Thursday, 28 May 2020

Trichinapalli


ತಿರುಚಿನಾಪಳ್ಳಿ

ತಂಜಾವೂರಿನಿಂದ ತಿರುಚಿನಾಪಳ್ಳಿಗೆ ಸುಮಾರು 57 ಕಿ.ಮಿ. ದೂರ ಅಂದರೆ 1 ½ ಘಂಟೆ ಪ್ರಯಾಣ. ರಸ್ತೆ ಚೆನ್ನಾಗಿತ್ತು. ತಂಜಾವೂರಿನ ಬಗ್ಗೆ ಮಾತಾಡುತ್ತಾ ಸಾಗಿದ್ದೆವು. ತ್ರಿಚ್ಚಿ ಬಂದೇಬಿಟ್ಟಿತು. ಪಟ್ಟಣ ಪ್ರವೇಶ ಮಾಡುವಷ್ಟರಲ್ಲೇ ಅಲ್ಲಿರುವ ರೋಕ್ ಫೋರ್ಟ್ ದೇವಾಲಯ ಕಾಣುತ್ತದೆ.

ಉನ್ನತವಾದ ಬಂಡೆಯ ಮೇಲೊಂದು ಗುಡಿ. ಅಲ್ಲಿ ವಿನಾಯಕ ದೇವಸ್ತಾನವಿದೆ. ಅದರ ಪ್ರವೇಶ ದ್ವಾರ ಅರಸುತ್ತಾ ಸ್ವಲ್ಪ ಸಂದು ಗೊಂದಿನಲ್ಲಿ ಅಲೆದಾಡಿದೆವು.

 ಕೊನೆಗೆ ಅಲ್ಲಿಗೆ ಹೋಗುವ ಬಾಗಿಲು ಸಿಕ್ಕಿತು. ಮೊದಲು ಒಂದು ಕಾಫಿ ಕುಡಿದು ಆಮೇಲೆ ಮೇಲೆ ಹತ್ತಲಾರಂಭಿಸಿದೆವು. ಕೆಲ ಕಟ್ಟಡಗಳ ಸಂದಿಯಲ್ಲಿ ನಿರ್ಮಿಸಿದ ಪಾವಟಿಗೆ ಹತ್ತಿ ಕೊನೆಗೆ ಆ ಬಂಡೆಯ ಬುಡಕ್ಕೆ ತಲುಪಿದೆವು. ಇನ್ನು ಬಂಡೆ ಹತ್ತಬೇಕು. ಇಲ್ಲಿ ಮೆಟ್ಟಲುಗಳನ್ನು ಕೆತ್ತಿದ್ದಾರೆ. ಎರಡೂ ಪಕ್ಕ ಕಬ್ಬಿಣದ ರೈಲಿಂಗ್ ಹಾಕಿದ್ದಾರೆ.

 ಮೆಲೆ ಏರಿದಂತೆಲ್ಲಾ ತ್ರಿಚ್ಚಿಯ ವಿಹಂಗಮ ನೋಟ ಕಾಣುತ್ತದೆ. ದೂರದಲ್ಲಿ ಕಾವೇರಿ ನದಿ, ಶ್ರೀರಂಗಂ ದೇವಾಲಯ ಅದರ ಸುತ್ತಲೂ ಇರುವ ಪ್ರಾಕಾರ ಮತ್ತು ಗೋಪುರಗಳು ಕಾಣುತ್ತವೆ.

ಇಡೀ ಪಟ್ಟಣ ಕಾಣುತ್ತದೆ. ನಾವು ಮೇಲೆ ಹೋಗಿ ವಿನಾಯಕ ದೇವರನ್ನು ನೋಡಿ ಅಲ್ಲಿ ಸ್ವಲ್ಪ ಹೊತ್ತು ಕುಳಿತೆವು. ನಂತರ ಇಳಿದು ಬಂದು ಶ್ರೀರಂಗಂ ಗೆ ತಲುಪಿದೆವು. 

ಇದೊಂದು ದ್ವೀಪ. ಕಾವೇರಿ ನದಿ ಮತ್ತು ಕೊಲ್ಲಿಡಾಂ ನದಿಗಳು ಶ್ರೀರಂಗಂ ಅನ್ನು ಒಂದು ದ್ವೀಪವನ್ನಾಗಿಸಿದೆ. ಇದೊಂದು ವೈಷ್ಣವ ಪ್ರಪಂಚ. ಬಹಳ ಪುರಾತನ ಎಂದರೆ ಕ್ರಿಸ್ತ ಪೂರ್ವ 2 ನೇ ಶತಮಾನದಿಂದಲೂ ಈ ದೇವಾಲಯವಿತ್ತು.

 ಕ್ರಿಸ್ತ ಶಕ 2 ನೇ ಶತಮಾನದಲ್ಲಿ ಚೋಳ ರಾಜ ಕರಿಕಾಲ ಚೋಳನು ಇದನ್ನು ಬಹಳ ಅಭಿವೃದ್ದಿಪಡಿಸಿದನು. ಗೋಪುರಗಳನ್ನು ಮತ್ತು ಸುತ್ತಲಿನ ಪ್ರಾಕಾರಗಳನ್ನು ನಿರ್ಮಿಸಿದನು.ನಂತರ ಬಂದ ಪಲ್ಲವರು,ಪಾಂಡ್ಯರು ವಿಜಯನಗರದರಸರು ಮರಾಠ ನಾಯಕರು ಎಲ್ಲರೂ ಇಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇಲ್ಲಿ 7 ಪ್ರಾಕಾರಗಳೂ 21 ಗೋಪುರಗಳೂ ಇವೆ. ಒಟ್ಟು 156 ಎಕರೆ ಜಾಗದಲ್ಲಿ ದೇವಾಲಯ ಸಮುಚ್ಚಯವಿದೆ. ಇದು ರಾಮಾನುಜಾಚಾರ್ಯರ ಕಾರ್ಯ ಕ್ಷೇತ್ರ ವಾಗಿತ್ತು. ನಾವು ಅಲ್ಲೇ ಸ್ವಲ್ಪ ದೂರದಲ್ಲಿ ಕಾರ್ ಪಾರ್ಕ್ ಮಾಡಿ ಮುಖ್ಯ ದ್ವಾರದಲ್ಲಿ ಒಳ ಹೋದೆವು. ಮುಖ್ಯ ಗೋಪುರ ಬಿಳಿ ಬಣ್ಣ ಹಚ್ಚಿದ್ದಾಗಿದೆ. ಆದರೆ ಅದರ ಎದುರುಗಡೆ ಗೋಜಲು ಗೋಜಲಾಗಿರುವ ವಿದ್ಯುತ್ ವೈರ್ ಗಳು ಬಹಳ ಅಸಹ್ಯ ನೋಟ ಬೀರುತಿದ್ದವು. ಇದು ವಿದ್ಯುತ್ ಇಲಾಖೆಯ ಕೊಡುಗೆ.ಗೋಪುರವು ಭವ್ಯವಾಗಿದ್ದು 240 ಅಡಿ ಎತ್ತರವಾಗಿದೆ.
 ಇನ್ನೂ ಬಾಗಿಲು ತೆರೆದಿರಲಿಲ್ಲ. ಒಳಗಡೆ ಬಹಳ ರಶ್ ಇತ್ತು. ನಮ್ಮವರನ್ನು ಅಲ್ಲೇ ಕುಳಿತಿರಲು ಹೇಳಿ ನಾನು ಮತ್ತು ಮುರಳಿ ರೂಮ್ ಹುಡುಕಲು ಹೋದೆವು. ಅಲ್ಲಿ ಒಂದು ಅಂಗಡಿಯಲ್ಲಿ ವಿಚಾರಿಸಲಾಗಿ ಇಲ್ಲೇ ಪಕ್ಕದಲ್ಲಿ ಯಾವುದೋ ಒಂದು ಮಠದ ಗೆಸ್ಟ್ ಹೌಸ್ ಇದೆ ಅಲ್ಲಿ ವಿಚಾರಿಸಿ ಎಂದ. ಪಕ್ಕದಲ್ಲೇ ಇತ್ತು. ಅಲ್ಲಿ ನಾನು ತಮಿಳಿನಲ್ಲಿ ಮಾತಾಡಿ ವಿನಂತಿಸಿದೆ. ನಾಳೆ ಸಂಜೆಯವರೆಗೆ ಬೇಕಾದರೆ ರೂಮ್ ಕೊಡುವಾ ಎಂದ. ಮತ್ತೆ ಅದು ಬೇರೆಯವರಿಗೆ ರಿಜರ್ವ್ ಆಗಿದೆ ಎಂದ. ನಮಗೆ ನಾಳೆ ಬೆಳಗ್ಗಿನವರೆಗೆ ಮಾತ್ರ ಮತ್ತೆ ನಾವು ಹೊರಟುಹೋಗುತ್ತೇವೆ ಎಂದೆ. ಅಂತೂ ನನ್ನ ತಮಿಳು ಒಳ್ಳೆಯ ಫಲಕಾರಿಯಾಯಿತು. ಇಲ್ಲಿ ತಮಿಳುನಾಡಿನಲ್ಲಿ ಅವರ ಭಾಷೆ ಮಾತಾಡಿದರೆ ಯಾವ ಕೆಲಸವೂ ಸುಲಭ ಆಗುತ್ತದೆ ಅಂತ ನನ್ನ ಅನುಭವ. ಬೇಗ ಹೋಗಿ ಕಾರ್ ಅನ್ನು ಒಳಗಡೆ ಪಾರ್ಕ್ ಮಾಡಿ ಲಗ್ಗೇಜ್ ಗಳನ್ನು ರೂಂನಲ್ಲಿ ಇರಿಸಿ ನಾವಿಬ್ಬರೂ ದೇವಸ್ತಾನಕ್ಕೆ ಹೋಗಿ ನಮ್ಮವರನ್ನು ಕೂಡಿಕೊಂಡೆವು. ಉದ್ದದ ಸರದಿಯಲ್ಲಿ ನಿಂತು ರಂಗನಾಥನನ್ನು ದರ್ಶಿಸಿದೆವು. ಇದನ್ನು ಅಂತ್ಯರಂಗ ಎನ್ನುತ್ತಾರೆ. ಆದಿರಂಗ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿ ಮತ್ತು ಮಧ್ಯರಂಗವು ಶಿವನಸಮುದ್ರ ದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನವಾಗಿದೆ. ಕೆಲವರು ಈ ಮೂರೂ ದೇವಸ್ಥಾನಗಳನ್ನು ಒಂದೇದಿನದಲ್ಲಿ ದರ್ಶಿಸಿದರೆ ಬಹಳ ಶ್ರೇಷ್ಟ ಎಂತ ನಂಬುತ್ತಾರೆ. ಈ ಮೂರೂ ರಂಗಗಳು ಕಾವೇರಿ ನದಿಯ ಹರಿವಿನಿಂದಾದ ದ್ವೀಪಗಳಲ್ಲಿರುವುದು ವಿಶೇಷ.
ಪಲ್ಲಕಿ ಉತ್ಸವ ರಾತ್ರಿಯ ಪೂಜೆ ನೋಡಿಕೊಂಡು ಸ್ವಲ್ಪ ಹೊಟ್ಟೆ ತುಂಬಿಸಿದೆವು. ತಮಿಳುನಾಡಿನಲ್ಲಿ ರಾತ್ರಿ ಅನ್ನದ ಊಟ ಎಲ್ಲೂ ಸಿಗಲಾರದು. ಹಾಗಾಗಿ ದೋಸೆ ತಿಂದೆವು. ರೂಮಿನಲ್ಲಿದ್ದ ಮಾವಿನ ಹಣ್ಣು ನಮಗಾಗಿ ಕಾದಿತ್ತು. ಮಲಗಿ ನಿದ್ರಿಸಿದೆವು. ಮರುದಿನ ಬೆಳಗ್ಗೆ ಬೇಗನೇ ಎದ್ದು ಮತ್ತೆ ದೇವರ ದರ್ಷನಕ್ಕೆ ಹೋದೆವು, ಅಲ್ಲಿ ಅಭಿಶೇಕ ನಡೆಯುತಿತ್ತು. ಈಗ ಏನೂ ರಶ್ ಇರಲಿಲ್ಲ. ಆ ಮೇಲೆ ಓಳಗಡೆಗೆ ಹಸು ಕರು, ಕುದುರೆ ಮತ್ತು ಆನೆ ಬಂದವು. ಎಲ್ಲವೂ ಅಲ್ಲಿನ ಬೆಳಗ್ಗಿನ ಸಂಪ್ರದಾಯ. ಪೂಜೆ ನಡೆಯಿತು. ನಮಗೆ ಇದನ್ನೆಲ್ಲಾ ನೋಡುವ ಭಾಗ್ಯ ದೊರೆಯಿತು. ವಿಶೇಷವಾದ ಪ್ರಸಾಧವೂ ದೊರೆಯಿತು. ನಂತರ ಬೆಳಗ್ಗಿನ ತಿಂಡಿ ತಿಂದು ಅಲ್ಲಿಂದ ಹೊರಟೆವು
ಇಲ್ಲಿ ಇನ್ನೂ ಜಂಬುಕೇಶ್ವರ ಮತ್ತು ಅಖಿಲಾಂಡೇಶ್ವರಿ ದೇವಾಲಯಗಳಿವೆಯಂತೆ. ಅಲ್ಲಿಗೆ ಹೋಗಲಿಲ್ಲ. ನಮಗೆ ಊರಿಗೆ ತಲುಪುವ ಆತುರ. ಮೊದಲಿಗೆ ಸೇಲಂ ನಂತರ ಬೆಂಗಳೂರಿಗೆ ತಲುಪಬೇಕು.
ಇಲ್ಲಿಂದ ಸೇಲಂಗೆ 133 ಕಿ.ಮಿ. ಸಾಗಬೇಕು. ನೇರ ರಸ್ತೆ. ಸೇಲಮ್ಮಿನ ಬೈ ಪಾಸ್ ಸಿಕ್ಕಿತು.

 ನಾವು ಅದರಲ್ಲಿ ನೇರ ಹೋದೆವು. ಆಗ ಯೆರ್ಕ್ಕಾಡ್ ಗೆ ಹೋಗುವ ತಿರುವು ಬಂತು. ಅದನ್ನು ನೋಡಿಬಿಡುವಾ ಎಂಬ ಆಸೆ ಆಯಿತು. ಇದು ಒಂದು ಸುಖವಾಸ ಸ್ಥಳ. ಸುಮಾರು ಏರು ದಾರಿ. 2 ಪಕ್ಕದಲ್ಲಿ ದಟ್ಟ ಕಾಡು. ಬದಿಯಲ್ಲಿ ತುಂಬಾ ಕೋತಿಗಳು ಕಾಣ ಸಿಕ್ಕಿದವು.

 ಸಚಿನ್ ಗೆ ಅಲ್ಲಿ ಇಳಿಯುವ ಆಸೆ. ಸುಮಾರು ಮೇಲೆ ಹೋದಂತೆಲ್ಲಾ ಮಂಜು ಮುಸುಕಲು ಆರಂಭ. ಮುಂದೆ ಏನೇನೂ ಕಾಣದ ಹಾಗೆ ಮಂಜು ಮುಸುಕಿತು.




 ಇನ್ನೂ ಮೇಲೆ ಹೊಗಬೇಕು. ಏನು ಮಾಡೋಣ ಎಂತ ಗಾಡಿ ನಿಲ್ಲಿಸಿ ಚರ್ಚೆ ಮಾಡಿದೆವು. ಅಷ್ಟರಲ್ಲಿ ಒಬ್ಬ ಡ್ರೈವರ್ ನಮ್ಮಲ್ಲಿಗೆ ಬಂದು ನಿಮ್ಮಿಂದ ಗಾಡಿ ಮೇಲೆ ಕೊಂಡೊಯ್ಯಲಾರಿರಿ, ಬೇಕಾದರೆ ಆತನೇ ಬಂದು ಡ್ರೈವ್ ಮಾಡುತ್ತೇನೆ ಎಂದ. ಮೊದಲೇ ಕಾರ್ ನಲ್ಲಿ ಜಾಗವಿಲ್ಲ ನಮಗೆ ಇಷ್ಟವೂ ಇರಲಿಲ್ಲ. ನಾವೇ ನಿಧಾನವಾಗಿ ಹೋಗೋಣ ಎಂತ ಮುಂದುವರಿದೆವು. ಕಾರ್ ನ ಎಲ್ಲಾ ಲೈಟ್ ಗಳನ್ನು ಹಾಕಿದೆವು. ಹೋರ್ನ್ ಬಾರಿಸುತ್ತಾ ನಿಧಾನವಾಗಿ ಮೇಲೆ ಹೋದೆವು. ನಾನು ಎಡಗಡೆ ರಸ್ತೆಯನ್ನು ನೋಡುತಿದ್ದೆ. ಕಾರ್ ದಾಮಾರು ರಸ್ತೆ ಬಿಟ್ಟು ಕೆಳಗೆ ಇಳಿಯದಂತೆ ಮುರಳಿಗೆ ಎಚ್ಚರಿಸುತಿದ್ದೆ. ಅಂತೂ ಮೇಲೆ ಬಂದೇಬಿಟ್ಟೆವು. ಅಲ್ಲಿ ನೋಡುವುದೇನು ! ಎಲ್ಲಾ ಮಂಜುಮಯ ಏನೇನೂ ಕಾಣುತಿಲ್ಲ. ಹೂದೋಟ, ಲೇಕ್ ಮತ್ತು ಕಣಿವೆಗಳೆಲ್ಲಾ ಮಂಗ ಮಾಯ. ಬರೀ ಬಿಳಿಯ ಮೋಡ ಮಾತ್ರ ನಮಗೆ ಕಂಡದ್ದು.


 ಅಲ್ಲೇ ಒಂದು ಹಳೆಯ ಗುಡಿ ಇತ್ತು ಅಲ್ಲಿ ನಿಂತೆವು. ಸ್ವಲ್ಪ ಬೆಂಕಿ ಮಾಡಿ ಚಳಿ ಕಾಯಿಸಿದೆವು.

 ವಾಪಾಸು ಹೊರಟೆವು. ಸ್ವಲ್ಪ ಮುಂದೆ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಗೂಡಂಗಡಿ! ಅಲ್ಲಿ ಒಬ್ಬ ಮಹಿಳೆ ಚಹಾ ಮಾಡುತಿದ್ದಳು. ಅವಳು ಮೆಣಸಿನಕಾಯಿಯ ಬೋಂಡಾ ಮಾಡುವ ಸಿದ್ದತೆ ನಡೆಸಿದ್ದಳು. ಅವಳೊಡನೆ ಹೇಳಿ ಬೋಂಡಾ ಮಾಡಲು ಹೇಳಿದೆವು. ಬಿಸಿ ಬಿಸಿ ಬೋಂಡಾ ತಯಾರಾಯಿತು. ಅವಳಿಗೆ ಸಹಾಯಕನಾಗಿ ಮುರಳಿ ಕೂಡಾ ಬೋಂಡಾ ಕರಿಯಲು ಸಹಾಯ ಮಾಡಿದ.


 ಒಟ್ಟು 150 ರುಪಾಯಿಯ ವ್ಯಾಪಾರ ಮಾಡಿದೆವು. ಚಹಾ ಕುಡಿದು ಹೊಸ ಹುಮ್ಮಸ್ಸಿನಿಂದ ಕೆಳಗೆ ಇಳಿದೆವು.  ಮುಖ್ಯ ರಸ್ತೆಯಲ್ಲಿ ಸಾಗಿದೆವು. ಇನ್ನು ಬೆಂಗಳೂರಿಗೆ 230 ಕಿ.ಮಿ. ಹೋಗಬೇಕು. ನಮ್ಮ ಗಾಡಿ ಗ್ಯಾಸ್ ನಲ್ಲಿ ಓಡುತಿತ್ತು. ಅದರಲ್ಲಿರುವ ಗ್ಯಾಸ್ ಸಿಲಿಂಡರ್ ಖಾಲಿ ಆಯಿತು. ಈಗ ಪೆಟ್ರೋಲ್ ನಲ್ಲಿ ಓಡಿಸಬೇಕಾಯ್ತು.

 ಮುಂದೆ ಸಿಕ್ಕಿದ ಒಂದು ಊರಲ್ಲಿ ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡುವ ಅಂಗಡಿ ಕಂಡಿತು. ಅಲ್ಲಿಗೆ ಹೋಗಿ ನನ್ನ ತಮಿಳು ಭಾಷಾ ಪ್ರಯೋಗ ಮಾಡಿದೆ. ಅಂತೂ ಇಲ್ಲಿಯೂ ಗೆದ್ದೆವು. ಒಂದು ಫುಲ್ ಸಿಲಿಂಡರ್ ಸಿಕ್ಕಿತು. ಅದನ್ನು ಜೋಡಿಸಿ ಬೆಂಗಳೂರಿಗೆ ತಲುಪಿದೆವು. ರಾತ್ರಿ 8 ಘಂಟೆಗೆ ಮನೆಗೆ ಬಂದೆವು. ರಾತ್ರಿ ಊಟಕ್ಕೆ ಗಂಜಿ ತುಪ್ಪ  ಮತ್ತು ಉಪ್ಪಿನಕಾಯಿ, ಚಟ್ನಿಪುಡಿ. ಗಡದ್ದಾಗಿ ಊಟ ಮಾಡಿ ಬಿದ್ದುಕೊಂಡೆವು. ನಿದ್ದೆಯಲ್ಲಿ ನಮ್ಮ ಪ್ರಯಾಣದ ತುಣುಕುಗಳು ಆಗಾಗ ಕನಸಾಗಿ ಬರುತಿತ್ತು. ಒಂದು ಮರೆಯಲಾರದ ಅನುಭವ.

Friday, 27 December 2019

Chardham Yatra


ಚಾರ್ ಧಾಮ್ ಯಾತ್ರೆ
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಕ್ಷೇತ್ರಗಳು ಎಂದರೆ ಬದರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ. ಇವುಗಳನ್ನೇ ಚಾರ್ ಧಾಮ್ ಎನ್ನುತ್ತಾರೆ. ಇನ್ನೊಂದು ಪಂಗಡದವರ ಪ್ರಕಾರ, ಬದರೀನಾಥ,
ದ್ವಾರಕಾ, ಪುರಿ ಹಾಗೂ ರಾಮೇಶ್ವರಗಳೇ ಚಾರ್ ಧಾಮ್ ಎಂದು ಪರಿಗಣಿಸುತ್ತಾರೆ. ಅದೇನೇ ಇರಲಿ ನಮಗೆ ದೇವರ ದರ್ಶನವಾದರೆ ಸಾಕು.
ನಾವು ಬದರಿ, ಕೇದಾರ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಹೋಗಬೇಕೆಂದು ತೀರ್ಮಾನ ಮಾಡಿದೆವು. ಆದರೆ ಇಲ್ಲಿಗೆ ಯಾವಾಗ ಬೇಕಾದರೂ ಹೋಗುವ ಹಾಗಿಲ್ಲ. ಎಪ್ರಿಲ್- ಮೇ ತಿಂಗಳಿಂದ ಪ್ರಾರಂಭವಾಗಿ ಅಕ್ಟೋಬರ್-ನವಂಬರ್ ತಿಂಗಳವರೆಗೆ ಮಾತ್ರ ಹೋಗಲು ಸಾಧ್ಯ. ಉಳಿದೆಲ್ಲಾ ಮಾಸಗಳಲ್ಲಿ ಈ ಧಾಮಗಳು ದಟ್ಟ ಹಿಮದಿಂದ ಮುಚ್ಚಿರುತ್ತದೆ. ಆ ಕಾಲದಲ್ಲಿ ಅಲ್ಲಿನ ದೇವರುಗಳನ್ನು ಕೆಳಗಿರುವ ದೇವಾಲಯಗಳಲ್ಲಿ ಇರಿಸುತ್ತಾರೆ. ಇಲ್ಲೇ ಅವರಿಗೆ ಪೂಜೆ.
ನಮ್ಮ ಯಾತ್ರೆಯ ಮೊದಲ ಅಂಗವಾಗಿ ಮಾಹಿತಿಗಳನ್ನು ಕಲೆ ಹಾಕಿದೆವು. ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಬೇಕಾದ ಎಲ್ಲಾ ವಿವರಗಳು, ಮುಂಜಾಗ್ರತೆಗಳು, ಮ್ಯಾಪ್ ಗಳು ಹವಾಮಾನ ಎಲ್ಲಾ ಸಂಗತಿಗಳನ್ನು ತಿಳಿದುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡೆವು. ಇನ್ನು ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸಿದೆವು. ಇವರ ದರಗಳಲ್ಲಿ ಬಹಳ ವ್ಯತ್ಯಾಸವಿದೆ. ಕೊನೆಗೊಮ್ಮೆ ಕೆ.ಆರ್. ಮಾರ್ಕೆಟ್ ನಲ್ಲಿರುವ ಸರ್ವೋದಯ ಟ್ರಾವೆಲ್ಸ ನವರ ದರ ನಮಗೆ ಒಪ್ಪಿಗೆಯಾಯಿತು. ಇದರ ಮಾಲಿಕರಾದ ಕುಮಾರ್ ಶಂಕರ್ ಅವರು ನಮ್ಮ ಜೊತೆಯಲ್ಲೇ ಬರುತ್ತಾರೆ ಎಂದು ತಿಳಿದಾಗ ನಮ್ಮ ಎಲ್ಲಾ ಆತಂಕಗಳೂ ದೂರವಾಯಿತು.
ದೆಹಲಿಯವರೆಗೆ ವಿಮಾನ ಪ್ರಯಾಣ ನಂತರ ಎಸಿ ಬಸ್ಸಿನಲ್ಲಿ ಪ್ರಯಾಣ. ಊಟ ವಸತಿ ಎಲ್ಲಾ ಸೇರಿ ಒಟ್ಟು 29 ಸಾವಿರ. 14 ದಿನಗಳ ಯಾತ್ರೆ.ಸೆಪ್ಟೆಂಬರ್ 11 ರಿಂದ 24 ರ ವರೆಗೆ.
ಯಾತ್ರೆ ಹೋಗುವ ಸಂಭ್ರಮದಲ್ಲಿ ನಾವು 14 ಮಂದಿ ಎಲ್ಲಾ ತಯಾರಿ ನಡೆಸಿದ್ದೆವು. ಉಲ್ಲನ್ ಬಟ್ಟೆ, ಕಾಲು ಚೀಲ, ಹೊದಿಕೆ, ಟೋಪಿ ಇತ್ಯಾದಿಗಳು,ಔಷಧಿಗಳು ಮತ್ತು ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇತರೇ ಅಗತ್ಯ ಸಾಮಾನುಗಳು ಎಲ್ಲಾ ಹೊಂದಿಸಿಕೊಂಡೆವು. ಅಂತೂ 11 ತಾರೀಖು ಬಂದೇಬಿಟ್ಟಿತು.ಸಂಜೆ 5 ಗಂಟೆಗೆ ಮನೆಯಿಂದ ಹೊರಟು ವಿಮಾನ ನಿಲ್ದಾಣ ತಲುಪಿದೆವು. ಒಟ್ಟು 54 ಜನ ಯಾತ್ರಿಕರು. ಅಡಿಗೆಯವರು ಎಲ್ಲಾ ಸೇರಿ ದೊಡ್ಡ ಗುಂಪು ಅಲ್ಲಿ ನೆರೆದಿದ್ದರು. ನಮಗೆಲ್ಲಾ ಮಾಹಿತಿಗಳನ್ನು ವಿವರಿಸಲಾಯಿತು. ರಾತ್ರಿಯ ಊಟಕ್ಕೆ ಪಲಾವು ವಿತರಿಸಿದರು. ನಾವು 14 ಜನರಿಗೆ ಸ್ಪೈಸ್ ಜೆಟ್ ವಿಮಾನ, ಉಳಿದವರಿಗೆ ಗೋ ಏರ್ ವಿಮಾನ. ರಾತ್ರಿ 9 ಘಂಟೆಗೆ ವಿಮಾನ ಹೊರಟು 11.30 ಕ್ಕೆ ದೆಹಲಿ ತಲುಪಿತು. ನಮ್ಮ ಬ್ಯಾಗು ಎಲ್ಲಾ ಪಡೆದುಕೊಂಡು ಹೊರ ಬಂದಾಗ ನಮಗಾಗಿ ಒಂದು ಟೆಂಪೊ ಟ್ರಾವೆಲ್ಲರ್ ಕಾದು ನಿಂತಿತ್ತು. ಅದನ್ನು ಏರಿ ರಾತ್ರಿಯಿಡೀ ಪ್ರಯಾಣ ಹರಿದ್ವಾರದೆಡೆಗೆ. 220 ಕಿ.ಮಿ.ಪ್ರಯಾಣ. ದೆಹಲಿಯಿಂದ ಮೀರತ್ ದಾರಿಯಾಗಿ ಮುಝಾಪುರ್ ನಗರ, ರೂರ್ಕಿಯಾಗಿ ಬೆಳಗ್ಗೆ 6 ಘಂಟೆಗೆ ಹರಿದ್ವಾರ ತಲುಪಿದೆವು. ರಾತ್ರಿ ಎಲ್ಲಾ ನಾನು ಚಾಲಕನೊಡನೆ ಹರಟುತ್ತಾ ಇದ್ದೆ. ಅವನ ಹೆಸರು ಯಹೀನ್ ಮಲಿಕ್, ಅನ್ಯ ಮತೀಯನಾದರೂ ನಮ್ಮ ಹಿಂದೂ ದೇವಾಲಯಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾನೆ.
ನಮಗಾಗಿ ಒಂದು ಉತ್ತಮವಾದ ಹೊಟೆಲ್ ಬುಕ್ ಆಗಿತ್ತು.

ಮೂವರಿಗೆ ಒಂದು ರೂಮ್. ಅಲ್ಲಿ ಸ್ವಲ್ಪ ವಿಶ್ರಮಿಸಿದಾಗ ನಮ್ಮ ಉಳಿದ ಸಹ ಯಾತ್ರಿಕರೂ ತಲುಪಿದರು. ಬೆಳಗಿನ ತಿಂಡಿ ಕಾಫಿ ಚೆನ್ನಾಗಿತ್ತು. ಆವಾಗ
ಆಕಾಶದಲ್ಲಿ ಕಾರ್ಮೊಡ ಕವಿಯಿತು. ಗುಡುಗು ಮಿಂಚು ಮತ್ತು ಧಾರಕಾರ ಜಡಿ ಮಳೆ ಸುರಿಯಿತು. ನಮಗೆಲ್ಲ ಆತಂಕ, ನಮ್ಮ ಮುಂದಿನ ಪ್ರಯಾಣ ಏನಾಗುವುದೋ ಎಂದು. ಪುಣ್ಯಕ್ಕೆ ಮುಂದೆ ನಮಗೆಲ್ಲೂ ಮಳೆ ಸಿಗಲೇ ಇಲ್ಲ.
ಆ ಮೇಲೆ ನಾವು ಆಟೋದಲ್ಲಿ ಮನ್ಸಾ ದೇವಿ ಮಂದಿರಕ್ಕೆ ಹೋದೆವು. ಇಲ್ಲಿಗೆ ಹೋಗಲು ರೋಪ್ ವೇ ಯಲ್ಲಿ ಹೋಗಬೇಕು.



 ಬಹಳ ರೋಮಾಂಚಕಾರಿ ಅನುಭವ. ಇಲ್ಲಿಂದ ನಮಗೆ ಹರಿದ್ವಾರದ ಪೂರ್ತಿ ನೋಟ ಕಾಣಸಿಗುತ್ತದೆ. ದೇವರ ದರ್ಶನ ಮಾಡಿ ಕೆಳಗೆ ಬಂದೆವು. ನಂತರ ಚಂಡೀದೇವಿ ಮಂದಿರಕ್ಕೆ ಹೊರಟೆವು. ಇಲ್ಲಿ ಸಹಾ ರೋಪ್ ವೇ ಯಲ್ಲಿ ಹೋಗಬೇಕು.


 ಬಹಳ ಖುಶಿ ಆಯಿತು. ನಂತರ ರೂಮ್ ಗೆ ಬಂದೆವು. ಊಟ ತಯಾರಾಗಿತ್ತು. ತುಸು ವಿಶ್ರಾಮ. ಸಂಜೆ ಎರಡು ಮಂದಿರಗಳನ್ನು ನೋಡಿದೆವು. ಪೂರ್ತಿ ಕನ್ನಡಿಯಿಂದ ಇದನ್ನು ರಚಿಸಿದ್ದಾರೆ.







 ಇಲ್ಲಿರುವ ಎಲ್ಲಾ ದೇವರುಗಳನ್ನು, ಮಂಟಪಗಳನ್ನು ಗಾಜಿನಿಂದ ಬಹಳ ಕಲಾತ್ಮಕವಾಗಿ ಮಾಡಿದ್ದಾರೆ. ಒಂದು ವಿಶೇಷ ಅನುಭವ ಪಡೆದೆವು. ನಂತರ ನಾವು ಗಂಗಾ ಆರತಿ ನೋಡಲು ನದೀ ತಟಕ್ಕೆ ಹೋದೆವು. ಅಲ್ಲಿ ವಿಪರೀತ ಜನ ಜಂಗುಳಿ. ರಾತ್ರಿ 7.20 ಕ್ಕೆ ಗಂಗಾ ಆರತಿ ಪ್ರಾರಂಭ. ಎಲ್ಲೆಲ್ಲೂ ದೀಪಗಳ ವೈಭವ. ಎಲ್ಲರೂ ಗಂಗೆಗೆ ವಂದಿಸಿ ದೀಪವನ್ನು ಹರಿ ಬಿಡುತ್ತಾರೆ. ನಾವು ಸಹಾ ದೀಪಾರ್ಚನೆ ಮಾಡಿದೆವು.



ನೀರಲ್ಲಿ ದೀಪಗಳು ತೇಲುತ್ತಾ ಹೋಗುವುದನ್ನು ನೋಡಲು,ಅದರ ಪ್ರತಿಬಿಂಬಗಳು ನೀರಲ್ಲಿ ಪ್ರತಿಫಲಿಸಿದಾಗ ಕಾಣುವ ಆ ನೋಟವು ಬಹಳ ಚೆನ್ನಾಗಿತ್ತು. ಅಲ್ಲಿನ ಆ ವಾತಾವರಣ ಮನಸ್ಸಲ್ಲಿ ನೆಲೆ ನಿಂತಿದೆ. ಆಟೋ ಹತ್ತಿ ರೂಮ್ ಗೆ ಬಂದೆವು. ರಾತ್ರಿಯೂಟ ಮುಗಿಸಿ ಮಲಗಿದೆವು.
ಮರುದಿನ ಬೆಳಗಿನ ತಿಂಡಿ ಕಾಫಿ ಮುಗಿಸಿ ಋಷಿಕೇಶಕ್ಕೆ ಪ್ರಯಾಣ. ಸುಮಾರು 24 ಕಿ.ಮಿ. ದೂರ. ಇಲ್ಲಿ ನಾವು ಬಯೋಮೆಟ್ರಿಕ್ ಕಾರ್ಡ್ ಮಾಡಿಸಬೇಕಾಗಿತ್ತು. ಅಲ್ಲಿ ಸ್ವಲ್ಪ ಹೊತ್ತು ಸರದಿಯಲ್ಲಿ ನಿಂತು ನಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಎಲ್ಲಾ ಕೊಟ್ಟು ಫೊಟೋ ಹಿಡಿಸಿಕೊಂಡು ನಮ್ಮ ಕಾರ್ಡ್ ಪಡಕೊಂಡೆವು. ಇದು ಛಾರ್ ಧಾಮ್ ಗೆ ಹೋಗಲು ಬೇಕಾದ ರಹದಾರಿ. ಇದು ಇಲ್ಲದೆ ಯಾರೂ ಹೋಗುವ ಹಾಗಿಲ್ಲ. ಎಷ್ಟು ಜನ ಅಲ್ಲಿಗೆ ಹೋಗಿದ್ದಾರೆ, ಬಂದಿದ್ದಾರೆ ಅಲ್ಲಿ ಉಳಿದವರೆಷ್ಟು ಮಂದಿ ಎಂದೆಲ್ಲಾ ವಿವರಗಳು ಸರಕಾರಕ್ಕೆ ತಿಳಿಯುತ್ತದೆ. ಏನಾದರೂ ಅಫಘಾತ ಗಳು ವಿಕೋಪಗಳು ಸಂಭವಿಸಿದರೆ ರಕ್ಷಣಾ ಕಾರ್ಯಕ್ಕೆ ಇದು ಬಹಳ ಸಹಾಯಕ. ನಮ್ಮ ಮೊಮೈಲ್ ನಲ್ಲೂ ಅಗಾಗ ಇಂತಹಾ ಕಡೆ ಭೂ ಕುಸಿತ, ರಸ್ತೆ ತಡೆ ಆಗಿದೆ ಎಂದೆಲ್ಲಾ ಮೆಸ್ಸೇಜುಗಳು ಬರತೊಡಗಿದವು. ಈ ಅಡಚಣೆಗಳು ನಿವಾರಣೆ ಆದ ಕೂಡಲೇ ನಮಗೆ ತಿಳಿಸುತ್ತಲೂ ಇದ್ದರು.ಬಹಳ ಉಪಯುಕ್ತ ವ್ಯವಸ್ಥೆ ಇದು.


ನಾವು ಈಗ ಉತ್ತರಾಖಂಡದಲ್ಲಿದ್ದೇವೆ. ಈ ರಾಜ್ಯವನ್ನು ದೇವ ಭೂಮಿ ಅಂತ ಕರೆಯುತ್ತಾರೆ. ನಿಜಕ್ಕೂ ಇದು ದೇವ ಭೂಮಿಯೇ ಸರಿ ಅಷ್ಟೊಂದು ಧಾಮಗಳು ಪ್ರಯಾಗಗಳು ಮಂದಿರಗಳು ಇಲ್ಲಿವೆ. ಪುಣ್ಯ ಪಾವನ ನದಿಗಳು, ಪರ್ವತಗಳು ಎಲ್ಲಾ ಸೇರಿ ದೇವ ಭೂಮಿ ಎಂಬುದು ಅನ್ವರ್ಥ ನಾಮ. ಇಲ್ಲಿನ ಕಾಡುಗಳು ಕೊಳ್ಳಗಳು ಗಿರಿ ಕಂದರಗಳು ಮಂಜು ಮುಸುಕಿದ ವಾತವರಣ ಸ್ವರ್ಗದಿಂದಲೇ ನೇರ ಕೆಳಗಿಳಿಯುವಂತೆ ತೋರುವ ಜಲಪಾತಗಳು ಎಲ್ಲವೂ ಮನಸೂರೆಗೊಳ್ಳುತ್ತದೆ. ಋಷಿಕೇಶದಿಂದ ನಿಜವಾದ ಹಿಮಾಲಯ ಆರಂಭವಾಗುತ್ತದೆ. ಹಿಮಾಲಯ ಪರ್ವತದ ಪಾದ ಇದು.ಮುಂದೆಲ್ಲಾ ಏರು ದಾರಿ.


Thursday, 26 December 2019

Yamunotri



  1.ಯಮುನೋತ್ರಿ
ನಮ್ಮ ಯಾತ್ರೆಯ ಮೊದಲ ಗಮ್ಯ ಸ್ಥಾನ ಯಮುನೋತ್ರಿ ಧಾಮ. ಋಷಿಕೇಶದಿಂದ ಸುಮಾರು 220 ಕಿ.ಮಿ. ದೂರ ಪಯಣಿಸಬೇಕು. ಇಲ್ಲೆಲ್ಲಾ ಘಂಟೆಗೆ 25 ಕಿ.ಮಿ.ಯಷ್ಟೆ ದೂರ ಸಾಗಬಹುದು. ರಸ್ತೆ ಬಹಳ ಚೆನ್ನಾಗಿತ್ತು. ವಾಹನಗಳೂ ವಿರಳವಾಗಿದ್ದವು. ದಟ್ಟ ಕಾಡಿನ ಮಧ್ಯೆ ಸಾಗುವ ದಾರಿ,


 ಒಂದು ಪಕ್ಕದಲ್ಲಿ ಹರಿಯುವ ನದಿ, ಛುಮು ಛುಮು ಚಳಿ, ಎಲ್ಲೆಡೆ ನೋಡುವಾಗಲೂ ಕಾಣುವ ಪೈನ್ ಮರಗಳು,ಓಕ್ ಮರಗಗಳು, ಬೀಸುವ ಗಾಳಿ, ಮಂಜು ಮುಸುಕಿದ ವಾತಾವರಣ ಮತ್ತು ಆಕಾಶವನ್ನು ಮುಟ್ಟಲೆತ್ನಿಸುವ ಪರ್ವತ ಮಾಲೆ ಎಲ್ಲವೂ ನಮಗೆ ಸ್ವಾಗತ ಕೋರುತ್ತಿದ್ದವು. ಕೆಲವೊಮ್ಮೆ ಆಳವಾದ ಕಡಿದಾದ ಕಣಿವೆ ದಾರಿಯಲ್ಲಿ ಸಾಗುವಾಗ ಜುಂ ಎನ್ನಿಸುತಿತ್ತು. ಅಲ್ಲಲ್ಲಿ ಕಾಣುವ ಜಲಪಾತಗಳು ನಮ್ಮನ್ನು ಮುದಗೊಳಿಸುತಿದ್ದವು. ಆಗ ಒಂದು ನರಿ ರಸ್ತೆ ದಾಟಿ ಕಾಡಿನಲ್ಲಿ ಮಾಯವಾಯಿತು. ಶುಭ ಶಕುನ ಎಂದುಕೊಂಡೆ. ಸಣ್ಣ ಸಣ್ಣ ಹಳ್ಳಿಗಳು ಊರುಗಳನ್ನು ದಾಟಿ ನಾವು ಡೆಹರಾಡೂನ್ ತಲುಪಿದವು.

 ಉತ್ತರಾಖಂಡದ ರಾಜಧಾನಿ ಆಗಿರುವ ಈ ಸೊಗಸಾದ ಸುಂದರ ಊರು ಒಂದು ಸುಖವಾಸ ಕೇಂದ್ರವಾಗಿದೆ. ಇಲ್ಲಿನ ಹಿತಕರ ವಾತಾವರಣ ಬ್ರಿಟಿಷರಿಗೆ ತುಂಬಾ ಹಿಡಿಸಿದ್ದರಿಂದ ಇಲ್ಲಿ ಅವರು ನೆಲಸಿ ಈ ಪ್ರದೇಶವನ್ನು ಅವರು ಬೆಳೆಸಿದರು. ಆಸ್ಪತ್ರೆ, ಶಾಲೆ, ಕಾಲೇಜುಗಳು ಆ ಕಾಲದಲ್ಲೇ ಇಲ್ಲಿ ಹೆಸರುವಾಸಿಯಾಗಿದ್ದವು. ಪ್ರಖ್ಯಾತಿ ಪಡೆದ ಡೂನ್ ಕಾಲೇಜು ಇರುವುದು ಇಲ್ಲೇ. ಅವರ ಕಾಲದಲ್ಲಿ ನಿರ್ಮಿತಿಗೊಂಡ ಮನೆಗಳೂ ಬಂಗ್ಲೆ, ಚರ್ಚು ಇತ್ಯಾದಿಗಳು ಈಗಲೂ ಇವೆ. ಇಲ್ಲಿನ ಡೂನ್ ವ್ಯಾಲಿ ಬಹಳ ಸುಂದರ. ಇಲ್ಲಿಂದ ಮಸ್ಸೂರಿ ಮತ್ತು ಔಲಿಗಳು ಸಮೀಪದಲ್ಲಿವೆ. ಇವೆರಡೂ ಹಿಲ್ ಸ್ಟೇಷನ್ ಆಗಿವೆ.



ನಮ್ಮ ಪಯಣ ಮುಂದುವರೆದು ದರಾಸು ಎಂಬಲ್ಲಿಗೆ ಬಂತು. ಇಲ್ಲಿ ದಾರಿ ಕವಲೊಡೆಯುತ್ತದೆ. ಬಲಕ್ಕೆ ಹೋದರೆ ನೇರ ಗಂಗೋತ್ರಿ ತಲಪಬಹುದು. ಎಡಕ್ಕೆ ತಿರುಗಿದರೆ ಯಮುನೋತ್ರಿ. ನಾವು ಎಡಕ್ಕೆ ತಿರುಗಿದೆವು. ದಾರಿಯಲ್ಲಿ ಸಿಗುವ ಕೆಮ್ಟಿ
ಎಂಬಲ್ಲಿ ಮದ್ಯಾಹ್ನದ ಊಟ. ಒಳ್ಳೆಯ ಜಾಗ. ಒಂದು ಕಡೆ ಬೆಟ್ಟ ಇನ್ನೊಂದೆಡೆ ಪ್ರಪಾತ. ಅದರಲ್ಲಿ ಹರಿಯುವ ನದಿ. ಊಟ ಮುಗಿಸಿ ಹೊರಟೆವು. ಸ್ವಲ್ಪ ದೂರ ಕ್ರಮಿಸಿದಾಗ ನಮಗೆ ಕೆಮ್ಟಿ ಫಾಲ್ಸ್ ದೂರದಲ್ಲಿ ಕಾಣಿಸಿತು. ಹತ್ತಿರದಲ್ಲಿ ಅದನ್ನು ಕಾಣಲಾಗಲಿಲ್ಲ. ನಿರಾಸೆಆಯಿತು. ಆಗ ನಮ್ಮ ಚಾಲಕ ಹೇಳಿದ, ಮುಂದೆ ಇಂತಹ ನೂರು ಫಾಲ್ಸ್ ತೋರಿಸುತ್ತೇನೆ, ನೀವೇನೂ ಬೇಸರಿಸಬೇಡಿ ಎಂದು. ಅವನ ಮಾತು ನಿಜವಾಗಿತ್ತು. ಸುಮಾರು 4 ಘಂಟೆಗೆ ಭರ್ ಕೋಟ್ ಗೆ ತಲುಪಿದೆವು. ಇಂದಿಗೆ ಪ್ರಯಾಣ ನಿಲ್ಲಿಸಿದೆವು. ಕಾಫಿ ತಿಂಡಿ ಆಯಿತು. ಹೊರಗೆ ಅಡ್ಡಾಡಲು ಹೋದೆವು. ಇದೊಂದು ಪುಟ್ಟ ಊರು. 2-3 ಲೋಡ್ಜ್ ಗಳಿದ್ದವು. ಕೆಲ ಅಂಗಡಿಗಳು ಇದ್ದವು. ಮುಖ್ಯ ಊರು ಇನ್ನೂ ಸ್ವಲ್ಪ ದೂರದಲ್ಲಿದೆ. ನಮ್ಮ ಲಾಡ್ಜ್ ನ ಹಿಂಭಾಗದಲ್ಲಿ ಆಳವಾದ ಕಣಿವೆ, ಅದರಲ್ಲಿ ಯಮುನೆ ಹರಿಯುತಿದ್ದಳು, ಅದರಾಚೆ ಮತ್ತೆ ಬೆಟ್ಟ, ಮುಂದುಗಡೆಯೂ ಬೆಟ್ಟ. ಇದನ್ನೆಲ್ಲಾ ನೋಡುತ್ತಿರುವಾಗ ನಮ್ಮ ಚಾರಣ ಹವ್ಯಾಸ ಗರಿಗೆದರಿತು.
 ನಾನು, ಕಸ್ತೂರಿ, ಮುರಳಿ ಮತ್ತು ಶ್ರುತಿ ಚಾರಣಕ್ಕೆ ಹೊರಟೇಬಿಟ್ಟೆವು. ಕೆಳಗೆ ಹರಿಯುತ್ತಿರುವ ನದಿಗೆ ಹೋಗಿ ಸ್ನಾನ ಮಾಡಿ ಬರುವಾ ಎಂದು ಕೆಳಗೆ ಇಳಿದೆವು. ಕೆಲವು ಮನೆಯ ಅಂಗಳ ದಾಟಿ ಮುಂದೆ ಹೋಗುವಾಗ ಕೆಲ ಹುಡುಗರು ಸಿಕ್ಕಿದರು, ಅವರೊಡನೆ ಮಾತಾಡಿದಾಗ, ನೀವು ಅಲ್ಲಿಗೆ ಹೊಗುವುದೇ ಬೇಡ, ಅಲ್ಲಿ ತುಂಬಾ ಹಾವುಗಳಿವೆ, ಅಪಾಯ ಜಾಗ ಎಂದು ನಮ್ಮನ್ನು ಎಚ್ಚರಿಸಿದರು. ಆದರೂ ನಾವು ಅವರ ಮಾತಿಗೆ ಕಿವಿಗೊಡದೆ ಮುಂದುವರಿದೆವು. ಹೊಲಗಳ ಬದುವಿನಲ್ಲಿ ಸಾಗಿ ಹೋಗುತ್ತಿರುವಾಗ, ಹಾಲಿನ ಡಬ್ಬಾ ಹಿಡಿದುಕೊಂಡು ಒಬ್ಬಾಕೆ ಬರುತಿದ್ದಳು. ನಮ್ಮನ್ನು ನಿಲ್ಲಿಸಿ, ಅಣ್ಣಾ ಎಲ್ಲಿಗೆ ಹೋಗುವಿರಿ? ಯಾಕೆ? ಅಲ್ಲೆಲ್ಲಾ ಬಹಳ ಹಾವುಗಳಿವೆ, ನೀವು ಅಲ್ಲಿಗೆ ಹೋಗಲೇ ಬೇಡಿ ಎಂದು ನಮ್ಮನ್ನು ತಡೆದಳು. ಈವಾಗ ನಮಗೂ ಭಯ ಆಯಿತು. ನಿಜಕ್ಕೂ ಇಲ್ಲಿ ಹಾವುಗಳಿರಬೇಕು, ಇವುಗಳಿಂದ ಕಡಿಸಿಕೊಳ್ಳುವುದು ಬೇಡ ಎಂದು ವಾಪಾಸಾದೆವು. ಹಿಂದೆ ದ್ವಾಪರಾ ಯುಗದಲ್ಲಿ ಶ್ರೀಕೄಷ್ಣನು ಕಾಳಿಂಗ ಮರ್ಧನ ಮಾಡಿದ್ದು ಇದೇ ನದಿಯಲ್ಲಿ ಅಲ್ಲವೇ? ಆ ಕಾಳೀಯನ ವಂಶದವರೆಲ್ಲಾ ನದಿಯಲ್ಲಿ ಹರಿದಾಡುತ್ತಾ ಇಲ್ಲಿ ಬಂದು ಬೀಡು ಬಿಟ್ಟಿರಬೇಕು ಎಂದುಕೊಂಡೆವು. ಮರಳಿ ರೂಮ್ ಗೆ ಬಂದು ಬಿದ್ದುಕೊಂಡೆವು. ರಾತ್ರಿ ಊಟ ಆಯಿತು. ನಾಳೆ ಬೆಳಗ್ಗೆ ಬೇಗನೆ ಹೋಗಲಿಕ್ಕಿದೆ ಬೇಗ ನಿದ್ದೆ ಮಾಡಿ ಎಂತ ಕುಮಾರ್ ಅವರ ಸಲಹೆ.
ಬೆಳಗ್ಗೆ ಬೇಗ ಎದ್ದು ಬೆಡ್ ಕಾಫಿ ಕುಡಿದು ಹೊರಟೆವು. ಈಗ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಬಹಳ ಏರು ದಾರಿ ತಿರುವುಗಳೂ, ಕಣಿವೆ-ಕಂದರಗಳೂ ಒಡಗೂಡಿದ ಪರ್ವತ ಪ್ರದೇಶ.



 ಜಾನಕಿ ಚಟ್ಟಿ ದಾಟಿ ಮುಂದೆ ಹನುಮಾನ್ ಚಟ್ಟಿ ತಲುಪಿದಾಗ ಅಲ್ಲಿ ನಮ್ಮ ಗಾಡಿ ನಿಂತಿತು. ಎಲ್ಲರೂ ಇಳಿದೆವು.

 ಇಲ್ಲಿಂದ ಮುಂದೆ ಯಮುನೋತ್ರಿ, ಪರ್ವತ ಏರಬೇಕು. ಕುದುರೆ, ಡೋಲಿ ಅಥವಾ ನಡೆದುಕೊಂಡು ಹೋಗಬಹುದು. ಕೆಲವರು ಕುದುರೆ ಏರಿದರು. ಡೋಲಿಯಲ್ಲಿ ಸಾಗಿದರು. ನಾವು ಸ್ವಲ್ಪ ಮಂದಿ ನಡೆದೇ ಹೋಗೋಣ ಎಂಬ ಹುಮ್ಮಸ್ಸಿನಿಂದ ನಾವು 6 ಜನ ನಡೆಯಲು ಪ್ರಾರಂಭಿಸಿದೆವು.



 ಒಟ್ಟು 6 ಕಿ.ಮಿ. ಸಾಗಬೇಕು. ಸರಿ ಸುಮಾರು  45 ರಿಂದ 50 ಡಿಗ್ರಿಯ ಕೋನದ ಏರು. ನಾನು 1 ಕಿ.ಮಿ. ಹತ್ತಿದೆ. ಏದುಸಿರು ಬಂತು. ನನ್ನಿಂದಾಗದು ಎಂದು ಕುದುರೆಯ ಮೊರೆ ಹೋದೆ. ಹತ್ತಲು ಮಾತ್ರ ಸಾಕು ಅಂತ ಚೌಕಾಶಿ ಮಾಡಿ 600 ರೂಗೆ ಒಪ್ಪಿಸಿದೆ. ಜೀವನದಲ್ಲಿ ಪ್ರಥಮ ಬಾರಿಗೆ ಅಶ್ವಾರೂಢನಾದೆ. ನನ್ನ ಕುದುರೆಯ ಪಾಲಕ ಅದನ್ನು ಎಳೆದುಕೊಂಡು ಮುಂದೆ ನಡೆಸುತಿದ್ದ. ಅವನಿಗೆ ನಾನು ಎರಡನೆಯ ಸವಾರಿ. ಹಾಗಾಗಿ ಅವನಿಗೆ ಖುಶಿಯೊ ಖುಶಿ. ಅವನ ಗೆಳೆಯರೆಲ್ಲಾ ಅವನನ್ನು ಅಸೂಯೆಯಿಂದ ನೋಡುತಿದ್ದರು. ಕುದುರೆ ಒಮ್ಮೆ ಬೆಟ್ಟಕ್ಕೆ ತಾಗಿಕೊಂಡು ಹೋದರೆ ಮಗದೊಮ್ಮೆ ಪ್ರಪಾತದ ಅಂಚಿನಲ್ಲಿ ಹೋಗುತಿತ್ತು. ಕೆಳಗಿನಿಂದ ಹತ್ತುವವರೂ ಮೇಲಿಂದ ಇಳಿಯುವವರೂ ಡೋಲಿಯಲ್ಲಿ ಸಾಗುವವರೂ ಕುದುರೆ ಪ್ರಯಾಣದವರೂ ಕಾಲ್ನಡೆಯವರೂ ಎಲ್ಲಾ ಸೇರಿ ಗಜಿ ಬಿಜಿ. ಕೆಲವೆಡೆ ಬಂಡೆಗಳು ಹೊರ ಚಾಚಿ ತಲೆಗೆ ಬಡಿಯುವಂತಿದ್ದವು. ಕುದುರೆಯವನು ನನ್ನನ್ನು ಎಚ್ಚರಿಸುತಿದ್ದ. ಅಲ್ಲಲ್ಲಿ ಮೇಲಿಂದ ಜಿನುಗುವ ಶುದ್ಧ ನೀರ ದಾರೆ. ಬಲಗಡೆಯ ಪ್ರಪಾತದಲ್ಲಿ ಹರಿಯುವ ಯಮುನಾ ನದಿ, ಅದಕ್ಕೆ ಧುಮ್ಮಿಕ್ಕುವ ಜಲಪಾತಗಳು, ಎಲ್ಲಾ ಮೇಳೈಸಿ ಮರೆಯಲಾಗದ ಅನುಭವ ಪಡೆದೆ.




 ಅಷ್ಟರಲ್ಲಿ ನನ್ನ ನಾದಿನಿ ವೀಣಾ ಡೋಲಿಯಲ್ಲಿ ಮುಂದೆ ಹೋದಳು. ಒಬ್ಬನೇ ಹೊರುವ ಬುಟ್ಟಿಯಾಕರದ ಡೋಲಿ. ನನ್ನ ಭಾವ ಮುರಳಿಯ ಕುದುರೆ ನನ್ನನ್ನು ದಾಟಿ ಹೋಯಿತು. ನಾವು ಕಾಫಿ ಕುಡಿಯಲು ಒಂದೆಡೆ ನಿಂತೆವು. ಕುದುರೆಗೆ ರೆಸ್ಟ್. ಅಲ್ಲಿಂದ ಹೊರಡುವಾಗ ಶೋಭ ಅಲ್ಲಿಗೆ ತಲುಪಿದ್ದಳು. ಅವಳೂ ಕುದುರೆ ಏರಿ ಬಂದಿದ್ದಳು. ನಾನು ಮತ್ತೆ ಮುಂದುವರೆದೆ. ಇನ್ನೂ 2 ಕಿ.ಮಿ. ಹೋಗಬೇಕು. ಅಲ್ಲಿ ಒಂದು ಸೇತುವೆ ಎದುರಾಯಿತು. ಅದರ ಆಕಡೆಯಿಂದ ಬರುತ್ತಿರುವ ಕುದುರೆಯಿಂದ ಒಬ್ಬರು ಹಿರಿಯ ಮಹಿಳೆ ಆಯ ತಪ್ಪಿ ಕೆಳಕ್ಕೆ ಬಿದ್ದರು. ಪುಣ್ಯಕ್ಕೆ ಅಲ್ಲೇ ಇದ್ದ ಪೊಲೀಸ್ ಒಬ್ಬ ಛಕ್ಕನೆ ಅವರನ್ನು ಸಂಭಾಳಿಸಿ ನಿಲ್ಲಿಸಿದನು. ಕುದುರೆಯ ಪಾಲಕನಿಗೆ ಎರಡೇಟೂ ಬಿಗಿದ. ಕೊನೆಗೂ ನಾನು ಯಮುನೋತ್ರಿ ತಲುಪಿದೆ. ಅಲ್ಲಿ ಸ್ವಲ್ಪ ವಿಶ್ರಾಂತಿ. ನಡೆದು ಬರುವವರೂ ತಲುಪಿದರು. ಎಲ್ಲರೂ ಒಟ್ಟಿಗೆ ಮುಂದೆ ಸಾಗಿ ಇನ್ನೊಂದು ಸೇತುವೆ ದಾಟಿ ಯಮುನೋತ್ರಿ ಧಾಮಕ್ಕೆ ತಲುಪಿದೆವು.



 ಅಲ್ಲಿ ಬಿಸಿ ನೀರ ಕುಂಡವಿದೆ. ಸುಮಾರು 15ಅಡಿಗಳ ಚಚ್ಚೌಕದ ಕೊಳ.ಎದೆಮಟ್ಟದ ಬಿಸಿ ನೀರು, ಮಹಿಳೆಯರಿಗೆ ಬೇರೆ ಕೊಳವಿದೆ. ಇದರಲ್ಲಿ ಬಹಳ ಹೊತ್ತು ಮಿಂದೆವು. ಆಯಾಸ ಎಲ್ಲಾ ಮಾಯ. ಅಲ್ಲಿ ನಾವು ಪೂಜೆ ಮಾಡಿಸಿದೆವು. ಇನ್ನೂ ಮೇಲೆ ಇನ್ನೊಂದು ಕುಂಡವಿದೆ. ಇದು ಸೂರ್ಯ ಕುಂಡ. ಇದರ ನೀರು ಎಷ್ಟು ಬಿಸಿಯೆಂದರೆ ಇದರಲ್ಲಿ ಬಟ್ಟೆಯಲ್ಲಿ ಕಟ್ಟಿದ ಅಕ್ಕಿಯನ್ನು ಮುಳುಗಿಸಿದರೆ ಅನ್ನವಾಗುತ್ತದೆ. ಇದನ್ನು ಅಲ್ಲಿ ಯಮುನಾದೇವಿಗೆ ಅರ್ಚನೆ ಮಾಡಿ ನಮಗೆ ವಾಪಾಸ್ ಕೊಡುತ್ತಾರೆ. ಇದು ಪ್ರಸಾದ. ಅಲ್ಲೆಲ್ಲಾ ಫೊಟೋ ಹಿಡಿದುಕೊಂಡೆವು.




ಯಮುನಾದೇವಿಯ ಮಂದಿರವು 18ನೇ ಶತಮಾನದಲ್ಲಿ ರಾಜಾ ಅಮರ್ ಸಿಂಗ್ ಥಾಪಾ ಕಟ್ಟಿಸಿದನೆಂದು ಹೇಳುತ್ತಾರೆ. ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಯಮುನಾ, ಸೂರ್ಯನ ಪುತ್ರಿ, ಯಮಧರ್ಮನ ಸಹೋದರಿ. ಈ ಮಂದಿರದ ಎದುರುಗಡೆಯೇ ಯಯುನೆ ಹರಿಯುತಿದ್ದಾಳೆ. ಇವಳ ಉಗಮ ಸ್ಠಾನ ಇಲ್ಲಿಂದ ಸುಮಾರು 14 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಹೋಗಲು ಬಹಳ ದುರ್ಗಮವಾದ ಕಾಡಿನ ದಾರಿ. ಚಾರಣಿಗರಿಗೆ ಮಾತ್ರ ಹೋಗಲು ಸಾಧ್ಯ.
ಇನ್ನು ಇಲ್ಲಿಂದ ಹೊರಡುವ ವೇಳೆಯಾಯಿತು. ನಮ್ಮನ್ನು ಕರೆತಂದ ಕುದುರೆಯವರೂ ಡೋಲಿಯವರೂ ನಮಗಾಗಿ ಕಾದಿದ್ದರು. ಅಷ್ಟೆಲ್ಲಾ ಜನ ಜಂಗುಳಿ ಇದ್ದರೂ ಅವರು ನಮ್ಮನ್ನು ತಪ್ಪದೇ ಗುರುತಿಟ್ಟುಕೊಂಡು ಬರುತ್ತಾರೆ. ಬಹಳ ನಿಯತ್ತಿನವರು. ಕಷ್ಟಜೀವಿಗಳು. ದಿನಕ್ಕೆ 12 ರಿಂದ 24 ಕಿ.ಮಿ ಹತ್ತಿ ಇಳಿದು ಬರುವುದೆಂದರೆ ಸಾಮಾನ್ಯವೇ? ನಾನು ಕೆಳಗೆ ತಲುಪಿದೆ. ಕುದುರೆಯ ಪಾಲಕ ರಾಜು ಗೆ ಮತ್ತು ಅವನ ಕುದುರೆಗೆ ಕೂಲಿ ಮತ್ತು ಭಕ್ಷೀಸು ಕೊಟ್ಟು ಬಂದೆ. ಕೆಳಗೆ ನಮ್ಮ ಅಡಿಗೆಯವರು ಊಟ ಬಡಿಸಿದರು. ಉಳಿದವರಿಗಾಗಿ ಕಾದೆವು. ಮುಂದೆ ನಮ್ಮ ಪ್ರಯಾಣ ಗಂಗೋತ್ರಿ ಧಾಮಕ್ಕೆ.