Wednesday, 18 December 2019

Kedaarnaath






3.ಕೇದಾರನಾಥ

ಗಂಗೋತ್ರಿಯಿಂದ ಹೊರಟ ನಮ್ಮ ತಂಡ ವೇಗವಾಗಿ ಹಾರ್ಸಿಲ್ ತಲುಪಿತು. ಮುಂದೆ ಸಿಕ್ಕ ಒಂದು ಸುಂದರ ತಾಣದಲ್ಲಿ ಬೆಳಗ್ಗಿನ ನಾಷ್ಟಾ. ಬಿಸಿ ಬಿಸಿ ಪುಳಿಯೋಗರೆ ಕಾಫಿ, ಹೊಟ್ಟೆಗೆ ಇಳಿಸಿಕೊಂಡೆವು. ಹಾರ್ಸಿಲ್ ನಿಂದ ಉತ್ತರ ಕಾಶಿಗೆ.




 ಅಲ್ಲಿಂದ ತೆಹ್ರಿಗೆ ಪಯಣ. ಮಧ್ಯದಲ್ಲಿ ಗಂಗಾನಾನಿ ಎಂಬಲ್ಲಿ ನಿಲ್ಲಿಸಿದೆವು. ಇಲ್ಲಿ ಬಿಸಿನೀರ ಕುಂಡವಿದೆ. ಪರಾಶರ ಮುನಿಯ ದೇವಾಲಯವಿದೆ.
 ಪರಾಶರ ಮುನಿ ಒಮ್ಮೆ ಒಂದು ನದಿಯನ್ನು ದಾಟಬೇಕಾಗಿ ಬಂತು. ಅಲ್ಲಿ ದೋಣಿ ನಡೆಸಲು ಒಬ್ಬ ಮೀನುಗಾರ ಸ್ತ್ರೀ ಇದ್ದಳು. ಅವಳು ದೋಣಿಯಲ್ಲಿ ಮುನಿಯನ್ನು ಕುಳ್ಳಿರಿಸಿ ನದಿಯನ್ನು ದಾಟುವ ಸಮಯದಲ್ಲಿ ಅವಳಲ್ಲಿ ಮೋಹವುಂಟಾಗಿ ಅವರಿಬ್ಬರೂ ಒಂದು ಸೇರಿದರು. ಅವಳ ಹೆಸರು ಸತ್ಯವತಿ. ಮತ್ಸ್ಯಗಂಧಿ ಎಂತಲೂ ಅವಳನ್ನು ಕರೆಯುತಿದ್ದರು. ಅವಳ ಮೈಯಿಂದ ಮೀನಿನ ಕೆಟ್ಟ ವಾಸನೆ ಸೂಸುತಿತ್ತು. ಮುನಿ, ಅವಳ ಕೆಟ್ಟ ವಾಸನೆಯನ್ನು ನಿವಾರಿಸಿ ಅವಳ ದೇಹದಿಂದ ಸುವಾಸನೆ ಸೂಸುವಂತೆ ವರವಿತ್ತನು ಮಾತ್ರವಲ್ಲ ಅವಳಿಗೆ ಮೊದಲಿನ ಕನ್ಯತ್ವವನ್ನೂ ಉಳಿಸಿಕೊಳ್ಳುವಂತೆ ಮಾಡಿದನು ಮತ್ತು ಅಲ್ಲಿಂದ ಹೊರಟು ಹೋದನು. ಸತ್ಯವತಿ ಈಗ ಯೋಜನಗಂಧಿ ಎನಿಸಿಕೊಂಡಳು. ಅವರ ಮಿಲನದ ಫಲವಾಗಿ ಒಬ್ಬ ತೇಜಸ್ವಿಯಾದ ಮಗ ಹುಟ್ಟಿದ. ಅವನಿಗೆ ಕೃಷ್ಣ ದ್ವೆಪಾಯನ ಎಂದು ಹೆಸರಿಟ್ಟರು ಅವನೇ ಮುಂದೆ ಮಹಾಭಾರತ ಬರೆದ ವೇದ ವ್ಯಾಸ ಎಂದು ಹೆಸರುವಾಸಿಯಾದನು. ಸತ್ಯವತಿಯನ್ನು ಕುರುವಂಶದ ಮಹಾರಾಜ ಶಂತನು ವಿವಾಹವಾಗಿ ಇವರಿಗೆ ದೇವವೃತನೆಂಬ ಮಗನು ಜನಿಸಿ ಬೀಷ್ಮ ಎಂದು ಪ್ರಖ್ಯಾತನಾದನು.
 ಇಲ್ಲಿ ಬಿಸಿ ನೀರ ಕುಂಡದಲ್ಲಿ ಸ್ನಾನ ಮಾಡಿದೆವು. ಪಾಪ, ಮಹಿಳೆಯರಿಗೆ ಇದಕ್ಕೆ ಅವಕಾಶವಾಗಲಿಲ್ಲ. ಅವರ ಪ್ರತ್ಯೇಕ ಕುಂಡದಲ್ಲಿ ನೀರು ವಿಪರೀತ ಬಿಸಿಯಾಗಿತ್ತು. ಕಾಲಿಡುವಾಗಲೇ ಸುಡುತಿತ್ತು. ನಿರಾಸೆಯಿಂದ ವಾಪಾಸ್ ಬಂದರು. ನಾವು ಮನದಣಿಯೆ ಆ ಬಿಸಿ ನೀರ ಕೊಳದಲ್ಲಿ ಆನಂದಿಸಿದೆವು. ಬೇರೆ ಯಾರೂ ಅಲ್ಲಿ ಇರಲಿಲ್ಲ. ನಂತರ ಸ್ವಲ್ಪ ಮೇಲೆ ಹೋಗಿ ಪರಾಶರ ಧರ್ಶನ ಪಡೆದೆವು. ದೇಹಕ್ಕೆ ಒಳ್ಳೆಯ ಆರಾಮವಾಯಿತು. ಪ್ರಯಾಣ ಮುಂದುವರಿಸಿ ತೆಹ್ರಿ, ಅಲ್ಲಿಂದ ರುದ್ರಪ್ರಯಾಗ ಸುಮಾರು 88 ಕಿ.ಮಿ. ಸಾಗಿದೆವು. ರುದ್ರಪ್ರಯಾಗದ ರಸ್ತೆ ನಿಜಕ್ಕೂ ರುದ್ರ ರಮಣೀಯವೇ ಸರಿ. ಒಂದು ಬದಿಯಲ್ಲಿ ಮಂದಾಕಿನಿ ನದಿ ಹರಿಯುತ್ತದೆ. ಇನ್ನೊಂದು ಬದಿ ಎತ್ತರವಾದ ಬೆಟ್ಟ.




 ಅಲ್ಲಿ ಬಹಳ ಕಡೆ ಭೂಕುಸಿತ ಆಗುತ್ತಲೇ ಇರುತ್ತದೆ. ಬಂಡೆಗಳು ಉರುಳಿ ರಸ್ತೆಗೆ ಬೀಳುವುದು ಸಾಮಾನ್ಯ. ಹಾಗಾಗಿ ರಸ್ತೆ ಎಲ್ಲಾ ಹಾಳಾಗಿದೆ. ಅದನ್ನು ಸರಿಪಡಿಸಲು ಸದಾ ಅಲ್ಲಿ ಸನ್ನದ್ಧವಾಗಿರುವ ಜೆಸಿಬಿ ಮತ್ತು ಕ್ರೇನ್ ಗಳೂ ಕೆಲಸಗಾರರೂ ಇದ್ದಾರೆ.



ಇಂತಹಾ ಅಪಾಯಕಾರಿ ಜಾಗವನ್ನು ದಾಟಿ ಮುಂದೆ ಹೋದೆವು. ಅಲ್ಲಿ ಅಗಸ್ತ್ಯಮುನಿ ಎಂಬ ಊರು ದಾಟಿ ಕುಂಡ ಎಂಬ ಊರನ್ನು ತಲುಪಿದೆವು. ಕುಂಡದಿಂದ ಸುಮಾರು 100 ಕಿ.ಮಿ. ಪ್ರಯಾಣಿಸಿದರೆ ಗುಪ್ತಕಾಶಿ ಸಿಗುತ್ತದೆ. 





ಇಲ್ಲೆಲ್ಲೂ ನಿಲ್ಲದೆ ನಾವು ಫಾಟಾ ಎಂಬ ಪುಟ್ಟ ಊರಿಗೆ ಬಂದೆವು.
ನಮಗೆ ಬೆಂಗಳೂರಿನಲ್ಲಿ ಹೆಲಿಕೋಪ್ಟರ್ ಬುಕಿಂಗ್ ಅಗಲೇ ಇಲ್ಲ. ಇಲ್ಲಿರುವ ಉತ್ತರಾಖಂಡದ ಟೂರಿಸಂ ಇಲಾಖೆಯಲ್ಲಿ ವಿಚಾರಿಸಿದರೆ ಈಗ ಏನೂ ಹೇಳಲಾಗುವುದಿಲ್ಲ, 10 ದಿನ ಬಿಟ್ಟು ಫೋನ್ ಮಾಡಿ ಎಂದರು. ಹಾಗೆ ಮತ್ತೊಮ್ಮೆ ಕರೆದಾಗ, ನೀವು ನಮ್ಮ ಛಾರ್ ಧಾಮ್ ಯಾತ್ರೆಯಲ್ಲಿ ಬುಕ್ ಮಾಡಿದ್ದರೆ ಮಾತ್ರ ನಾವು ಹೆಲಿಕೋಪ್ಟರ್ ಬುಕ್ ಮಾಡುತ್ತೇವೆ ಎಂದಿದ್ದರು. ಮುಂದೆ ಹರಿದ್ವಾರದಲ್ಲೂ ನಮಗೆ ಅನುಕೂಲವಾಗಿರಲಿಲ್ಲ. ಹಾಗಾಗಿ ನಮಗೆ ಫಾಟಾದಲ್ಲಿ ಸುಮಾರು ಹೆಲಿಕೋಪ್ಟರ್ ಬುಕಿಂಗ್ ಆಪೀಸ್ ಗಳು ಕಂಡವು. ಅವುಗಳಲ್ಲಿ ಪ್ರಯತ್ನ ಮಾಡುವಾ ಎಂತ ಕೆಲವು ಸ್ಥಳಗಳಲ್ಲಿ ಕೇಳಿನೋಡಿದೆವು, ನಿರಾಸೆಯಿಂದ ವಾಪಾಸ್ ಬಂದೆವು. ಮುಂದೆ ಸಾಗುತ್ತಾ ನಮಗೆ ಹಿಮಾಲಯನ್ ಹೆಲಿಕೋಪ್ಟರ್ ಸಂಸ್ಥೆ ಕಂಡು ಅಲ್ಲಿ ನಮ್ಮ ಪ್ರಯತ್ನ ಮಾಡಿದೆವು. ನಮ್ಮ ಅದೃಷ್ಟ ಚೆನ್ನಾಗಿತ್ತು. ಅಲ್ಲಿ ನಮಗೆ ಸರಕಾರೀ ದರದಲ್ಲಿ, ಎಂದರೆ ರೂ. 4880 ಕ್ಕೆ ಟಿಕೆಟ್ ಸಿಕ್ಕಿಯೇಬಿಟ್ಟಿತು. ಉಳಿದೆಡೆಗಳಲ್ಲಿ ರೂ.7500-8000 ದರವಿದೆ. ಆಲ್ಲಿಂದ 4ಕಿ.ಮಿ. ಮುಂದೆ ಹೆಲಿಪ್ಯಾಡ್ ಇದೆ, ಅಲ್ಲಿಗೆ ಹೋಗಿ ಎಂದರು. ನಾವು ಬಹಳ ಸಂಭ್ರಮದಿಂದ ಅಲ್ಲಿಗೆ ತಲುಪಿದೆವು. ಅಲ್ಲಿ ಬಹಳ ಜನ ಸೇರಿದ್ದರು. ನಾವು ಸುಮಾರು ಹೊತ್ತು ಕಾಯಬೇಕಾಗಿತ್ತು. ಕೊನೆಗೂ ನಮ್ಮ ಸರದಿ ಬಂತು. ನಮ್ಮ ಬ್ಯಾಗು ಎಲ್ಲಾ ತೂಕ ಮಾಡಿ, ನಮ್ಮನ್ನೂ ತೂಗಿಸಿ ನೋಡಿದರು. ನಮ್ಮನ್ನು ಇನ್ನೊಂದು ರೂಮಿನಲ್ಲಿ ಕುಳ್ಳಿರಿಸಿದರು. ಅಲ್ಲಿಗೆ ಒಬ್ಬ ಮೇಲಾಫೀಸರ್ ಬಂದು ಎಲ್ಲಾ ಮಾಹಿತಿ, ನಾವು ಅನುಸರಿಸಬೇಕಾದ ನಿಯಮಗಳನ್ನು ಎಲ್ಲಾ ವಿವರಿಸಿದ. ಯಾರೂ ಹೆಲಿಕೋಪ್ಟರ್ ನ ಪೈಲಟ್ ನೊಡನೆ ಮಾತಾಡಬಾರದು, ಹೋಗುವಾಗ ಫೋಟೋ ತೆಗೆಯಬಾರದು, ಪರಸ್ಪರ ಮಾತಾಡಕೂಡದು ಮತ್ತು ಒಬ್ಬರಿಗೆ ನಿಗದಿಯಾದ ಸೀಟ್ ನಲ್ಲೇ ಕೂರಬೇಕು ಇತ್ಯಾದಿ ನಿಭಂದನೆಗಳನ್ನು ಹೇಳಿದರು. 20 ಕಿ.ಮಿ. ಪ್ರಯಾಣಕ್ಕೆ ಬರೇ 7 ನಿಮಿಷ ತೆಗೆದುಕೊಳ್ಳುತ್ತದೆ. ಒಂದು ಕೋಪ್ಟರ್ ನಲ್ಲಿ 6 ಜನ ಮಾತ್ರ ಹತ್ತಿಸುತ್ತಾರೆ.  ನಮ್ಮನ್ನು ಹೆಲಿಪ್ಯಾಡ್ ಗೆ ಕರಕೊಂಡು ಹೋದರು. ಅಲ್ಲಿ ಅಂಚಿನಲ್ಲಿರುವ ಬೆಂಚಿನಲ್ಲಿ ಕುಳ್ಳಿರಲು ಹೇಳಿದರು. ನಾನು ಬಂದು ಕರೆಯುವವರೆಗೆ ಯಾರೂ ಅತ್ತಿತ್ತ ಹೊಗಬಾರದು ಎಂದು ಕಟ್ಟಪ್ಪಣೆ ಮಾಡಿದ. ಆತನ ಹೆಸರು ಗೋಪಾಲ್ ಸಿಂಗ್. ನಮ್ಮ ಹೆಲಿಕೋಪ್ಟರ್ ಬಂತು. ವಿಪರೀತ ಸದ್ದು ಮತ್ತು ಗಾಳಿಯ ರಭಸ. ಅದರಲ್ಲಿ ಬಂದ ಪ್ರಯಾಣಿಕರನ್ನು ಇಳಿಸಿದ ಕೂಡಲೇ ನಮ್ಮನ್ನು ಕರಕೊಂಡು ಗೋಪಾಲ್ ಸಿಂಗ್ ಅದರ ಹತ್ತಿರ ಕೊಂಡು ಹೋದ. ನಮ್ಮ ಬ್ಯಾಗುಗಳನ್ನು ಅದರಲ್ಲಿ ನಿಗದಿತ ಜಾಗದಲ್ಲಿ ತುಂಬಿದರು. ಇನ್ನೇನು ಅದರಲ್ಲಿ ಹತ್ತಬೇಕು ಎಂದಿರುವಾಗ ಅಲ್ಲಿರುವ ಒಬ್ಬನ ಮೊಬೈಲ್ ಗುಣುಗುಣಿಸಿತು. ನಮ್ಮನ್ನು ಏರಲು ಬಿಡಲಿಲ್ಲ. ಮೇಲೆ ಕೇದಾರ್ ನಾಥದಲ್ಲಿ ಕೆಟ್ಟ ಹವೆ, ಮಳೆ ಬರುತ್ತಿದೆ ಎಂದನು. ನಮ್ಮನ್ನು ಅಲ್ಲಿನ ಆಫಿಸರ್ ಕಡೆ ಕಳಿಸಿದರು. ಬ್ಯಾಗ್ ಗಳನ್ನು ವಾಪಾಸು ಕೊಟ್ಟರು. ಪೆಚ್ಚು ಮೋರೆಯಲ್ಲಿ ಹಿಂದೆ ಬಂದೆವು. ನಮ್ಮ ತಂಡದ 6 ಜನ ನಮಗಿಂತ ಮೊದಲೇ ಮೇಲೆ ಹೋಗಿದ್ದರು. ನಾವು 8 ಮಂದಿ ಇಲ್ಲಿ ಬಾಕಿ. ನಿಮ್ಮ ಇವತ್ತಿನ ಟ್ರಿಪ್ ರದ್ದಾಗಿದೆ ಇನ್ನು ನಾಳೆ ಬೆಳಗ್ಗೆ 5.30 ಇಲ್ಲಿಗೆ ಬನ್ನಿ, ನಿಮಗೆ ಪ್ರಥಮ ಅವಕಾಶ ಎಂತ ಸಮಾಧಾನ ಹೇಳಿದ. ಇನ್ನೇನು ಮಾಡುವುದು ಬೇರೆ ದಾರಿಯಿಲ್ಲ. ನಮ್ಮ ವ್ಯವಸ್ಠಾಪಕ ಕುಮಾರ್ ಅವರನ್ನು ಕೇಳಿದೆವು. ನೀವು ಅಲ್ಲೇ ಹತ್ತಿರದಲ್ಲಿ ರೂಮ್ ಮಾಡಿ ಉಳಕೊಳ್ಳಿ, ಬೆಳಿಗ್ಗೆ ಹೋಗಲು ಅನುಕೂಲ ಅಂತ ಹೇಳಿದರು. ಅಂತೆಯೇ ಅಲ್ಲೇ ಸಮೀಪದ ಲಾಡ್ಜ್ ನಲ್ಲಿ ರೂಮ್ ಮಾಡಿದೆವು. ನಮ್ಮ ಗಾಡಿ ಸಹಾ ಅಲ್ಲೇ ನಿಲ್ಲಿಸಿಕೊಂಡೆವು. ರಾತ್ರಿ ಒಳ್ಳೆಯ ಊಟ ಮಾಡಿದೆವು. ಮೇಲೆ ಹೋಗಿದ್ದವರು ಅಲ್ಲಿ ಮಳೆಯಿಂದಾಗಿ ತುಂಬಾ ಚಳಿ ಅನುಭವಿಸಿದರಂತೆ. ನಾವು ಚೆನ್ನಾಗಿ ನಿದ್ರಿಸಿ ಬೆಳಗ್ಗೆ ಎದ್ದು ಬಿಸಿನೀರ ಸ್ನಾನ ಮಾಡಿ ಕ್ಲಪ್ತ ಸಮಯಕ್ಕೆ ಹೆಲಿಪ್ಯಾಡ್ ತಲುಪಿದೆವು. ಅಲ್ಲಿ ಯಾರೂ ಬಂದಿರಲಿಲ್ಲ. ಒಬ್ಬೊಬ್ಬರೇ ಬಂದ ಮೇಲೆ ನಮ್ಮನ್ನು ಕರೆದರು. ನಿನ್ನೆಯದೇ ಪ್ರಕ್ರಿಯೆಗಳು, ತಪಾಸಣೆಯ ಪುನರಾವರ್ತನೆ ನಡೆದು ನಮ್ಮನ್ನು ಹೆಲಿಕೋಪ್ಟರ್ ಹತ್ತಿಸಿದರು, ಸೀಟ್ ಬೆಲ್ಟ್ ಬಿಗಿದರು ಬಾಗಿಲು ಹಾಕಿ ಹೊರಗಿನಿಂದ ಬೀಗ ಜಡಿದರು. ಹಳದಿ ಬಣ್ಣದ ನಮ್ಮ ವಾಹನ ಮೇಲೇರಿತು ಮತ್ತು ಮುಂದಕ್ಕೆ ಹಾರಿತು. ನಾವು ಬಹಳ ಸಂತಸದಿಂದ ಹೊರಗಡೆ ಕಾಣುತ್ತಿರುವ ನೋಟವನ್ನು ಆನಂದಿಸುತಿದ್ದೆವು. ಪರ್ವತದಲ್ಲಿರುವ ದಟ್ಟ ಕಾಡಿನ ಮೇಲೆ ಹಾರುವಾಗ, ಕೆಳಗಿನ ರಸ್ತೆ, ಮನೆಗಳು ಮನುಷ್ಯರು ಎಲ್ಲಾ ಲಿಲಿಪುಟ್ ಗಳಂತೆ ಕಾಣುತಿದ್ದವು. ಅಷ್ಟರಲ್ಲೆ 7 ನಿಮಿಷ ಆಯಿತು, ನಾವು ಕೇದಾರದ ಹೆಲಿಪ್ಯಾಡ್ ನಲ್ಲಿ ಇಳಿದೆವು.





 ಇಲ್ಲಿಂದ ಬರೇ 500 ಮೀಟರ್ ಕೇದಾರನಾಥನ ಸನ್ನಿಧಿಗೆ. ಅಲ್ಲಿ ಸ್ವಲ್ಪ ಉದ್ದವಾದ ಕ್ಯೂ ಇತ್ತು. ನಮ್ಮ ಬ್ಯಾಗುಗಳನ್ನು ಅಲ್ಲೇ ಒಂದು ಅಂಗಡಿಯಲ್ಲಿಟ್ಟು ಅವನಿಂದಲೇ ಪ್ರಸಾಧ ಸಾಮಗ್ರಿಗಳನ್ನು ಕೊಂಡು ಸರದಿಯಲ್ಲಿ ನಿಂತೆವು. ಸುತ್ತಲೂ ಪರ್ವತಗಳು, ಅವುಗಳ ತುದಿಯಲ್ಲಿ ಹಿಮರಾಶಿ. ಆಗತಾನೇ ಸೂರ್ಯೋದಯವಾಗಿದ್ದರಿಂದ ಪರ್ವತದ ಶಿಖರಗಳು ಚಿನ್ನದ ಬಣ್ಣ ತಳೆದಿದ್ದವು. ಸೂರ್ಯ ಮೇಲೇರುತಿದ್ದಂತೆ ಅದು ಬೆಳ್ಳಿಯ ಬಣ್ಣ ಪಡೆಯಿತು.



 ಕೇದಾರ ದೇವಾಲಯ ಮತ್ತು ಪರ್ವತಗಳ ಫೋಟೊ ತೆಗೆಯಲು ಬಹಳ ಅನುಕೂಲವಾಗಿತ್ತು.










 ಅಲ್ಲಿ ನಮಗೆ ಇಬ್ಬರು ಹೆಣ್ಣುಮಕ್ಕಳ ಪರಿಚಯವಾಯಿತು. ಅವರು ದೆಹಲಿಯವರು. ಐಟಿಯಲ್ಲಿ ಕೆಲಸ, ಐದನೇ ಸಲ ಅವರು ಇಲ್ಲಿಗೆ ಬರುತ್ತಿರುವುದಂತೆ.















 ಸಾಲು ಮುಂದುವರಿದಂತೆ ನಾವು ಹತ್ತಿರ ಬಂದೆವು. ನಮ್ಮ ಪಾದರಕ್ಷೆಗಳನ್ನು ಅಲ್ಲೇ ಬಿಟ್ಟು ಒಳಗಡೆ ಹೋದೆವು. ಕೇದಾರನಾಥನ ದರ್ಶನವಾಯಿತು. ಇಲ್ಲಿ ನಾವು ತಂದ ಪ್ರಸಾಧ ಸಾಮಗ್ರಿಗಳನ್ನು ಶಿವನಿಗೆ ಮುಟ್ಟಿಸಿ ವಾಪಾಸು ತರಬೇಕು. ಇಲ್ಲಿ ನಾವು ಬಗ್ಗಿ ಶಿವನಿಗೆ ನಮ್ಮ ಹಣೆಯನ್ನು ಮುಟ್ಟಿಸಿ ನಮಸ್ಕರಿಸಬೇಕು. ಹಾಗೆ ಮಾಡಿದವರಿಗೆ ಮಾತ್ರ ಮುಕ್ತಿ ಪ್ರಾಪ್ತಿಯಂತೆ. ನನಗೆ 3 ಕಡೆಯಿಂದಲೂ ಹಣೆ ಮುಟ್ಟಿಸಲು ಅವಕಾಶ ಸಿಕ್ಕಿತು. ಆದ್ದರಿಂದ ನನಗೆ ಮುಕ್ತಿ ಗ್ಯಾರಂಟಿಯೆಂದು ತೃಪ್ತಿ ಪಟ್ಟುಕೊಂಡೆ. ಇಲ್ಲಿ ಪ್ರತ್ಯೇಕ ಶಿವಲಿಂಗವಿಲ್ಲ. ಇಲ್ಲಿರುವುದು ದ್ವಾದಶ ಜ್ಯೋತಿರ್ ಲಿಂಗ ಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಕರಿಯ ಬಂಡೆ ಶಿವನ ಆಕೃತಿ. ಇದಕ್ಕೊಂದು ಸಮಜಾಯಿಶಿ ಇದೆ.
ಮಹಾಭಾರತ ಯುದ್ಧ ಮುಗಿದ ಮೇಲೆ ಪಾಂಡವರಿಗೆ ಬಹಳ ಮನೋವ್ಯಥೆ ಉಂಟಾಯಿತು. ಪಾಪ ಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಂಡರು. ಕೊನೆಗೆ ಕೇದಾರಕ್ಕೆ ಬಂದು ಪರಮೇಶ್ವರನ ದರ್ಶನಕ್ಕಾಗಿ ಹೋದರು. ಇವರಿಗೆ ಅಷ್ಟು ಸುಲಭವಾಗಿ ತಾನು ಕಾಣಿಸಿಕೊಳ್ಳಬಾರದು ಎಂದು ಶಿವನು ಅಲ್ಲಿಂದ ಓಡಿಹೋದನು. ಆದರೆ ಭೀಮನು ಶಿವನನ್ನು ನೋಡಿ ಬಿಟ್ಟಿದ್ದನು. ಅವನು ಶಿವನನ್ನು ಹಿಂಭಾಲಿಸಿದನು. ಆಗ ಶಿವನು ನಂದಿಯ ರೂಪ ತಾಳಿ ಅಲ್ಲೇ ಮೇಯುತಿದ್ದ ಹಸುಗಳ ಮಂದೆಯಲ್ಲಿ ಸೇರಿಕೊಂಡನು. ಇದನ್ನು ನೋಡಿದ ಭೀಮನು ಅದರ ಹಿಂದೆಯೇ ಓಡಿದನು. ಆಗ ಶಿವನು ಭೂಮಿಯೊಳಗೆ ಅಡಗಿಕೊಳ್ಳಲು ನೋಡಿದನು. ಅಲ್ಲಿಗೂ ಭೀಮನು ಬಿಡದೆ ಅದರ ಬಾಲವನ್ನು ಬಲವಾಗಿ ಎಳೆದು ಶಿವನನ್ನು ಮಾಯವಾಗಲು ಬಿಡಲಿಲ್ಲ. ಶಿವನು ಸುಪ್ರೀತನಾಗಿ ಇವರೆದುರು ಪ್ರಕಟಗೊಂಡನು. ಈಗಲೂ ಎತ್ತಿನ ಬೆನ್ನಿನ ಆಕಾರದಲ್ಲಿ ಕೇದಾರನಾಥನು ನಮಗೆ ಕಾಣಿಸುತ್ತಾನೆ. ಒಳಗಡೆ ಪಾಂಡವರ ಮೂರ್ತಿಗಳಿವೆ.



ಹೊರಗಡೆ ಬಂದು ಒಂದು ಸುತ್ತು ಹಾಕಿದೆವು. ಅಲ್ಲೇ ಹಿಂದುಗಡೆ ದೊಡ್ಡದೊಂದು ಬಂಡೆ ಇದೆ. ಇದಕ್ಕೆ ಭೀಮನ ಬಂಡೆ ಎಂದು ಕರೆಯುತ್ತಾರೆ. 2013 ನೇ ಇಸವಿಯಲ್ಲಿ ಇಲ್ಲಿ ನಡೆದ ರುದ್ರ ದುರಂತದಲ್ಲಿ ಮೇಘಸ್ಪೋಟಗೊಂಡು ಭೀಕರ ಮಳೆಯ ಕಾರಣ ಗಾಂಧಿ ಸರೊವರವು ತುಂಬಿ ಅಲ್ಲಿಂದ ಪ್ರಳಯೋಪಾದಿಯಲ್ಲಿ ನೀರು ಕೆಳಗೆ ಹರಿದು ಬಂದು ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನೂ, ಜನರನ್ನೂ ಕೊಚ್ಚಿಕೊಂಡು ಕೆಳಗೆ ಗೌರೀಕುಂಡ ಮಾತ್ರವಲ್ಲ ಬದರೀಯವರೆಗೆ ರಸ್ತೆಯನ್ನೂ, ಮನೆಗಳನ್ನೂ ನಾಶ ಮಾಡಿತ್ತು. ಆದರೆ ಕೇದಾರ ದೇವಾಲಯ ಮಾತ್ರ ಅಛಲವಾಗಿ ನಿಂತಿತ್ತು. ಇದೊಂದು ಪವಾಡವೇ ಸರಿ. ಇದಕ್ಕೆ ಕಾರಣ ಭೀಮ ಬಂಡೆಯಂತೆ.







 ಅದು ಪ್ರವಾಹಕ್ಕೆ ಅಡ್ಡಲಾಗಿ ಇದ್ದುದರಿಂದ ಪ್ರವಾಹವು ಎರಡು ಭಾಗವಾಗಿ ಹರಿಯಿತು, ದೇವಾಲಯಕ್ಕೆ ಯಾವುದೇ ಅಪಾಯ ಆಗಲಿಲ್ಲ. ದೇವಾಲಯದ ಒಳಗಡೆ ಆಶ್ರಯ ಪಡೆದಿದ್ದ ಬಹಳ ಜನ ಜಲಸಮಾಧಿ ಆಗಿ ಶಿವನ ಪಾದ ಸೇರಿದ್ದರು.



ಕೇದಾರವು ಸಮುದ್ರ ಮಟ್ಟದಿಂದ 11800 ಅಡಿ ಎತ್ತರದಲ್ಲಿದೆ. ದೇವಾಲಯವನ್ನು ಪಾಂಡವರು ಕಟ್ಟಿಸಿದ್ದರೆಂದು ಹೇಳುತ್ತಾರೆ. ಆದರೆ ಶಂಕರಾಚಾರ್ಯರು ಕಟ್ಟಿಸಿದ್ದು ಎಂತಲೂ ಹೇಳುತ್ತಾರೆ. ಇಲ್ಲಿ ಶಂಕರಾಚಾರ್ಯರ ಸಮಾಧಿಯೂ ಇದೆ. ಮಿಲಿಟರಿಯ ದೊಡ್ಡ ಅಧಿಕಾರಿಯೊಬ್ಬರು ಬರುವುದಿದ್ದುರಿಂದ ನಮ್ಮನ್ನೆಲ್ಲಾ ಬೇಗ ಬೇಗ ಸಾಗಹಾಕಿದರು.
ನಮ್ಮ ಬೆಳಗ್ಗಿನ ನಾಷ್ಟಾವನ್ನು ಕುಮಾರ್ ಮೇಲಕ್ಕೇ ಕಳಿಸಿದ್ದರಿಂದ ಅದನ್ನು ತಿಂದು ಬೇಗನೇ ಹೆಲಿಪ್ಯಾಡ್ ಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಕಾಯಬೇಕಾಯಿತು. 





ನಮ್ಮ ಸರದಿ ಬಂದಾಗ ಅದರಲ್ಲಿ ಹತ್ತಿ ಫಾಟಾ ತಲುಪಿದೆವು. ನಮ್ಮ ವಾಹನ ಹತ್ತಿ ಉಳಿದವರನ್ನು ಕೂಡಿಕೊಂಡೆವು. ನಮಗೆ ರೂಮ್ ಗಳು ಬುಕ್ ಆಗಿದ್ದವು. ಈದಿನವಿಡೀ ಅಲ್ಲೇ ಉಳಿಯುವುದು ಎಂದು ಕುಮಾರ್ ಹೇಳಿದರು. ಆದ್ದರಿಂದ ನಮ್ಮ ಕೆಲವರು ಹತ್ತಿರದ ದೇವಾಲಯಗಳನ್ನು ನೋಡಲು ಹೋದರು. ನಾನು, ಕಸ್ತೂರಿ, ಮತ್ತು ಮುರಳಿ ಒಂದು ಚಿಕ್ಕ ಹೈಕಿಂಗ್ ಮಾಡಿದೆವು. 3ಕಿ.ಮಿ. ದೂರದ ಜಲಪಾತ ನೋಡಲು ಹೋದೆವು. ಜಲಪಾತವು ಬಹಳ ಸುಂದರವಾಗಿತ್ತು.











 ಅಲ್ಲಿಂದ ವಾಪಾಸು ಬರೋಣವೆಂದರೆ ಬಹಳ ಏರು ದಾರಿ, ನಾನು ದಾರಿಯಲ್ಲಿ ಬರುತಿದ್ದ ಒಂದು ಬೈಕ್ ನಿಲ್ಲಿಸಿದೆ, ಅದರಲ್ಲಿ ಏರಿ ರೂಮ್ ತಲುಪಿದೆ. ಕಸ್ತೂರಿ ಮತ್ತು ಮುರಳಿ ಬೇರೊಂದು ಕಾರ್ ನಲ್ಲಿ ಬಂದರು. ಊಟ ಮಾಡಿ ನಿದ್ರೆ, ಮರುದಿನ ಕಾಫಿ ತಿಂಡಿ ಮುಗಿಸಿ ಅಲ್ಲಿಂದ ಬದರೀನಾಥದ ಕಡೆಗೆ ಸಾಗಿದೆವು. ನಮ್ಮ 3 ಧಾಮಗಳ ಯಾತ್ರೆ ಮುಗಿಯಿತು. ನಾಲ್ಕನೆಯ ಬದರಿಯನ್ನೂ ಮುಗಿಸಿಯೇ ಬಿಡುತ್ತೇವೆ ಎಂಬ ನಂಬಿಕೆ ನಮ್ಮದು.

No comments:

Post a Comment