Tuesday, 25 February 2014

MODHERA SUN TEMPLE GUJARAT



ಮೊಧೇರಾ ಸೂರ್ಯ ದೇವಾಲಯ
ನಮ್ಮ ಮೌಂಟ್ ಅಬು ಯಾತ್ರೆ ಮುಗಿಸಿ ಮುಂದಿನ ತಾಣವಾದ ಮೊಧೇರಾಕ್ಕೆ ಪಯಣ  ಬೆಳೆಸಿದೆವು. ಮುಂಜಾನೆ ಬೇಗ ಎದ್ದು ಮೌಂಟ್ ಅಬು ಬಸ್ ಸ್ಟ್ಯಾಂಡ್ ನಿಂದ ಬೆಳಗ್ಗೆ 6 ಘಂಟೆಗೆ ಅಹಮದಾಬಾದ್ ಗೆ ಹೋಗುವ ಬಸ್ ಏರಿದೆವು. ಮೊದಲು ನಮ್ಮ ಗಮ್ಯ ಸ್ಥಾನ ಮೆಹಸಾನ. ಇಲ್ಲಿಗೆ ಸುಮಾರು 180 ಕಿ.ಮಿ. ದೂರ. ರಸ್ತೆ ನೇರವಾಗಿ ಚೆನ್ನಾಗಿತ್ತು. 10.30 ಕ್ಕೆ ಮೆಹಸಾನ ತಲುಪಿದೆವು. ಈ ಊರು ತುಂಬಾ ದೊಡ್ಡದಿದ್ದು ಸುಂದರವಾಗಿದೆ. ಇಲ್ಲಿ ಬಸ್ ಇಳಿದು ರಸ್ತೆ ದಾಟಿ ಪಕ್ಕದಲ್ಲೇ ಇರುವ ಇನ್ನೊಂದು ಬಸ್ ನಿಲುಗಡೆಗೆ ಬಂದೆವು.ಇಲ್ಲೇ ನಮಗೆ ಮೊಧೇರಾಗೆ ಹೋಗುವ ಬಸ್ ಬರುವುದು. ಒಂದು 10 ನಿಮಿಷ ಕಾದ ಮೇಲೆ ನಮ್ಮ ಬಸ್ ಬಂತು. ಇಲ್ಲಿಂದ 25ಕಿ.ಮಿ. ಗಳ ಪ್ರಯಾಣ. 11.30 ಕ್ಕೆ ಮೊಧೇರಾ ತಲುಪಿದೆವು. ಬಸ್ ಇಳಿದು ಕೇವಲ 5-6 ನಿಮಿಷ ಕಾಲ್ನಡಿಗೆಯಲ್ಲಿ ಸಾಗಿದಾಗ ನಾವು ಮೊಧೇರಾ ಸೂರ್ಯಮಂದಿರದ ಗೇಟ್ ನ ಮುಂದಿದ್ದೆವು.




 ಇಲ್ಲಿ ಪ್ರವೇಶ ಧನ ಕೇವಲ 5 ರೂ. ಕೊಟ್ಟು ಒಳ ಪ್ರವೇಶಿಸಿದೆವು. ಆದರೆ ಇಲ್ಲೊಂದು ಅನಾನುಕೂಲತೆ ಎದುರಾಯಿತು. ಇಲ್ಲಿ ಉಪಹಾರ ಗೃಹ, ಬಾತ್ ರೂಂ ಮುಂತಾದ ಎಲ್ಲಾ ಸೌಕರ್ಯಗಳಿದ್ದರೂ ಲಗ್ಗೇಜ್ ಇರಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದೇ ಒಂದು ದೊಡ್ಡ  ಕೊರತೆ. ಬೇರೆ ಗತ್ಯಂತರವಿಲ್ಲದೆ ನಮ್ಮ ಬ್ಯಾಗುಗಳೂ ಸೂರ್ಯಮಂದಿರ ವೀಕ್ಷಣೆಗೆ ಬಂದವು. ನಾವು ಸ್ವಲ್ಪ ಫ್ರೆಶ್ ಆಗಿಕೊಂಡು ಮುಂದೆ ಹೋದೆವು. ನಮ್ಮ ಕಬ್ಬನ್ ಪಾರ್ಕನ್ನು ನೆನಪಿಸುವ ವಿಶಾಲವಾದ ತೋಟ. ಅಲ್ಲಲ್ಲಿ ದೊಡ್ಡ ಮರಗಳು, ಹುಲ್ಲು ಹಾಸು, ಹೂ, ಗಿಡ ಮರಗಳು. ನಾವು ಹೋದಾಗ ಎಲ್ಲೆಲ್ಲೂ ಸ್ಪ್ರಿಂಕ್ಲರ್ ನಿಂದ ನೀರು ಸಿಂಪರಣೆ ಆಗುತಿತ್ತು. ಇದರಿಂದ ಪೂರ್ತಿ ವಾತಾವರಣವು ತಂಪಾಗಿ ಆಹ್ಲಾದವಾಗಿತ್ತು.








 ಸೂರ್ಯ ಮಂದಿರದ ಎದುರುಗಡೆ ಅತಿ ಸುಂದರವಾದ ಮತ್ತು ಆಳವಾದ ಸೂರ್ಯಕುಂಡವಿದೆ.  ಕೆಳಗಡೆ ಮರಕತ ಬಣ್ಣ ಹೊಂದಿದ ನೀರು ಮತ್ತು ಇಳಿಯಲು ನಾಲ್ಕೂ ಕಡೆ ಸೋಪಾನಗಳು. ಅಲ್ಲಲ್ಲಿ ಪುಟ್ಟ ಗುಡಿಗಳು. ಒಟ್ಟಾರೆ 108 ಚಿಕ್ಕ ದೊಡ್ಡ ಗುಡಿಗಳಿದ್ದು ಅವುಗಳಲ್ಲಿ ಕೆಲವಲ್ಲಿ ದೇವರ ವಿಗ್ರಹಗಳನ್ನು ಇರಿಸಿದ್ದಾರೆ.


Sun Temple & Holy Pond
 
soorya Kund

  ಸೂರ್ಯ ಮಂದಿರವು ಎಷ್ಟು ಭವ್ಯವಾಗಿದೆಯೋ ಅಷ್ಟೇ ಸುಂದರವಾಗಿದೆ ಈ ಸೂರ್ಯಕುಂಡ. ಇದರ ಹಿಂದೆಯೇ ಇದೆ ಮೊಧೇರಾ ಸೂರ್ಯ ಮಂದಿರ.
ಈ ಸುಂದರ ಮಂದಿರದ ನಿರ್ಮಾಣ ಕಾಲ 1026 ನೇ ಇಸವಿಯಲ್ಲಿ ಸೋಳಂಕಿ ಮಹಾರಾಜ ಒಂದನೆಯ ಭೀಮದೇವನಿಂದಾಯಿತು. ನಾನು ಕಂಡ ಎರಡನೇ ಸೂರ್ಯ ಮಂದಿರ ಇದಾಗಿದ್ದು ಮೊದಲನೆಯದು ಕೋಣಾರ್ಕದ ಸೂರ್ಯಮಂದಿರ. ಅದೊಂದು ಬೇರೆಯೇ ವಿನ್ಯಾಸದ ದೇಗುಲ. ಸೂರ್ಯನ ರಥದ ಆಕೃತಿಯಲ್ಲಿ ಅದನ್ನು ರಚಿಸಿದ್ದಾರೆ. ಆದರೆ ಶಿಲ್ಪಕಲಾ ಸೊಬಗು ಒಂದೇ ರೀತಿಯದ್ದಾಗಿದೆ. ಅದು ನಮ್ಮ ದೇಶದ ಪೂರ್ವದಲ್ಲಿದ್ದರೆ ಇದು ಪಶ್ಚಿಮದಲ್ಲಿದೆ. ಅಹಮದಾಬಾದ್ ನಿಂದ ಸುಮಾರು 100 ಕಿ.ಮಿ ಗಳ ದೂರದಲ್ಲಿರುವ ಈ ಜಾಗ ಪುಷ್ಪಾವತಿ ನದಿ ದಡದಲ್ಲಿದೆ. ಸೋಮನಾಥ ದೇವಾಲಯಕ್ಕಾದ ದುರ್ಗತಿಯೇ ಇಲ್ಲಿಯೂ ನಡೆದಿತ್ತು. ಇಲ್ಲಿನ ಗರ್ಭ ಗುಡಿಯಲ್ಲಿ ರಥದಲ್ಲಿ ಕುಳಿತ ಸೂರ್ಯ ಹಾಗೂ ಆತನ ಸಾರಥಿ ಅರುಣನ ಸ್ವರ್ಣ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದರಂತೆ. ಮೂರ್ತಿಯ ಅಡಿಭಾಗದಲ್ಲಿ ಅಪಾರ ಸ್ವರ್ಣ ನಾಣ್ಯಗಳನ್ನು ಮತ್ತು ಅಮೂಲ್ಯ ರತ್ನಗಳನ್ನು ಇರಿಸಿದ್ದರಂತೆ. ಇವೆಲ್ಲವನ್ನೂ ಘಜನಿ ಮಹಮ್ಮದ ಕೊಳ್ಳೆ ಹೊಡೆದು ತನ್ನ ಊರಿಗೆ ಸಾಗಿಸಿದನಂತೆ. ಮಗದೊಮ್ಮೆ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣಕ್ಕೂ ಒಳಗಾಯಿತು. ದೇವಾಲಯವನ್ನೂ ಅಲ್ಪ ಸ್ವಲ್ಪ ಹಾಳುಗೆಡವಿದರು ವಿರೂಪಗೊಳಿಸಿದರು. ಆದರೂ ಈಗಲೂ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ.
ಮರಳು ಶಿಲೆ (sand stone) ಯಲ್ಲಿ ಈ ದೇವಾಲವನ್ನು ಕಟ್ಟಿದ್ದಾರೆ. ನಾವು ಸೂರ್ಯ ಕುಂಡಕ್ಕೆ ಇಳಿದು ಕೈ ಕಾಲು ತೊಳೆದುಕೊಂಡು ಗಾಯತ್ರಿಮಂತ್ರ ಸಹಿತ ಸೂರ್ಯನಿಗೆ ಅರ್ಘ್ಯ ಕೊಟ್ಟು ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಪಾವಟಿಕೆಗಳನ್ನೇರಿ ದೇವಾಲಯದ ಮುಂಭಾಗಕ್ಕೆ ಬಂದೆವು. ಇಲ್ಲಿ ನಮ್ಮನ್ನು ಸ್ವಾಗತಿಸಲು 2 ಅತ್ಯಪೂರ್ವ ಸ್ಥಂಭಗಳು ಕಾದು ನಿಂತಿವೆ.




ಬೇರೆಲ್ಲೂ ಕಾಣಸಿಗದಂತಹ ಸುಂದರ ಭವ್ಯ ಕಂಭಗಳಿವು. ಇದರ ನಿರ್ಮಿತಿಯ ಉದ್ದೇಶವೂ ನಿಗೂಢ. ಯಾಕೆಂದರೆ ಇದು ಯಾವುದೇ ಭಾರವನ್ನು ಹೊತ್ತು ನಿಂತಿಲ್ಲ. ಎಂದರೆ ಮೇಲೆ ಯಾವುದೇ ಮೇಲ್ಚಾವಣಿ ಇಲ್ಲದೆ ಜಂಟಿಯಾಗಿ ನಿಂತಿವೆ. ಬಹುಶಃ ಇನ್ನೂ ವಿಸ್ತಾರವಾದ ಪ್ರಾಕಾರವನ್ನು ನಿರ್ಮಿಸುವ ಉದ್ದೆಶವಿತ್ತೇನೋ? ಅಪೂರ್ಣವಾಗಿ ಕೆಲಸ ನಿಂತಿರಬೇಕು ಎನಿಸುತ್ತದೆ. ಏನೇ ಇರಲಿ ಈ ಎರಡು ಕಂಭಗಳು ಇಡೀ ದೇವಾಲಯಕ್ಕೇನೇ ಒಂದು ಅಪೂರ್ವ ಸೊಬಗನ್ನು ಕೊಡುತ್ತದೆಂದರೆ ಅತಿಶಯೋಕ್ತಿ ಆಗಲಾರದು. ಇಲ್ಲಿಗೆ ಬಂದವರೆಲ್ಲಾ ಇದರ ಎದುರು ನಿಂತು ಫೋಟೋ ತೆಗೆಯುವುದು ಸಾಮಾನ್ಯ. ಒಂದು ಮಾತು- ಇಲ್ಲಿ ಫೋಟೋ. ವಿಡಿಯೋ ಎಲ್ಲಾ ಅನಿರ್ಭಂದಿತ. ಎಷ್ಟು ಫೋಟೋ ಬೇಕಾದರೂ ತೆಗೆಯಬಹುದಾಗಿದೆ. ಹೀಗಿರಬೇಕು ಪ್ರೇಕ್ಷಣೀಯ ಸ್ಥಳಗಳೆಂದರೆ! ನಮ್ಮ ಈ ಸಲದ ಯಾತ್ರೆಯಲ್ಲಿ ಎಲ್ಲಿಗೆ ಹೋದರೂ ಸರಿಯಾಗಿ  ಫೋಟೋ ತೆಗೆಯಲು ಆಗಲಿಲ್ಲವಲ್ಲಾ ಎಂಬ ಕೊರಗು ಇಲ್ಲಿ ಮಾಯವಾಯಿತು. ನಾವು ಇಲ್ಲಿ ಸುಮಾರು 3 ಘಂಟೆಗಳ ಕಾಲ ಇದ್ದು ಸುಮಾರು 600 ಫೋಟೋ ತೆಗೆದಿದ್ದೇವೆ. ಸಮಯಾಭಾವ ಇಲ್ಲದಿದ್ದರೆ ಇನ್ನೂ ಸೂಕ್ಷ್ಮ ಕೆತ್ತನೆಗಳ ಫೋಟೋ ತೆಗೆಯಬಹುದಿತ್ತು. ಸೂರ್ಯಮಂದಿರವನ್ನು ವರ್ಣಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಆಳವಾದ ಶಿಲ್ಪ ಕಲಾ ಜ್ಞಾನ ವಿವರಣಾ ಶಕ್ತಿ ಬೇಕು. ಇವೆರಡೂ ನನ್ನಲ್ಲಿಲ್ಲವಾದ್ದರಿಂದ  ಆದಷ್ಟೂ ಹೆಚ್ಚು ಫೋಟೋಗಳನ್ನೇ ಇಲ್ಲಿ ಕೊಟ್ಟಿದ್ದೇನೆ. ನೀರಸ ವರ್ಣನೆಗಿಂತ ಪ್ರತ್ಯಕ್ಷ ದರ್ಶನವೇ ನಿಮಗೆ ಇಲ್ಲಿನ ಸೌಂದರ್ಯವನ್ನು ಕಂಡು ಅರಿಯಬಹುದು ಎಂದು ನನ್ನ ಆಶಯ.


Entrence to the Dance Hall
 
decorated interior of dance hall

 ಈ ಸುಂದರ ಯಮಳ ಸ್ಥಂಭಗಳನ್ನು ನೋಡಿ ಆನಂದಿಸಿ ಮುಂದೆ ಕೆಲವು ಮೆಟ್ಟಿಲುಗಳನ್ನು ಏರಿದರೆ ನಾವು ಸಭಾ ಮಂಟಪದಲ್ಲಿರುತ್ತೇವೆ. ಇಲ್ಲಿ 52 ಸಾಲಂಕೃತ ಕಂಭಗಳಿವೆ. ಎಲ್ಲದರಲ್ಲಿಯೂ ಒಂದಿಂಚೂ ಜಾಗ ಬಿಡದೆ ರಚಿಸಿದ ಕಲೆಗಾರಿಕೆ. ಪ್ರತಿಯೊಂದು ಕಂಬವನ್ನೂ ಮಕರ ತೋರಣಗಳು ಪರಸ್ಪರ ಜೋಡಿಸಿಕೊಂಡಿವೆ. ಇವುಗಳ ವಿನ್ಯಾಸ ಸೊಬಗು ಅಪ್ರತಿಮ. 



Richly decorated pillers & arch



Ceiling










ಮೇಲ್ಗಡೆ ವೃತ್ತಾಕಾರದ ಮೇಲ್ಚಾವಣಿ. ಮದ್ಯದಲ್ಲಿ ಇಳಿಬಿಟ್ಟ ಹೂ ಗೊಂಚಲು. ಎಲ್ಲವೂ ಒಟ್ಟಿಗೆ ಮಿಳಿತವಾಗಿ ನಮಗೆ ಸ್ವರ್ಗ ಸಮಾನ ದೃಶ್ಯವನ್ನು ನೀಡುತ್ತದೆ. ಮೌಂಟ್ ಅಬು ನೋಡಿ ಬಂದ ನಮಗೆ ಇಲ್ಲಿಯೂ ಕಣ್ಣಿಗೆ ಅದೇ ಆನಂದ ದೊರೆಯಿತು. ಇಲ್ಲಿನ ಕೆಲಸ ಮುಗಿದ ಮೇಲೆ ಇದೇ ಶಿಲ್ಪಿಗಳು ಮೌಂಟ್ ಅಬುವಿನಲ್ಲಿ ದಿಲ್ವಾರ ಮಂದಿರ ರಚಿಸಿದ್ದಾರೋ ಎಂಬ ಭಾವನೆ ಉಂಟಾಗುತ್ತದೆ. ಇಲ್ಲಿನ ಪ್ರತಿಕೃತಿ ಅದು. ಇಲ್ಲಿ ಮರಳುಗಲ್ಲು ಅಲ್ಲಿ ಶುಭ್ರ ಅಮೃತ ಶಿಲೆ. ವಿನ್ಯಾಸ ಮತ್ತು ಹೆಚ್ಚಿನ ಶಿಲ್ಪಗಳು ಸಾಮ್ಯತೆ ಹೊಂದಿವೆ. ಅಲ್ಲಿ ಜೈನ ಸಂಸ್ಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಇಲ್ಲಿನ ರಾಜನ ಮಂತ್ರಿ ಕಟ್ಟಿಸಿದಲ್ಲವೇ? ಹಾಗಾಗಿ ಸಾಮ್ಯತೆ ಸಹಜ. ಈ ಸಭಾ ಮಂಟಪಕ್ಕೆ ನಾಲ್ಕೂ ಕಡೆಯಿಂದ ಒಳಬರಲು ಮೆಟ್ಟಿಲುಗಳಿವೆ. ಇಲ್ಲಿ ರಾಮಾಯಣ, ಮಹಾಭಾರತ ಮತ್ತು ಕೃಷ್ಣ ಲೀಲೆಗಳ ಶಿಲ್ಪಗಳಿವೆ.


ಸಭಾಮಂಟಪದ ಮುಂದುಗಡೆಯೇ ಅಂತರಾಳ ಮತ್ತು ಗರ್ಭಗೃಹವಿದೆ. ಇಲ್ಲಿಯೂ ಹಲವಾರು ಕಂಭಗಳಿವೆ. ಮೇಲೆ ಮೇಲ್ಚಾವಣಿ ಸುಂದರವಾಗಿದೆ. ಆದರೆ ಸಭಾ ಮಂಟಪದಷ್ಟು ಸೂಕ್ಷ್ಮ ಕೆತ್ತನೆಗಳಿಲ್ಲ.



 ನಾವು ಒಳಗಿರುವಾಗಲೇ ಯಾತ್ರಿಕರ ಒಂದು ದೊಡ್ಡ ಗುಂಪು ಆಗಮಿಸಿತು. ಜೊತೆಗೆ ಒಬ್ಬ ಗೈಡ್ ಇದ್ದು ಅವರಿಗೆಲ್ಲ ವಿವರಿಸುತಿದ್ದ. ಅವರ ಗುಂಪು ಕೇವಲ 15 ನಿಮಿಷದಲ್ಲೇ ಪೂರ್ತಿ ದೇವಾಲಯ ವೀಕ್ಷಣೆ ಮಾಡಿ ಹೊರಟು ಹೋಯಿತು. ಅವರಿಗೆ ಅದೇನು ಅರ್ಥ ಆಯಿತೋ, ನನಗೆ ತಿಳಿಯದು. ಬಹುಶಃ ಅವರು ಪೂರ್ತಿ ಗುಜರಾತನ್ನು ಒಂದೇ ದಿನದಲ್ಲಿ ನೋಡಿ ಮುಗಿಸುವ ಆತುರದಲ್ಲಿರಬೇಕು. ಅವರು ಗರ್ಭಗುಡಿಯೊಳಗೆ ಇಣುಕಿ ನೋಡಿ ಸೂರ್ಯ ಎಲ್ಲಿದ್ದಾನೆ ಎಂದು ಕೇಳಿದಾಗ – ಸೂರ್ಯ ಮೇಲೆ ಆಕಾಶದಲ್ಲಿದ್ದಾನೆ ಎಂದು ನಾನು ಹೇಳಿದಾಗ ಎಲ್ಲರೂ ಗೊಳ್ಳನೆ ನಕ್ಕರು.
ಆಮೇಲೆ ನಾವು ದೇವಾಲಯದ ಹೊರಗಣ ಸೌಂದರ್ಯವನ್ನು ಆಸ್ವಾದಿಸಲು ಹೊರ ಬಂದೆವು. ಇಲ್ಲಿನ ಹೊರ ಭಿತ್ತಿಯಲ್ಲಿ ಬಹಳ ಸುಂದರ ಕೆತ್ತನೆಗಳಿವೆ. ಒಟ್ಟಾರೆ 12 ಬೇರೆ ಬೇರೆ ಭಂಗಿಯ ಸೂರ್ಯ ವಿಗ್ರಹಗಳಿವೆ. ಮಾತ್ರವಲ್ಲ ಅಷ್ಟ ದಿಕ್ಪಾಲಕರನ್ನೂ ಕೆತ್ತಿದ್ದಾರೆ.





ಕೆಲ ವಿಗ್ರಹಗಳು ಭಿನ್ನವಾಗಿದ್ದರೂ ಈಗ ಉಳಿದುಕೊಂಡಿರುವುದು ಸುಂದರವಾಗಿದೆ. ಸುತ್ತಲಿರುವ ಉದ್ಯಾನವು ಈ ದೇವಾಲಯಕ್ಕೆ ಒಂದು ಸುಂದರ ಹಿನ್ನಲೆಯನ್ನು ಒದಗಿಸುತ್ತದೆ. ಇದರ ಪಕ್ಕದಲ್ಲೇ ಒಂದು ಪುಟ್ಟ ಗುಡಿ ಇದೆ, ಒಳಗಡೆ ಶಿವಲಿಂಗವಿದೆ.


 ಅಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಇನ್ನೊಂದು ಜೊತೆ ಕಂಭಗಳಿವೆ. ಅದರಲ್ಲೂ ಪೂರ್ತಿ ಕೆತ್ತನೆ ಕೆಲಸ ಇದೆ. 

ನಮ್ಮ ನಿಗದಿತ ಸಮಯ ಮುಗಿಯಿತು. ನಮಗೆ ಅಲ್ಲಿಂದ ಹೊರಟು ಗುಜರಾತ್ ರಾಜಧಾನಿಯಾದ ಗಾಂಧಿನಗರಕ್ಕೆ ಹೋಗಬೇಕಾಗಿತ್ತು. ಬಸ್ ಹಿಡಿದು ಮೆಹಸಾನಕ್ಕೆ ಬಂದೆವು. ಊಟ ಮಾಡಿ ಗಾಂಧಿನಗರ ಬಸ್ ಹಿಡಿದೆವು. ಸುಮಾರು 50 ಕಿ.ಮಿ ದೂರ. ಅಲ್ಲಿ ನಾವು ಅಕ್ಷರಧಾಮಕ್ಕೆ ಹೋದೆವು. ಇಲ್ಲಿ ಸಹಾ ಫೋಟೋ ತೆಗೆಯಲು ಬಿಡುವುದಿಲ್ಲ. ಎಲ್ಲ ಸಾಮಾನುಗಳನ್ನು ಹೊರಗಡೆಯೇ ಜಮಾ ಮಾಡಿ ಒಳ ಪ್ರವೇಶಿಸಬೇಕು. ಕಟ್ಟು ನಿಟ್ಟಿನ ತಪಾಸಣೆ ಇದೆ. ಅಕ್ಷರಧಾಮವು ಬಹಳ ಸೊಗಸಾದ ಉದ್ಯಾನದ ಮಧ್ಯೆ ಎತ್ತರವಾಗಿ, ಭವ್ಯವಾಗಿ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಶಿಸ್ತು. ಮಧ್ಯದಲ್ಲಿ ಕಾರಂಜಿಗಳಿಂದ ನೀರು ಚಿಮ್ಮುತ್ತಿದೆ. ಒಳಗಡೆ ಸ್ವಾಮಿನಾರಾಯಣನ ಸ್ವರ್ಣ ಲೇಪಿತ ವಿಗ್ರಹ. ಅದಕ್ಕೆ ಸುತ್ತು ಬರಲು ವಿಶಾಲವಾದ ಜಾಗವಿದೆ. ಅದೆಲ್ಲ ನೋಡಿ ನಾವು ಅಲ್ಲಿನ ಲೇಸರ್ ಶೋ ನೋಡಲು ಹೋದೆವು. ಇದಕ್ಕೆ 75 ರೂ. ಕೊಟ್ಟು ಟಿಕೆಟ್ ಕೊಳ್ಳಬೇಕು. ವಿಶಾಲವಾದ ಗ್ಯಾಲರಿಯಲ್ಲಿ ಕುಳಿತೆವು. ಸ್ವಲ್ಪ ಹೊತ್ತಿನಲ್ಲೇ ಶೋ ಪ್ರಾರಂಭವಾಯಿತು. ಪುರಾಣದ ನಚಿಕೇತನ ಕಥೆ. ಅತ್ಯಾದುನಿಕ ತಂತ್ರಜ್ಞಾನದ ಸಹಾಯದಿಂದ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುವ ಈ ಪ್ರದರ್ಶನವು ಬಹಳ ಆಕರ್ಷಣೀಯವಾಗಿದೆ. ನಮ್ಮನ್ನು ನಿಜಕ್ಕೂ ಯಮಲೋಕಕ್ಕೇ ಒಯ್ದು ಸಾಕ್ಷಾತ್ ಯಮ ದರ್ಶನ ಮಾಡಿಸಿ ಬಿಡುತ್ತಾರೆ. ಅಂತಹ ಒಂದು ಭ್ರಮಾ ಲೋಕವನ್ನು ಸೃಷ್ಟಿಸಿ ನಡೆಸುವ ಈ ಶೋವನ್ನು ತಪ್ಪದೇ ನೋಡಲೇಬೇಕು.
ಶೋ ಮುಗಿದ ಮೇಲೆ ಅಲ್ಲೇ ಉತ್ತಮವಾದ ಉಪಹಾರ ಮಾಡಿಕೊಂಡು ಅಹಮದಾಬಾದ್ ಗೆ ಹೊರಟೆವು. ನಮಗೆ ಒಂದು ಟ್ಯಾಕ್ಸಿ ಸಿಕ್ಕಿತು. ಅದರಲ್ಲಿ 45 ಕಿ.ಮಿ. ಪ್ರಯಾಣಿಸಿ ಅಹಮದಾಬಾದ್ ರೈಲು ನಿಲ್ದಾಣಕ್ಕೆ ಬಂದೆವು. ನಮ್ಮ ದುರಾಂತೋ ಎಕ್ಸ್ಪ್ರೆಸ್ ರಾತ್ರಿ 11.30ಕ್ಕೆ. ಅದರಲ್ಲಿ ಆರಾಮವಾಗಿ ನಿದ್ರೆಮಾಡಿ ಬೆಳಗ್ಗೆ 6 ಘಂಟೆಗೆ ಮುಂಬಯಿ ಸೆಂಟ್ರಲ್ ತಲಪಿದೆವು. ಅಲ್ಲಿಂದ ಮತ್ತೆ ಟ್ಯಾಕ್ಸಿಯಲ್ಲಿ ಮುಂಬಯಿ ವಿಕ್ಟೋರಿಯಾ ಟೆರ್ಮಿನಸ್ ಗೆ ಬಂದು ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ಪ್ರೆಸ್ ಹತ್ತಿದೆವು. ಮರುದಿನ ಬೆಳಗ್ಗೆ 9 ಘಂಟೆಗೆ ಬೆಂಗಳೂರು. ನಮ್ಮ ಈ 11 ದಿವಸಗಳ ಪ್ರಯಾಣ ಯಾವುದೊಂದು ತೊಂದರೆಗಳಿಲ್ಲದೆ ನಡೆಸಿಕೊಟ್ಟ ದೇವರಿಗೆ ವಂದನೆಗಳನ್ನರ್ಪಿಸಿದೆವು.

No comments:

Post a Comment