿಸಿದೆವು.
ರೈಲು ಬಂತು. ನಾವು ಮುಂದೆ ಲಂಡನ್ನಿನ ಪ್ರಖ್ಯಾತ ಬಿಗ್ ಬೆನ್ ಗಡಿಯಾರವಿರುವೆಡೆಗೆ ಬಂದೆವು. ಇದನ್ನು 1858ರಲ್ಲಿ ಸ್ಥಾಪಿಸಿಸಿದರಂತೆ. ಅಲ್ಲಿಂದ ಈವರೆಗೆ ಕರಾರುವಕ್ಕಾಗಿ ಸಮಯ ತೋರಿಸುತ್ತಾ ಇದೆ.
 ಇದು ಜಗತ್ತಿನ ಅತೀ ಎತ್ತರವಾದ ಮತ್ತು ದೊಡ್ಡದಾದ ಗಡಿಯಾರ ಗೋಪುರ, ಇದರ ಎತ್ತರ 180 ಅಡಿಗಳು. ನಾಲ್ಕೂಕಡೆ ಮುಖವಿದ್ದು ಒಂದೊಂದು ಡಯಲ್ 25 ಅಡಿ ವ್ಯಾಸ ಹೊಂದಿದೆ. ಇದರ ದೊಡ್ಡ ಮುಳ್ಳಿನ ಉದ್ದವೇ 14 ಅಡಿ ಇದೆ ಎಂದರೆ ಇದರ ಭವ್ಯತೆಯನ್ನು ಊಹಿಸಬಹುದು. ಈಗ ಘಂಟೆ 9. ಗಡಿಯಾರದ ಘಂಟೆ ಬಾರಿಸಲು ಶುರು. ಈ ಸದ್ದನ್ನು ನಾವು ಬಿ.ಬಿ.ಸಿ. ರೇಡಿಯೋನಲ್ಲಿ ಕೇಳಿದ್ದ ನೆನಪು. ಇಂದು ಕಿವಿಯಾರೆ ಆಲಿಸಿದೆವು. ಕಣ್ಣಾರೆ ಕಂಡೆವು. ಬಿಗ್ ಬೆನ್ ಗೆ ತಾಗಿಕೊಂಡು ಬ್ರಿಟಿಶ್ ಪಾರ್ಲಿಮೆಂಟಿನ  ಬೃಹತ್ತಾದ  ಕಟ್ಟಡವಿದೆ.
ಮೊದಲು ಈ ಕಟ್ಟಡವನ್ನು ಪ್ಯಾಲೆಸ್ ಒಫ್ ವೆಸ್ಟ್ ಮಿನ್ ಸ್ಟರ್ ಎಂದು ಕರೆಯುತಿದ್ದರು. ಇದರ ವಾಸ್ತು ಶೈಲಿ ಬಹಳ ಸುಂದರವಾಗಿದೆ. ಒಲಿವರ್ ಕ್ರೋಮ್ ವೆಲ್ ನ ಪುತ್ಥಳಿ ಇದರ ಎದುಗಡೆ ಇದೆ. ಪಕ್ಕದಲ್ಲಿ ಥೇಮ್ಸ್ ನದಿ ಹರಿಯುತ್ತಿದೆ. ಅಲ್ಲೂ ಒಂದು ದೊಡ್ಡ ಸೇತುವೆಯಿದೆ.
ಇಲ್ಲಿಂದ ಸ್ವಲ್ಪ ದೂರದಲ್ಲಿ ಪುರಾತನವಾದ ವೆಸ್ಟ್ ಮಿನ್ ಸ್ಟರ್ ಅಬೆ ಎಂಬ ಸುಂದರವಾದ ಚರ್ಚು ಇದೆ. ಸೈಂಟ್ ಪೀಟರ್ ನ ಚರ್ಚ್ ಇದಾಗಿದ್ದು ಇಲ್ಲಿಯೇ ಬ್ರಿಟಿಶ್ ರಾಜ,ರಾಣಿಯರ ಪಟ್ಟಾಭಿಷೇಕ ನಡೆಯುವುದು. ಬ್ರಿಟಿಶ್ ರಾಜ ಕುಟುಂಬದ ವಿವಾಹಗಳು ಇಲ್ಲೇ ನಡೆಯುವುದು. ರಾಜವಂಶಜರ ಸಮಾಧಿಯೂ ಇಲ್ಲೇ ನಡೆಯುವುದು.
ಇತ್ತೀಚಿಗೆ ಅಲ್ಲಿ ನಡೆದ ವಿವಾಹವೆಂದರೆ ರಾಜಕುಮಾರ ವಿಲಿಯಮ್ಸ್ ಮತ್ತು ಕ್ಯಾಥರೀನ್ ರದ್ದು. ಈ ಅದ್ದೂರಿಯ ಸಮಾರಂಭದ ನೇರ ಪ್ರಸಾರವನ್ನು ನಮ್ಮ ಹಲವಾರು ಟಿ.ವಿ.ಚಾನೆಲ್ ಗಳು ಪ್ರಸಾರ ಮಾಡಿದ್ದರು. ನಾವು ಅಲ್ಲಿಗೆ ಹೋದ ದಿನ ರವಿವಾರವಾಗಿದ್ದರಿಂದ ಒಳಗಡೆ ಪ್ರಾರ್ಥನಾ ಕಾರ್ಯ ನಡೆದಿತ್ತು. ಹಾಗಾಗಿ ಒಳಗಡೆಗೆ ಯಾವ ಪ್ರವಾಸಿಗರನ್ನೂ ಬಿಡುತ್ತಿರಲಿಲ್ಲ.
ಅದರ ಹೊರಗಿನ ಭವ್ಯ ಗೋಪುರ ಗೋತಿಕ್ ಶೈಲಿಯದಾಗಿದ್ದು ಬಹಳ ಸುಂದರವಾಗಿದೆ. ಅದರ ಹೆಬ್ಬಾಗಿಲಂತೂ ಅತ್ಯಾಕರ್ಷಕವಾಗಿದೆ. ಒಳಗಡೆ ನೋಡಲಾಗಲಿಲ್ಲ ಎಂಬ ನಿರಾಸೆಯನ್ನು ರಾಜಕುಮಾರನ ವಿವಾಹದ ನೇರಪ್ರಸಾರ  ನಿವಾರಿಸಿತು. ಎಷ್ಟೊಂದು ಸುಂದರ ಹಾಗೂ ಭವ್ಯವಾಗಿದೆ! ಅದರ ಅತೀ ಎತ್ತರವಾದ ಸ್ತಂಭಗಳು, ಅದರ ಮೇಲಿನ ಕಮಾನುಗಳು, ಚಿನ್ನದ ಗಿಲಾವಿಯಿಂದ ಹೊಳೆಯುವ ಅಲಂಕಾರಿಕ ಹೂಬಳ್ಳಿಗಳು ಎಲ್ಲಾ ಸುಂದರವಾಗಿದೆ, ರಾಜಯೋಗ್ಯವಾಗಿದೆ. ಇನ್ನೆಂದಾದರೂ ಲಂಡನ್ ಗೆ ಹೋದರೆ ಖಂಡಿತಾ ಅದರ ಒಳಗೆ ಹೋಗಿ ನೋಡಲೇಬೇಕು. ಮುಂದೆ ನಾವು ಸೈಂಟ್ ಜೇಮ್ಸ್ ಪಾರ್ಕ್ ಗೆ ಹೋದೆವು. ನಮ್ಮ ಕಬ್ಬನ್ ಪಾರ್ಕ್ ನೆನಪಾಯಿತು. ಬಹಳ ಚೆನ್ನಾಗಿದೆ.
ಅದರ ಒಂದು ಪಕ್ಕದಲ್ಲಿ ದೊಡ್ಡ ಸರೋವರವಿದ್ದು ಅದರ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಅದರಲ್ಲಿ ವಿಹರಿಸುತ್ತಿರುವ ಅಚ್ಚ ಬಿಳುಪಿನ ಹಂಸಗಳು, ಬೇರೆ ಬೇರೆ ಜಾತಿಯ ನೀರಕ್ಕಿಗಳು ನೋಡಲು ಸುಂದರವಾಗಿವೆ. ದೊಡ್ಡ ಜಾತಿಯ ಅಳಿಲುಗಳೂ ಅಲ್ಲಿ ನಿರ್ಭಯವಾಗಿ ಜನರು ಕೊಡುವ ಹಣ್ಣು, ಬೀಜಗಳನ್ನು ಕೈಯಿಂದಲೇ ಸ್ವೀಕರಿಸುತ್ತವೆ. ವೀಪಿಂಗ್ ಟ್ರೀ ಎಂದು ಹೆಸರಿಸಿದ ಮರಗಳು ನೀರಿನ ಪಕ್ಕದಲ್ಲೇ ಇದ್ದು ತಮ್ಮ ಎಳೆ ಹಸಿರು ಬಣ್ಣವನ್ನು ನೀರಲ್ಲಿ ಪ್ರತಿಬಿಂಬಿಸುತ್ತದೆ. ಅಲ್ಲಿನ ಚುಮು ಚುಮು ಚಳಿ, ಸುಂದರ ಪರಿಸರ, ಆಹಾ! ಸ್ವರ್ಗ!  ಅಲ್ಲಿ ಕುಳಿತುಕೊಳ್ಳಲು ತುಂಬಾ ಬೆಂಚುಗಳನ್ನು ಇರಿಸಿದ್ದಾರೆ. ನಾವೂ ಅಲ್ಲಿಯೇ ಕುಳಿತು ಬರ್ಗರ್, ಸ್ಯಾಂಡ್ ವಿಚ್ ತಿಂದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡೆವು. ಮತ್ತೆ ಮುಂದುವರಿಯುತ್ತಾ ಮಹಾರಾಣಿಯವರ 
ನಿವಾಸವಾದ ಬಕಿಂಗ್ ಹ್ಯಾಮ್ ಅರಮನೆಯ ಮುಂಭಾಗಕ್ಕೆ ಬಂದೆವು.
ಇಲ್ಲಿಯೇ ರಾಣಿ ಎಲಿಜಬೆಥ್ ಇರುವುದು. ರಾಣಿ ಅಲ್ಲಿದ್ದರೆ ಮಾತ್ರ ಯೂನಿಯನ್ ಜಾಕ್ ದ್ವಜವು ಮೇಲೆ ಹಾರಾಡುತ್ತಿರುತ್ತದೆ. ಅರಮನೆಯು ಬಹಳ ದೊಡ್ಡದಾಗಿದೆ, ಸುಂದರವೂ ಇದೆ. ಆದರೂ ನಮ್ಮ ಮೈಸೂರು ಅರಮನೆಯ ಸೊಗಸು ಅದಕ್ಕಿಲ್ಲ.
ಅರಮನೆಯ ಮುಂಭಾಗದಲ್ಲಿ ವೃತ್ತಾಕಾರದ ದೊಡ್ಡ ಕಾರಂಜಿ ಇದೆ.
ಮದ್ಯದಲ್ಲಿ ಎತ್ತರಕ್ಕೆ ಚಾಚಿದ ಸ್ತಂಭವಿದ್ದು ಅದರಲ್ಲಿ ಸುಂದರವಾದ ಮೂರ್ತಿಗಳಿವೆ. ಒಂದು ಪಕ್ಕದಲ್ಲಿ ವಿಕ್ಟೋರಿಯಾ ಮಹಾರಾಣಿಯ ಮೂರ್ತಿ ಗಮನ ಸೆಳೆಯುತ್ತಿದೆ.
ಕೆಳಗಡೆ ಗಂಭೀರವಾಗಿ ನಿಂತ ಸಿಂಹಗಳಿವೆ ಮತ್ತು ಅದರ ಮೇಲೆ ಕೈಇರಿಸಿಕೊಂಡ ವೀರರ ಮೂರ್ತಿಗಳಿವೆ. ಇನ್ನೂ ಕೆಲವು ಆಕರ್ಷಕ ಮೂರ್ತಿಗಳಿವೆ.
 ತುತ್ತ ತುದಿಯಲ್ಲಿ ಚಿನ್ನದ ಮುಲಾಮನ್ನು ಹಚ್ಚಲಾದ ಕಿನ್ನರಿಯ ಮೂರ್ತಿಇದೆ. ಸುತ್ತಲೂ ನೀರು ಬೀಳುತ್ತಿದೆ. ಒಟ್ಟಾರೆ ಹೇಳಬೇಕೆಂದರೆ ಬಹಳ ಆಕರ್ಷಣೀಯ, ಮನೋಹರ ದೃಶ್ಯ.
 ಅಲ್ಲೆಲ್ಲಾ ಬಹಳ ಜನ ಪ್ರವಾಸಿಗಳು ನೆರೆದಿದ್ದು ಫೋಟೋ ಹಿಡಿಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಚೇಂಜ್ ಆಫ್ ಗಾರ್ಡ್ ಎಂಬ ಕಾರ್ಯಕ್ರಮ ನಡೆಯಲಿದೆ. ಕೆಂಪು-ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ ಅರಮನೆಯ ಸೈನಿಕರು ವಿಚಿತ್ರವಾದ ಟೊಪ್ಪಿಗೆ ಧರಿಸಿ ಬ್ಯಾಂಡ್ ನ ದ್ವನಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ ಅರಮನೆಯ ಗೇಟ್ ನ ಒಳಗೆ ಹೋಗುತ್ತಾರೆ. ಅವರ ಜೊತೆಯಲ್ಲೇ ಕುದುರೆ ಸವಾರರು ಸಹ ಇರುತ್ತಾರೆ.
ಅಷ್ಟರಲ್ಲಿ ಅರಮನೆಯಿಂದ ಹಿಂದಿನ ದಿನದ ಪಾಳಿಯನ್ನು ಮುಗಿಸಿದ ಸೈನಿಕರು ಹೊರ ಬಂದು ಪರಸ್ಪರ ಗೌರವ ಸೂಚಿಸಿ ತಮ್ಮ ಪಾಳಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಿತ್ಯವೂ ಕ್ಲಪ್ತ ಸಮಯದಲ್ಲಿ ಇದು ನಡೆಯುತ್ತದೆ. ಇದನ್ನು ನೋಡಲೆಂದೇ ದೇಶ ವಿದೇಶಗಳ ಪ್ರವಾಸಿಗರು ನೆರೆಯುತ್ತಾರೆ.ಅರಮನೆಯ ಒಳಗೆ ಹೋಗಲು ವಿಶೇಷ ಪಾಸು ಮಾಡಿಸಬೇಕಾಗುತ್ತದೆ.
ನಮ್ಮ ಮುಂದಿನ ಭೇಟಿ ನ್ಯಾಚುರಲ್  ಹಿಸ್ಟರಿ ಮ್ಯೂಸಿಯಂಗೆ.
 ನಾವು ಸೌತ್ ಕೆನ್ಸಿಂಗ್ಟನ್ ಸ್ಟೇಷನ್ ನಲ್ಲಿ ಇಳಿದು ಅಲ್ಲಿಗೆ ಬಂದೆವು. ಇದರ ಪಕ್ಕದಲ್ಲೇ ಸೈನ್ಸ್ ಮ್ಯೂಸಿಯಂ ಮತ್ತು ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂ ಸಹ ಇದೆ. ನ್ಯಾಚರಲ್ ಹಿಸ್ಟರಿ ಮ್ಯೂಸಿಯಂ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಮ್ಯೂಸಿಯಂ. ಇದರಲ್ಲಿ ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಕೀಟ ಶಾಸ್ತ್ರ, ಖನಿಜ ಶಾಸ್ತ್ರ, ಪ್ರಾಗೈತಿಹಾಸಿಕ ಶಾಸ್ತ್ರಗಳ ಬಗ್ಗೆ ವಿಸ್ತೃತವಾದ ನಮೂನೆಗಳನ್ನು ಪ್ರದರ್ಶಿಸಿದ್ದಾರೆ. ಸುಮಾರು 70 ಮಿಲಿಯ ವಿವಿಧ ನಮೂನೆಗಳ ಅಗಾಧ ಸಂಗ್ರಹವೇ ಇಲ್ಲಿದೆ. ಎಲ್ಲವನ್ನೂ ಸರಿಯಾಗಿ ನೋಡಲು ಕನಿಷ್ಠ ೧೫ ದಿನಗಳಾದರೂ ಬೇಕಾಗಬಹುದು.
 ಮ್ಯೂಸಿಯಂನ ಭವ್ಯವಾದ ಬಾಗಿಲ ಒಳಗೆ ಹೋದಾಗ ಒಂದು ವಿಶಾಲ ಹಾಲ್  ಸಿಗುತ್ತದೆ. ಇಲ್ಲಿ ಬೃಹತ್ ಗಾತ್ರದ ಡೈನೋಸಾರ್ ನ ಅಸ್ತಿಪಂಜರವನ್ನು ಜೋಡಿಸಿಟ್ಟಿದ್ದಾರೆ. ಅದರ ಕೆಳಗಡೆ ನಾವೂ ನಿಂತಾಗ ನಾವೆಷ್ಟು ಕುಬ್ಜರು ಎಂದೆನಿಸುತ್ತದೆ. ಕಡಿಮೆಯೆಂದರೂ 50-60 ಜನರಾದರೂ ಅದರಡಿಯಲ್ಲಿ ನಿಲ್ಲಬಹುದು. ಈ ವರ್ಗದ ಪ್ರಾಣಿಗಳ ಅಸಂಖ್ಯಾತ ನಮೂನೆಗಳನ್ನು ಜೋಡಿಸಿಟ್ಟಿದ್ದಾರೆ. ಇವುಗಳೆಲ್ಲ ಅಪರೂಪದ ಪಳೆಯುಳಿಕೆಗಳು. ನಮ್ಮ ಭೂಮಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾದ ಈ ಬೃಹತ್ ಜೀವಿಗಳ ಬಗ್ಗೆ ಚೆನ್ನಾದ ಅರಿವು ಮೂಡಿಸುತ್ತದೆ. ಅಲ್ಲಿಂದ ಮೆಟ್ಟಿಲುಗಳನ್ನು ಇಳಿದು ಇರುಕಲಾದ ಜಾಗಕ್ಕೆ ಬಂದಾಗ ನಮಗೆ ನಿಜವಾದ ಡೈನೋಸಾರ್ ನ ದರ್ಶನವಾಗುತ್ತದೆ.
 ಅದು ತನ್ನ ಬೃಹತ್ ಕೋರೆ ಹಲ್ಲುಗಳನ್ನು ಪ್ರದರ್ಶಿಸುತ್ತಾ ಬಾಯಿಯಿಂದ ನೆತ್ತರು ಸುರಿಸುತ್ತಾ, ಕೆಂಗಣ್ಣಿನಿಂದ ನೋಡುತ್ತಾ ಅಗಲವಾಗಿ ಬಾಯಿ ತೆರೆದು ಘರ್ಜಿಸುತ್ತದೆ. ತಲೆಯನ್ನು ಅತ್ತಿತ್ತ ತೊನೆದಾಡಿಸುತ್ತದೆ. 2-3 ಹೆಜ್ಜೆ ಮುಂದಿಟ್ಟಾಗಲಂತೂ ಎಲ್ಲರ ಎದೆಬಡಿತ ಒಮ್ಮೆಗೇ ನಿಂತಂತಾಗುತ್ತದೆ. ಅದು ಮಾನವ ನಿರ್ಮಿತ ಯಾಂತ್ರಿಕ ಡೈನೋಸಾರ್! ಅದರ ಗಾತ್ರ, ಚರ್ಮದ ಸುಕ್ಕುಗಳು, ಎಲ್ಲವು ನಿಜವಾದ ಡೈನೋಸಾರ್ ಎಂದೇ ಭಾಸವಾಗುತ್ತದೆ. ಅದರ ಘರ್ಜನೆಗೆ ಹೆದರಿ ಜನರು ಮಕ್ಕಳು ಎಲ್ಲರೂ ಕಿರಿಚಾಡುತ್ತಾರೆ. ಅಷ್ಟು ನೈಜವಾಗಿದೆ.
 ಮುಂದೆ ಹೋದಂತೆ ನಮಗೆ ಈ ಭೂಮಿಯಲ್ಲಿದ್ದ, ಇರುವ ಎಲ್ಲಾ ಪ್ರಾಣಿಗಳ ನಿಜವಾದ ತೊಗಲಿನಿಂದ ಮಾಡಿದ ನಮೂನೆಗಳನ್ನು ಕಾಣಬಹುದು. ತಿಮಿಂಗಿಲ, ಶಾರ್ಕ್, ಆನೆ, ಕುದುರೆ, ಜೀಬ್ರಾ, ಸಿಂಹ, ಹುಲಿ, ಹಿಮ ಕರಡಿ, ಉಳಿದ ಚಿಕ್ಕ ದೊಡ್ಡ ಪ್ರಾಣಿಗಳು, ಹಾವು, ಹಕ್ಕಿಗಳು ಎಲ್ಲಾ ಇಲ್ಲಿವೆ. ಎಲ್ಲವೂ ಜೀವಂತವಾಗಿವೆಯೇನೋ ಎಂಬಂತೆ ತೋರುತ್ತದೆ.
 ಕೀಟಗಳಿಗಾಗಿಯೇ ಬೇರೆಯೇ ಒಂದು ವಿಭಾಗವಿದೆ. ಮುಂದೆ ನಾವು ಖನಿಜಗಳ ಸಂಗ್ರಹ ನೋಡಲು ಹೋದೆವು. ಇದರಲ್ಲಿ ನನಗೆ ವಿಶೇಷ ಆಸಕ್ತಿ ಇದ್ದುದರಿಂದ ಇಲ್ಲಿಗೇ ಹೋಗೋಣ ಎಂದು ಒತ್ತಾಯಿಸಿದೆ. ಅಬ್ಭಾ ಎಷ್ಟೊಂದು ಬಗೆಯ ಬಣ್ಣ ಬಣ್ಣದ ಹೊಳೆಯುವ ಖನಿಜಗಳು.
 ಸಾಮಾನ್ಯ ಕ್ವಾರ್ಟ್ಸ್ ನಿಂದ ತೊಡಗಿ ವಜ್ರದವರೆಗೆ ಎಲ್ಲಾ ರತ್ನಗಳ ಮೂಲ ರೂಪವನ್ನು ಇರಿಸಿದ್ದಾರೆ. ಅವುಗಳನ್ನು ಸಾಣೆಹಿಡಿದು ಪಾಲಿಶ್ ಮಾಡಿ ಇರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಮನಮೋಹಕ.
ಇದಲ್ಲದೆ ಕಬ್ಬಿಣ ಮತ್ತು ಇತರ ಎಲ್ಲಾ ಲೋಹಗಳಿಂದ ಹಿಡಿದು ಬೆಳ್ಳಿ, ಚಿನ್ನ, ಪ್ಲಾಟಿನಂ ಮತ್ತು ಇತರ ಅಪರೂಪದ ರೇರ್ ಮೆಟಲ್ ಗಳನ್ನು ಇರಿಸಿದ್ದಾರೆ.
ನಾವು ಹೋದ ಎಲ್ಲಾ ಕಡೆ ಫೋಟೋ ತೆಗೆಯಲು, ವಿಡಿಯೋ ಮಾಡಲು ಯಾವೊಂದು ಆಕ್ಷೇಪವೂ ಇರಲಿಲ್ಲ. ಯಾವುದೇ ಶುಲ್ಕ ಸಹಾ ಕೊಡಬೇಕಾಗಿಲ್ಲ. ಆದರೆ ನಮ್ಮಲ್ಲಿ? ಯಾವ ವಿಶೇಷ ಜಾಗಗಳಿಗೆ ಹೋದರೂ ಶುಲ್ಕ ನೀಡಬೇಕು. ದೇವಾಲಯದ ಒಳಗಡೆ ಫೋಟೋ ತೆಗೆಯುವಂತಿಲ್ಲ. ಇದರಿಂದ ಏನೂ ತೊಂದರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಪ್ರವಾಸಿಗರು ಬಂದು ಫೋಟೋ ತೆಗೆದು ಅವರವರ ಊರಿಗೆ ಹೋದಮೇಲೆ ಖಂಡಿತಾ ಅವುಗಳನ್ನು ತಮ್ಮ ನೆಂಟರಿಷ್ಟರಿಗೆ ಗೆಳೆಯರಿಗೆಲ್ಲಾ ತೋರಿಸಿಯೇ ತೋರಿಸುತ್ತಾರೆ. ಇದೇ ಒಂದು ಪುಕ್ಕಟೆ  ಜಾಹೀರಾತಲ್ಲವೇ? ಇದರಿಂದ ಪರದೇಶಗಳ ಜನರೂ ನಮ್ಮ ದೇಶದ ವಿಶೇಷಗಳನ್ನು, ದೃಶ್ಯಗಳನ್ನೂ ನೋಡುವಂತಾಗುತ್ತದೆ. ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಸುರಿಯುವ ಸರಕಾರಕ್ಕೆ, ಫೋಟೋಗ್ರಫಿ ಶುಲ್ಕದಿಂದ ಬರುವ ಅಲ್ಪಮೊತ್ತಕ್ಕೆ ಯಾಕಿಷ್ಟು ಮೋಹ ಎಂದು ತಿಳಿಯುವುದಿಲ್ಲ. ಕೆಲವೆಡೆ ವಿದೇಶಿಯರಿಂದ ಅವರ ದೇಶದ ಹಣವನ್ನು, ಇಲ್ಲ ಅದಕ್ಕೆ ತತ್ಸಮಾನವಾದ ನಮ್ಮ ಹಣವನ್ನು ಶುಲ್ಕವಾಗಿ ವಿಧಿಸುತ್ತಾರೆ. ಏನಿಲ್ಲವೆಂದರೂ ಕೊನೆಯಪಕ್ಷ ವಿದೇಶಿ ಪ್ರವಾಸಿಗರಿಂದ ಯಾವುದೇ ಶುಲ್ಕವನ್ನೂ ವಸೂಲಿ ಮಾಡಬಾರದು. ಇದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಲಾಭ ಆಗಬಹುದು.   
 ಈಗಾಗಲೇ ಘಂಟೆ 4.30. ನಡೆದೂ ನಡೆದು ಕಾಲುಗಳು ಸೋತಿದ್ದವು. ನೋಡಿ ನೋಡಿ ಕಣ್ಣುಗಳೂ ದಣಿದಿದ್ದವು . ಮನಸ್ಸು ಮಾತ್ರ ತುಂಬಿತ್ತು. ಈ ಸಲಕ್ಕೆ ಇಷ್ಟು ಸಾಕು, ಇನ್ನೊಂದು ಸಲ ಬರುವಾಗ ಇನ್ನೂ ಹೆಚ್ಚಿನ ಜಾಗಗಳನ್ನು ನೋಡೋಣ ಎಂದಳು ನಮ್ಮ ಮಗಳು. ಇನ್ನೂ ನೋಡಬೇಕಾದ ಜಾಗಗಳು ಬಹಳ ಇವೆ. ಬ್ರಿಟಿಶ್ ಮ್ಯೂಸಿಯಂ, ಮೇಡಂ ಟ್ಯುಸಾಡಿ ಗ್ಯಾಲರಿ, ಆರ್ಟ್ ಗ್ಯಾಲರಿ, ವಿಂಡ್ಸರ್ ಕ್ಯಾಸಲ್ , ಹೈಡ್ ಪಾರ್ಕ್, ಪಿಕಾಡೆಲ್ಲಿ ಚೌಕ, ಟ್ರಫಾಲ್ಗರ್ ಚೌಕ, ಕೆಂಬ್ರಿಡ್ಜ್  ಮತ್ತು ಒಕ್ಸ್ ಫೋರ್ಡ್ ವಿಶ್ವ ವಿದ್ಯಾಲಯಗಳು, ಲಾರ್ಡ್ಸ್ ಕ್ರಿಕೆಟ್ ಮೈದಾನ ಎಲ್ಲವೂ ನೋಡುವಂತಹ ಜಾಗಗಳು. ಸೌತ್ ಹಾಲ್ ಅಂತೂ ನಮ್ಮ ಭಾರತದ ಜನರಿಂದ, ಅವರದ್ದೇ ಹೋಟೆಲ್ ಗಳು, ಅಂಗಡಿಗಳಿಂದ ತುಂಬಿದೆಯಂತೆ.
ನಾವು ಮ್ಯೂಸಿಯಂಗೆ ವಿದಾಯ ಹೇಳಿ ಟ್ಯೂಬ್ ಹಿಡಿದು ಹೀಥ್ರೂ ಗೆ ಬಂದೆವು. ಅಲ್ಲಿ ಉಪಾಹಾರ ಮಾಡಿ, ನಮ್ಮ ಲಗ್ಗೇಜ್ ಪಡಕೊಂಡು ಚೆಕ್ ಇನ್ ಗಾಗಿ ಹೋದೆವು. ಬ್ಯಾಗುಗಳು ಒಳಹೊದವು. ಭಾರವಾದ ಮನಸ್ಸಿನಿಂದ ಮಗಳು, ಅಳಿಯಂದಿರನ್ನು  ಬೀಳ್ಕೊಂಡು ನಮ್ಮ ಮುಂದಿನ ಪ್ರಯಾಣಕ್ಕಾಗಿ ಒಳಗಡೆ ಹೋದೆವು. 6 ತಿಂಗಳ ಅವರ ಒಡನಾಟ ಒಮ್ಮೆಲೆ ಕೊನೆಗೊಂಡಾಗ ನಮ್ಮಿಬ್ಬರ ಕಣ್ಣುಗಳೂ ನೆನೆದಿದ್ದವು.
ನಮ್ಮ ಮುಂದಿನ ಪ್ರಯಾಣ ಎಮಿರೇಟ್ಸ್  ವಿಮಾನದಲ್ಲಿ ದುಬೈಗೆ. ಇಲ್ಲಿನ ಅನುಭವಗಳನ್ನು ಮುಂದೊಮ್ಮೆ ಬರೆಯುತ್ತೇನೆ.
     
 

Monday, 25 April 2011

Sirsi, Banvasi, Keppa Joga.

ನಾವು ಊರಿಗೆ ಹೋದಾಗಲೆಲ್ಲಾ ಎಲ್ಲರೂ ಸೇರಿ ಯಾವುದಾದರೊಂದು ಜಾಗಕ್ಕೆ ಪ್ರವಾಸ ಇಲ್ಲವೇ ಚಾರಣ ಹೋಗುವುದು ನಮ್ಮ ಹವ್ಯಾಸ. ಈ ಸಲ ನಾವು ಶಿರಸಿಗೆ ಹೋಗೋಣವೆಂದು ಹೇಳಿದಾಗ ಮಕ್ಕಳೆಲ್ಲಾ ಅಲ್ಲಿ ದೇವಸ್ಥಾನ  ಮಾತ್ರ ಇರುವುದು, ಅಲ್ಲಿಗೆ ಬೇಡ, ಬೇರೆ ಎಲ್ಲಿಗಾದರೂ ಟ್ರೆಕಿಂಗ್ ಹೋಗಬೇಕು ಎಂಬ ಬೇಡಿಕೆ ಮುಂದಿಟ್ಟರು. ಆಯಿತು, ನಾವು ಶಿರಸಿಗೆ ಹೋಗಿ ಅಲ್ಲಿಂದ ಮುಂದೆ ಯಾವುದಾದರೂ ಟ್ರೆಕಿಂಗ್ ಹೋಗೋಣ ಎಂದು ಸಮಜಾಯಿಸಿದೆ. ನಾನೂ ಮೊದಲೇ ಟ್ರೆಕಿಂಗ್ ಜಾಗವನ್ನು ನಿಶ್ಚಯಿಸಿದ್ದರೂ ಸ್ವಲ್ಪ ಕುತೂಹಲ ಇರಲಿ ಎಂತ ಗುಟ್ಟು ಬಿಟ್ಟುಕೊಡಲಿಲ್ಲ.
ಸರಿ, ಎಲ್ಲಾ ತಯಾರಿಗೆ ತೊಡಗಿದೆವು. ಬೇಕಾದ ಎಲ್ಲಾ ಆಹಾರ ಸಾಮಗ್ರಿಗಳನ್ನು ತಂದದ್ದಾಯಿತು. ಮರು ದಿನ ಬೆಳಿಗ್ಗೆ ಬೇಗ ಎದ್ದು ಉಪ್ಪಿಟ್ಟು ತಯಾರಿಸಿ ಬಾಳೆ ಎಲೆಯಲ್ಲಿ ತಲಾ ಒಂದೊಂದು  ಪೊಟ್ಟಣ ಕಟ್ಟಿದೆವು. ಬೆಳಗ್ಗೆ 5.30 ರ ಮೊದಲ ಬಸ್ಸು ಹತ್ತಿ ಕಾಸರಗೋಡಿನಿಂದ ಮಂಗಳೂರಿಗೆ ಬಂದೆವು. ನಾವು ಓಟ್ಟು 16 ಜನ. ನಾನು,ಕಸ್ತೂರಿ, ವೀಣಾ, ಮುರಳಿ, ರಾಜ ನಾರಾಯಣ, ಗಾಯತ್ರಿ, ಪ್ರಸನ್ನ, ವೀಣಾ, ಶಮಿತಾ, ಚೈತ್ರ, ಶ್ರುತಿ, ಸುಬ್ರಹ್ಮಣ್ಯ, ಕಾರ್ತಿಕ್ , ಕೇದಾರ್, ಸಾಕೇತ್ ಮತ್ತು ಗುರು ಮಾಮ.
 ಬೆಳಗ್ಗಿನ ಮಡಗಾಂವ್ ಪ್ಯಾಸೆಂಜರ್ ರೈಲು  ಮಂಗಳೂರಿಂದ ಹೊರಡುವುದು 7.20ಕ್ಕೆ. ಅಷ್ಟು ಹೊತ್ತಿಗೆ ರೈಲ್ವೆ ಸ್ಟೇಷನ್ ತಲುಪಲಾಗುತ್ತದೊ ಇಲ್ಲವೋ ಎಂಬ ತಳಮಳ ಎಲ್ಲರಿಗೂ. ಅದಕ್ಕೆ ಸರಿಯಾಗಿ ಉಲ್ಲಾಳ ಸೇತುವೆ ದಾಟಿದಾಕ್ಷಣ ಟ್ರಾಫಿಕ್ ಜಾಮ್ ! ನನ್ನ ಭಾವ ಮುರಳಿಗೆ ಬಸ್ಸು ಡ್ರೈವರ್ ನ ಪರಿಚಯವಿದ್ದುದರಿಂದ ಆತನಲ್ಲಿ ನಮ್ಮ ಆತಂಕವನ್ನು ವಿವರಿಸಿದಾಗ ನೀವೇನೂ ಯೋಚನೆ ಮಾಡಬೇಡಿ ನಿಮ್ಮನ್ನು ಸಮಯಕ್ಕೆ ಸರಿಯಾದ ಸಮಯಕ್ಕೆ ತಲುಪಿಸುತ್ತೇನೆ ಎಂದನು. ಆದರೂ ನಮಗೆ ಭಯ, ಯಾಕೆಂದರೆ ಬಸ್ಸು ಇಳಿದು ಸ್ಟೇಷನ್ ಗೆ ಸುಮಾರು ಅರ್ಧ ಕಿ.ಮಿ . ನಡೆಯಬೇಕಾಗಿತ್ತು.
 ಆದರೆ ಮಂಗಳೂರು ತಲುಪುತಿದ್ದಂತೆ ಬಸ್ಸು ಯಾವಾಗಲೂ ಹೋಗುವ ರೂಟ್ ಬಿಟ್ಟು ಒಳದಾರಿಯಲ್ಲಿ ಸಂಚರಿಸಿ ಸೀದಾ ರೈಲ್ ವೇ ಸ್ಟೇಷನ್ ಗೇ ಬಂದು ನಿಂತಿತು. ನಮ್ಮ ಆತಂಕ ಕಳೆಯಿತು. ಡ್ರೈವರ್ ಗೆ ಥ್ಯಾಂಕ್ಸ್ ಹೇಳಿ ಲಗುಬಗೆಯಿಂದ ಇಳಿದು ಟಿಕೆಟ್ ಕೊಳ್ಳಲು ಓಡಿದೆವು. ಅಲ್ಲಿ ಹೆಚ್ಚು ಸಂದಣಿ ಇಲ್ಲದುದರಿಂದ ಬೇಗ ಟಿಕೆಟ್ ಪಡೆದು ಟ್ರೈನ್ ನಿಂತಿರುವ ಫ್ಲಾಟ್ ಫಾರಂಗೆ ತಲುಪಿ, ರೈಲು ಹತ್ತಿದೆವು. ಎಲ್ಲರಿಗೂ ಕುಶಿಯೋ ಕುಶಿ.ಇಷ್ಟೆಲ್ಲಾ ಗಡಿಬಿಡಿ ಮಾಡಿದರೂ ರೈಲು ಹೊರಡುವ ಲಕ್ಷಣ ಕಾಣಲಿಲ್ಲ. ಯಾವುದೋ ರೈಲು ಬಂದಾದ ಮೇಲೆ ಅರ್ಧ ಘಂಟೆ ತಡವಾಗಿ ನಮ್ಮ ರೈಲು ಹೊರಟಿತು. ಟ್ರೈನ್ ನಲ್ಲಿ ಹೆಚ್ಚು ರಶ್ ಇರಲಿಲ್ಲ, ಹಾಗಾಗಿ ಎಲ್ಲರೂ ಒಟ್ಟಿಗೇ ಕುಳಿತು ಮಾತಾಡುತ್ತಾ ಪಯಣಿಸಿದೆವು. ಉಪ್ಪಿಟ್ಟಿನ ಪೊಟ್ಟಣ ಹೊರಬಂತು.ಎಲ್ಲರೂ ಹೊಟ್ಟೆ ತುಂಬಾ ತಿಂದರು. ಕಾಫಿ ಕುಡಿದು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಯುತಿದ್ದಂತೆ ಕೆಲವರು ತೂಕಡಿಸಲು ತೊಡಗಿದರು. ಬೆಳಗ್ಗೆ ಬೇಗ ಎದ್ದುದರಿಂದ ಮತ್ತು ರೈಲ್ ನ ತೂಗಾಟದಿಂದ ಸಹಜವಾಗಿ ಸ್ವಲ್ಪ ನಿದ್ರೆ ಬಂತು.


ದಾರಿಯಲ್ಲಿ ಕಾಣಸಿಗುವ ಅದೆಷ್ಟೋ ನದಿಗಳನ್ನು, ಬಯಲನ್ನು ನೋಡುತ್ತಾ ಹೋದಂತೆ ರೈಲು ಕುಮಟಾ ತಲುಪಿದಾಗ  ಸುಮಾರು 11.30. ಎಲ್ಲರೂ ಇಳಿದೆವು. ಅಲ್ಲಿಂದ ಕುಮಟಾ ಬಸ್ಸು ನಿಲ್ದಾಣಕ್ಕೆ ತಲುಪಬೇಕು. ಸ್ಟೇಷನ್ ನಿಂದ ಮುಖ್ಯ ರಸ್ತೆಗೆ ಬರುತಿದ್ದಂತೆ ಅದೃಷ್ಟವೋ ಎಂಬಂತೆ ಶಿರಸಿಯ ಬಸ್ಸು ಬರುತಿತ್ತು. ಎಲ್ಲರೂ ಬಸ್ಸು ಹತ್ತಿದೆವು. ಇಲ್ಲಿಯೂ ನಮಗೆ ನಡೆಯುವುದು ತಪ್ಪಿತು. ಶಿರಸಿಗೆ 58 ಕಿ.ಮಿ.,  ಬಸ್ಸಿನಲ್ಲಿ ಸ್ವಲ್ಪ ರಶ್ ಇತ್ತು, ಆದರೂ ಮುಂದೆ ಹೋಗುತಿದ್ದಂತೆ ಎಲ್ಲರಿಗೂ ಸರಿಯಾಗಿ ಕುಳಿತು ಕೊಳ್ಳಲು ಜಾಗ ಸಿಕ್ಕಿತು. ಬಸ್ಸು ದೇವಿಮನೆ ಘಾಟ್ ಏರಿ  ಶಿರಸಿ ತಲುಪುವಾಗ 1 ಘಂಟೆ. ಅಲ್ಲಿಂದ ಶಿರಸಿಯ ಮುಖ್ಯ ದೇವಾಲಯವಾದ ಮಾರಿಕಾಂಬಾ ದೇವಸ್ಥಾನಕ್ಕೆ ಬಂದೆವು.

ದೇವರ ದರ್ಶನ ಆಯಿತು.ಅಲ್ಲೇ ಇದ್ದವರೊಬ್ಬರು ಊಟಕ್ಕೆ ಬನ್ನಿ ಎಂದು ನಮ್ಮನ್ನು ದೇವಸ್ಥಾನದ ಊಟದ ಹಾಲ್ ಗೆ ಕರೆದೊಯ್ದರು. ಎಲ್ಲರೂ ದೇವರ ಪ್ರಸಾದ ಭೋಜನ ಮಾಡಿದೆವು. ಬಹಳ ಅಚ್ಚುಕಟ್ಟಾಗಿ ರುಚಿಯಾದ ಪಾಯಸದ  ಊಟ ಬಡಿಸಿದರು.
ಪಕ್ಕದಲ್ಲೇ ದೇವಾಲಯದ ಛತ್ರ ಇತ್ತು. ರೂಂ ಸಿಗುವುದೋ ಎಂದು ನೋಡಲು ನಾನು ಹೋದೆ. ವಿಚಾರಿಸಲಾಗಿ ನಮಗೆ ಅನುಕೂಲವಾಗುವಂತಹ ದೊಡ್ಡದೊಂದು ಹಾಲ್ ಕೊಟ್ಟರು. 4 ಫ್ಯಾನ್, ಲೈಟ್ ಎಲ್ಲ ಇತ್ತು. ದೊಡ್ಡ ದೊಡ್ಡ 2 ಜಮಖಾನೆ ಸಹ ದೊರಕಿತು. ಎಲ್ಲ ಅನುಕೂಲಕರವಾಗಿ ನೆರವೇರಿದ ಸಂತೋಷದಿಂದ ದೇವರಿಗೆ ವಂದಿಸಿದೆವು. ಹಾಗೇನೆ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
 ಸಂಜೆ 4 ಗಂಟೆ ಗೆ ಕಾಫಿ ಕುಡಿದು ಮಾರಿಕಾಂಬಾದ ಎದುರುಗಡೆಯೇ ಬಂದು ನಿಲ್ಲುವ ಮಿನಿ ಬಸ್ಸು ಏರಿ ಬನವಾಸಿಗೆ ಹೊರಟೆವು. ಸುಮಾರು 21 ಕಿ. ಮಿ ದೂರ. ಅಲ್ಲಲ್ಲಿ ನಿಂತು ಹೋಗುವುದರಿಂದ 1 ಘಂಟೆ ಪ್ರಯಾಣ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ ನೋಡಲು ಸ್ವಲ್ಪ ನಡೆಯಬೇಕು. ಕಿರಿದಾದ ರಸ್ತೆ ಯಲ್ಲಿ ಹೋದಾಗ ಮುಂದೆ ರಾಜ ಬೀದಿ ಸಿಗುತ್ತದೆ. ಮುಂದೆ ದೇವಾಲಯದ ರಥ ಕಾಣುತ್ತದೆ. ಮುಖದ್ವಾರ ಚೆನ್ನಾಗಿದೆ.


ಅದನ್ನು ಹಾದು ಮುಂದೆ ಹೋದರೆ ದೇವಾಲಯದ ಪ್ರಾಂಗಣದಲ್ಲಿರುತ್ತೇವೆ. ಕ್ರಿಸ್ತ ಶಕ 345 ರಿಂದ ಸುಮಾರು 200 ವರ್ಷಗಳ ಕಾಲ ಕರ್ನಾಟಕವನ್ನಾಳಿದ ಕದಂಭ ಅರಸರ ರಾಜಧಾನಿಯಾಗಿದ್ದ, ಪಂಪ ಮಹಾಕವಿಯ ಮೆಚ್ಚಿನ  ಬನವಾಸಿಯಲ್ಲಿ ಈವಾಗ ನೋಡಸಿಗುವುದು ಸುಂದರವಾದ ಮಧುಕೇಶ್ವರ ದೇವಾಲಯ ಮಾತ್ರ.

ಈ ದೇವಾಲಯವು 9 ನೇ ಶತಮಾನದ್ದು. ಅಲ್ಲಲ್ಲಿ ಕದಂಭರ ಕಾಲದ ಹಳೆಯ ಅವಶೇಷ ಗಳಿವೆಯಂತೆ. ಹೆಚ್ಚಿನ ಶಾಸನಗಳು, ಕಲ್ಲುಗಳು ಈಗಿನ ಮನೆಗಳಲ್ಲಿ ಬಟ್ಟೆ ಒಗೆಯುವ ಕಲ್ಲುಗಳಾಗಿ, ಇನ್ನಿತರ ಉಪಯೋಗಕ್ಕಾಗಿ ಬಳಸಲಾಗುತ್ತಿದೆಯಂತೆ. ಮಧುಕೇಶ್ವರ ದೇವಾಲಯದ ಸುತ್ತ ಎತ್ತರವಾದ ಮತ್ತು ಬಲವಾದ ಕಲ್ಲಿನ ಗೋಡೆ ಇದೆ. ಇದರ ಒಳಭಾಗಕ್ಕೆ ತಾಗಿಕೊಂಡು ಸುಮಾರು ಚಿಕ್ಕ ಗುಡಿಗಳಿವೆ. ಈ ಗುಡಿಗಳಲ್ಲಿ ಬನವಾಸಿಯ ಬೇರೆ ಬೇರೆ ಜಾಗಗಳಲ್ಲಿ ದೊರಕಿರುವ ದೇವಮೂರ್ತಿ ಗಳನ್ನಿರಿಸಿದ್ದಾರೆ.

ಆಗಿನ ಕಾಲದ ಶಿಲ್ಪ ಕಲೆಯ ವೈಭವವನ್ನು ಕಣ್ಣಾರೆ ಕಂಡು ಆನಂದಿಸಬಹುದು. ಬೇಲೂರು,ಹಳೇಬೀಡುಗಳ ನಿರ್ಮಾಣಕ್ಕೂ ಹಲವು ಶತಮಾನಗಳ ಹಿಂದೆಯೇ ಇಷ್ಟು ಸೊಗಸಾದ ದೇವಾಲಯ ನಿರ್ಮಿಸಿದ್ದರೆಂದರೆ ನಮ್ಮ ಕರ್ನಾಟಕದ ಶಿಲ್ಪಕಲೆ ಅದೆಷ್ಟು ಉನ್ನತಮಟ್ಟದಲ್ಲಿತ್ತು ಎಂಬುದಕ್ಕೆ ಸಾಕ್ಷಿ.

ಈ ದೇವಾಲಯದ ಸೊಬಗು, ಶಿಲ್ಪ ಕಲಾ ನೈಪುಣ್ಯಕ್ಕೆ ಕಲಶವಿಟ್ಟಂತೆ ಅಲ್ಲಿರುವ ಶಿಲಾ ಮಂಚ ಎಲ್ಲರ ಗಮನ ಸೆಳೆಯುತ್ತದೆ. ಅದರ ನಾಜೂಕಾದ ಕೆತ್ತನೆ ವಿನ್ಯಾಸ, ಸೊಬಗು ಬೇರೆಲ್ಲೂ ಕಾಣಸಿಗದು.ಅಷ್ಟು ಆಕರ್ಷಣೀಯವಾಗಿದೆ.


ಆದರೆ ಅದನ್ನು ಬಹಳ ಅನಾಕರ್ಷಣೀಯವಾದ ಕಬ್ಬಿಣದ ಸರಳುಗಳ ಬಾಗಿಲ ಹಿಂದೆ ಇರಿಸಿದ್ದಾರೆ. ಅದರ ಫೋಟೋ ಹಿಡಿಯಬೇಕಾದರೆ ಆ ಸರಳುಗಳ ಮಧ್ಯೆ ಕ್ಯಾಮರ ತುರುಕಿಸಿ ತೆಗೆಯಬೇಕು. ಸಾಮಾನ್ಯ ಕ್ಯಾಮರಾದಲ್ಲಿ ಅದರ ಪೂರ್ಣ ಚಿತ್ರ ದೊರಕುವುದೇ ಇಲ್ಲ. ಅದನ್ನು ಇನ್ನೂ ಹೆಚ್ಚಿನ ದೊಡ್ಡ ಜಾಗದಲ್ಲಿ ಇರಿಸಿದ್ದರೆ ಫೋಟೋ ಹಿಡಿಯಲು ಅನುಕೂಲವಾಗುತಿತ್ತು. ದೇವಾಲಯದ ಪ್ರಾಕಾರಕ್ಕೆ ಒಂದು ಸುತ್ತು ಬರುವಾಗ ಶ್ರುತಿ ಅಲ್ಲಿದ್ದ ಎಲ್ಲಾ ಮೂರ್ತಿಗಳಿಗೆ ಅಡ್ಡಬಿದ್ದು ಸುಸ್ತಾದಳು.    ಆಮೇಲೆ ನಾವೆಲ್ಲ ಒಳಗಡೆ ಪ್ರವೇಶಿಸಿದೇವು.

ಸುಂದರವಾದ ಕಟೆದ ಸ್ಥಂಭಗಳುಳ್ಳ ಮಂಟಪ ಬಹಳ ಸೊಗಸಾಗಿದೆ. ಎದುರುಗಡೆ ನಂದಿ ಬಹಳ ಚೆನ್ನಾಗಿದೆ. ನಾವಲ್ಲದೆ ಬೇರೆ ಯಾವ ಯಾತ್ರಿಕರೂ ಇರದ ಕಾರಣ ಬಹಳ ಪ್ರಶಾಂತವಾಗಿತ್ತು.


ದೇವಾಲಯದ ಸೊಬಗನ್ನು ಕ್ಯಾಮರದಲ್ಲಿ ಹಿಡಿದಿಟ್ಟು ಮಧುಕೇಶ್ವರನ ದರ್ಶನ ಮಾಡಿದೆವು. ಒಳಗೆಲ್ಲಾ ಕತ್ತಲು, ವಿದ್ಯುತ್ ಕೈ ಕೊಟ್ಟಿತ್ತು. ಪ್ರಸಾದ ಪಡೆದು, ಅಲ್ಲಿಂದ ಹೊರಟು ಬಸ್ಸು ಹಿಡಿದು ಶಿರಸಿಗೆ ಬಂದು ಮಾರಿಕಾಂಬೆಯ ದರ್ಶನವನ್ನು ಮತ್ತೊಮ್ಮೆ ಮಾಡಿದೆವು. ದೇವರ ಆಭರಣಗಳು, ಅಲಂಕಾರ, ದೇವಾಲಯದ ಒಳಗಡೆಯ ಶುಚಿಯಾದ ಪರಿಸರ, ಅರ್ಚಕರ, ಸಿಬ್ಬಂಧಿಯವರ ವಿನಯ, ಎಲ್ಲಾ ಮೆಚ್ಚುವಂತಹದ್ದು. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದೆವು. ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಉಪಹಾರ ಮಾಡಿ ಬಸ್ಸ್ ಸ್ಟ್ಯಾಂಡ್ ಗೆ ಬಂದೆವು.
ಇಂದು ನಮ್ಮ ಟ್ರೆಕ್ಕಿಂಗ್ ದಿನ! ಹೋಗುವ ಜಾಗ ಶಿರಸಿಯಿಂದ ಸುಮಾರು 25 ಕಿ.ಮಿ ದೂರಲ್ಲಿರುವ ಕೆಪ್ಪ ಜೋಗಕ್ಕೆ! ಇದನ್ನು ಉಂಚಳ್ಳಿ ಜಲಪಾತ, ಲೂಸಿಂಗ್ಟನ್ ಫಾಲ್ಸ್ ಎಂದೂ ಕರೆಯುತ್ತಾರೆ. ಆಗಿನ ಆಂಗ್ಲರ ಕಾಲದಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ.ಡಿ.ಲೂಸಿಂಗ್ಟನ್ ಎಂಬ ಮಹಾಶಯನು ಈ ಜಲಪಾತವನ್ನು ಹೊರ ಜಗತ್ತಿಗೆ ಪರಿಚಯಿಸಿದ ಕಾರಣ ಆತನ ಹೆಸರನ್ನು ಇದಕ್ಕೆ ಇರಿಸಿದ್ದಾರೆ. ಇನ್ನು ಇದರ ಹತ್ತಿರ ಹೋದರೆ ಅದರ ಭೋರ್ಗರೆತದಿಂದ ಬೇರೇನೂ ಕೇಳಿಸುವುದಿಲ್ಲ, ಅದಕ್ಕಾಗಿ ಕೆಪ್ಪ ಜೋಗ ಎಂತಲೂ ಕರೆಯುತ್ತಾರೆ.
 ಎಲ್ಲರೂ ಬಹಳ ಉತ್ಸುಕತೆಯಿಂದ ಬಸ್ಸಿಗಾಗಿ ಕಾದೆವು, ಅಲ್ಲಿಗೆ ಹೋಗುವ ಬಸ್ಸು ಸಕಾಲದಲ್ಲಿ ಬರಲೇ ಇಲ್ಲ. ಅಷ್ಟರಲ್ಲಿ ಒಂದು ಮಿನಿ ಬಸ್ಸು ಬಂತು. ಅದರಲ್ಲಿ ಹತ್ತಿ ಎಲ್ಲರೂ ಕೆಪ್ಪ ಜೋಗದತ್ತ ಪಯಣಿಸಿದೆವು. ನಮ್ಮ ವಾಹನವು ಅಮೀನಳ್ಳಿ ಮೂಲಕವಾಗಿ ಹೆಗ್ಗರಣೆ ಎಂಬ ಪುಟ್ಟ ಹಳ್ಳಿಗೆ ಬಂದು ತಲುಪಿತು. ಅಲ್ಲಿಂದ ಮುಂದೆ 5 ಕಿ.ಮಿ. ಹೋಗಬೇಕು. ಜೀಪುಗಳು ಇಲ್ಲಿ ಲಭ್ಯ. ಆದರೆ ನಾವು ಟ್ರೆಕ್ಕಿಂಗ್ ಗೆ ಎಂತ ಬಂದವರು ಜೀಪ್ ಹತ್ತುವುದೆ? ನಡೆದೇ ಹೋಗಬೇಕು ಎಂತ ತೀರ್ಮಾನಿಸಿ ಮುಂದೆ ಸಾಗಿದೆವು.


 ಚೆನ್ನಾಗಿ ಡಾಮಾರು ಹಾಕಿದ ರಸ್ತೆ ಇತ್ತು, ಅಕ್ಕ ಪಕ್ಕ ಅಡಿಕೆ ತೋಟ, ಕಾಡು ಎಲ್ಲಾ ನೋಡುತ್ತಾ, ಪುಟ್ಟ ಮಗುವನ್ನು ಸರದಿಯಲ್ಲಿ ಹೆಗಲಮೇಲೇರಿಸಿಕೊಂಡು ನಡೆದೆವು. ಸುಮಾರು 4 ಕಿ. ಮಿ. ಸಾಗಿದಾಗ ಒಂದು ಪುಟ್ಟ ಗೂಡಂಗಡಿ ಸಿಗುತ್ತದೆ. ಅಲ್ಲಿನ ಹೆಗಡೆಯವರು ಸ್ಟ್ರಾಂಗ್ ಕಾಫಿ ಮಾಡಿ ಕೊಟ್ಟರು. ಇಲ್ಲಿಯವರೆಗೆ ಮಾತ್ರ ವಾಹನಗಳು ಬರುತ್ತವೆ.


ಮುಂದೆ 1ಕಿ.ಮಿ. ನಡೆದಾಗ ನಾವು ಸೀದಾ ಜಲಪಾತದ ಎದುರುಗಡೆ ಇದ್ದೆವು.


ಅಲ್ಲಿ ಒಂದು ವ್ಯೂ ಪಾಯಿಂಟ್ ಇದೆ. ಅದರಲ್ಲಿ ನಿಂತು ಜಲಪಾತ ನೋಡಿದೆವು ಫೋಟೋ,  ವೀಡಿಯೊ ಎಲ್ಲದರ ಮೂಲಕ ಅದನ್ನು ಸೆರೆ ಹಿಡಿದೆವು. ಸುಮಾರು 116 ಮೀಟರ್ ಎತ್ತರದಿಂದ ಜಲಪಾತವು ಅಘನಾಶಿನಿ ನದಿಗೆ ದುಮುಕುತ್ತದೆ. ಇಲ್ಲಿಂದ ನದಿಯು ಹರಿಯುತ್ತ ಅಲ್ಲಲ್ಲಿ ಹಲವಾರು ಹೆಸರಾಂತ ಜಲಪಾತಗಳನ್ನು ನಿರ್ಮಿಸಿದೆ.


ಇಲ್ಲಿಂದ ಸ್ವಲ್ಪ ಕೆಳಗಡೆ ಇನ್ನೊಂದು ವ್ಯೂ ಪಾಯಿಂಟ್ ಇದೆ. ಇಲ್ಲಿಗೆ ಹೋಗಲು ಮೆಟ್ಟಲುಗಳಿವೆ. ಅದರಲ್ಲಿಳಿದು ಹೋದರೆ ಕೆಪ್ಪ ಜೋಗದ ದಿವ್ಯ ದರ್ಶನವಾಗುತ್ತದೆ. ಇಲ್ಲಿನ ನೋಟ ಬಹಳ ರಮ್ಯ , ರುದ್ರ ರಮಣೀಯ. ತಳಭಾಗದಲ್ಲಿ ಹಸಿರು ಕನ್ನಡಿಯಂತೆ ಹೊಳೆಯುತ್ತಿದೆ, ಅದಕ್ಕೆ ಮೇಲಿನಿಂದ ಹಾಲಿನ ಧಾರೆ ಸುರಿಯುತ್ತಿದೆ.


 ಪ್ರಕೃತಿ ದೇವಿಯು ತನ್ನ ಅಚ್ಚ ಬಿಳುಪಾದ ಸೀರೆಯನ್ನು ಒಣಗಲು ಹಾಕಿದಂತೆ ತೋರುತ್ತದೆ. ನೀರ ಹನಿಗಳು ಗಾಳಿಯ ರಭಸಕ್ಕೆ ನಮ್ಮ ಮೇಲೆ ಸಿಂಚನವಾಗುತ್ತದೆ. ವಾತಾವರಣವು ತಂಪಾಗಿದ್ದು ಬೇರೆ ಯಾವ ಸದ್ದು ಕೂಡಾ ಕೇಳಿಸುವುದಿಲ್ಲ. ಕೆಪ್ಪ ಜೋಗ- ಅನ್ವರ್ಥ ನಾಮ. ಅಲ್ಲಿಂದ ನದಿ ಹರಿಯುವ ಕೊಳ್ಳ ಕಾಣಿಸುತ್ತದೆ.


ಅಲ್ಲಿ ಸ್ವಲ್ಪ ಹೊತ್ತು ಇದ್ದು ತಿಂಡಿ ತಿಂದು ಕಾಲ ಕಳೆದೆವು. ಇನ್ನು ಶುರು ನಮ್ಮ ಸಾಹಸಗಳು. ಮೇಲಿನ ವ್ಯೂ ಪಾಯಿಂಟ್ ನ ಬಲಗಡೆಗೆ ಒಂದು ಕಾಲ್ದಾರಿ. ಅದರಲ್ಲಿ  ಮುಂದೆ ಹೋದರೆ ನಾವು ಕಾಡಿನ ಒಳಗಡೆ ಇರುತ್ತೇವೆ, ಎಡಗಡೆಗೆ ಪ್ರಪಾತ. ಸುತ್ತಲೂ ಕಾಡು. ಕಾಲು ಜಾರುವಷ್ಟು ಇಳಿಜಾರು, ಕಾಡು ಬಳ್ಳಿಗಳು. ಬಿದಿರ ಮೆಳೆ, ಮುಳ್ಳು ಕಂಟಿ ಗಳಿಂದ ಕೂಡಿದ ದಾರಿ.


ಕೆಲವೆಡೆಯಲ್ಲಂತೂ ದಾರಿಯೇ ಇಲ್ಲ. ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ಮಳೆನೀರಿನ ಕೊರಕಲು. ಅದರಲ್ಲೇ ಕೆಳಗೆ ಇಳಿಯಬೇಕು. ಅಲ್ಲಲ್ಲಿ ದೊಡ್ಡ ಬಂಡೆಗಳು ದಾರಿಗಡ್ಡವಾಗಿ ಮಲಗಿವೆ, ಅದನ್ನು ಸುತ್ತುವರಿದು, ಇಲ್ಲ ಅದನ್ನೇರಿ, ಅಥವಾ ಅದರ ಸಂದಿಗಳಲ್ಲಿ ನುಸುಳಿ ಕೆಳಗಿಳಿದೆವು. ಸುಮಾರು 1ಕಿ.ಮಿ. ಇಳಿಯಬೇಕು. ಅಂತೂ ಕಷ್ಟಪಟ್ಟು ಎಲ್ಲರೂ ನದಿಯ ಪಾತ್ರಕ್ಕೆ ಬಂದೆವು. ಅಲ್ಲಲ್ಲಿ ಬಂಡೆಗಳಿಂದ ಕೂಡಿದ ಆಘನಾಶಿನಿ ನದಿ. ಎರಡೂ ದಡದಲ್ಲಿ ದಟ್ಟವಾದ ಕಾಡು, ನೀರು ತುಂಬಾ ಇತ್ತು. ಅದರ ಹರಿವೂ ಜೋರಾಗಿತ್ತು. ನಮ್ಮಲ್ಲಿ ಹೆಚ್ಚಿನವರಿಗೆ, ಕೆರೆ, ನದಿ, ಸಮುದ್ರಗಳಲ್ಲಿ ಈಜಾಡಿ ಅನುಭವವಿದ್ದುದರಿಂದ ಏನೂ ಭಯವಿಲ್ಲದೆ ನೀರಿಗೆ ಇಳಿದೇ ಬಿಟ್ಟೆವು. ಆದರೂ ಇಲ್ಲಿ ಬಹಳ ಜಾಗರೂಕರಾಗಿರಬೇಕು. ಅಷ್ಟೊಂದು ನೀರಿನ ಸೆಳೆತವಿದೆ. ಆಹಾ ಎಷ್ಟೊಂದು ಮಜಾ! ನಮ್ಮ ಮೈ ಕೈ ನೋವು ಎಲ್ಲಾ  ಮಾಯ! ಸುಮಾರು ಹೊತ್ತು ನದಿಯಲ್ಲಿ ಸ್ನಾನ ಮಾಡಿದಿದೆವು.


ಆ ಜಾಗ ಎಷ್ಟು ಸುಂದರವಾಗಿತ್ತೆಂದರೆ ಗುರುಮಾಮ, ತಾನು ಮದುವೆ ಆದಮೇಲೆ ಹನಿಮೂನ್ ಗೆ ಇಲ್ಲಿಗೇ ಬರುತ್ತೇನೆ ಎಂದು ಬುಕ್ ಮಾಡಿಯೇ ಬಿಟ್ಟರು. ಕೆಲವರು ಸ್ವಲ್ಪ ಸುತ್ತು ಬಳಸಿ ನೇರ ಜಲಪಾತದ ಬುಡಕ್ಕೇನೇ ಹೋದರು. ಆದರೂ ಅದನ್ನು ಕೈಯಿಂದ ಮುಟ್ಟಲು ಆಗುವುದಿಲ್ಲ. ಮದ್ಯ ದೊಡ್ಡ ಸರೋವರವಿದೆ. ಅದರ ಆಳ ನಮಗೆ ತಿಳಿಯದು. ಅಲ್ಲಿಗೆ ಹೋಗುವುದು ತೀರಾ ಅಪಾಯ. ಜಳಕವಾದ ಮೇಲೆ ಊರಿಂದ ತಂದ ಸಿಹಿ ತಿಂಡಿಗಳಾದ ಲಡ್ಡು, ಹೋಳಿಗೆ, ಚಕ್ಕುಲಿ, ಮತ್ತು ಅಲ್ಲೇ ದಿಡೀರ್ ಆಗಿ ತಯಾರಿಸಿದ ಅವಲಕ್ಕಿ ಚಟ್ನಿ, ಜೊತೆಗೆ ನದಿಯ ನೀರಿನಿಂದಲೇ ತಯಾರಿಸಿದ ನಿಂಬೆ ಶರಬತ್ತು! ಸಾಲದೇ? ನಮ್ಮ ಹೊಟ್ಟೆ ತುಂಬಿತು. ಮಕ್ಕಳೆಲ್ಲಾ ಇನ್ನೂ ನೀರಾಟವಾಡುತಿದ್ದರು. ಬಣ್ಣ ಬಣ್ಣದ ಕಲ್ಲುಗಳನ್ನು ಸಂಗ್ರಹ ಮಾಡುತಿದ್ದರು. ಕಾಡಿನ ಒಳಗೂ ಸ್ವಲ್ಪ ದೂರ ಸಾಗಿ ಅಲ್ಲಿನ ವಿಸ್ಮಯಗಳನ್ನು ಕಂಡು ಆನಂದಿಸಿದರು. ಸಂಜೆ 4 ಘಂಟೆಯಾಗುತಿದ್ದಂತೆ ಹಿಂದಿರುಗಲು ತೊಡಗಿದೆವು. ಈಗ 1ಕಿ.ಮಿ.ಯಷ್ಟು ಏರಬೇಕು.ನಿಧಾನವಾಗಿ ಏರುತ್ತಾ ಅಲ್ಲಲ್ಲಿ ನಿಂತು ದಣಿವಾರಿಸುತ್ತಾ ಮೇಲೆ ಬಂದೆವು. ಅಲ್ಲಿಂದ ಮತ್ತೆ ನಡೆದು ಹೆಗಡೆಯವರ ಅಂಗಡಿಯಲ್ಲಿ ಕಾಫಿ ಕುಡಿದು ನಮ್ಮ ದೇಹವನ್ನು ರಿಚಾರ್ಜ್ ಮಾಡಿಕೊಂಡೆವು. ಗೂಡಂಗಡಿಯಲ್ಲಿ ಮಲೆನಾಡಿನ ಉತ್ಪನ್ನಗಳಾದ ಜೇನು, ಏಲಕ್ಕಿ, ಲವಂಗ, ದಾಲ್ಚಿನ್ನಿ, ವೆನಿಲ್ಲಾ ಎಲ್ಲವನ್ನೂ ಕೊಂಡುಕೊಂಡೆವು. ಬಸ್ಸು ಬರುವ ಹೆಗ್ಗರಣೆವರೆಗೆ ಸಾಗಿ ಬಸ್ಸಿನಲ್ಲಿ ಶಿರಸಿಗೆ ತಲುಪಿದಾಗ 7ಘಂಟೆ. ಮತ್ತೊಮ್ಮೆ ದೇವರ ದರ್ಶನ, ಆಮೇಲೆ ಹೋಟೆಲಲ್ಲಿ ಊಟ, ಶಿರಸಿಯ ಪೇಟೆಯಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿಗಾಗಿ ಹುಡುಕಾಡಿದೆವು. ಕೆಲವು ಬ್ರಾಂಡ್ ನ ಅಪ್ಪೆಮಿಡಿ ಉಪ್ಪಿನಕಾಯಿ ಸಿಕ್ಕಿತು. ಊರಿಗೆ ಬಂದು ಉಪ್ಪಿನಕಾಯಿ ರುಚಿ ನೋಡಿದೆವು, ಚೆನ್ನಾಗಿತ್ತು. ಆದರೆ ಕೆಲವು ಬಾಟಲಿಗಳಲ್ಲಿ ಮೇಲ್ಗಡೆ ಅಪ್ಪೆ ಮಿಡಿ, ಕೆಳಗಡೆ ಸಾದಾ ಮಾವಿನ ಮಿಡಿ ಹಾಕಿ ನಮಗೆ ಟೋಪಿ ಹಾಕಿದ್ದರು.
ಬೇಗ ಬೇಗ ರೂಮಿಗೆ ಬಂದು ನಮ್ಮ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಶಿರಸಿ ಬಸ್ ಸ್ಟ್ಯಾಂಡ್ ಗೆ ಬಂದು ಸೀದಾ ಮಂಗಳೂರಿಗೆ, ಅಲ್ಲಿಂದ ಕಾಸರಗೋಡಿಗೆ ಕ್ಷೇಮವಾಗಿ ತಲುಪಿದೆವು. ಶಿರಸಿಯ ಸುತ್ತ ಮುತ್ತ ಇನ್ನೂ ಹಲವು ಜಲಪಾತಗಳಿವೆ. ಸಾತೊಡ್ಡಿ, ಮಾಗೋಡು, ಶಿವಗಂಗೆ ಮತ್ತು ಬುರುಡೆ ಜಲಪಾತಗಳಿಗೆ ಹೋಗಬಹುದು. ಪ್ರಸಿದ್ದವಾದ ಯಾಣ ಕ್ಕೆ ಹೋಗಬಹುದು. ಸೋಂದಾ ಮತ್ತು ಸಹಸ್ರಲಿಂಗ ಸಹ ಶಿರಸಿಗೆ ಸಮೀಪದಲ್ಲೇ ಇದೆ. ಹಾಗೇನೆ ಗೋಕರ್ಣ, ಮುರುಡೇಶ್ವರ ಮತ್ತು ಜೋಗ ಜಲಪಾತಕ್ಕೂ ಇಲ್ಲಿಂದ ಹೋಗಬಹುದು.

Sunday, 17 April 2011

OTTHE KOLA


ಇಲ್ಲಿ ನಾನು ತುಳುನಾಡು,ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಭಾಗದಲ್ಲಿ ಮಾತ್ರ ನಡೆಯುವಂತಹ ಒಂದು ವಿಶೇಷ ಮತ್ತು ಭಕ್ತಿ ಪ್ರಧಾನವಾದ ಉತ್ಸವದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಬರೆಯುತಿದ್ದೇನೆ. ಅದೇ ಒತ್ತೆಕೋಲ ಮಹೋತ್ಸವ.
ಒತ್ತೆಕೋಲ ಅಥವಾ ಕೆಂಡ ಸೇವೆ-ಇದು ತುಳುನಾಡಿನಾದ್ಯಂತ ಬಹಳ ಭಕ್ತಿಯಿಂದ,ವಿಜ್ರಂಭಣೆಯಿಂದ ನಡೆಯುವ ಒಂದು ಉತ್ಸವ.
ಇದರ ಹಿನ್ನಲೆಯನ್ನು ಅರಿತುಕೊಳ್ಳುವುದು ಬಹಳ ಅಗತ್ಯ.ಆವಾಗಲಷ್ಟೆ ಇದರ ಮತ್ವವನ್ನು ಅರಿತುಕೊಳ್ಳಬಹುದು.
ಪುರಾಣಗಳಲ್ಲಿ ಹೇಳಿರುವ ನರಸಿಂಹಾವತಾರದ ಉದ್ದೇಶವಾದ ಹಿರಣ್ಯಕಶಿಪು ವಧೆಯನ್ನು ಭಗವಂತನಾದ ನರಸಿಂಹನು ಮಾಡಿದ ಮೇಲೆ ಆತನ ಉಗ್ರ ಕೊಪವನ್ನು ತಣಿಸುವ ಸಲುವಾಗಿ ಮತ್ತು ರಾಕ್ಷಸ ಹಿರಣ್ಯಕಶಿಪುವಿನ ರಕ್ತವು ಆತನ ಮೈಮೇಲೆಲ್ಲಾ ಚೆಲ್ಲಿರುವುದರಿಂದ ಅದನ್ನು ಶುಚಿಗೊಳಿಸಲು ದೇವರು ಉರಿಯುವ ಕೆಂಡದ ಮೇಲೆ ಬಿದ್ದು ತನ್ನನ್ನು ಶುಚಿ ಮಾಡಿಕೊಳ್ಳುತ್ತಾನೆ.ತುಳುನಾಡಿನಲ್ಲಿ ಪ್ರಚಲಿತವಿರುವ ವಿಷ್ಣುಮೂರ್ತಿ ದೈವವೇ ನರಸಿಂಹನ ಪ್ರತೀಕ ಎಂದು ನಂಬುತ್ತಾರೆ. ಹಾಗಾಗಿ ವಿಷ್ಣುಮೂರ್ತಿ ದೈವಕ್ಕೆ ಕೊಡುವ ಒಂದು ವಿಶಿಷ್ಟ ಸೇವೆಯೇ ಈ ಒತ್ತೆಕೋಲ.
ಭೂತಾರಾಧನೆ ತುಳುನಾಡಿನ ಜೀವನದ ಒಂದು ಅವಿಭಾಜ್ಯ ಅಂಗ. ಎಲ್ಲೆಡೆಗಳಲ್ಲೂ ಭೂತಸ್ಥಾನ, ಗುಡಿಗಳನ್ನು ನಾವು  ಕಾಣಬಹುದು. ವರ್ಷಕೊಮ್ಮೆ ಈ ಎಲ್ಲ ಭೂತಗಳಿಗೆ ಕೋಲ ಕೊಡುವ ಸಂಪ್ರದಾಯವಿದೆ. ಇದರಲ್ಲಿ ಆಯಾ ಊರಿನ ಎಲ್ಲ ಜಾತಿಯ ಪಂಗಡದ ಜನರು ಕಡ್ಡಾಯವಾಗಿ ಭಾಗವಹಿಸುತ್ತಾರೆ. ತಲ ತಲಾಂತರದಿಂದ ಆಯಾ ಪಂಗಡಕ್ಕೆ ನಿಗದಿ ಪಡಿಸಿದ ಕೆಲಸಗಳನ್ನು ತಪ್ಪದೆ ಭಕ್ತಿಯಿಂದ ನೆರವೇರಿಸುತ್ತಾರೆ.
ಇಲ್ಲಿ ಭೂತ ಎಂದರೆ ದೆವ್ವ ಅಥವಾ ಕೆಟ್ಟ ಶಕ್ತಿಗಳಲ್ಲ. ಭೂತವನ್ನು ದೈವ ಅಥವಾ ದೈವೀಕ ಶಕ್ತಿ, ನಂಬಿದವರನ್ನು ಕೈ ಬಿಡದ, ಕಷ್ಟಕಾಲದಲ್ಲಿ ರಕ್ಷಿಸುವ ಶಕ್ತಿ ಎಂದು ನಂಬುತ್ತಾರೆ.
ಭೂತ ಕೋಲದ ದಿನ ಭೂತದ ವೇಷ ಕಟ್ಟುವವನು ಆಯಾ ಭೂತದ ವೇಷವನ್ನು ಕಟ್ಟಿಕೊಂಡು ಮೈ ಮೇಲೆ ಆವೇಶ ಬರಿಸಿಕೊಂಡು ನರ್ತಿಸುತ್ತಾನೆ. ಬೇರೆ ಬೇರೆ ಪಂಗಡದ ವ್ಯಕ್ತಿಗಳು ಇಂತಹದೇ ಭೂತ ಕಟ್ಟಬೇಕೆಂಬ ನಿಯಮವಿದೆ. ಪರವ, ಪಂಬದ, ಮಲಯ, ಕೊಪಾಳ ಮೊದಲಾದ ಜಾತಿಯ ಜನರು ಭೂತ ಕಟ್ಟುವುದು, ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ನೆರವೇರಿಸುತ್ತಾರೆ. ಆಯಾ ಊರಿನ ಎಲ್ಲಾ ವರ್ಗದ ಜನರು ಜಾತಿ ಭೇಧವಿಲ್ಲದೆ ತಮಗೆ ನಿಗದಿತವಾದ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೆ ನೆರವೇರಿಸುತ್ತಾರೆ.
ಹೆಚ್ಚಾಗಿ ಒತ್ತೆಕೋಲವು ಮೇ ತಿಂಗಳಲ್ಲಿ ಜರಗುವುದು. ಇದಕ್ಕಾಗಿ ಮೊದಲೇ ಒಳ್ಳೆಯ ದಿನ ನಿಶ್ಚಯ ಮಾಡುತ್ತಾರೆ. ಎಲ್ಲರೂ ಸೇರಿ ಒಂದು ನಿಗದಿತ ಮರವನ್ನೂ ಕಡಿದು ಕೋಲ ನಡೆಯಲಿರುವ ಜಾಗದಲ್ಲಿ ವಾದ್ಯ ಘೋಶ ದೊಂದಿಗೆ ತಂದು ಹಾಕುತ್ತಾರೆ. ಜೊತೆಯಲ್ಲಿ ದೈವದ ಸೇವಕರು ಎಂಬ ಬೆಳ್ಚಪ್ಪಾಡರೂ ಕೈಯಲ್ಲಿ ಖಡ್ಗವನ್ನೂ ಹಿಡಿದುಕೊಂಡು ಆವೇಶದಿಂದ ಆಗಾಗ ಮೈಯನ್ನು ಕಡಿದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹರಿಕೆ ರೂಪದಲ್ಲಿ ಕಟ್ಟಿಗೆಯ ರಾಶಿಯೇ ಬಂದು ಬೀಳುತ್ತದೆ. ಅದನ್ನು ಯಾರೂ ಕೊಂಡೊಯ್ಯಬಾರದು. ಇಲ್ಲಿ ನಾನು ಕಾಸರಗೋಡಿನ ಕೂಡಲು, ಕುತ್ಯಾಳ ಗೋಪಾಲಕೃಷ್ಣ ಮತ್ತು ಶಿವಮಂಗಿಲ ದೇವರ ಸನ್ನಿಧಿಯಲ್ಲಿ ಜರಗಿದ ಒತ್ತೆಕೋಲದ ಕುರಿತಾದ ವಿವರಣೆ ನೀಡುತ್ತಿದ್ದೇನೆ.
 ಒತ್ತೆಕೊಲದ ದಿನ ಬೆಳಿಗ್ಗೆ ಆ ಕಟ್ಟಿಗೆಯನ್ನೂ ಸರಿಯಾಗಿ ಜೋಡಿಸಿ ಸುಮಾರು ೧೬ ಅಡಿಗಳಷ್ಟು ಎತ್ತರಕ್ಕೆ ಓಟ್ಟುತ್ತಾರೆ. ಮಧ್ಯ ಮದ್ಯಕ್ಕೆ ಒಣಗಿದ ತೆಂಗಿನ ಗರಿಗಳನ್ನು ಸೇರಿಸಿರುತ್ತಾರೆ. ಇದಕ್ಕೆ ಮೇಲರಿ ಎಂದು ಹೆಸರು. ಸಂಜೆಯಾಗುತ್ತಲೇ ಜನರೆಲ್ಲಾ ಸೇರುತ್ತಾರೆ. ಗುಡಿಗೆ ಸಂಭಂದಿಸಿದ ಮನೆತನದ ಮುಖ್ಯಸ್ಥ ನಿಂದ ಅಪ್ಪಣೆ ಪಡೆದು ಭೂತ ಕಟ್ಟು ವವನು ಕೋಲಕ್ಕೆ ಪ್ರಾರಂಬಿಸುತ್ತಾನೆ.
  ವಿಷ್ಣುಮೂರ್ತಿ ದೈವವನ್ನು ಕಟ್ಟುವವರು ಮಲಯರು. ದೈವದ ಮಹಿಮೆಯನ್ನು ಹಾಡಿನ ಮೂಲಕ ಹಾಡುತ್ತಾರೆ. ಜೊತೆಯಲ್ಲಿ ತಾಳ ವಾದ್ಯವೂ ಇರುತ್ತದೆ.ಇದಕ್ಕೆ ಪಾರ್ಧನ ಎನ್ನುತ್ತಾರೆ.
ಕೆಂಪು ಬಣ್ಣದ ದಿರಿಸನ್ನು ಭೂತಕ್ಕೆ  ಉಡಿಸುತ್ತಾರೆ. ಮುಖವರ್ಣಿಕೆಗಾಗಿ ಬಿಳಿ,ಹಸಿರು, ಅರಸಿನ, ಕಪ್ಪು, ಕೆಂಪು ಮೊದಲಾದ ಬಣ್ಣಗಳಿಂದ ಅಲಂಕರಿಸುತ್ತಾರೆ.ತಲೆಯ ಮೇಲೆ ಕಿರೀಟ ಧರಿಸಿ, ಹೂ ಮಾಲೆಗಳಿಂದ ಅಲಂಕೃತವಾಗಿ  ಒಟ್ಟಾರೆ ನರಸಿಂಹನ ರೂಪವನ್ನು ಹೋಲುವ ಈ ಅಲಂಕಾರಗಳು ಬಹಳ ಆಕರ್ಷಕ ಹಾಗೂ ಭಯಾನಕವಾಗಿ ರೂಪುಗೊಳ್ಳುತ್ತದೆ.
ಕಾಲಿಗೆ ಗಗ್ಗರ ಕಟ್ಟಿಕೊಂಡು ಕೈಯಲ್ಲಿ ಪಟ್ಟದ ಖಡ್ಗ, ಗುರಾಣಿ, ತ್ರಿಶೂಲಗಳನ್ನು ಹಿಡಿದು ಆವೇಶದಿಂದ ರಾತ್ರಿ ಬೆಳಗಾಗುವವರೆಗೆ ನರ್ತಿಸುತ್ತಾನೆ. ವಿಷ್ಣುಮೂರ್ತಿ ಭೂತದ ಗುಡಿಯಲ್ಲಿ ಪೂಜೆಗೊಳ್ಳುವ ಕತ್ತಿಯನ್ನು, ಬಿಲ್ಲು ಬಾಣವನ್ನು ಕೈಯಲ್ಲಿ ಹಿಡಿದುಕೊಂಡಾಗ  ಆತನ ಮೈಮೇಲೆ ದೈವದ ಆವಾಹನೆಯಗುತ್ತದೆ.
ಸಂಜೆ ಸುಮಾರು ೭ ಘಂಟೆಯಾಗುತ್ತಿದ್ದಂತೆ ಊರಿನ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ಭೂತಕ್ಕೆ ಅಪ್ಪಣೆ ಕೊಡಿಸುತ್ತಾರೆ.
ಗುಡಿಯ ಒಳಗಿನ ನಂದಾದೀಪದಿಂದ ಮಡಲಿನ ಸೂಟೆಗಳಿಗೆ ಬೆಂಕಿ ಹಚ್ಚಿಸಿ ಎಲ್ಲಾ ಬೆಳ್ಚಪ್ಪಾಡರೂ ಆವೇಶದಿಂದ ಮೇಲರಿ ಕಡೆಗೆ ಹೋಗಿ ಎಲ್ಲಾ ಕಡೆಗಳಿಂದ ಬೆಂಕಿ ಹಚ್ಚುತ್ತಾರೆ. ಚೆಂಡೆ, ನಗಾರಿ, ಕೊಂಬು-ಕಹಳೆ ,ಬ್ಯಾಂಡು-ಭಜಂತ್ರಿ ಗಳು ಮೊಳಗುತ್ತಿರುತ್ತವೆ. ಬೆಂಕಿಯು ಕ್ಷಣದಲ್ಲೇ ಮೆಲರಿಯ ಎಲ್ಲಾಕಡೆ ಆವರಿಸಿ ಕೊಂಡು ಸುಮಾರು ೩೦ ಅಡಿಗಳಷ್ಟು ಎತ್ತರಕ್ಕೆ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.
ಅದರ ಹತ್ತಿರ ಹೋಗಲಾರದಷ್ಟು ಧಗೆ. ರಾತ್ರಿ ಸುಮಾರು ೨ ಘಂಟೆಯ ವರೆಗೆ ಎಲ್ಲಾ ಕಟ್ಟಿಗೆ ಉರಿದು ನಿಗಿ ನಿಗಿ ಕೆಂಡವಾಗುತ್ತದೆ. ಎಲ್ಲಾ ಕೆಂಡವನ್ನು ಒಟ್ಟಿಗೆ ಸೇರಿಸಿ ರಾಶಿ ಮಾಡುತ್ತಾರೆ.
ಭೂತದ ನಾನಾ ರೀತಿಯ ನರ್ತನ ನಡೆಯುತ್ತಿರುತ್ತದೆ. ಭಗವಂತನಾದ ನರಸಿಂಹನು ಹಿರಣ್ಯಕಶಿಪುವಿನ ಉಧರವನ್ನು ತನ್ನ ನಖಗಳಿಂದ ಸಿಗಿದು, ಕರುಳನ್ನು ಬಗೆದು ಆತನ ನೆತ್ತರನ್ನು ಕುಡಿದು ವಧಿಸುವ ಸಂಧರ್ಭವನ್ನು ಭೂತವು ಅಭಿನಯಿಸಿ ತೋರಿಸುತ್ತದೆ. ಆಗಿನ ಆ ಭಯಾನಕ ಆವೇಶ, ಉಗ್ರ ಕೋಪ ಎಲ್ಲಾ, ಅಲ್ಲಿ ನೆರೆದಿರುವ ಸಾವಿರಾರು ಭಕ್ತರಿಗೆ
ತಲೆಭಾಗುವಂತೆ ಮಾಡುತ್ತದೆ.
ಮೇಲರಿಯನ್ನು ಎಲ್ಲಾ ಸಜ್ಜು ಗೊಳಿಸಿ ಆದಾಗ ಭೂತಕ್ಕೆ ತೆಂಗಿನ ಎಳೆ ಗರಿಯಿಂದ ತಯಾರಿಸಲಾದ ದಿರಿಸನ್ನು ತೊಡಿಸಲಾಗುತ್ತದೆ. ಭೂತವು ತನ್ನ ಎಲ್ಲಾ ಅನುಯಾಯಿಗಳೊಂದಿಗೆ ಮೂರು ಸುತ್ತು ಬರುತ್ತದೆ. ಮತ್ತು ಆ ಉರಿಯುವ ಕೆಂಡದ ಮೇಲೆ ಏರಿ ಅದರ ಮೇಲೆ ಬೀಳುತ್ತದೆ.
 ಆವಾಗಲೆಲ್ಲ ಜೊತೆಯಲ್ಲಿರುವ ಸಹಾಯಕರು ಭೂತವನ್ನು ಎಳೆದು ಈ ಕಡೆ ತರುತ್ತಾರೆ. ಆದರೂ ಏನಿಲ್ಲವೆಂದರೂ ೧೫-೨೦ ಸಲ ಮೇಲರಿಗೆ ಬೀಳುತ್ತದೆ. ಭೂತವನ್ನು ನಿಯಂತ್ರಿಸುವುದೇ ಕಷ್ಟವಾಗುತ್ತದೆ.
ಕೆಲವೊಮ್ಮೆ ಮನೆಯ ಯಜಮಾನರು ಮತ್ತು ಊರವರು ಬಂದು ಭೂತವು ಶಾಂತವಾಗಬೇಕೆಂದು ಕೈ ಮುಗಿದು ಬೇಡಿಕೊಳ್ಳುತ್ತಾರೆ. ನಂತರ ಅಲ್ಲಿರುವ ಎಲ್ಲಾ ಬೆಳ್ಚಪ್ಪಾಡರೂ ಮೇಲರಿಯನ್ನೂ ೩-೩ ಸಲ ಏರುತ್ತಾರೆ. ಎಲ್ಲರೂ ಬರಿಗಾಲಲ್ಲಿ ಕೆಂಡ ತುಳಿಯುತ್ತರಾದರು ಏನೊಂದೂ ಅನಿಷ್ಟ ಸಂಭವಿಸುವುದಿಲ್ಲ.
ಇವರೆಲ್ಲರೂ ಕೋಲದ ೩ ದಿನಗಳ ಹಿಂದಿನಿಂದಲೂ ಶುದ್ಧವಾಗಿರಬೇಕೆಂಬ ನಿಯಮವಿದೆ. ಕೆಲವೆಡೆಗಳಲ್ಲಿ ಮನೆತನದ ಹಿರಿಯರನ್ನು ಸ್ತ್ರೀಯರನ್ನೂ, ಮಕ್ಕಳನ್ನು ಸಹಾ ಭೂತವೇ ಕೈ ಹಿಡಿದು ಕೆಂಡ ಹಾಯಿಸುವ ಸಂಪ್ರದಾಯವಿದೆ. ಯಾರಿಗೂ ಏನೂ ಅಪಾಯವಾಗುವುದಿಲ್ಲ.
ಇದಾದ ನಂತರ ಭೂತಕ್ಕೆ ಬಾರಣೆ ಕೊಡುತ್ತಾರೆ. ನೆರೆದಿರುವ ಎಲ್ಲರಿಗೂ ಅಭಯ ನೀಡಿ ಪ್ರಸಾದ ರೂಪವಾಗಿ ಎಳನೀರು, ಅರಶಿನದ ಹುಡಿಯನ್ನೂ ಬಾಳೆಯ ಎಳೆಯಲ್ಲಿ ಇರಿಸಿ ಭೂತವೇ ಎಲ್ಲರಿಗೂ ಹಂಚುತ್ತದೆ. ಜನರೂ ಭೂತಕ್ಕೆ ಕಾಣಿಕೆ ಸಲ್ಲಿಸುತ್ತಾರೆ. ಎಲ್ಲರೂ ಧನ್ಯತಾ ಭಾವದಿಂದ ಮರಳುವ ಹೊತ್ತಿಗೆ ಸೂರ್ಯ ಉದಯಿಸುವ ಹೊತ್ತಾಗಿರುತ್ತದೆ.
ವಿಶೇಷವೆಂದರೆ ಸಾಮಾನ್ಯವಾಗಿ ಒತ್ತೆಕೋಲ ಕಳೆದ ಮರು ದಿನ ಮಳೆ ಬರುತ್ತದೆ. ವೈಜ್ಞಾನಿಕವಾಗಿ ಇದು ಮೇಲಿನ ವಾತಾವರಣ ಬಿಸಿಯಾದುದರಿಂದ ಆಗಿರಬಹುದು. ಇದರ ಬಗ್ಗೆ ಇಲ್ಲಿ ವಿಶ್ಲೇಷಣೆ ಬೇಡ.
ಜಾತಿ ಅಂತಸ್ತು ಇವುಗಳ ಬೇಧವಿಲ್ಲದೆ ಊರಿನ ಎಲ್ಲರೂ ಸೇರಿ ಮಾಡುವಂಥಹ ಈ ಮಹೋತ್ಸವ ಎಲ್ಲರನ್ನೂ ಒಗ್ಗಟ್ಟಾಗಿರಿಸುತ್ತದೆ.       

Monday, 4 April 2011

Aavani

ನಮ್ಮಆವಣಿ ಪ್ರವಾಸದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಆವಣಿ ಎಂಬ ಪುಟ್ಟ ಊರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿದೆ. ಬೆಂಗಳೂರಿನಿಂದ ಕೋಲಾರ ತಲುಪಿ ಅಲ್ಲಿಂದ ಸೀದಾ ಆವಣಿಯನ್ನು ತಲುಪಬಹುದು. ಇಲ್ಲವಾದರೆ ಬಂಗಾರಪೇಟೆ,ಬೇತಮಂಗಲ, ಬಂಗಾರ ತಿರುಪತಿ ಎಲ್ಲ ನೋಡಿಕೊಂಡು ಆವಣಿಗೆ ಬರಬಹುದು.













ಇಲ್ಲಿನ ಪುಟ್ಟ ಊರಿಗೆ ತಾಗಿಕೊಂಡು ದೊಡ್ಡದಾದ ಕಲ್ಲು ಬಂಡೆಗಳ ಬೆಟ್ಟವಿದೆ. ಇದೇ ಇಲ್ಲಿನ ಆಕರ್ಷಣೆ. ಇಲ್ಲಿನ ಇತಿಹಾಸದ ಪ್ರಕಾರ ಇಲ್ಲಿ ರಾಮಾಯಣದ ಸೀತಾ ಮಾತೆಯು ಲವ-ಕುಶರಿಗೆ ಜನ್ಮ ಕೊಟ್ಟಳಂತೆ.ಇದಕ್ಕೆ ಸಾಕ್ಷಿಯೋ ಎಂಬಂತೆ ಬೆಟ್ಟದ ಮೇಲೆ ವಾಲ್ಮೀಕಿ ಮುನಿಗಳ ಆಶ್ರಮವೆಂದು ಹೇಳಲಾಗುವ ಪುಟ್ಟ ಗುಹಾ ಆಶ್ರಮವಿದೆ. ಬಂಡೆಗಳ ಸಂದಿಯಲ್ಲಿ ಕಲ್ಲುಗಳನ್ನು ಜೋಡಿಸಿ ಮಾಡಿದ ಒಂದು ಕೋಣೆ, ಅದರ ಹಿಂಬಾಗಕ್ಕೆ ಕಿರಿದಾದ ಬಾಗಿಲು, ನುಸುಳಿಕೊಂಡು ಹೋದರೆ ಇನ್ನೂಒಂದು ಕೋಣೆ ಇದೆ.








ಊರಿನ ಕೆಳಭಾಗದಿಂದ ಮೆಟ್ಟಲುಗಳನ್ನು ಏರುತ್ತ ಬಂದು ಇಲ್ಲಿಗೆ ತಲುಪುವಾಗ ದೊಡ್ಡ ಬಂಡೆಗಳ ಸಮುಚ್ಚಯ ಎದುರಾಗುತ್ತವೆ. ಅದರ ಮೇಲೆಲ್ಲಾ ಜೇನು ಹುಟ್ಟುಗಳು ತೂಗುತ್ತಿವೆ.

















ಅಲ್ಲಿಂದ ಕೆಳಗಿನ ಊರು ಚಿತ್ತಾರದಂತೆ ಕಾಣುತ್ತದೆ. ಕೆಲವು ಕಡೆ ಬಂಡೆಯನ್ನೇ ಕಡಿದು ಮೆಟ್ಟಲು ಮಾಡಿದ್ದರೆ ಕೆಲವು ಕಡೆ ಚಪ್ಪಡಿ ಹಾಕಿ ಮೆಟ್ಟಿಲು ನಿರ್ಮಿಸಿದ್ದಾರೆ.


ವಾಲ್ಮೀಕಿ ಆಶ್ರಮದ ಪಕ್ಕದಲ್ಲೇ ಪಂಚ ಪಾಂಡವರು ಪ್ರತಿಷ್ಠಾಪಿಸಿದ ೫ ಶಿವಲಿಂಗಗಳ ಗುಡಿ ಇದೆ. ಇದರಲ್ಲಿ ನಡುವೆ ಇರುವ ಲಿಂಗವು ಆಕಾರದಲ್ಲಿ ದೊಡ್ಡದಾಗಿದ್ದು ಭೀಮನು ಸ್ಥಾಪಿಸಿದ  ಲಿಂಗವಿರಬಹುದು ಅನ್ನಿಸುತ್ತದೆ. ಅಲ್ಲೇ ಪಕ್ಕದಲ್ಲಿ ಒಂದು ಬಾಗಿಲುವಾಡವಿದ್ದು ಅಲ್ಲಿ ವಿಶ್ರಮಿಸಬಹುದು.














ಬಂಡೆಗಳ ಎಡೆಯಿಂದ ಕಾಲ್ದಾರಿಯಲ್ಲಿ ಮುಂದೆ ಸಾಗಿದಾಗ ವಿಶಾಲವಾದ ಪ್ರದೇಶ ಕಾಣುತ್ತದೆ. ಒಂದು ಪಕ್ಕದಲ್ಲಿ ಬಹು ಮಹಡಿ ಕಟ್ಟಡವನ್ನು ಹೋಲುವ ಬಂಡೆಗಳು,

ಇನ್ನೊಂದೆಡೆ ಬಹಳ ದೊಡ್ಡದಾದ ಗುಂಡಗಾದ ಬಂಡೆ! ತಿರುಪತಿಯ ಲಡ್ಡನ್ನು ನೆನಪಿಸುತ್ತಿದೆ.ಅದರ ಕೆಳಗೆ ಸ್ವಲ್ಪ ಹೊತ್ತು ವಿಶ್ರಮಿಸಿದೆವು.
 ಪಕ್ಕದ್ದಲ್ಲೇ ಬಂಡೆಯ ಕಮರಿಯಲ್ಲಿ ಮಳೆ ನೀರು ತುಂಬಿಕೊಂಡು ಆಕರ್ಷಕವಾಗಿದೆ. ಆದರೆ ಅದರಲ್ಲಿ ಇಳಿಯುವುದು ಅಪಾಯಕಾರಿ.ಇದನ್ನು ಧನುಷ್ಕೋಡಿ ಎನ್ನುತ್ತಾರೆ.


ಧನುಷ್ಕೋಡಿ



ಅಲ್ಲಿಂದ ಮೇಲೆ 
ನೋಡಿದಾಗ ದೂರದಲ್ಲಿ ಬೆಟ್ಟದ ಮೇಲೆ ಒಂದು ದೇವಾಲಯ ಕಾಣುತ್ತದೆ. ಹೇಗಪ್ಪ ಅಷ್ಟು ದೂರ ಏರುತ್ತಾ ಹೋಗುವುದು ಎಂಬ ಸಮಸ್ಯೆ ಎದುರಾಗುತ್ತದೆ.
ಸ್ವಲ್ಪ ದೂರ ಹೋಗಿ ನೋಡೋಣ ಎಂದು ಪುಸಲಾಯಿಸಿ ಎಲ್ಲರನ್ನೂ ಮುಂದೆ ಕೊಂಡೊಯ್ದೆವು.

ಅಲ್ಲೇ ಪಕ್ಕದಲ್ಲಿ ನಿಸರ್ಗ ನಿರ್ಮಿತ ಕೊಳವಿದೆ. ನೀರು ಪಾಚಿ ಕಟ್ಟಿಕೊಂಡು ಹಸಿರು ಜಮಖಾನೆ
 ಹಾಸಿದಂತಿತ್ತು. ಮಳೆಗಾಲದಲ್ಲಿ ನೀರು ಚೆನ್ನಾಗಿರಬಹುದು ಮತ್ತು ಈಜಾಟ ಮಾಡಬಹುದು
                













ಇಲ್ಲಿಂದ ಮುಂದೆ ಏರುತ್ತಾ ಸಾಗಬೇಕು. ಕೆಲವೆಡೆ ಕಲ್ಲು ಚಪ್ಪಡಿ ಹಾಕಿದ್ದಾರೆ.
ಏರುತ್ತಾ ಏರುತ್ತಾ ನಾವು ಬೆಟ್ಟದ ತುದಿಯಲ್ಲಿದ್ದೆವು. ಅಷ್ಟೇನೂ ಸುಸ್ತಾಗಲಿಲ್ಲ. ಮೇಲಿಂದ ಬಹಳ ದೂರದವರೆಗೆ ಪುಟ್ಟ ಊರುಗಳೂ, ಹೊಲ ಗದ್ದೆಗಳು, ರಸ್ತೆ ಎಲ್ಲಾ ಸುಂದರವಾಗಿ ಕಾಣುತ್ತದೆ. ಮೇಲೆ ಚೆನ್ನಾಗಿ ಗಾಳಿ ಬೀಸುತ್ತಿದೆ.ಆಯಾಸವೆಲ್ಲ ಪರಿಹಾರವಾಯಿತು.



























ಇಲ್ಲಿ ಸೀತಾ ಪಾರ್ವತಿಯರ ದೇವಸ್ಥಾನವಿದೆ. ಇಲ್ಲಿ ನಿತ್ಯ ಪೂಜೆಗಾಗಿ ಅರ್ಚಕರು ದಿನಾ ಕೆಳಗಿನ ಊರಿನಿಂದ ಮೇಲೆ ಬಂದು ಹೋಗುತ್ತಾರೆ.ನಾವು ಹೋದಾಗ ಅವೇಳೆಯಾಗಿದ್ದರಿಂದ ದೇವರ ದರ್ಶನವಾಗಲಿಲ್ಲ. ಅಲ್ಲೇ ಸ್ವಲ್ಪ ಹೊತ್ತು ಕುಳಿತು ತಿಂಡಿ ತಿಂದು ಸುಧಾರಿಸಿಕೊಂಡೆವು. ದೇವಸ್ಥಾನಕ್ಕೆ   ಸುಂದರವಾದ ಗೋಪುರವಿದ್ದು ಚೆನ್ನಾಗಿದೆ. 

ಸುತ್ತಲಿನ ವೀಕ್ಷಣೆಗಾಗಿ ಸುತ್ತಲೂ ಕಬ್ಬಿಣದ ಕಟಕಟೆಯಿದೆ. ದೇವಾಲಯದ ಹಿಂಭಾಗದಲ್ಲಿ ಮತ್ತೆ, ದೊಡ್ಡ ದೊಡ್ಡ ಬಂಡೆಗಳ ವಿಶಾಲ ಜಾಗವಿದೆ. ಮಕ್ಕಳಿಗೆ ಆಟವಾಡಲು ಪ್ರಶಸ್ತ ಜಾಗ! ಆದರೆ ಒಂದೇ ಒಂದು ಕೊರತೆಯೆಂದರೆ ಇಲ್ಲೆಲ್ಲೂ ನೀರು ಸಿಗುವುದಿಲ್ಲ. ಕುಡಿಯಲು ಬೇಕಾಗುವಷ್ಟು ನೀರನ್ನು ಜೊತೆಯಲ್ಲೇ ಕೊಂಡೊಯ್ಯ ಬೇಕು.



ನಾವು ಇಲ್ಲಿಗೆ ಬಂದದ್ದು ಏಪ್ರಿಲ್ ೩ ರಂದು. ಬಹಳ ಸೆಕೆ ಇತ್ತು. ಕೆಳ ದಿನಗಳ ಹಿಂದಷ್ಟೇ ಇಲ್ಲಿ ಜಾತ್ರೆ ನಡೆದಿರಬೇಕು. ಹಾಗಾಗಿ ಎಲ್ಲಿ ಕಾಲಿಟ್ಟರೂ ತೆಂಗಿನಕಾಯಿ ಚಿಪ್ಪು, ಮತ್ತು ಪ್ಲಾಸ್ಟಿಕ್ .ನೋಡುವಾಗ ಬಹಳ ವ್ಯಸನ ವಾಗುತ್ತದೆ. ಎಷ್ಟೊಂದು ಸುಂದರ ತಾಣವನ್ನೂ ನಾವು ಎಷ್ಟು ಕೆಡಿಸಬಹುದು ಎಂತ ತೋರಿಸುತ್ತದೆ.

ಸೂರ್ಯ ಕೆಳಗಿಳಿಯುತಿದ್ದಂತೆ ನಾವೂ ಇಳಿಯಲು ಪ್ರಾರಂಭಿಸಿದೆವು.
 ಅರ್ಧ ಘಂಟೆಯಲ್ಲಿ ನಾವೂ ಕೆಳಗೆ ತಲುಪಿದೆವು.
ಆವಣಿ ಬೆಟ್ಟವು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ರಾತ್ರಿ ಕ್ಯಾಂಪ್ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ನಾನು ಮತ್ತು ಶ್ರುತಿ ಮುಂದಿನ ಚಳಿಗಾಲದಲ್ಲಿ ಇಲ್ಲಿ ಚಾರಣ ಮಾಡುವ ಪ್ಲಾನ್ ರಚಿಸಿದೆವು. ಖಂಡಿತವಾಗಿಯೂ ಇನ್ನೊಂದು ಸಲ ನಮ್ಮ ತಂಡದ ಎಲ್ಲ ಸದಸ್ಯರನ್ನು ಕರೆದುಕೊಂಡುಬಂದು ಇಲ್ಲಿ ಒಂದು ದಿನ ನೈಟ್ ಕ್ಯಾಂಪ್ ಮಾಡಿ ಬರಬೇಕು ಎಂಬ ಸಂಕಲ್ಪ ಮಾಡಿ ಬಂದೆವು.
ಕೆಳಗಡೆ ಆವಣಿ ಊರಲ್ಲಿ ಶೃಂಗೇರಿ ಶಾರದಾಂಬೆಯ ಸುಂದರ ದೇವಾಲಯವಿದೆ.ಮತ್ತು ಇದರ ಪಕ್ಕದಲ್ಲೇ ರಾಮಲಿಂಗೇಶ್ವರ ದೇವಾಲಯವಿದೆ. ಹೊತ್ತು ಬಹಳವಾದ್ದರಿಂದ ನಾವು ಇದನ್ನು ನೋಡಲಾಗಲಿಲ್ಲ.ಆದರೆ ಈ ದೇವಾಲಯವು ಬಹಳ ಸುಂದರ ವಾಗಿದೆಯಂತೆ.ಇದು ಚೋಳರ ಕಾಲದಲ್ಲಿ ನಿರ್ಮಿತವಾಗಿದ್ದು ಸುಮಾರು ೧೪೦೦ ವರ್ಷಗಳಷ್ಟು ಹಳೆಯ ದೇವಾಲಯ.