Tuesday, 28 June 2011

Madurai

ಈಸಲ ನಾವು ತಮಿಳುನಾಡಿನ ಮದುರೈಗೆ ಹೋಗಿದ್ದೆವು. ಬಹಳ ದಿನಗಳಿಂದ ಮದುರೈ ನೋಡಬೇಕೆಂಬುದು ನನ್ನಾಕೆಯ ಆಶಯವಾಗಿತ್ತು. ನಾನಾದರೋ ಹಲವಾರು ಸಲ ಅಲ್ಲಿಗೆ ಹೋಗಿದ್ದೆ. ರೈಲ್ವೆ ರಿಸರ್ವೇಶನ್ ಮಾಡಿಸಿದೆ. ಮಾರ್ಚ್ ತಿಂಗಳ 8ನೇ ತಾರೀಕು ರಾತ್ರಿ 9.20ಕ್ಕೆ ಹೊರಡುವ ಟ್ಯೂಟಿಕೊರಿನ್ ಎಕ್ಸ್ ಪ್ರೆಸ್ ನಲ್ಲಿ ನಮ್ಮ ಯಾತ್ರೆ ಪ್ರಾರಂಭವಾಯಿತು.
ಹೋಗುವಾಗಲೇ ರೈಲಿನಲ್ಲಿ ನಮ್ಮೂರವರೇ ಆದ ಮಹನೀಯರ ಪರಿಚಯವಾಯಿತು. ಅವರು ತ್ರಿಚೆಂದೂರ್ ದೇವಾಲಯದ ಅರ್ಚಕರು. ನಮ್ಮನ್ನು ಅಲ್ಲಿಗೂ ಬರಲು ಆಮಂತ್ರಿಸಿದರು.
ಸ್ವಲ್ಪ ಹೊತ್ತಿನಲ್ಲೇ ತೂಕಡಿಕೆ ಶುರುವಾಯಿತು. ಬೇಗನೇ ಒಳ್ಳೆಯ ನಿದ್ರೆ ಬಂತು.  ಮುಂಜಾನೆ 6 ಘಂಟೆಗೇ ಎಚ್ಚರವಾಯಿತು. ರೈಲಿನ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು  ನೋಡುತ್ತಾ ಇದ್ದಂತೆ ಸೂರ್ಯೊದಯದ ಸೊಬಗನ್ನು ಸವಿದೆವು.
 7.20ಕ್ಕೆ ಸರಿಯಾಗಿ ಮದುರೈಗೆ ತಲುಪಿದೆವು. ಒಂದು ಆಟೋ ಹಿಡಿದು ಮೀನಾಕ್ಷಿ ದೇವಾಲಯದ ಸಮೀಪವೇ ಇರುವ ಹೋಟೆಲ್ ನಲ್ಲಿ ಉಳಕೊಂಡೆವು. ಸ್ನಾನಾದಿಗಳನ್ನು ಪೂರೈಸಿಕೊಂಡು ಉಪಹಾರ ಮುಗಿಸಿ ದೇವಾಲಯ ನೋಡಲು ಹೊರಟೆವು.
ಮದುರೈ ಪಟ್ಟಣವು ವೈಗೈ ನದಿಯ ದಂಡೆಯಲ್ಲಿದೆ. ಬಹಳ ಪುರಾತನ ನಗರವಾಗಿದ್ದು ದೇವಾಲಯಗಳ ನಗರ ಎಂದೇ ಪ್ರಸಿದ್ಧವಾಗಿದೆ. ಪಾಂಡ್ಯ ರಾಜರ ರಾಜಧಾನಿಯಾಗಿದ್ದು ನಂತರ ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರ ಅಧೀನದಲ್ಲಿದ್ದು ಮತ್ತೆ ಬಂದ ನಾಯಕರ ಆಡಳಿತದಲ್ಲಿತ್ತು. ತರುವಾಯ ಬ್ರಿಟಿಷರು ಬಂದರು. ಹೀಗಾಗಿ ಇಲ್ಲಿ ತುಂಬಾ ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು ಇವೆ. ಮದುರೈ ಪಟ್ಟಣವು ಸುಮಾರು 50 ಚದರ ಕಿ.ಮಿ. ವಿಸ್ತಾರವಾಗಿದ್ದು ತಮಿಳುನಾಡಿನ ಮೂರನೆಯ ದೊಡ್ಡ ನಗರವಾಗಿದೆ.
ಮದುರೈ ಮೀನಾಕ್ಷಿ ದೇವಾಲಯ ಸಂಕೀರ್ಣವು ಸುಮಾರು 45 ಎಕರೆಯಷ್ಟು ವಿಸ್ತಾರವಾಗಿದೆ. ಇಲ್ಲಿನ ಮುಖ್ಯ ದೇವಾಲಯವು ಶಿವನಿಗೆ ಮೀಸಲು. ಇಲ್ಲಿ ಪರಮೇಶ್ವರನನ್ನು ಸುಂದರೇಶ್ವರ ಎಂದು ಹೆಸರಿಸಿದ್ದಾರೆ. ಅದರ ಪಕ್ಕದಲ್ಲೇ ಪಾರ್ವತಿ ದೇವಾಲಯವಿದೆ. ಇಲ್ಲಿ ಪಾರ್ವತಿಯನ್ನು ಮೀನಾಕ್ಷಿ ಎಂದು ಕರೆಯುತ್ತಾರೆ. ದೇವಸ್ಥಾನಕ್ಕೆ ಓಟ್ಟು 12 ಬೃಹತ್ತಾದ ಗೋಪುರಗಳಿದ್ದು, ಮದುರೈ ಶೈಲಿಯ ಗೋಪುರಗಳು ಎಂದೇ ಪ್ರಖ್ಯಾತಿ ಹೊಂದಿದೆ. ಬಹಳ ದೂರದಿಂದಲೇ ಈ ಗೋಪುರಗಳನ್ನು ಕಾಣಬಹುದು. ಇವುಗಳಲ್ಲಿ ಅತೀ ಎತ್ತರದ ಗೋಪುರವೆಂದರೆ ದಕ್ಷಿಣಕ್ಕಿರುವ ಗೋಪುರ.
 ಇದರ ಎತ್ತರ ಸುಮಾರು 170 ಅಡಿಗಳು! ಅತೀ ಎತ್ತರದ ಗೋಪುರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಇವುಗಳ ಮೇಲೆಲ್ಲಾ ಅಸಂಖ್ಯಾತ ಮೂರ್ತಿಗಳು. ಎಲ್ಲಕ್ಕೂ ಬೇರೆ ಬೇರೆ ಬಣ್ಣ ಹಚ್ಚಿದ್ದಾರೆ. ಪುರಾಣ ಕಥೆಗಳನ್ನು ಆಧರಿಸಿದ ಈ ಮೂರ್ತಿಗಳು ಆಕರ್ಷಕವಾಗಿವೆ. ಎಲ್ಲಾ ದೇವಾನುದೇವತೆಗಳು, ಋಷಿ ಮುನಿಗಳು, ದೇವಗಣಗಳು, ಅವರ ವಾಹನಗಳಾದ ಪ್ರಾಣಿಗಳು, ಪಕ್ಷಿಗಳು, ರಾಕ್ಷಸರು, ಭಕ್ತ ಮಾನವರು ಎಲ್ಲಾ ಕಾಣಬಹುದು.
 ಯಾವುದನ್ನು ನೋಡುವುದು ಯಾವುದನ್ನು  ಬಿಡುವುದು ಎಂಬ ಗೊಂದಲಕ್ಕೊಳಗಾಗುತ್ತೇವೆ. ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಮೇಲ್ಗಡೆ ನೋಡಿದ ಪರಿಣಾಮವಾಗಿ ಕತ್ತು ನೋಯುತ್ತದೆ. ಹೊರಗಿನ 6 ಗೋಪುರವನ್ನು ಒಳಗೊಂಡು ಬಹಳ ಎತ್ತರವಾದ ಪ್ರಾಕಾರವಿದೆ. ಅದನ್ನು ಏರಿ ಬರಲು ಸುಲಭ ಸಾಧ್ಯವಿಲ್ಲ. ಗೋಪುರದ ಮೂಲಕ ಪ್ರವೇಶಿಸಿದರೆ ದೊಡ್ಡ ರಾಜಾಂಗಣ ಸಿಗುತ್ತದೆ. ಇದರಲ್ಲಿ ಒಂದು ಸುತ್ತು ಬರಬೇಕಾದರೆ ನಾವು ತುಂಬಾ ನಡೆಯಬೇಕಾಗುತ್ತದೆ. ರಾಜಾಂಗಣದ ಒಳ ಪ್ರಾಕರವೂ ಬಹಳ ಎತ್ತರವಾಗಿದ್ದು ಇಲ್ಲಿಯೂ 6 ಗೋಪುರಗಳಿವೆ. ನಾವು ಒಳಗೆ ಪ್ರವೇಶ ಮಾಡುವಾಗ ಯಾವ ದಿಕ್ಕಿನ ಗೋಪುರವೆಂದು ನೆನಪಿಟ್ಟುಕೊಳ್ಳಬೇಕು. ಇಲ್ಲವಾದರೆ ನಮಗೆ ದಾರಿ ತಪ್ಪಿ ಇನ್ನ್ಯಾವುದೋ ಗೋಪುರದಿಂದ ಹೊರ ಬಂದರೆ ನಮ್ಮ ಚಪ್ಪಲಿ ಇಟ್ಟಿರುವ ಜಾಗಕ್ಕೆ ಬರಲು ಪರದಾಡಬೇಕಾಗುತ್ತದೆ. ಎಲ್ಲಾ ಗೋಪುರಗಳೂ ಒಂದೇ ತೆರನಾಗಿದ್ದು 6 ಗೋಪುರಗಳನ್ನು ಹೊಂದಿರುವ ಕಾರಣ ದಿಕ್ಕು ತಪ್ಪಿ ಹೋಗುವ ಸಂಭವ ಹೆಚ್ಚು.
 ಒಳ ಪ್ರಾಕಾರದ ಗೋಡೆಯಲ್ಲಿ ಒಂದು ಕಡೆ ಪುಟ್ಟದಾದ ಒಂದು ಕಿಂಡಿಯಿದ್ದು ರಾಜಾಂಗಣದಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ನಿಂತು ಆ ಕಂಡಿಯಿಂದ ನೋಡಿದರೆ ಮಾತ್ರ ನಮಗೆ ಮೀನಾಕ್ಷಿ ಅಮ್ಮನವರ ದೇವಾಲಯದ ಸುವರ್ಣ ಗೋಪುರವನ್ನು ನೋಡಲು ಸಾಧ್ಯ! ಬೇರೆ ಎಲ್ಲಿಂದಲೂ ಇದನ್ನು ನೋಡಲು ಸಾಧ್ಯವಿಲ್ಲ!
ರಾಜಾಂಗಣದಿಂದ ಒಳ ಹೊಕ್ಕರೆ ಒಂದು ಪಕ್ಕದಲ್ಲಿ ವಿಶಾಲವಾದ ಕಲ್ಯಾಣಿ ಇದೆ.
 ಆದರೆ ನಾವು ಹೋದಾಗ ಅದರಲ್ಲಿ ನೀರೇ ಇರಲಿಲ್ಲ. ( ಹಿಂದೊಮ್ಮೆ ನಾನು ನೋಡಿದ್ದಾಗ ತುಂಬಾ ನೀರಿತ್ತು) ಬದಲಾಗಿ ಅದರಲ್ಲಿ ಅಲ್ಲಲ್ಲಿ ಹುಲ್ಲು ಹಾಗೂ ಹೂ ಗಿಡಗಳನ್ನು ಬೆಳೆಸಿದ್ದರು. ಮದ್ಯದಲ್ಲಿ ಒಂದು ಸುವರ್ಣ ಕಮಲವನ್ನೂ ಇರಿಸಿದ್ದಾರೆ. ಬಹುಷಃ ಮಳೆ ಬಂದಾಗ ನೀರು ತುಂಬಿಕೊಳ್ಳಬಹುದು. ಕಲ್ಯಾಣಿಯ ಪಕ್ಕದಲ್ಲಿ ಮುಂದೆ ಸಾಗಿದರೆ ಸುಂದರೇಶ್ವರನ ಆಲಯ ಸಿಗುತ್ತದೆ. ಇಲ್ಲೆಲ್ಲಾ ಸುಂದರ ಕೆತ್ತನೆಗಳಿರುವ ಸ್ಥಂಭಗಳಿವೆ.
 ಎದುರುಗಡೆಯಲ್ಲಿ ಭದ್ರಕಾಳಿ ಮತ್ತು ಊರ್ಧ್ವ ತಾಂಡವ ಮೂರ್ತಿಗಳಿವೆ. ಮಧ್ಯದಲ್ಲಿ ನಂದಿ ಮಂಟಪವಂತೂ ಬಹಳ ಕೆತ್ತನೆ ಕೆಲಸದಿಂದ ಕೂಡಿದ ಸ್ಥಂಭಗಳಿಂದ ಆಕರ್ಷಣೀಯವಾಗಿದೆ. ಮಧ್ಯೆ ನಂದಿಯಿದೆ. ಮಹಾದ್ವಾರದ ಎರಡೂ ಪಕ್ಕದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ. ಮತ್ತೊಂದೆಡೆ ನವಗ್ರಹಗಳಿವೆ. ಸ್ವರ್ಣ ದ್ವಜ ಸ್ಥಂಭವಿದೆ. ಮೇಲ್ಗಡೆ ಆಕರ್ಷಕವಾಗಿ ರಂಗೋಲಿ ಹಾಕಿದಂತೆ ಪೇಯಿಂಟ್ ಮಾಡಿದ್ದಾರೆ.
 ಮದುರೈಗೆ ಬಹಳಷ್ಟು ವಿದೇಶೀಯರು ಬರುತ್ತಾರೆ. ಹೆಚ್ಚಿನ ವಿದೇಶೀ ಮಹಿಳೆಯರು ನಮ್ಮ ಭಾರತೀಯ ಉಡುಗೆ ತೊಟ್ಟು ಹಣೆಗೆ ತಿಲಕವಿಟ್ಟು ಹೂ ಮುಡಿದು ಅಪ್ಪಟ ಭಾರತೀಯರಂತೆ ಬರುತ್ತಾರೆ. ಕೈಯಲ್ಲಿ ಬೆಲೆಬಾಳುವ ಅತ್ಯಾಧುನಿಕ ಕ್ಯಾಮರಾ ಹಿಡಿದುಕೊಂಡು ಎಲ್ಲವನ್ನೂ ಬಹಳ ಕುತೂಹಲದಿಂದ ಫೋಟೋ ಹಿಡಿಯುತ್ತಾರೆ. ಇವರಿಗೆಲ್ಲಾ ಇಲ್ಲಿಯವರೆಗೆ ಮಾತ್ರ ಪ್ರವೇಶ, ಮುಂದೆ ಒಳಗಡೆ ಹೋಗುವಂತಿಲ್ಲ. ಒಳಗಡೆ ಯಾರಿಗೂ ಫೋಟೋ ತೆಗೆಯಲು ಅವಕಾಶವಿಲ್ಲ. ನಮ್ಮ ಕ್ಯಾಮರಾ ಬ್ಯಾಗು ಸೇರಿತು. ನಾವು ಆಲಯದ ಹೊರ ಸುತ್ತಿನಲ್ಲಿ ಒಂದು ಪ್ರದಕ್ಷಿಣೆ ಹಾಕಿ, ಒಳಗಡೆ ಹೋದೆವು. ಒಳಹೊಗುತಿದ್ದಂತೆ ಬಲ ಪಕ್ಕಕ್ಕೆ ನಟರಾಜನ ರಜತ ಮೂರ್ತಿಯಿದೆ, ಬಹಳ ಸುಂದರವಾಗಿದೆ. ಎದುರುಗಡೆ ಸುಂದರೆಶ್ವರನ ಲಿಂಗವಿದೆ. ಅಲ್ಲಿ ನಾವು ಶಿವಲಿಂಗಕ್ಕೆ ನಮಿಸಿ ದರ್ಶನ ಪಡೆದೆವು. ಜನಜಂಗುಳಿಯಿಲ್ಲವಾದ್ದರಿಂದ ಬಹಳ ಆರಾಮವಾಗಿ ದೇವರನ್ನು ಕಾಣುವಂತಾಯಿತು. ಪ್ರಸಾದ ಸ್ವೀಕರಿಸಿಕೊಂಡು ಹೊರಬಂದೆವು.
ಪಕ್ಕದಲ್ಲಿ ಮೀನಾಕ್ಷಿ ಅಮ್ಮನವರ ಆಲಯ. ಒಳಗಡೆ ಹೋಗುತಿದ್ದಂತೆ ಎದುರುಗಡೆ ಎತ್ತರದಲ್ಲಿ ಮೀನಾಕ್ಷಿ ದೇವಾಲಯ. ಸುತ್ತಲೂ ಸ್ಥಂಭಗಳಿಂದ ಅಲಂಕೃತವಾದ ಸುತ್ತಂಬಲವಿದೆ. ಇದರಲ್ಲಿ ಪ್ರದಕ್ಷಿಣೆ ಮಾಡಿ ಒಳಗೆ ಹೋದೆವು. ದೇವಿಯ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ವಾತಾನುಕೂಲಿಯೂ ಇದೆ. ಇಲ್ಲಿಯೂ ನಾವು ಸರದಿಯಲ್ಲಿ ನಿಂತುಕೊಂಡು ಮೀನಾಕ್ಷಿ ಅಮ್ಮನವರ ದರ್ಶನ ಮಾಡಿದೆವು. ಬಹಳ ಸುಂದರ ವಿಗ್ರಹ. ಕೈಯಲ್ಲಿ ಹಸಿರು ಗಿಣಿಯನ್ನು ಹಿಡಿದಿರುವುದು ಇಲ್ಲಿಯ ವೈಶಿಷ್ಟ್ಯ. ದೇವಿಯ ಅರ್ಚನೆಯ ಸುಗಂಧಭರಿತ ಕುಂಕುಮ ಪ್ರಸಾದ ಪಡೆದುಕೊಂಡು ಸ್ವಲ್ಪಹೊತ್ತು ಕುಳಿತುಕೊಂಡು ಪ್ರಾರ್ಥಿಸಿಕೊಂಡೆವು. ಸುತ್ತಲೂ ಆಳ್ವಾರ್ ಗಳ ಮೂರ್ತಿಗಳಿವೆ. ಪರಿವಾರ ದೇವರ ಗುಡಿಗಳಿವೆ. ಇಲ್ಲಿ ಒಂದು ಬಹಳ ಸುಂದರವಾದ ಬೃಹತ್ ವಿನಾಯಕನ ಮೂರ್ತಿಯಿದೆ. ಇದರ ಕೆತ್ತನೆಯಂತೂ ಕಣ್ಮನ ಸೆಳೆಯುತ್ತದೆ.

ಹಾಗೇನೆ ಸುತ್ತಾಡಿಕೊಂಡು ಹೊರಬಂದಾಗ ನಮಗೆ ಟೆಂಪಲ್ ಮ್ಯೂಸಿಯಂ ಕಂಡಿತು. ಟಿಕೆಟ್ ಪಡಕೊಂಡು ಒಳ ಹೊಕ್ಕೆವು. ಬಹಳ ವಿಶಾಲವಾಗಿ, ತುಂಬಾ ಸ್ಥಂಭಗಳುಳ್ಳ ದೊಡ್ಡ ಮ್ಯೂಸಿಯಂ.
 ಎಲ್ಲಿ ನೋಡಿದರೂ ಸುಂದರವಾದ ಕಲ್ಲಿನ ಮೂರ್ತಿಗಳು, ಅದಕ್ಕೆ ಸರಿಯಾಗಿ ಫೋಕಸ್ ಮಾಡಿರುವ ಲೈಟ್ ಗಳ ಮಂದ ಪ್ರಾಕಾಶದಲ್ಲಿ ಇನ್ನೂ ಆಕರ್ಷಕವಾಗಿ ಕಾಣುತ್ತವೆ.
 ಮಧ್ಯೆ ನಟರಾಜನ ಸುಂದರ ಮೂರ್ತಿ. ಒಂದೆಡೆಯಲ್ಲಿ ವರ್ಣ ಚಿತ್ರಗಳ ಸಂಗ್ರಹ.
 ಭಿತ್ತಿ ಚಿತ್ರಗಳು ನೋಡಲು ಸುಂದರವಾಗಿವೆ. ಇನ್ನೊಂದೆಡೆ ಕಂಚಿನ ಪುರಾತನ ಮೂರ್ತಿಗಳನ್ನು ಗಾಜಿನ ಪೆಟ್ಟಿಗೆಯೊಳಗೆ ಇರಿಸಿದ್ದಾರೆ.
 ಎಲ್ಲವನ್ನೂ ಸರಿಯಾಗಿ ನೋಡಲು 2 ಘಂಟೆಗಳಾದರೂ ಬೇಕು. ಬಹಳ ಆಕರ್ಷಕವಾಗಿ ನೀಟಾಗಿ ಇರಿಸಿದ್ದಾರೆ.
ಇದನ್ನೆಲ್ಲಾ ನೋಡಿಕೊಂಡು ಹೊರ ಬಂದೆವು. ಘಂಟೆ 12. ಕಾಫಿ ಕುಡಿದು ಬಸ್ ಸ್ಟ್ಯಾಂಡಿಗೆ ಬಂದೆವು. ಅಲ್ಲಿ ಸ್ವಲ್ಪ ದ್ರಾಕ್ಷಿ, ಸೌತೆಕಾಯಿ ಕೊಂಡು, ಮಾರಿಯಮ್ಮನ್ ತೆಪ್ಪ ಕೊಳಕ್ಕೆ ಹೋಗುವ ಬಸ್ ಏರಿದೆವು. ಸುಮಾರು 3 ಕಿ.ಮಿ. ಅಷ್ಟೇ. ಅಲ್ಲಿ ಇಳಿದು ತೆಪ್ಪ ಕೊಳದ ಬಳಿಗೆ ಬಂದೆವು. ಬಹಳ ವಿಸ್ತಾರವಾದ ಕೊಳ.
 
ತುಂಬಾ ನೀರಿತ್ತು. ಮಧ್ಯೆ ಒಂದು ಕೃತಕ ದ್ವೀಪ. ಅದರಲ್ಲಿ ಒಂದು ದೇವಾಲಯದ ಮಾದರಿ ಕಟ್ಟಡ. ಕೆಲವು ಮರಗಳೂ ಇದ್ದು ಸುಂದರವಾಗಿತ್ತು. ಆದರೆ ಅಲ್ಲಿಗೆ ಹೋಗಲು ಯಾವ ಸೌಕರ್ಯವೂ ಇರಲಿಲ್ಲ. ಸುತ್ತಲೂ ಕೊಳಕ್ಕೆ  ಇಳಿಯಲು ಸೋಪಾನಗಳಿದ್ದವು. ಅಲ್ಲೇ ಕುಳಿತು ಸೌತೆಕಾಯಿ ತಿಂದೆವು. ದ್ರಾಕ್ಷಿ ಬಹಳ ಸಿಹಿಯಾಗಿತ್ತು. ಬಿಸಿಲಿನ ಬೇಗೆಗೆ ತುಂಬಾ ಹಿತವೆನಿಸಿತು. ನಂತರ ಅಲ್ಲೇ ಪಕ್ಕದಲ್ಲಿದ್ದ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋದೆವು. ಪುಟ್ಟ ಗುಡಿ, ಅದಕ್ಕೆ ಇಷ್ಟು ದೊಡ್ಡ ಕೊಳ! ಆಶ್ಚರ್ಯವೆನಿಸಿತು. ಮಾರಿಯಮ್ಮನ ಜಾತ್ರೆಗೆ ಈ ಕೊಳದಲ್ಲಿ ತೆಪ್ಪೋತ್ಸವ ಮಾಡುತ್ತಾರಂತೆ.
ಮುಂದೆ ನಾವು ಅಲ್ಲಿಂದಲೇ ಬಸ್ ಹತ್ತಿಕೊಂಡು ಸುಮಾರು 7 ಕಿ.ಮಿ. ದೂರವಿರುವ ತಿರುಪುರಕುಂಡ್ರಂಗೆ ಬಂದೆವು. ಇಲ್ಲಿಯೂ ಒಂದು ದೊಡ್ಡ ದೇವಾಲಯವಿದೆ. ಹಿಂದುಗಡೆ ಎತ್ತರವಾದ ಬೆಟ್ಟ. ನಾವು ಅಲ್ಲಿ ತಲುಪಿದಾಗ ಬಾಗಿಲು ಮುಚ್ಚಿತ್ತು. ಸಂಜೆ 4 ಘಂಟೆಗೆ ದರ್ಶನ. ಹೊಟ್ಟೆ ಹಸಿದಿತ್ತು. ಒಂದು ಉಡುಪಿ ಹೋಟೆಲ್ ಸಿಕ್ಕಿತು. ಅಲ್ಲಿ ಊಟ ಮಾಡಿ ದೇವಾಲಯದ ಎದುರುಗಡೆ ಗೋಪುರದಲ್ಲಿ ಸ್ವಲ್ಪ ವಿಶ್ರಮಿಸಿದೆವು. ಸಮಯಕ್ಕೆ ಸರಿಯಾಗಿ ಬಾಗಿಲು ತೆರೆದರು, ಒಳಗೆ ಸಾಲಿನಲ್ಲಿ ಹೋದೆವು. ಮೊದಲಿಗೆ ಒಂದು ದೊಡ್ಡ ಕೊಳ, ಅಲ್ಲಿ ಕೈ ಕಾಲು ತೊಳೆದು ಒಳಗೆ ಹೋದೆವು. ಎತ್ತರದಲ್ಲಿ ಇರುವ ಕಾರಣ ಸ್ವಲ್ಪ ಮೆಟ್ಟಿಲು ಏರಬೇಕು. ಒಳಗಡೆ ಮುರುಗನ್ ದೇವರಲ್ಲದೆ ಇನ್ನೂ ಕೆಲವು ದೇವರ ವಿಗ್ರಹಗಳಿವೆ. ಎಲ್ಲಾ ದೇವರನ್ನು ಪ್ರಾರ್ಥಿಸಿಕೊಂಡು ಹೊರ ಬಂದಾಗ ನಮ್ಮ ಬಸ್ ಬಂದಿತು. ಅದನ್ನೇರಿ ಮದುರೈಗೆ ವಾಪಸು ಬಂದೆವು. ಮದುರೈ ಪೇಟೆ ಸುತ್ತಾಡಿದೆವು. ಸಣ್ಣ ಪುಟ್ಟ ಶಾಪಿಂಗ್ ಮಾಡಿದೆವು. ನಂತರ ಮಗದೊಮ್ಮೆ ಮೀನಾಕ್ಷಿ ಧರ್ಶನಕ್ಕೆ ಒಳಗೆ ಹೋದೆವು.
ನಮ್ಮ ಅದೃಷ್ಟಕ್ಕೆ ಈಗಲೂ ರಶ್ ಇರಲಿಲ್ಲ. ಸಾವಕಾಶವಾಗಿ ದೇವರನ್ನು ನೋಡಿಕೊಂಡು ಹೊರ ಬಂದು ಅಲ್ಲೇ ಕೊಳದ ಹತ್ತಿರ ಕುಳಿತು ಗೋಪುರಗಳನ್ನು ನೋಡುತ್ತಾ ಕುಳಿತೆವು.
ರಾತ್ರಿಯಾಯಿತು. ರೂಮಿಗೆ ಬರುವಾಗ ಹೊಟ್ಟೆ ತುಂಬಿಸಿಕೊಂಡು ಬಂದು ಸ್ನಾನ ಮಾಡಿ ಮಲಗಿಕೊಂಡೆವು. ಮರುದಿನ ಬೆಳಿಗ್ಗೆ 6 ಘಂಟೆಗೆ ರಾಮೇಶ್ವರಕ್ಕೆ ರೈಲಿನಲ್ಲಿ ನಮ್ಮ ಪ್ರಯಾಣ. ಈ ಯಾತ್ರೆಯನ್ನು ಮುಂದೆ ಬರೆಯುತ್ತೇನೆ.



  

Friday, 20 May 2011

Dubai


 ನಮ್ಮ ಇಂಗ್ಲೆಂಡ್ ಯಾತ್ರೆಯನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ದುಬೈಗೆ ಬರಬೇಕೆಂದು ನನ್ನ ತಮ್ಮಂದಿರ ಆಹ್ವಾನ ಮೇರೆಗೆ ನಾವು ಲಂಡನ್ನಿನಿಂದ ನೇರ ಎಮಿರೇಟ್ಸ್ ವಿಮಾನದಲ್ಲಿ ದುಬೈಗೆ ಬಂದಿಳಿದೆವು. ನಾವು ಬೆಂಗಳೂರಿನಿಂದ ಇಂಗ್ಲೆಂಡ್ ಗೆ ಹೋಗುವಾಗಲೂ ಎಮಿರೇಟ್ಸ್ ವಿಮಾನದಲ್ಲೇ ಪ್ರಯಾಣಿಸಿ ಸ್ವಲ್ಪ ಹೊತ್ತು ದುಬೈ ವಿಮಾನ ನಿಲ್ದಾಣದಲ್ಲಿ ತಂಗಿದ್ದು ಮುಂದೆ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದೆವು. ಹಾಗಾಗಿ ನಮಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಚಯ ಚೆನ್ನಾಗಿತ್ತು.ರಾತ್ರಿ 10 ಗಂಟೆಗೆ ಲಂಡನ್ ಹೀಥ್ರೂ ವಿಮಾನ ನಿಲ್ದಾಣ ಬಿಟ್ಟು ನಮ್ಮ ವಿಮಾನ ಮುಂಜಾನೆ 6ಕ್ಕೆ ದುಬೈನಲ್ಲಿ ಇಳಿದಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ಅದ್ಬುತ ಲೋಕ. ಅಲ್ಲಿನ ಲಾಂಜ್ ನಲ್ಲಿ ತುಂಬಾ ಆಧುನಿಕ ಮಳಿಗೆಗಳಿದ್ದು ಅಲಂಕಾರಕ್ಕಾಗಿ ಚಿನ್ನದ ಬಣ್ಣ ಹೊಂದಿದ ಕೆಲವು ಬೃಹತ್ ಖರ್ಜೂರದ ಮರದ ಮಾದರಿಯನ್ನು ಇರಿಸಿದ್ದಾರೆ. 3-4 ಮಹಡಿಗಳಿಂದ ಒಳಗೊಂಡ ಈ ನಿಲ್ದಾಣವು ಜಗತ್ತಿನಲ್ಲೇ ಅತ್ಯಾಧುನಿಕವಾಗಿದೆ. ಅಲ್ಲಿ ಇಳಿದಾಕ್ಷಣ ನಮ್ಮ ವೀಸಾ ಪರಿಶೀಲನೆ, ಚೆಕ್ ಅಪ್ ಎಲ್ಲಾ ಮುಗಿಸಿಕೊಂಡು ಹೊರಬಂದೆವು.ನನ್ನ ತಮ್ಮಂದಿರಿಬ್ಬರೂ ನಮ್ಮನ್ನು ಎದುರುಗೊಂಡು ಸಂಭ್ರಮದಿಂದ ಅವರ ಮನೆಗೆ ಕೊಂಡೊಯ್ದರು. ಅಲ್ಲಿ ಅವರ ಪತ್ನಿ, ಮಕ್ಕಳು ಎಲ್ಲರೂ ಬಹಳ ಸಡಗರದಿಂದ ನಮ್ಮನ್ನು ಸ್ವಾಗತಿಸಿದರು.
ಹಲವಾರು ವರ್ಷಗಳಿಂದ ನನ್ನ ಸಹೋದರರಾದ ಶ್ರೀಹರಿ ಮತ್ತು ರವಿಚಂದ್ರ ಅಲ್ಲಿ ತಮ್ಮ ಸಂಸಾರ ಹೂಡಿದ್ದಾರೆ. ಮಕ್ಕಳೊಂದಿಗೆ ಸರಸವಾಡುತ್ತಾ ನಾವೂ ನಮ್ಮ ಇಂಗ್ಲೆಂಡ್ - ಲಂಡನ್ ಅನುಭವಗಳನ್ನು ಹಂಚಿಕೊಂಡೆವು. ಮೊದಲು ನಾವು ರವಿಯ ಮನೆಯಲ್ಲಿ 8 ದಿನ ಇದ್ದೆವು. ರವಿ, ಅವನ ಪತ್ನಿ ರೂಪಾ, ಮಕ್ಕಳು ನಿರೇನ್ ಮತ್ತು ನಂದನ್  ದಿನಾಲು ನಮ್ಮನ್ನು  ಹೊರಗಡೆ ತಿರುಗಾಡಲು ಕೊಂಡೊಯ್ಯುತಿದ್ದರು.
ದುಬೈ ಒಂದು ಮಾಯಾನಗರಿ! ಲಂಡನ್ ಗಿಂತ ಬಹಳ ಭಿನ್ನ. ಲಂಡನ್, ಗತಕಾಲದ ಕನ್ನಡಿಯಾದರೆ ದುಬೈ ಆಧುನಿಕ ಜಗತ್ತಿನ ಅತ್ಯುತ್ತಮ ಮಾದರಿ.
 ಇಲ್ಲೆಲ್ಲಾ ಎತ್ತ ನೋಡಿದರೂ ಆಕಾಶದೆತ್ತರಕೆ ಚಾಚಿ ನಿಂತ ಗಗನಚುಂಬಿ ಕಟ್ಟಡಗಳು ಎಣಿಸಲಾರದಷ್ಟು. ಒಂದೊಂದೂ ಬೇರೆ ಬೇರೆ ವಿನ್ಯಾಸದ್ದು.
 ಇಷ್ಟೆಲ್ಲಾ ಸಾಲದು ಎಂಬಂತೆ ಸಮುದ್ರವನ್ನೂ ಬಿಟ್ಟಿಲ್ಲ. ಅಲ್ಲೆಲ್ಲ ಮಣ್ಣು, ಕಲ್ಲು ತುಂಬಿಸಿ ಹೊಸದಾಗಿ ಭೂಮಿಯನ್ನು ಸೃಷ್ಟಿಸಿ  ಅಲ್ಲಿ ವಿನೂತನವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಕೇವಲ ಕೆಲ ವರ್ಷಗಳ ಪರಿಶ್ರಮ. ಕೇವಲ ಕೆಲ ವರ್ಷಗಳಿಂದ ಎಂದರೆ 1971 ರಿಂದ ಬ್ರಿಟಿಷರಿಂದ ಸ್ವತಂತ್ರ ಗೊಂಡ, ಹಿಂದೆಲ್ಲ ಮರಳುಗಾಡು ಆಗಿದ್ದ ದುಬೈ ಈಗ ಸ್ವರ್ಗ ಸಮಾನವಾಗಿದೆ.


ಇದೆಲ್ಲಾ ಪೆಟ್ರೋಲ್ ಮಹಿಮೆ. ಹಿಂದೆ ಇಲ್ಲಿ ಹೊರಗಿನ ನಾಗರಿಕರಿಗೆ ಜಮೀನು ಕೊಳ್ಳುವ ಹಕ್ಕು ಇರಲಿಲ್ಲ. ಆದರೆ ಈಗಿನ ಶೇಕ್, ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಮತ್ತು ಅವರ ಪುತ್ರನ ಮುಂದಾಲೋಚನೆಯಿಂದಾಗಿ ಈಗ ಇಲ್ಲಿ ಯಾರಿಗೆ ಬೇಕಾದರೂ ಜಮೀನು ಕೊಳ್ಳಬಹುದು ಮತ್ತು ಕಟ್ಟಡಗಳನ್ನು ಕಟ್ಟಬಹುದಾಗಿದೆ. ಜಗತ್ತಿನ ಎಲ್ಲಾ ಶ್ರೀಮಂತರೂ ಇಲ್ಲಿ ತಮ್ಮ ಹೆಚ್ಚಿನ ಹಣವನ್ನು ಹೂಡಿದ್ದಾರೆ. ದುಬೈ, ಅಬುಧಾಬಿ, ರಾಸ್ ಅಲ್ ಖೈಮಾ, ಶಾರ್ಜಾ, ಅಜ್ಮಾನ್ ,ಫುಜೈರಾ ಮತ್ತು ಉಮ್ಮ್ ಅಲ್ ಕ್ವೈನ್ ಎಂಬ ಪುಟ್ಟ ರಾಷ್ಟ್ರಗಳು ಒಂದುಗೂಡಿ ಯುನೈಟೆಡ್ ಅರಬ್ ಎಮಿರೇಟ್ಸ ಎಂಬ ಒಕ್ಕೂಟವನ್ನು ಸ್ಥಾಪಿಸಿಕೊಂಡಿವೆ. ಅವುಗಲ್ಲಿ ಪ್ರಮುಖವಾದದ್ದು ಅಬುಧಾಬಿ ಮತ್ತು ದುಬೈ. ದುಬೈಯನ್ನುಳಿದು ಇನ್ನೆಲ್ಲಾ ರಾಜ್ಯಗಳು ಪೆಟ್ರೋಲಿಯಂ ಉತ್ಪಾದಿಸಿದರೆ, ದುಬೈ ವ್ಯಾಪಾರ ವಹಿವಾಟುಗಳಿಂದ ಬಹಳ ಮುಂದುವರೆದಿದೆ. ಇಲ್ಲಿ ನೌಕರಿಯನ್ನು ಮಾಡುವವರಲ್ಲಿ ಹೆಚ್ಚಿನಂಶ ಭಾರತೀಯರು. ಇಲ್ಲಿನ ಜನಸಂಖ್ಯೆಯಲ್ಲಿ ನಮ್ಮವರು ಶೇಖಡಾ 42% ಇದ್ದಾರೆ. ಹಾಗಾಗಿ ಭಾರತೀಯ ಮುಖಗಳೇ ಹೆಚ್ಚಾಗಿ ಕಾಣಸಿಗುವುದು. ಉನ್ನತ ಹುದ್ದೆಯಿಂದ ಹಿಡಿದು ಕೆಳಸ್ತರದ ಉದ್ಯೋಗ ಮತ್ತು ವ್ಯಾಪಾರಗಳನ್ನು ನಡೆಸುವ ನಮ್ಮವರನ್ನು ಇಲ್ಲಿ ಕಾಣಬಹುದು. ಇಲ್ಲಿ ಬಾಂಗ್ಲಾ, ಶ್ರೀಲಂಕಾ ಮತ್ತು ಪಾಕಿಸ್ಥಾನದ ಪ್ರಜೆಗಳು ಸಹಾ ಇದ್ದಾರೆ. ಬಹುಮಟ್ಟಿಗೆ ಎಲ್ಲರೂ ಸಹಬಾಳ್ವೆ ಮಾಡುತಿದ್ದಾರೆ.
ದುಬೈ ಎಂದರೆ ಬರೇ ಮರುಭೂಮಿ ಎಲ್ಲೆಲೂ ಮರಳು, ಒಣ ಪ್ರದೇಶ, ರಣ ಬಿಸಿಲು ಇರಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದರೆ ಅದೆಲ್ಲ ತಪ್ಪು ಕಲ್ಪನೆ ಎಂದು ಅಲ್ಲಿ ಕಾಲಿಟ್ಟಾಗಲೇ ತಿಳಿಯಿತು. ನಾವು ಅಲ್ಲಿಗೆ ಹೋದದ್ದು ಜೂನ್ ತಿಂಗಳಲ್ಲಿ. ನನ್ನ ಸಹೋದರರು ತಿಳಿಸಿದ ಪ್ರಕಾರ ಜೂನ್ ನಲ್ಲಿ ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ 50 ಡಿಗ್ರಿಯವರೆಗೂ ಏರುತ್ತದಂತೆ
ನಮಗೆ ತುಂಬಾ ಕಷ್ಟ ಆಗಬಹುದು ಎಂದಿದ್ದರು. ಸಾಲದಕ್ಕೆ ನಾವು 6 ತಿಂಗಳ ಕಾಲ ಇಂಗ್ಲೆಂಡಿನ ತಂಪು ಹವೆಯಲ್ಲಿ ಇದ್ದು ಬಂದವರು! ಆದರೆ ನಮ್ಮ ಅದೃಷ್ಟದಿಂದ ಅಲ್ಲಿ ಸ್ವಲ್ಪ ಮಳೆ ಹಾಗೂ ಮೋಡ ತುಂಬಿದ ವಾತಾವರಣ ಇದ್ದುದರಿಂದ 30-32 ಡಿಗ್ರಿ ಉಷ್ಣಾಂಶವಿತ್ತು. ಇತ್ತೀಚಿಗೆ ಅಲ್ಲಿ ತುಂಬಾ ಮರ ಗಿಡಗಳನ್ನೂ ಹುಲ್ಲುಗಾವಲನ್ನೂ ಬೆಳೆಸುತಿದ್ದಾರೆ. ಇದರಿಂದ ಸಾಕಷ್ಟು ಮಳೆಯೂ ಬರುತ್ತಿದೆ. ಮಾರ್ಗದ ಮಧ್ಯಭಾಗದಲ್ಲಿ ಹಸಿರು ಹುಲ್ಲು, ಹೂವಿನ ಗಿಡಗಳು ಮತ್ತು ಖರ್ಜೂರದ ಮರಗಳನ್ನೂ ಎಲ್ಲೆಡೆಯಲ್ಲೂ ನೆಟ್ಟಿದ್ದಾರೆ.
 ಇದಕ್ಕೆ ಸರಿಯಾಗಿ ನೀರನ್ನೂ ಉಣಿಸುತ್ತಾರೆ. ಬಳಕೆ ಮಾಡಿ ವ್ಯರ್ಥ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಮರಗಳಿಗೆ ಹಾಕುತ್ತಾರೆ. ಅಲ್ಲಲ್ಲಿ ಉದ್ಯಾನಗಳು ಮತ್ತು ಅದ್ಬುತವಾದ ಕಾರಂಜಿಗಳು ಮನಸೆಳೆಯುತ್ತವೆ. ಇದಕ್ಕೆಲ್ಲಾ ಪೂರಕವಾಗಿ ನಗರದ ಶುಚಿತ್ವ ಇನ್ನಷ್ಟು ಶೋಭೆಯನ್ನು ತರುತ್ತದೆ. ಎಲ್ಲೂ ಕಸ ಕಡ್ಡಿ ಕಲ್ಲು,ಮಣ್ಣು ರಾಶಿ ಇಲ್ಲ. ನಿತ್ಯವೂ ಎಲ್ಲೆಡೆಗಳಲ್ಲೂ ಶುಚಿ ಮಾಡುವ ಕಾರ್ಯ ನಡೆದಿರುತ್ತದೆ. ಆ ಕೆಲಸವನ್ನು ಒಂದಿಷ್ಟೂ ಕುಂದಿಲ್ಲದೆ ಮಾಡುತ್ತಾರೆ. ಇಲ್ಲಿನ ಕಾನೂನು ಬಹಳ ಜೋರಾಗಿದೆ. ಇಲ್ಲಿ ಲಂಚ, ಮೋಸ, ಕಳ್ಳತನ ಮತ್ತು ವಂಚನೆಗೆ ಅವಕಾಶವಿಲ್ಲ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಕಾದಿರುತ್ತದೆ. ಮಾತ್ರವಲ್ಲ ದುಬೈ ನಿಂದಲೇ ಹೊರ ಕಳಿಸುತ್ತಾರೆ. ಹಾಗಾಗಿ ಕೆಲಸ ಮಾಡುವವರು, ಮಾಡಿಸುವವರು ಎಲ್ಲಾ ದಕ್ಷತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನಿಜಕ್ಕೂ ರಾಮ ರಾಜ್ಯ -ಅಲ್ಲಲ್ಲ, ರಹೀಮ ರಾಜ್ಯ! ಇಲ್ಲಿ ಹೆಚ್ಚಿನವರು ಫ್ಲಾಟ್ ಗಳಲ್ಲಿ ವಾಸಿಸುತ್ತಾರೆ. ಶ್ರೀಮಂತರು ವಿಲ್ಲಾಗಳಲ್ಲಿ ವಾಸಿಸುತ್ತಾರೆ. ಇಲ್ಲಿ ವಿಲ್ಲಾಗಳು ಬಹಳ ದುಬಾರಿಯಂತೆ. ದುಬೈನಲ್ಲಿ ಹೆಚ್ಚಾಗಿ ಎಲ್ಲಾ ವ್ಯಾಪಾರ ನಡೆಯುವುದು ಮಾಲ್ ಗಳಲ್ಲಿ. ಇದನ್ನು ನೋಡುವುದೇ ಒಂದು ಅನುಭವ.
 ಇತ್ತೀಚಿಗೆ ಬೆಂಗಳೂರಿನಲ್ಲಿಯೇ ಕೆಲವು ಬೃಹತ್ ಮಾಲ್ ಗಳು ಬಂದಿವೆ. ಉದಾಹರಣೆಗೆ ಮಂತ್ರಿ ಮಾಲ್, ಫೋರಮ್, ಗರುಡಾ ಮಾಲ್ ಇತ್ಯಾದಿ. ಮಾಲ್ ಗಳಲ್ಲಿ ತಿರುಗಾಡುತ್ತಾ ಬೇಕಾದವುಗಳನ್ನು ಕೊಳ್ಳಬಹುದು,ಅಲ್ಲಿಯೇ ಬಗೆ ಬಗೆಯ ತಿನಸುಗಳನ್ನು ತಿನ್ನಬಹುದು. ಎಲ್ಲಾ ಮಾಲ್ ಗಳೂ ಹವಾನಿಯಂತ್ರಿತ. ಅಲ್ಲಿನ ಇಂಟೀರಿಯರ್ ಡೆಕೋರೇಶನ್ ಎಷ್ಟು ನೋಡಿದರೂ ಸಾಲದೆನಿಸುತ್ತದೆ.
 ದೇಶ ವಿದೇಶಗಳ ಜನರು ಅಲ್ಲಿ ತುಂಬಿರುತ್ತಾರೆ. ನಾವೂ ದಿನಾಲೂ ಒಂದೊಂದು ಮಾಲ್ ಗೆ ಹೋಗಿದ್ದೆವು. ಮೊದಲ ದಿನ ಸಂಜೆ ಹೋದದ್ದು ಒಂದು ದೊಡ್ಡ ಗೃಹ ಬಳಕೆಯ ವಸ್ತುಗಳ ಮಾಲ್ ಗೆ. ಇಲ್ಲಿ ಬಗೆ ಬಗೆಯ ಪೀಟೋಪಕರಣಗಳೂ, ಕರ್ಟನ್ ಗಳೂ, ಎಲ್ಲಾ ಬಗೆಯ ಪಾತ್ರೆ, ಲೈಟಿಂಗ್, ಕಾರ್ಪೆಟ್, ಇನ್ನೂ ಏನೇನೋ ಹೊಸ ವಸ್ತುಗಳನ್ನು ಇರಿಸಿದ್ದರು. ಕುಂಡಗಳಲ್ಲಿ ಬೆಳೆಸಿದ ಹೂಗಿಡಗಳೂ ಇಲ್ಲಿ ಲಭ್ಯ.
ಆ ಮೇಲೆ ನಾವು ಹೋದದ್ದು ದುಬೈ ಕ್ರೀಕ್ ಗೆ. ಇದೊಂದು ಉಪ್ಪು ನೀರಿನ ಕಾಲುವೆ. ಸುಮಾರು 14 ಕಿ.ಮಿ. ಉದ್ದವಿದೆ.ಇದರ ಒಂದು ದಂಡೆ ಬರ್ ದುಬೈ ಆದರೆ ಇನ್ನೊಂದು ದಂಡೆ ಡೈರಾ. ಇದರಲ್ಲಿ ಸಂಚರಿಸುವ ಬಹಳ ಸಣ್ಣ ದೊಡ್ಡ ನಾವೆಗಳಿವೆ. ಇಲ್ಲಿಂದ ಸರಕುಗಳನ್ನು ಹೇರಿಕೊಂಡು ನಾವೆಗಳು ಪೂರ್ವ ಆಫ್ರಿಕಾ ತೀರವನ್ನು ತಲಪುತ್ತದಂತೆ.  ಅಲ್ಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ದೊಡ್ಡ ಬೋಟ್ ಗಳಲ್ಲಿ ರೆಸ್ಟೋರೆಂಟ್ ಗಳಿವೆ. ನಾವೂ ಒಂದು ಬೋಟ್ ಗೊತ್ತುಮಾಡಿಕೊಂಡು ಸುಮಾರು 1ಘಂಟೆ ಕಾಲ ಕ್ರೀಕ್ ನಲ್ಲಿ ವಿಹರಿಸಿದೆವು. ತಂಗಾಳಿ ಬೀಸುತಿತ್ತು. ಮೇಲೆ ನೀಲಾಕಾಶದಲ್ಲಿ ಮಿನುಗುವ ನಕ್ಷತ್ರಗಳು, ಎರಡೂ ದಡದಲ್ಲಿ ಬಣ್ಣ ಬಣ್ಣದ ದೀಪಗಳಿಂದ ತುಂಬಿದ ಗಗನ ಚುಂಬಿಗಳು, ಅವುಗಳ ವಿದ್ಯುತ್  ದೀಪಗಳು ಕ್ರೀಕ್ ನ ನೀರಲ್ಲಿ ಪ್ರತಿಫಲನಗೊಂಡು ಅದ್ಬುತ ಲೋಕವನ್ನೇ ನಿರ್ಮಿಸಿತ್ತು. ಬಹಳ ಖುಷಿಪಟ್ಟೆವು. ನಂತರ ನಾವೆಲ್ಲಾ ಅಲ್ಲೇ ದಡದಲ್ಲಿರುವ ದೇವಸ್ಥಾನಗಳಿಗೆ ಹೋದೆವು. ಹೌದು ಇಲ್ಲಿಯೂ ಹಿಂದೂ ದೇವಳಗಳಿವೆ. ಹಲವಾರು ದೇವರ ಗುಡಿಗಳೊಂದಿಗೆ ಜೈನ ದೇವಾಲಯವೂ ಇಲ್ಲಿದೆ. ಅದರ ಮಾರ್ಗದಲ್ಲಿ ಸಂಚರಿಸುವಾಗ ನಮ್ಮ ದೇಶದ ದೇವಾಲಯಗಳ ಪರಿಸರವೇ ನೆನಪಾಗುತ್ತದೆ. ಹೂವು, ಹಣ್ಣು, ಕಾಯಿ, ಅಗರಬತ್ತಿ, ಕುಂಕುಮ ಮತ್ತಿತರ ಪೂಜಾಸಾಮಗ್ರಿಗಳ ಅಂಗಡಿಗಳು ಇಲ್ಲಿವೆ. ದುಬೈನಲ್ಲಿ ನಮ್ಮ ದೇವರ ದರ್ಶನ ಮಾಡಿ ಅಲ್ಲಿ ಹಂಚಿದ ಪ್ರಸಾದ ತಿಂದು ಪುನೀತರಾದೆವು. ಮತ್ತೆ ಒಂದು ದೊಡ್ಡ ಶಾಪಿಂಗ್ ಕೊಂಪ್ಲೆಕ್ಸ್ ಸುತ್ತಾಡಿಕೊಂಡು ಕ್ರೀಕ್ ನ ಬದಿಯಲ್ಲಿ ಕುಳಿತು ಮೊರೋಕ್ಕನ್ ಫಿಲಾಫಿಲ್ ತಿಂದೆವು. ಮಲೆಯಾಳಿ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿದು ಮನೆಗೆ ಬಂದಾಗ ರಾತ್ರಿ 10 ಘಂಟೆ. ಮುಂದಿನ ದಿನಗಳಲ್ಲಿ ನಾವು ಹಲವಾರು ಪ್ರಮುಖ ಮಾಲ್ ಗಳನ್ನು ಸಂದರ್ಶಿಸಿದೆವು.
 ಮುಖ್ಯವಾಗಿ ಜುಮೈರಾ ಪ್ಲಾಜಾ, ದುಬೈ ಮಾಲ್ , ಮಾಲ್ ಒಫ್ ಎಮಿರೇಟ್ಸ್ , ಭುರ್ಜ್ ಮಾನ್ ಸೆಂಟರ್ , ವಾಫಿ ಶಾಪಿಂಗ್ ಮಾಲ್ , ಡ್ರಾಗನ್ ಮಾಲ್ , ಇಬ್ನಬತೂತ ಮಾಲ್ ಮತ್ತು ಲುಲು ಸೆಂಟರ್. ಇವುಗಳೆಲ್ಲ ದುಬೈನಲ್ಲಿರುವ ಪ್ರಖ್ಯಾತ ಮಾಲ್ ಗಳು. ಒಂದೊಂದಕ್ಕೂ ತನ್ನದೇ ಆದ ವಿಶಿಷ್ಟ ಸೌಂದರ್ಯ ಆಕರ್ಷಣೆ ಇದೆ. ನಮಗೆ ಬೇಕಾದ ಪರ್ಫ್ಯೂಮ್ ಗಳನ್ನು ಕೊಂಡೆವು. ನನ್ನ ಇಷ್ಟದ ಯಾರ್ಡ್ಲೆ ಪರ್ಫ್ಯೂಮ್ ಗಳ ದೊಡ್ಡ ಸಂಗ್ರಹವೇ ಅಲ್ಲಿತ್ತು. ಹಲವಾರು ಬಗೆಯ ಪರಿಮಳದ ಯಾರ್ಡ್ಲೆ ಕೊಂಡುಕೊಂಡೆ. ಅಂತೆಯೇ ಊರಿಗೆಂದು ತುಂಬಾ ಚಾಕೊಲೆಟ್ ಸಹಾ ಕೊಂಡೆವು. ಬಟ್ಟೆ ಬರೆ ಎಂದು ನಮ್ಮ ಲಗ್ಗೇಜ್ ತುಂಬಿತು. ಡ್ರಾಗನ್ ಮಾಲ್ ಪೂರ್ತಿ ಚೈನಾ ಬಜಾರ್ ಇದ್ದಂತೆ. ಇದರ ಕಟ್ಟಡವು ತುಂಬಾ ಉದ್ದವಾಗಿದ್ದು ಚೈನಾ ಡ್ರಾಗನ್ ಪ್ರಾಣಿಯ ಆಕೃತಿಯಲ್ಲಿದೆ. ಇನ್ನೊಂದೆಡೆ ಬಹಳ ದೊಡ್ಡ ಎಲೆಕ್ಟ್ರೋನಿಕ್ ಮಾಲ್ ಇದೆ. ಇಲ್ಲಿ ಎಲ್ಲಾ ಹೊಸ ಬಗೆಯ ಎಲೆಕ್ಟ್ರೋನಿಕ್ ವಸ್ತುಗಳು ಸಿಗುತ್ತವೆ. ಬೆಲೆ ತುಂಬಾ ಕಡಿಮೆ.
ಶುಕ್ರವಾರ ಶನಿವಾರ ಇಲ್ಲಿ ರಜಾದಿನ. ಹಾಗಾಗಿ  ರವಿಯ ಫ್ಯಾಮಿಲಿ ಮತ್ತು ನಾವಿಬ್ಬರೂ ಅಬುಧಾಬಿಗೆ ಹೋದೆವು. ಸುಮಾರು 1 1/2 ಘಂಟೆಯ ಕಾರು ಪ್ರಯಾಣ. 120 ಕಿ.ಮಿ.
ಅಗಲವಾದ 6 ಲೇನ್ ರಸ್ತೆ. ಮಧ್ಯದಲ್ಲಿ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ದಾರಿಯುದ್ದಕ್ಕೂ ಖರ್ಜೂರದ ಮರಗಳನ್ನು ಬೆಳೆಸಿದ್ದಾರೆ. ನಾವು ಹೋದ ಸಮಯದಲ್ಲಿ ಚೆನ್ನಾಗಿ ಬಲಿತ ಖರ್ಜೂರದ ಗೊನೆಗಳು ಇಳಿಬಿದ್ದಿದ್ದವು. ಕೆಂಪು, ಅರಸಿನ ಬಣ್ಣದ ಈ ಹಣ್ಣುಗಳನ್ನು ನೋಡುವುದೇ ಒಂದು ಆನಂದ. ಒಂದೆಡೆ ಕಾರು ನಿಲ್ಲಿಸಿ ಕೆಲವು ಹಣ್ಣುಗಳನ್ನು ಕೊಯ್ದು ರುಚಿ ನೋಡಿದೆವು.
 ಚೆನ್ನಾಗಿತ್ತು. ಸರಿಯಾಗಿ ಹಣ್ಣಾದಮೇಲೆ ಇವುಗಳನ್ನೂ ಕೊಯ್ಲು ಮಾಡಿ ಒಣಗಿಸುತ್ತಾರೆ. ಮರುಭೂಮಿಯಲ್ಲಿ ಎಷ್ಟು ಹುಲುಸಾಗಿ ಈ ಬೆಳೆ ಬರುತ್ತದೆ ಎಂದಾಗ ಆಶ್ಚರ್ಯ ವಾಗುತ್ತದೆ. ಖರ್ಜೂರದ ಮರಗಳು ಅರಬ್ ದೇಶದ ರಾಷ್ಟ್ರೀಯ ವೃಕ್ಷ! ಅಬುಧಾಬಿ ತಲಪುತಿದ್ದಂತೆ ಗಗನಚುಂಬಿಗಳು ಕಾಣಲು ಪ್ರಾರಂಭ. ಆದರೂ ದುಬೈನಲ್ಲಿ ಇದ್ದಷ್ಟು ಎತ್ತರದ್ದು ಇಲ್ಲಿಲ್ಲ. ಬಾಕಿ ಎಲ್ಲಾ ದುಬೈನಂತೆಯೇ ಇದೆ. ನಾವೂ ಮೊದಲಿಗೆ ರವಿಯ ಗೆಳೆಯನ ಮನೆಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಆಮೇಲೆ ತಿರುಗಾಡಲು ಹೋದೆವು.
 ಯಥಾಪ್ರಕಾರ ಮಾಲ್ ಗಳು, ದೊಡ್ಡದೊಂದು 5 ಸ್ಟಾರ್ ಹೋಟೆಲ್ ಗೂ ಭೇಟಿ ಕೊಟ್ಟೆವು.
 ಅಬುಧಾಬಿ, ಪೆಟ್ರೋಲ್ ಉತ್ಪಾದಿಸುವ ದೇಶ. ಬಹಳ ಶ್ರೀಮಂತ ದೇಶ. ಅಲ್ಲಿಂದ ರಾತ್ರಿ ವಾಪಸು ಮನೆಗೆ ಬಂದೆವು.
ಮರುದಿನ ನಾವು ಅಲ್ಲಿನ ದೊಡ್ಡದೊಂದು ಪಾರ್ಕ್ ಗೆ ಹೋಗಿದ್ದೆವು. ನಂತರ ಕಡಲ ಕಿನಾರೆಯಲ್ಲಿರುವ ದುಬೈ ನ ಆಕರ್ಷಣೆಯಲ್ಲೊಂದಾದ ಬುರ್ಜ್ ಅಲ್ ಅರಬ್ ಎಂಬ ಬಹು ದೊಡ್ಡ ಹೋಟೆಲ್ ನ ಪಕ್ಕ ಹೋಗಿದ್ದೆವು.
ಇದೊಂದು ದೊಡ್ಡ ಹಾಯಿಹಡಗಿನ ಆಕೃತಿ ಹೊಂದಿದ ಅತ್ಯಾಧುನಿಕ ಹೋಟೆಲ್. ಎಲ್ಲಾ ಹೋಟೆಲ್ ಗಳು ಪಂಚತಾರಾ ಹೋಟೆಲ್ ಆದರೆ ಇದು ಸಪ್ತ ತಾರಾ ಹೋಟೆಲ್! ಇದಕ್ಕೆ 60 ಮಹಡಿಗಳಿವೆ. ಇದರ ಮೇಲ್ಗಡೆ ಒಂದು ಈಜುಕೊಳ ಹಾಗೂ ಹೆಲಿಪ್ಯಾಡ್ ಸಹಾ ಇದೆ. ಸಾಲದ್ದಕ್ಕೆ ಒಂದು ಟೆನ್ನಿಸ್ ಕೋರ್ಟ್! ಇಲ್ಲಿನ ರೂಮುಗಳು ಬಲು ದುಬಾರಿಯಂತೆ. ಆದರೂ ರೂಮು ಬೇಕಾದಲ್ಲಿ ಬಹಳ ಮುಂಚಿತವಾಗಿಯೇ ಬುಕ್ ಮಾಡಬೇಕಂತೆ. ಈ ಕಟ್ಟಡಕ್ಕೆ ಹೊರಗಿನಿಂದ ಬಣ್ಣ ಬಣ್ಣದ ಬೆಳಕನ್ನು ಬೀರುತ್ತಾರೆ, ಕ್ಷಣ ಕ್ಷಣಕ್ಕೂ ತನ್ನ ಬಣ್ಣವನ್ನೂ ಬದಲಾಯಿಸುತ್ತಾ ಇರುತ್ತದೆ.
ಮರುದಿನ ಶ್ರೀಹರಿ ಬಂದು ನಮ್ಮನ್ನು ಅವರ ಮನೆಗೆ ಕೊಂಡೊಯ್ದನು. ಅವನ ಪತ್ನಿ ದಿವ್ಯಾ, ಮಕ್ಕಳು ಅಶು ಮತ್ತು ಅನ್ವಿತಾ ನಮ್ಮನ್ನು ಸ್ವಾಗತಿಸಿದರು. ಆ ದಿನ ನಾವು ಇಲ್ಲಿನ ಬಹುದೊಡ್ಡ ಚಿನ್ನದ ಮಾರ್ಕೆಟ್ ಗೆ ಹೋದೆವು.


 ಇದನ್ನು ಅಲ್ಲಿ ಗೋಲ್ಡ್ ಸೂಕ್ ಎನ್ನುತ್ತಾರೆ. ಇದನ್ನು ವಿವರಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ. ಅಬ್ಭಾ ಎಷ್ಟೊಂದು ಮಳಿಗೆಗಳು ! ಎಲ್ಲಿ ನೋಡಿದರೂ ಚಿನ್ನ! ಹೌದು ಚಿನ್ನದ ಆಭರಣಗಳ ಅದ್ಬುತ ಪ್ರದರ್ಶನ! ಬೇರೆ ವಸ್ತುಗಳ ಅಂಗಡಿಗಳೇ ಇಲ್ಲ. ಬರೇ ಚಿನ್ನ ಮತ್ತು ವಜ್ರ ಮತ್ತಿತರ ಅಮೂಲ್ಯ ಹರಳುಗಳ ಆಭರಣಗಳು. ಎಷ್ಟೊಂದು ವಿನ್ಯಾಸ! ನೋಡಿ ನೋಡಿ ನಮ್ಮ ಕಣ್ಣುಗಳೇ ದಣಿದವು.
 ಇಲ್ಲಿ ಹೆಚ್ಚಿನ ಅಂಗಡಿಗಳು ನಮ್ಮ ಭಾರತ ದೇಶದವು ಎಂದು ತಿಳಿದು ಹೆಮ್ಮೆಯಾಯಿತು. ಜನರು ಚಿನ್ನ ಕೊಳ್ಳುತಿದ್ದಾರೆ, ನಮ್ಮಂತಹ ಯಾತ್ರಿಕರು ಅದನ್ನು ನೋಡಿ ಸಂತೋಷಪಟ್ಟುಕೊಳ್ಳುತಿದ್ದಾರೆ. ನಾವು ಕೆಲ ಅಂಗಡಿಗಳ ಒಳಗೆ ಹೋಗಿ ನೋಡಿ ಬಂದೆವು. ಯಾವುದೇ ಅಡ್ಡಿಗಳಿಲ್ಲದೆ ಒಳಗೆ ಹೋಗಿ ನೋಡಬಹುದು. ಅಂಥಹ ಹೇಳಿಕೊಳ್ಳುವಂತಹ ಸೆಕ್ಯೂರಿಟಿ ಇಲ್ಲಿಲ್ಲ.
ನಮ್ಮ ಮುಂದಿನ ತಾಣ ಅಲ್ ಐನ್ ಎಂಬ ಬೆಟ್ಟ ಪ್ರದೇಶಕ್ಕೆ. ಸುಮಾರು 140 ಕಿ.ಮಿ. ದೂರ. ಇದೊಂದು ದೊಡ್ಡ ಬೆಟ್ಟಗಳ ಸಮೂಹವಾಗಿದ್ದು ಮೇಲೆ ಹೋಗಲು ಸೊಗಸಾದ ರಸ್ತೆ ಇದೆ.
 ಬೆಟ್ಟವು ಬೋಳು ಬೋಳಾಗಿದ್ದು ಅಲ್ಲಲ್ಲಿ ಖರ್ಜೂರದ ಮರ ಮತ್ತು ಇತರ ಮರಗಳಿವೆ. ಆದರೆ ವಿಚಿತ್ರವಾದ ಒಂದು ಸಂಗತಿಯನ್ನು ಕಂಡೆವು. ಅದೇನೆಂದರೆ ಪೂರ್ತಿ ಬೆಟ್ಟಕ್ಕೆ ಹಸಿರು ಹುಲ್ಲನ್ನು ಹೊದಿಸುವ ಕೆಲಸ. ಒಂದು ವಿಶೇಷ ಬಗೆಯ ಸಸ್ಯವನ್ನು ಬೆಳೆಸಿದ್ದಾರೆ. ಇದು ನೆಲದಲ್ಲಿ ಹರಡುತ್ತಾ ಹಬ್ಬುತ್ತದೆ. ಸುಮಾರು 60% ಬೆಟ್ಟವನ್ನು ಇದು ಆವರಿಸಿ ಹಸಿರು ಕಂಬಳಿ ಹೊದೆಸಿದಂತಿದೆ.
 ಹಸಿರು ಬೆಳೆಸಲು ಇವರು ಅದೆಷ್ಟು ಕಷ್ಟಪಡುತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇಲ್ಲಿ ಒಂದು ಬಿಸಿನೀರಿನ ಊಟೆ ಇದೆ, ಸದಾ ಇದರಿಂದ ಬಿಸಿನೀರು ಉಕ್ಕಿ ಹರಿದು ಒಂದು ಪುಟ್ಟ ಕಾಲುವೆಯಂತೆ ಹರಿಯುತ್ತದೆ. ಮಕ್ಕಳು, ನಾವೆಲ್ಲ ಇದರಲ್ಲಿ ಆಟ ಆಡಿದೆವು.
 ಇನ್ನೂ ಮೇಲ್ಗಡೆ ಒಂದು ವಿಶಾಲ ಜಾಗವಿದೆ. ಅಲ್ಲಿಂದ ನೋಡಿದರೆ ಪೂರ್ತಿ ಬೆಟ್ಟ ಸಮೂಹದ ದರ್ಶನವಾಗುತ್ತದೆ. ಇಲ್ಲಿ ನಮ್ಮ ಕೆಲವು ಹಿಂದಿ ಸಿನೆಮಾದ ಶೂಟಿಂಗ್  ನಡೆದಿದೆಯಂತೆ. ಸೊಗಸಾದ ಜಾಗ.

 ನಾವು ಶಾರ್ಜಾವನ್ನೂ ನೋಡಿದೆವು. ದುಬೈ ನಿಂದ ಕೇವಲ 12. ಕಿ.ಮಿ. ದೂರ ಅಷ್ಟೇ. ಆದರೆ ಪೀಕ್ ಹವರ್ ತಪ್ಪಿಸಿಕೊಂಡು ಹೋಗಬೇಕು. ಇಲ್ಲವಾದರೆ ಟ್ರಾಫಿಕ್ ಜಾಮ್ ಇರುತ್ತದೆ. ಇದು ಸಹಾ ದೊಡ್ಡ ಪಟ್ಟಣ. ಇಲ್ಲೂ ಒಂದು ದೊಡ್ಡ ಗೋಲ್ಡ್ ಸೂಕ್ ಇದೆ. ಮಾಲ್ ಗಳೂ ಇವೆ.
 ಒಂದು ದೊಡ್ಡ ಲೇಕ್ ಇದೆ. ಎಲ್ಲಾ ನೋಡಿಕೊಂಡು ವಾಪಸು ಮನೆಗೆ ಬಂದೆವು. ಇನ್ನೂ ಕೊನೆಯದಾಗಿ ನಾವೂ ಹೋದದ್ದು ಜುಮೈರಾ ಎಂಬಲ್ಲಿಗೆ. ಇಲ್ಲಿಯೇ ಜಗತ್ತಿನ ಅತೀ ಎತ್ತರದ ಕಟ್ಟಡ ಇರುವುದು. ಇದನ್ನು ಬುರ್ಜ್ ದುಬೈ ಎನ್ನುತ್ತಾರೆ. ಈವಾಗ ಬುರ್ಜ್ ಖಲೀಫಾ ಎಂದು ಕರೆಯುತ್ತಾರೆ. ಇದರ ಎತ್ತರ ಸುಮಾರು 828 ಮೀಟರ್ ಎಂದರೆ 2716 ಅಡಿಗಳು! 160 ಮಹಡಿಗಳು ಮತ್ತು 40 ನಿರ್ವಹಣಾ ಫ್ಲೋರ್ ಗಳಿವೆಯಂತೆ.
 ದೂರದಿಂದಲೇ ಇದು ಗೋಚರಿಸುತ್ತದೆ. ಅಂತರಿಕ್ಷಕ್ಕೆ ಹಾರಿಬಿಡಲಿರುವ ರಾಕೆಟ್ ನಂತೆ ಭಾಸವಾಗುತ್ತದೆ. ನಾವು  ಹೋದಾಗ ಅದರ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿತ್ತು. ಹಾಗಾಗಿ ಅದರ ಸಮೀಪ ಹೋಗಲು ಬಿಡುತ್ತಿರಲಿಲ್ಲ. ಮುಂದೆ ನಾವು ಪಾಮ್ ಎಂದು ಪ್ರಸಿದ್ಧವಾದ ಜಾಗಕ್ಕೆ ಹೋದೆವು. ಇದರ ವಿಶೇಷವೆಂದರೆ ಇದು ಬೃಹತ್ತಾದ ಖರ್ಜೂರದ ಮರದ ಆಕೃತಿಯಲ್ಲಿದೆ. ಸಮುದ್ರಕ್ಕೆ ಬಂಡೆಗಳನ್ನು ಹಾಕಿ ಮೇಲೆ ಮಣ್ಣು ತುಂಬಿಸಿ ಅದರಲ್ಲಿ ಈ ನಗರವನ್ನು ಕಟ್ಟಿದ್ದಾರೆ.
 ಖರ್ಜೂರದ ಮರದ ಗರಿಗಳ ಭಾಗದಲ್ಲಿ ದೊಡ್ಡ ದೊಡ್ಡ ವಿಲ್ಲಾ ಗಳಿವೆ. ದುಬೈನಲ್ಲೇ ಅತೀ ದುಬಾರಿ ಕಟ್ಟಡಗಳಿವು. ಇದನ್ನು ನೋಡುವಾಗ ಮನುಷ್ಯನ ಕಲ್ಪನೆಗೆ ಮಿತಿಯೇ ಇಲ್ಲ ಎಂದೆನಿಸುತ್ತದೆ. ಇದರ ಸಂಪೂರ್ಣ ಫೋಟೋ ತೆಗೆಯಬೇಕಾದರೆ ವಿಮಾನದಿಂದಲೇ ತೆಗೆಯಬೇಕಷ್ಟೆ.ಇಂತಹದೇ ಇನ್ನೂ ಕೆಲವು ನಿರ್ಮಾಣಗಳು ದುಬೈನ ಬೇರೆ ಕೆಲವು ಕಡೆಗಳಲ್ಲಿ ನಡೆಯುತ್ತಿದೆಯಂತೆ. ದುಡ್ಡಿನಲ್ಲೇ ಮುಳುಗಿರುವ ದೇಶಕ್ಕೆ ಮಾತ್ರ ಇಂತಹ ಕಾರ್ಯ ಮಾಡಲು ಸಾದ್ಯ.
ನಾವು  ಹೊರಡುವ ಸಮಯವಾಯಿತು. ಎಲ್ಲರೂ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಂಡರು. ಕ್ಷೇಮವಾಗಿ, ಸವಿ ನೆನಪುಗಳೊಂದಿಗೆ ನಾವು ಬೆಂಗಳೂರಿಗೆ ತಲುಪಿದೆವು.
ವಿಷಾದವೆಂದರೆ ಜಾಗತಿಕ ಹಣಕಾಸಿನ ಮುಗ್ಗಟ್ಟು(Recession)ದುಬೈ ಗೂ ತಟ್ಟಿತು. ಹೆಚ್ಚಿನ ಎಲ್ಲಾ ಕಟ್ಟಡಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿತು. ತುಂಬಾ ಜನ ಕೆಲಸ ಕಳೆದುಕೊಂಡರು. ಕೆಲವರು ಊರಿಗೆ ಮರಳಿದರು. ತಮ್ಮ ಕಾರುಗಳನ್ನು ಮಾರಲೂ ಅವರಿಗೆ ಸಾಧ್ಯವಾಗದೆ ಅದನ್ನು ವಿಮಾನ ನಿಲ್ದಾಣದಲ್ಲೇ ಪಾರ್ಕ್ ಮಾಡಿ ಹೊರಟು ಬರಬೇಕಾಯಿತಂತೆ. ಸುಮಾರು 1000ಕ್ಕೂ ಮೇಲ್ಪಟ್ಟು, ವಾರಸುದಾರರಿಲ್ಲದ ಕಾರುಗಳು ದುಬೈ ವಿಮಾನ ನಿಲ್ದಾಣದಲ್ಲಿದ್ದವು ಎಂದು ಪೇಪರ್ ನಲ್ಲಿ ಓದಿದೆ.

      

Tuesday, 3 May 2011

London City

 ಈ ಸಲ ಇಂಗ್ಲೆಂಡ್ ಗೆ ಹೋಗಿ ಹಿಂತಿರುಗಿ ಬರುವಾಗ ನಾವು ಲಂಡನ್ ನಗರದ ಹೆಚ್ಚಿನ ಜಾಗಗಳನ್ನು ನೋಡಿ ಬಂದೆವು. ಬ್ರಿಟನ್ನಿನ ದಕ್ಷಿಣ-ಪಕ್ಷಿಮ ಕೊನೆಯಲ್ಲಿ ಕೊರ್ನ್ವಾಲ್ ಕೌಂಟಿ ಇದೆ. ಅಲ್ಲಿ ಟ್ರೂರೋ ಎಂಬ ಪಟ್ಟಣದ ಹತ್ತಿರ ಸ್ಟಿತಿಯನ್ಸ್ ಎಂಬ ಸುಂದರ ಪ್ರದೇಶದಲ್ಲಿದೆ ನಮ್ಮ ಮಗಳ ಮನೆ. ನಾವು 6 ತಿಂಗಳು ಅಲ್ಲಿದ್ದು ಬಹಳಷ್ಟು ಸುಂದರ ತಾಣಗಳಿಗೆ ಭೇಟಿಯಿತ್ತಿದ್ದೆವು. ನಮ್ಮ ವೀಸಾದ ಅವಧಿ ಮುಗಿಯುತಿದ್ದಂತೆ ಅಲ್ಲಿಂದ ಹೊರಟೆವು. ಸ್ಟಿತಿಯನ್ಸ್ನಿಂದ ಲಂಡನ್ ಗೆ ಸುಮಾರು 5 ಘಂಟೆಗಳ ಪ್ರಯಾಣ. ನಮ್ಮ ವಿಮಾನ ರಾತ್ರಿ 10 ಘಂಟೆಗೆ. ನಾವು ರಾತ್ರಿ 2 ಘಂಟೆಗೆ ಮನೆ ಬಿಟ್ಟೆವು. ನನ್ನ ಮಗಳು ಸೌಮ್ಯ, ಅವಳ ಪತಿ ರೋಹಿತ್  ನನ್ನ ಪತ್ನಿ ಕಸ್ತೂರಿ ಮತ್ತು ನಾನು, ಓಟ್ಟು 4 ಜನ ಅವರ ಜಾಗ್ವಾರ್  ಕಾರಿನಲ್ಲಿ ಲಂಡನ್ ಗೆ ಬೆಳಿಗ್ಗೆ 7ಕ್ಕೆ ತಲುಪಿದೆವು. ನಮಗೆಲ್ಲಾ ಒಳ್ಳೆಯ ನಿದ್ರೆ. ಪಾಪ ರೋಹಿತ್ ಗೆ ನಿದ್ರೆಯಿಲ್ಲ. ಅವರಿಗೆ ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿತ್ತು. ನಮ್ಮ ದೊಡ್ಡ ದೊಡ್ಡ 2 ಬ್ಯಾಗು ಮತ್ತು ಇತರ ಲಗ್ಗೇಜ್ ಗಳನ್ನು ಹೀಥ್ರೂ ವಿಮಾನ ನಿಲ್ದಾಣದ ಕ್ಲಾಕ್ ರೂಂನಲ್ಲಿಟ್ಟು ಲಂಡನ್ ನಗರ ನೋಡಲು ಹೊರಟೆವು.
ಹೀಥ್ರೂ ನಲ್ಲೆ ಟ್ಯೂಬ್ ರೈಲ್ ಸ್ಟೇಷನ್ ಇದೆ. ಅಲ್ಲಿ ಟಿಕೆಟ್ ಕೊಂಡು ಹತ್ತಿದೆವು. ಟ್ಯೂಬ್ ರೈಲ್ ಹೆಚ್ಚಿನೆಡೆ ಭೂಗರ್ಭದಲ್ಲೇ ಸಂಚರಿಸುತ್ತದೆ. ಕೆಲವು ಕಡೆ ಮಾತ್ರ ಮೇಲ್ಗಡೆ ಸಾಗುತ್ತದೆ. ಎಯರ್ ಕಂಡಿಶನ್ ಭೋಗಿಗಳು. ಅದರಲ್ಲೇ ರೈಲು ಯಾವ ಸ್ಥಳಕ್ಕೆ ತಲುಪಿತು, ಮುಂದಿನ ಸ್ಥಳ  ಯಾವುದು ಎಂಬುದೆಲ್ಲಾ ಕಾಣುತ್ತಿರುತ್ತದೆ. ಮೊದಲಿಗೆ ನಾವು ಲಂಡನ್ ಟವರ್ ಸ್ಟೇಷನ್ ನಲ್ಲಿ ಇಳಿದೆವು. ಅಲ್ಲಿದ ಹೊರಗೆ ಬಂದು ನೋಡುತ್ತೇವೆ ತುಂತುರು ಮಳೆ! ಅಯ್ಯೋ ಇದೇನು ಗ್ರಹಚಾರ ಎಂತ ಗೊಣಗುವಷ್ಟರಲ್ಲೇ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಂದು ನಮಗೆ 2 ಛತ್ರಿಗಳನ್ನು ಕೊಟ್ಟು, ನಮ್ಮೂರು ನೋಡಿಬನ್ನಿ ಎಂದು ಲಂಡನ್ ಗೆ ಸ್ವಾಗತ ಬಯಸಿದರು. ಅವರಿಗೆ ತುಂಬಾ ಥ್ಯಾಂಕ್ಸ್ ಹೇಳಿ ಮುಂದುವರಿದೆವು. ಅವರ ಸೌಜನ್ಯ ನಮ್ಮನ್ನು ಬೆರಗು ಗೊಳಿಸಿತು. ಪ್ರವಾಸೋದ್ಯಮ ಬೆಳೆಸುವುದು ಎಂದರೆ ಹೀಗೆ! ಬರಿದೇ ಮಾದ್ಯಮಗಳಲ್ಲಿ ಜಾಹೀರಾತು ಮಾಡಿದರೆ ಸಾಲದು. ಬಂದಂಥಹ ಅತಿಥಿಗಳಿಗೆ ನಮ್ಮಿಂದ ಆದಷ್ಟು ಸಹಾಯ, ಸಹಕಾರ ಕೊಡಬೇಕು.
ಅವರಿತ್ತ ಛತ್ರಿ ಹಿಡಿದುಕೊಂಡು ಲಂಡನ್ ಟವರ್ ನೋಡಲು ಹೋದೆವು. ದಾರಿಯಲ್ಲೇ ಒಂದು ರೋಮನ್ ಪುತ್ಥಳಿ ಕಂಡೆವು. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಟವರ್ ಕಾಣಿಸಿತು. ಇಲ್ಲೇ ಬ್ರಿಟಿಶ್ ರಾಜವಂಶದ ಆಭರಣಗಳನ್ನು ಇರಿಸಿದ್ದಾರಂತೆ. ಜಗತ್ ಪ್ರಸಿದ್ಧ ಕೊಹಿನೂರ್ ವಜ್ರವೂ, ಇತರ ರತ್ನಾಭಾರಣಗಳೂ ಇಲ್ಲಿಯೇ ಇರುವುದಂತೆ. ಸಾರ್ವಜನಿಕರಿಗೆ ದರ್ಶನದ ಸಮಯಕ್ಕೆ ಇನ್ನೂ ಕೆಲ ಘಂಟೆ ಕಾಯಬೇಕು. ಹಾಗಾಗಿ ಹೊರಗಿನಿಂದಲೇ ಆ ಕೋಟೆಯನ್ನು ನೋಡಿದೆವು. ಹಿಂದಿನ ಕಾಲದಲ್ಲಿ ಅದನ್ನು ಟಂಕಸಾಲೆಯಾಗಿಯೂ,ರಾಜಕೀಯ ಬಂದೀಖಾನೆಯನ್ನಾಗಿಯೂ ಬಳಸುತಿದ್ದರು.
ಟವರ್ ನ ಎಲ್ಲಾ ಮಾಹಿತಿಗಳನ್ನು ಫಲಕಗಳಲ್ಲಿ ಬರೆದಿರಿಸಿದ್ದಾರೆ. ಸುಮಾರು 1100ನೇ ಇಸವಿಯಲ್ಲಿ ಇದರ ನಿರ್ಮಾಣವಾಯಿತು. ಹಿಂದೆ, ಇದರ ಸುತ್ತಲೂ ನೀರು ತುಂಬಿದ ಕಂದಕವಿತ್ತು.
ಈವಾಗ ನೀರಿಲ್ಲ, ಬದಲಾಗಿ ಹಸಿರು ಹುಲ್ಲು ಬೆಳೆಸಿದ್ದಾರೆ. ಬಂಡೆಕಲ್ಲಿನ ಕೋಟೆಗೆ ಇದು ಬಹಳ ಚೆನ್ನಾಗಿ ಹೊಂದುತ್ತದೆ. ಸುತ್ತಲೂ ಹೂಗಿಡಗಳೂ, ಸುಂದರವಾದ ಮರಗಳೂ ಇದರ ಶೋಭೆಯನ್ನು ಹೆಚ್ಚಿಸುತ್ತಿದೆ. ಒಂದೇ ಒಂದು ಕಸ-ಕಡ್ಡಿ ಇಲ್ಲ.ಅಷ್ಟು ಚೆನ್ನಾಗಿ ಇರಿಸಿದ್ದಾರೆ.
ಮುಂದೆ ಹೋದಂತೆಲ್ಲಾ ನಮಗೆ ಇಂಗ್ಲೆಂಡಿನ ಜೀವನಾಡಿಯಾಗಿರುವ ಥೇಮ್ಸ್ ನದಿ ಗೋಚರಿಸುತ್ತದೆ. ಇದರ ಎರಡೂ ಪಕ್ಕದಲ್ಲಿ ತುಂಬಾ ಬೋಟ್ ಗಳನ್ನು ನಿಲ್ಲಿಸಿದ್ದಾರೆ. ಹೊತ್ತೇರಿದಂತೆಲ್ಲಾ ಇವುಗಳ ಕಾರ್ಯ ಪ್ರಾರಂಭವಾಗಬಹುದು. ಇದರಲ್ಲಿ ಕುಳಿತು ಥೇಮ್ಸ್ ನದಿಯಲ್ಲಿ ವಿಹರಿಸಬಹುದು. ಈ ನದಿಗೆ ಅಡ್ಡಲಾಗಿ ಹಲವಾರು ಸೇತುವೆಗಳಿವೆ.ಅವುಗಳಲ್ಲಿ ಪ್ರಮುಖವಾದದ್ದು ಟವರ್ ಬ್ರಿಡ್ಜ್ .
ಬಹಳ ಹಳೆಯದು ಮತ್ತು ಪ್ರಸಿದ್ಧವಾದದ್ದು. ಈಗಲೂ ಹೊಚ್ಹ ಹೊಸದರಂತೆ ಇದೆ. ನದಿಯಲ್ಲಿ ಸಾಗುವ ದೊಡ್ಡ ನಾವೆಗಳು ಇದರಡಿಯಲ್ಲಿ ಹೋಗಬೇಕಾದರೆ ಸೇತುವೆಯನ್ನು ಮಧ್ಯದಲ್ಲಿ ಮೇಲಕ್ಕೆ ಎತ್ತುತ್ತಾರೆ. ನಾವೆಗಳು ಆಕಡೆಗೆ ದಾಟಿದ ಮೇಲೆ ಮತ್ತೆ ಯಥಾಸ್ಥಿತಿಗೆ ತರಲಾಗುತ್ತದೆ. ನಾವು ಅಲ್ಲಿ ತುಂಬಾ ಫೋಟೋ ಹಿಡಿದೆವು.
ಆಮೇಲೆ ಸ್ವಲ್ಪ ದೂರ ನಡೆದು ಸೇತುವೆಯ ಮೇಲೆ ನಡೆದು ಅಲ್ಲಿಂದ ತೋರುವ ದೃಶ್ಯಗಳನ್ನು ಕಂಡು ತೃಪ್ತಿಪಟ್ಟೆವು.
ಈ ನದಿಯ ದಂಡೆಯಲ್ಲೇ ಈಸ್ಟ್ ಇಂಡಿಯಾ ಕಂಪನಿಯ ಕಟ್ಟಡವಿದ್ದು ಈಗಲೂ ಕಾರ್ಯವೆಸಗುತ್ತಿದೆ. ನದಿಯ ದಂಡೆಗಳಲ್ಲಿ ಅತ್ಯಾಧುನಿಕ ಕಟ್ಟಡಗಳಿವೆ.
ಲಂಡನ್ ನಗರವು, ಜಗತ್ತಿನ ಅತಿ ದೊಡ್ಡ ವ್ಯಾಪಾರ ವಹಿವಾಟನ್ನು ಹೊಂದಿದ ಪ್ರದೇಶ.
ಇದೇ ನದಿಯ ಒಂದು ದಂಡೆಯಲ್ಲಿ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಸುತ್ತು ತಿರುಗುವ ಚಕ್ರವೊಂದಿದೆ.
ಜಯಂಟ್ ವೀಲ್ ನಂತೆ ಇದು ತಿರುಗುತ್ತದೆ. ಇದಕ್ಕೆ ಲಂಡನ್ ಐ ಎಂದು ಕರೆಯುತ್ತಾರೆ. ಇದರಲ್ಲಿ ಕುಳಿತುಕೊಳ್ಳುವ ಹಲವಾರು ಕ್ಯಾಬಿನ್ ಗಳಿದ್ದು ಅದರಲ್ಲಿ ಕುಳಿತು ನಿಧಾನವಾಗಿ ಸುತ್ತುತ್ತಾ ಲಂಡನ್ ನಗರದ ಪೂರ್ತಿ ವೀಕ್ಷಣೆ ಮಾಡಬಹುದು.
ಅಲ್ಲಿಂದ ನಾವು ಹೊರಟು  ಟ್ಯೂಬ್ ರೈಲ್ ಸ್ಟೇಷನ್ ಗೆ ಬಂದೆವು. ನಮಗೆ ಛತ್ರಿ ಯನ್ನು ಕೊಟ್ಟ ಮಹಿಳೆಯನ್ನು ಕಂಡು ಅದನ್ನು ನಮ್ಮ ಧನ್ಯವಾದ ಸಹಿತ ಹಿಂತಿರುಗಿಸಿದೆವು.
ರೈಲು ಬಂತು. ನಾವು ಮುಂದೆ ಲಂಡನ್ನಿನ ಪ್ರಖ್ಯಾತ ಬಿಗ್ ಬೆನ್ ಗಡಿಯಾರವಿರುವೆಡೆಗೆ ಬಂದೆವು. ಇದನ್ನು 1858ರಲ್ಲಿ ಸ್ಥಾಪಿಸಿಸಿದರಂತೆ. ಅಲ್ಲಿಂದ ಈವರೆಗೆ ಕರಾರುವಕ್ಕಾಗಿ ಸಮಯ ತೋರಿಸುತ್ತಾ ಇದೆ.
 ಇದು ಜಗತ್ತಿನ ಅತೀ ಎತ್ತರವಾದ ಮತ್ತು ದೊಡ್ಡದಾದ ಗಡಿಯಾರ ಗೋಪುರ, ಇದರ ಎತ್ತರ 180 ಅಡಿಗಳು. ನಾಲ್ಕೂಕಡೆ ಮುಖವಿದ್ದು ಒಂದೊಂದು ಡಯಲ್ 25 ಅಡಿ ವ್ಯಾಸ ಹೊಂದಿದೆ. ಇದರ ದೊಡ್ಡ ಮುಳ್ಳಿನ ಉದ್ದವೇ 14 ಅಡಿ ಇದೆ ಎಂದರೆ ಇದರ ಭವ್ಯತೆಯನ್ನು ಊಹಿಸಬಹುದು. ಈಗ ಘಂಟೆ 9. ಗಡಿಯಾರದ ಘಂಟೆ ಬಾರಿಸಲು ಶುರು. ಈ ಸದ್ದನ್ನು ನಾವು ಬಿ.ಬಿ.ಸಿ. ರೇಡಿಯೋನಲ್ಲಿ ಕೇಳಿದ್ದ ನೆನಪು. ಇಂದು ಕಿವಿಯಾರೆ ಆಲಿಸಿದೆವು. ಕಣ್ಣಾರೆ ಕಂಡೆವು. ಬಿಗ್ ಬೆನ್ ಗೆ ತಾಗಿಕೊಂಡು ಬ್ರಿಟಿಶ್ ಪಾರ್ಲಿಮೆಂಟಿನ  ಬೃಹತ್ತಾದ  ಕಟ್ಟಡವಿದೆ.
ಮೊದಲು ಈ ಕಟ್ಟಡವನ್ನು ಪ್ಯಾಲೆಸ್ ಒಫ್ ವೆಸ್ಟ್ ಮಿನ್ ಸ್ಟರ್ ಎಂದು ಕರೆಯುತಿದ್ದರು. ಇದರ ವಾಸ್ತು ಶೈಲಿ ಬಹಳ ಸುಂದರವಾಗಿದೆ. ಒಲಿವರ್ ಕ್ರೋಮ್ ವೆಲ್ ನ ಪುತ್ಥಳಿ ಇದರ ಎದುಗಡೆ ಇದೆ. ಪಕ್ಕದಲ್ಲಿ ಥೇಮ್ಸ್ ನದಿ ಹರಿಯುತ್ತಿದೆ. ಅಲ್ಲೂ ಒಂದು ದೊಡ್ಡ ಸೇತುವೆಯಿದೆ.
ಇಲ್ಲಿಂದ ಸ್ವಲ್ಪ ದೂರದಲ್ಲಿ ಪುರಾತನವಾದ ವೆಸ್ಟ್ ಮಿನ್ ಸ್ಟರ್ ಅಬೆ ಎಂಬ ಸುಂದರವಾದ ಚರ್ಚು ಇದೆ. ಸೈಂಟ್ ಪೀಟರ್ ನ ಚರ್ಚ್ ಇದಾಗಿದ್ದು ಇಲ್ಲಿಯೇ ಬ್ರಿಟಿಶ್ ರಾಜ,ರಾಣಿಯರ ಪಟ್ಟಾಭಿಷೇಕ ನಡೆಯುವುದು. ಬ್ರಿಟಿಶ್ ರಾಜ ಕುಟುಂಬದ ವಿವಾಹಗಳು ಇಲ್ಲೇ ನಡೆಯುವುದು. ರಾಜವಂಶಜರ ಸಮಾಧಿಯೂ ಇಲ್ಲೇ ನಡೆಯುವುದು.
ಇತ್ತೀಚಿಗೆ ಅಲ್ಲಿ ನಡೆದ ವಿವಾಹವೆಂದರೆ ರಾಜಕುಮಾರ ವಿಲಿಯಮ್ಸ್ ಮತ್ತು ಕ್ಯಾಥರೀನ್ ರದ್ದು. ಈ ಅದ್ದೂರಿಯ ಸಮಾರಂಭದ ನೇರ ಪ್ರಸಾರವನ್ನು ನಮ್ಮ ಹಲವಾರು ಟಿ.ವಿ.ಚಾನೆಲ್ ಗಳು ಪ್ರಸಾರ ಮಾಡಿದ್ದರು. ನಾವು ಅಲ್ಲಿಗೆ ಹೋದ ದಿನ ರವಿವಾರವಾಗಿದ್ದರಿಂದ ಒಳಗಡೆ ಪ್ರಾರ್ಥನಾ ಕಾರ್ಯ ನಡೆದಿತ್ತು. ಹಾಗಾಗಿ ಒಳಗಡೆಗೆ ಯಾವ ಪ್ರವಾಸಿಗರನ್ನೂ ಬಿಡುತ್ತಿರಲಿಲ್ಲ.
ಅದರ ಹೊರಗಿನ ಭವ್ಯ ಗೋಪುರ ಗೋತಿಕ್ ಶೈಲಿಯದಾಗಿದ್ದು ಬಹಳ ಸುಂದರವಾಗಿದೆ. ಅದರ ಹೆಬ್ಬಾಗಿಲಂತೂ ಅತ್ಯಾಕರ್ಷಕವಾಗಿದೆ. ಒಳಗಡೆ ನೋಡಲಾಗಲಿಲ್ಲ ಎಂಬ ನಿರಾಸೆಯನ್ನು ರಾಜಕುಮಾರನ ವಿವಾಹದ ನೇರಪ್ರಸಾರ  ನಿವಾರಿಸಿತು. ಎಷ್ಟೊಂದು ಸುಂದರ ಹಾಗೂ ಭವ್ಯವಾಗಿದೆ! ಅದರ ಅತೀ ಎತ್ತರವಾದ ಸ್ತಂಭಗಳು, ಅದರ ಮೇಲಿನ ಕಮಾನುಗಳು, ಚಿನ್ನದ ಗಿಲಾವಿಯಿಂದ ಹೊಳೆಯುವ ಅಲಂಕಾರಿಕ ಹೂಬಳ್ಳಿಗಳು ಎಲ್ಲಾ ಸುಂದರವಾಗಿದೆ, ರಾಜಯೋಗ್ಯವಾಗಿದೆ. ಇನ್ನೆಂದಾದರೂ ಲಂಡನ್ ಗೆ ಹೋದರೆ ಖಂಡಿತಾ ಅದರ ಒಳಗೆ ಹೋಗಿ ನೋಡಲೇಬೇಕು. ಮುಂದೆ ನಾವು ಸೈಂಟ್ ಜೇಮ್ಸ್ ಪಾರ್ಕ್ ಗೆ ಹೋದೆವು. ನಮ್ಮ ಕಬ್ಬನ್ ಪಾರ್ಕ್ ನೆನಪಾಯಿತು. ಬಹಳ ಚೆನ್ನಾಗಿದೆ.
ಅದರ ಒಂದು ಪಕ್ಕದಲ್ಲಿ ದೊಡ್ಡ ಸರೋವರವಿದ್ದು ಅದರ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಅದರಲ್ಲಿ ವಿಹರಿಸುತ್ತಿರುವ ಅಚ್ಚ ಬಿಳುಪಿನ ಹಂಸಗಳು, ಬೇರೆ ಬೇರೆ ಜಾತಿಯ ನೀರಕ್ಕಿಗಳು ನೋಡಲು ಸುಂದರವಾಗಿವೆ. ದೊಡ್ಡ ಜಾತಿಯ ಅಳಿಲುಗಳೂ ಅಲ್ಲಿ ನಿರ್ಭಯವಾಗಿ ಜನರು ಕೊಡುವ ಹಣ್ಣು, ಬೀಜಗಳನ್ನು ಕೈಯಿಂದಲೇ ಸ್ವೀಕರಿಸುತ್ತವೆ. ವೀಪಿಂಗ್ ಟ್ರೀ ಎಂದು ಹೆಸರಿಸಿದ ಮರಗಳು ನೀರಿನ ಪಕ್ಕದಲ್ಲೇ ಇದ್ದು ತಮ್ಮ ಎಳೆ ಹಸಿರು ಬಣ್ಣವನ್ನು ನೀರಲ್ಲಿ ಪ್ರತಿಬಿಂಬಿಸುತ್ತದೆ. ಅಲ್ಲಿನ ಚುಮು ಚುಮು ಚಳಿ, ಸುಂದರ ಪರಿಸರ, ಆಹಾ! ಸ್ವರ್ಗ!  ಅಲ್ಲಿ ಕುಳಿತುಕೊಳ್ಳಲು ತುಂಬಾ ಬೆಂಚುಗಳನ್ನು ಇರಿಸಿದ್ದಾರೆ. ನಾವೂ ಅಲ್ಲಿಯೇ ಕುಳಿತು ಬರ್ಗರ್, ಸ್ಯಾಂಡ್ ವಿಚ್ ತಿಂದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡೆವು. ಮತ್ತೆ ಮುಂದುವರಿಯುತ್ತಾ ಮಹಾರಾಣಿಯವರ 
ನಿವಾಸವಾದ ಬಕಿಂಗ್ ಹ್ಯಾಮ್ ಅರಮನೆಯ ಮುಂಭಾಗಕ್ಕೆ ಬಂದೆವು.
ಇಲ್ಲಿಯೇ ರಾಣಿ ಎಲಿಜಬೆಥ್ ಇರುವುದು. ರಾಣಿ ಅಲ್ಲಿದ್ದರೆ ಮಾತ್ರ ಯೂನಿಯನ್ ಜಾಕ್ ದ್ವಜವು ಮೇಲೆ ಹಾರಾಡುತ್ತಿರುತ್ತದೆ. ಅರಮನೆಯು ಬಹಳ ದೊಡ್ಡದಾಗಿದೆ, ಸುಂದರವೂ ಇದೆ. ಆದರೂ ನಮ್ಮ ಮೈಸೂರು ಅರಮನೆಯ ಸೊಗಸು ಅದಕ್ಕಿಲ್ಲ.
ಅರಮನೆಯ ಮುಂಭಾಗದಲ್ಲಿ ವೃತ್ತಾಕಾರದ ದೊಡ್ಡ ಕಾರಂಜಿ ಇದೆ.
ಮದ್ಯದಲ್ಲಿ ಎತ್ತರಕ್ಕೆ ಚಾಚಿದ ಸ್ತಂಭವಿದ್ದು ಅದರಲ್ಲಿ ಸುಂದರವಾದ ಮೂರ್ತಿಗಳಿವೆ. ಒಂದು ಪಕ್ಕದಲ್ಲಿ ವಿಕ್ಟೋರಿಯಾ ಮಹಾರಾಣಿಯ ಮೂರ್ತಿ ಗಮನ ಸೆಳೆಯುತ್ತಿದೆ.
ಕೆಳಗಡೆ ಗಂಭೀರವಾಗಿ ನಿಂತ ಸಿಂಹಗಳಿವೆ ಮತ್ತು ಅದರ ಮೇಲೆ ಕೈಇರಿಸಿಕೊಂಡ ವೀರರ ಮೂರ್ತಿಗಳಿವೆ. ಇನ್ನೂ ಕೆಲವು ಆಕರ್ಷಕ ಮೂರ್ತಿಗಳಿವೆ.
 ತುತ್ತ ತುದಿಯಲ್ಲಿ ಚಿನ್ನದ ಮುಲಾಮನ್ನು ಹಚ್ಚಲಾದ ಕಿನ್ನರಿಯ ಮೂರ್ತಿಇದೆ. ಸುತ್ತಲೂ ನೀರು ಬೀಳುತ್ತಿದೆ. ಒಟ್ಟಾರೆ ಹೇಳಬೇಕೆಂದರೆ ಬಹಳ ಆಕರ್ಷಣೀಯ, ಮನೋಹರ ದೃಶ್ಯ.
 ಅಲ್ಲೆಲ್ಲಾ ಬಹಳ ಜನ ಪ್ರವಾಸಿಗಳು ನೆರೆದಿದ್ದು ಫೋಟೋ ಹಿಡಿಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಚೇಂಜ್ ಆಫ್ ಗಾರ್ಡ್ ಎಂಬ ಕಾರ್ಯಕ್ರಮ ನಡೆಯಲಿದೆ. ಕೆಂಪು-ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ ಅರಮನೆಯ ಸೈನಿಕರು ವಿಚಿತ್ರವಾದ ಟೊಪ್ಪಿಗೆ ಧರಿಸಿ ಬ್ಯಾಂಡ್ ನ ದ್ವನಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ ಅರಮನೆಯ ಗೇಟ್ ನ ಒಳಗೆ ಹೋಗುತ್ತಾರೆ. ಅವರ ಜೊತೆಯಲ್ಲೇ ಕುದುರೆ ಸವಾರರು ಸಹ ಇರುತ್ತಾರೆ.
ಅಷ್ಟರಲ್ಲಿ ಅರಮನೆಯಿಂದ ಹಿಂದಿನ ದಿನದ ಪಾಳಿಯನ್ನು ಮುಗಿಸಿದ ಸೈನಿಕರು ಹೊರ ಬಂದು ಪರಸ್ಪರ ಗೌರವ ಸೂಚಿಸಿ ತಮ್ಮ ಪಾಳಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಿತ್ಯವೂ ಕ್ಲಪ್ತ ಸಮಯದಲ್ಲಿ ಇದು ನಡೆಯುತ್ತದೆ. ಇದನ್ನು ನೋಡಲೆಂದೇ ದೇಶ ವಿದೇಶಗಳ ಪ್ರವಾಸಿಗರು ನೆರೆಯುತ್ತಾರೆ.ಅರಮನೆಯ ಒಳಗೆ ಹೋಗಲು ವಿಶೇಷ ಪಾಸು ಮಾಡಿಸಬೇಕಾಗುತ್ತದೆ.
ನಮ್ಮ ಮುಂದಿನ ಭೇಟಿ ನ್ಯಾಚುರಲ್  ಹಿಸ್ಟರಿ ಮ್ಯೂಸಿಯಂಗೆ.
 ನಾವು ಸೌತ್ ಕೆನ್ಸಿಂಗ್ಟನ್ ಸ್ಟೇಷನ್ ನಲ್ಲಿ ಇಳಿದು ಅಲ್ಲಿಗೆ ಬಂದೆವು. ಇದರ ಪಕ್ಕದಲ್ಲೇ ಸೈನ್ಸ್ ಮ್ಯೂಸಿಯಂ ಮತ್ತು ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂ ಸಹ ಇದೆ. ನ್ಯಾಚರಲ್ ಹಿಸ್ಟರಿ ಮ್ಯೂಸಿಯಂ ಜಗತ್ತಿನ ಅತೀ ದೊಡ್ದದರಲ್ಲೊಂದಾದ ಮ್ಯೂಸಿಯಂ. ಇದರಲ್ಲಿ ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಕೀಟ ಶಾಸ್ತ್ರ, ಖನಿಜ ಶಾಸ್ತ್ರ, ಪ್ರಾಗೈತಿಹಾಸಿಕ ಶಾಸ್ತ್ರಗಳ ಬಗ್ಗೆ ವಿಸ್ತೃತವಾದ ನಮೂನೆಗಳನ್ನು ಪ್ರದರ್ಶಿಸಿದ್ದಾರೆ. ಸುಮಾರು 70 ಮಿಲಿಯ ವಿವಿಧ ನಮೂನೆಗಳ ಅಗಾಧ ಸಂಗ್ರಹವೇ ಇಲ್ಲಿದೆ. ಎಲ್ಲವನ್ನೂ ಸರಿಯಾಗಿ ನೋಡಲು ಕನಿಷ್ಠ ೧೫ ದಿನಗಳಾದರೂ ಬೇಕಾಗಬಹುದು.
 ಮ್ಯೂಸಿಯಂನ ಭವ್ಯವಾದ ಬಾಗಿಲ ಒಳಗೆ ಹೋದಾಗ ಒಂದು ವಿಶಾಲ ಹಾಲ್  ಸಿಗುತ್ತದೆ. ಇಲ್ಲಿ ಬೃಹತ್ ಗಾತ್ರದ ಡೈನೋಸಾರ್ ನ ಅಸ್ತಿಪಂಜರವನ್ನು ಜೋಡಿಸಿಟ್ಟಿದ್ದಾರೆ. ಅದರ ಕೆಳಗಡೆ ನಾವೂ ನಿಂತಾಗ ನಾವೆಷ್ಟು ಕುಬ್ಜರು ಎಂದೆನಿಸುತ್ತದೆ. ಕಡಿಮೆಯೆಂದರೂ 50-60 ಜನರಾದರೂ ಅದರಡಿಯಲ್ಲಿ ನಿಲ್ಲಬಹುದು. ಈ ವರ್ಗದ ಪ್ರಾಣಿಗಳ ಅಸಂಖ್ಯಾತ ನಮೂನೆಗಳನ್ನು ಜೋಡಿಸಿಟ್ಟಿದ್ದಾರೆ. ಇವುಗಳೆಲ್ಲ ಅಪರೂಪದ ಪಳೆಯುಳಿಕೆಗಳು. ನಮ್ಮ ಭೂಮಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾದ ಈ ಬೃಹತ್ ಜೀವಿಗಳ ಬಗ್ಗೆ ಚೆನ್ನಾದ ಅರಿವು ಮೂಡಿಸುತ್ತದೆ. ಅಲ್ಲಿಂದ ಮೆಟ್ಟಿಲುಗಳನ್ನು ಇಳಿದು ಇರುಕಲಾದ ಜಾಗಕ್ಕೆ ಬಂದಾಗ ನಮಗೆ ನಿಜವಾದ ಡೈನೋಸಾರ್ ನ ದರ್ಶನವಾಗುತ್ತದೆ.
 ಅದು ತನ್ನ ಬೃಹತ್ ಕೋರೆ ಹಲ್ಲುಗಳನ್ನು ಪ್ರದರ್ಶಿಸುತ್ತಾ ಬಾಯಿಯಿಂದ ನೆತ್ತರು ಸುರಿಸುತ್ತಾ, ಕೆಂಗಣ್ಣಿನಿಂದ ನೋಡುತ್ತಾ ಅಗಲವಾಗಿ ಬಾಯಿ ತೆರೆದು ಘರ್ಜಿಸುತ್ತದೆ. ತಲೆಯನ್ನು ಅತ್ತಿತ್ತ ತೊನೆದಾಡಿಸುತ್ತದೆ. 2-3 ಹೆಜ್ಜೆ ಮುಂದಿಟ್ಟಾಗಲಂತೂ ಎಲ್ಲರ ಎದೆಬಡಿತ ಒಮ್ಮೆಗೇ ನಿಂತಂತಾಗುತ್ತದೆ. ಅದು ಮಾನವ ನಿರ್ಮಿತ ಯಾಂತ್ರಿಕ ಡೈನೋಸಾರ್! ಅದರ ಗಾತ್ರ, ಚರ್ಮದ ಸುಕ್ಕುಗಳು, ಎಲ್ಲವು ನಿಜವಾದ ಡೈನೋಸಾರ್ ಎಂದೇ ಭಾಸವಾಗುತ್ತದೆ. ಅದರ ಘರ್ಜನೆಗೆ ಹೆದರಿ ಜನರು ಮಕ್ಕಳು ಎಲ್ಲರೂ ಕಿರಿಚಾಡುತ್ತಾರೆ. ಅಷ್ಟು ನೈಜವಾಗಿದೆ.
 ಮುಂದೆ ಹೋದಂತೆ ನಮಗೆ ಈ ಭೂಮಿಯಲ್ಲಿದ್ದ, ಇರುವ ಎಲ್ಲಾ ಪ್ರಾಣಿಗಳ ನಿಜವಾದ ತೊಗಲಿನಿಂದ ಮಾಡಿದ ನಮೂನೆಗಳನ್ನು ಕಾಣಬಹುದು. ತಿಮಿಂಗಿಲ, ಶಾರ್ಕ್, ಆನೆ, ಕುದುರೆ, ಜೀಬ್ರಾ, ಸಿಂಹ, ಹುಲಿ, ಹಿಮ ಕರಡಿ, ಉಳಿದ ಚಿಕ್ಕ ದೊಡ್ಡ ಪ್ರಾಣಿಗಳು, ಹಾವು, ಹಕ್ಕಿಗಳು ಎಲ್ಲಾ ಇಲ್ಲಿವೆ. ಎಲ್ಲವೂ ಜೀವಂತವಾಗಿವೆಯೇನೋ ಎಂಬಂತೆ ತೋರುತ್ತದೆ.
 ಕೀಟಗಳಿಗಾಗಿಯೇ ಬೇರೆಯೇ ಒಂದು ವಿಭಾಗವಿದೆ. ಮುಂದೆ ನಾವು ಖನಿಜಗಳ ಸಂಗ್ರಹ ನೋಡಲು ಹೋದೆವು. ಇದರಲ್ಲಿ ನನಗೆ ವಿಶೇಷ ಆಸಕ್ತಿ ಇದ್ದುದರಿಂದ ಇಲ್ಲಿಗೇ ಹೋಗೋಣ ಎಂದು ಒತ್ತಾಯಿಸಿದೆ. ಅಬ್ಭಾ ಎಷ್ಟೊಂದು ಬಗೆಯ ಬಣ್ಣ ಬಣ್ಣದ ಹೊಳೆಯುವ ಖನಿಜಗಳು.
 ಸಾಮಾನ್ಯ ಕ್ವಾರ್ಟ್ಸ್ ನಿಂದ ತೊಡಗಿ ವಜ್ರದವರೆಗೆ ಎಲ್ಲಾ ರತ್ನಗಳ ಮೂಲ ರೂಪವನ್ನು ಇರಿಸಿದ್ದಾರೆ. ಅವುಗಳನ್ನು ಸಾಣೆಹಿಡಿದು ಪಾಲಿಶ್ ಮಾಡಿ ಇರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಮನಮೋಹಕ.
ಇದಲ್ಲದೆ ಕಬ್ಬಿಣ ಮತ್ತು ಇತರ ಎಲ್ಲಾ ಲೋಹಗಳಿಂದ ಹಿಡಿದು ಬೆಳ್ಳಿ, ಚಿನ್ನ, ಪ್ಲಾಟಿನಂ ಮತ್ತು ಇತರ ಅಪರೂಪದ ರೇರ್ ಮೆಟಲ್ ಗಳನ್ನು ಇರಿಸಿದ್ದಾರೆ.
ನಾವು ಹೋದ ಎಲ್ಲಾ ಕಡೆ ಫೋಟೋ ತೆಗೆಯಲು, ವಿಡಿಯೋ ಮಾಡಲು ಯಾವೊಂದು ಆಕ್ಷೇಪವೂ ಇರಲಿಲ್ಲ. ಯಾವುದೇ ಶುಲ್ಕ ಸಹಾ ಕೊಡಬೇಕಾಗಿಲ್ಲ. ಆದರೆ ನಮ್ಮಲ್ಲಿ? ಯಾವ ವಿಶೇಷ ಜಾಗಗಳಿಗೆ ಹೋದರೂ ಶುಲ್ಕ ನೀಡಬೇಕು. ದೇವಾಲಯದ ಒಳಗಡೆ ಫೋಟೋ ತೆಗೆಯುವಂತಿಲ್ಲ. ಇದರಿಂದ ಏನೂ ತೊಂದರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಪ್ರವಾಸಿಗರು ಬಂದು ಫೋಟೋ ತೆಗೆದು ಅವರವರ ಊರಿಗೆ ಹೋದಮೇಲೆ ಖಂಡಿತಾ ಅವುಗಳನ್ನು ತಮ್ಮ ನೆಂಟರಿಷ್ಟರಿಗೆ ಗೆಳೆಯರಿಗೆಲ್ಲಾ ತೋರಿಸಿಯೇ ತೋರಿಸುತ್ತಾರೆ. ಇದೇ ಒಂದು ಪುಕ್ಕಟೆ  ಜಾಹೀರಾತಲ್ಲವೇ? ಇದರಿಂದ ಪರದೇಶಗಳ ಜನರೂ ನಮ್ಮ ದೇಶದ ವಿಶೇಷಗಳನ್ನು, ದೃಶ್ಯಗಳನ್ನೂ ನೋಡುವಂತಾಗುತ್ತದೆ. ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಸುರಿಯುವ ಸರಕಾರಕ್ಕೆ, ಫೋಟೋಗ್ರಫಿ ಶುಲ್ಕದಿಂದ ಬರುವ ಅಲ್ಪಮೊತ್ತಕ್ಕೆ ಯಾಕಿಷ್ಟು ಮೋಹ ಎಂದು ತಿಳಿಯುವುದಿಲ್ಲ. ಕೆಲವೆಡೆ ವಿದೇಶಿಯರಿಂದ ಅವರ ದೇಶದ ಹಣವನ್ನು, ಇಲ್ಲ ಅದಕ್ಕೆ ತತ್ಸಮಾನವಾದ ನಮ್ಮ ಹಣವನ್ನು ಶುಲ್ಕವಾಗಿ ವಿಧಿಸುತ್ತಾರೆ. ಏನಿಲ್ಲವೆಂದರೂ ಕೊನೆಯಪಕ್ಷ ವಿದೇಶಿ ಪ್ರವಾಸಿಗರಿಂದ ಯಾವುದೇ ಶುಲ್ಕವನ್ನೂ ವಸೂಲಿ ಮಾಡಬಾರದು. ಇದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಲಾಭ ಆಗಬಹುದು.   
 ಈಗಾಗಲೇ ಘಂಟೆ 4.30. ನಡೆದೂ ನಡೆದು ಕಾಲುಗಳು ಸೋತಿದ್ದವು. ನೋಡಿ ನೋಡಿ ಕಣ್ಣುಗಳೂ ದಣಿದಿದ್ದವು . ಮನಸ್ಸು ಮಾತ್ರ ತುಂಬಿತ್ತು. ಈ ಸಲಕ್ಕೆ ಇಷ್ಟು ಸಾಕು, ಇನ್ನೊಂದು ಸಲ ಬರುವಾಗ ಇನ್ನೂ ಹೆಚ್ಚಿನ ಜಾಗಗಳನ್ನು ನೋಡೋಣ ಎಂದಳು ನಮ್ಮ ಮಗಳು. ಇನ್ನೂ ನೋಡಬೇಕಾದ ಜಾಗಗಳು ಬಹಳ ಇವೆ. ಬ್ರಿಟಿಶ್ ಮ್ಯೂಸಿಯಂ, ಮೇಡಂ ಟ್ಯುಸಾಡಿ ಗ್ಯಾಲರಿ, ಆರ್ಟ್ ಗ್ಯಾಲರಿ, ವಿಂಡ್ಸರ್ ಕ್ಯಾಸಲ್ , ಹೈಡ್ ಪಾರ್ಕ್, ಪಿಕಾಡೆಲ್ಲಿ ಚೌಕ, ಟ್ರಫಾಲ್ಗರ್ ಚೌಕ, ಕೆಂಬ್ರಿಡ್ಜ್  ಮತ್ತು ಒಕ್ಸ್ ಫೋರ್ಡ್ ವಿಶ್ವ ವಿದ್ಯಾಲಯಗಳು, ಲಾರ್ಡ್ಸ್ ಕ್ರಿಕೆಟ್ ಮೈದಾನ ಎಲ್ಲವೂ ನೋಡುವಂತಹ ಜಾಗಗಳು. ಸೌತ್ ಹಾಲ್ ಅಂತೂ ನಮ್ಮ ಭಾರತದ ಜನರಿಂದ, ಅವರದ್ದೇ ಹೋಟೆಲ್ ಗಳು, ಅಂಗಡಿಗಳಿಂದ ತುಂಬಿದೆಯಂತೆ.
ನಾವು ಮ್ಯೂಸಿಯಂಗೆ ವಿದಾಯ ಹೇಳಿ ಟ್ಯೂಬ್ ಹಿಡಿದು ಹೀಥ್ರೂ ಗೆ ಬಂದೆವು. ಅಲ್ಲಿ ಉಪಾಹಾರ ಮಾಡಿ, ನಮ್ಮ ಲಗ್ಗೇಜ್ ಪಡಕೊಂಡು ಚೆಕ್ ಇನ್ ಗಾಗಿ ಹೋದೆವು. ಬ್ಯಾಗುಗಳು ಒಳಹೊದವು. ಭಾರವಾದ ಮನಸ್ಸಿನಿಂದ ಮಗಳು, ಅಳಿಯಂದಿರನ್ನು  ಬೀಳ್ಕೊಂಡು ನಮ್ಮ ಮುಂದಿನ ಪ್ರಯಾಣಕ್ಕಾಗಿ ಒಳಗಡೆ ಹೋದೆವು. 6 ತಿಂಗಳ ಅವರ ಒಡನಾಟ ಒಮ್ಮೆಲೆ ಕೊನೆಗೊಂಡಾಗ ನಮ್ಮಿಬ್ಬರ ಕಣ್ಣುಗಳೂ ನೆನೆದಿದ್ದವು.
ನಮ್ಮ ಮುಂದಿನ ಪ್ರಯಾಣ ಎಮಿರೇಟ್ಸ್  ವಿಮಾನದಲ್ಲಿ ದುಬೈಗೆ. ಇಲ್ಲಿನ ಅನುಭವಗಳನ್ನು ಮುಂದೊಮ್ಮೆ ಬರೆಯುತ್ತೇನೆ.