Saturday, 15 February 2014

MOUNT ABU







ಮುಂಜಾನೆ 5 ಘಂಟೆಗೆ ಎದ್ದು ಲಗುಬಗೆಯಿಂದ ರೂಂ ಖಾಲಿ ಮಾಡಿ ರಿಕ್ಷಾದಲ್ಲಿ ಸೋಮನಾಥ ರೈಲು ನಿಲ್ದಾಣ ತಲುಪಿದೆವು.  ಇಲ್ಲಿಂದ ಬೆಳಗ್ಗೆ 6 ಘಂಟೆಗೆ ಹೊರಡುವ ಅಹ್ಮದಾಬಾದ್ ಎಕ್ಷಪ್ರೆಸ್ಸ ನಲ್ಲಿ ಹೊರಟೆವು. ರಶ್ ಇರದಿದ್ದುದರಿಂದ ಗಡದ್ದಾಗಿ ನಿದ್ದೆಯೂ ಬಂತು. ಮಧ್ಯಾಹ್ನ 3.30ಕ್ಕೆ ಅಹಮದಾಬಾದ್ ತಲುಪಿದೆವು. ಅಲ್ಲಿ ಕ್ಲೊಕ್ ರೂಂನಲ್ಲಿ ನಮ್ಮ ಲಗ್ಗೇಜ್ ಇರಿಸಿ ಪೇಟೆ ಸುತ್ತಾಡಲು ಹೊರಟೆವು. ಒಂದು ರಿಕ್ಷಾ ಹಿಡಿದು ಲಕ್ಷ್ಮೀನಾರಾಯಣ ಮಂದಿರಕ್ಕೆ ಹೋದೆವು.


 ಪೇಟೆಯ ಮಧ್ಯದಲ್ಲಿರುವ ಈ ದೇವಾಲಯವು ವಿಶಾಲ ಒಳಾಂಗಣ ಹೊಂದಿದ್ದು ಸುಂದರವಾಗಿದೆ. ಗೋಪುರ, ಮುಖಮಂಟಪ ಎಲ್ಲ ಚೆನ್ನಾಗಿದೆ. ಅಲ್ಲೇ ಸ್ವಲ್ಪ ಹೊತ್ತು ಕುಳಿತು ದೇವರ ದರ್ಶನ ಮಾಡಿ ನಂತರ ಅಲ್ಲಿಂದ ಹೊರಟೆವು.





 ಅಹ್ಮದಾಬಾದ್ ನ ಕಂಕಾರಿಯ ಸರೋವರ ನೋಡಲೆಂದು ರಿಕ್ಷಾ ಮಾಡಿ ಹೊರಟೆವು. ಆದರೆ ಆ ದಿನ ರಜಾಇದ್ದುದರಿಂದ ಕಂಕಾರಿಯಾದ ಗೇಟ್ ನ್ನು ಮಾತ್ರ ನೋಡಲು ಸಾದ್ಯವಾಯಿತಷ್ಟೇ.ಇಲ್ಲಿ ರಾತ್ರಿ ಹೊತ್ತು ಲೈಟ್ ಶೋ  ಇರುತ್ತದಂತೆ. ಹಾಗಾಗಿ ಅಲ್ಲೇ ಆರಾಮವಾಗಿ ಕುಳಿತು ಕಾಲಕಳೆಯಬೇಕೆಂಬ ನಮ್ಮ ಉದ್ದೇಶ ವಿಫಲವಾಯಿತು.ಅದೇ ರಿಕ್ಷಾದಲ್ಲಿ ನಾವು ಪೇಟೆಗೆ ಬಂದೆವು. ಇಲ್ಲಿಗೆ ಬಂದಾಗ ನಾವು ಬೆಂಗಳೂರಿನಲ್ಲಿಯೇಇದ್ದೇವೇನೋ ಎಂಬ ಅನುಭವ. ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ  ಬಿ ವಿ ಕೆ ಅಯ್ಯಂಗಾರ್  ರಸ್ತೆಗಳಲ್ಲಿರುವ ಅದೇ ಅಂಗಡಿಗಳು, ಎಲ್ಲೆಲ್ಲೂ ಎಲೆಕ್ಟ್ರಿಕ್, ಎಲೆಕ್ಟ್ರೋನಿಕ್ ಮತ್ತು ಬಟ್ಟೆ ಅಂಗಡಿಗಳು. ನಾವು ಕೆಲ ಅಂಗಡಿಗಳಿಗೆ ನುಗ್ಗಿದೆವು. ಸ್ವಲ್ಪ ಬಟ್ಟೆ ಖರೀದಿಸಿದೆವು. ಅಲ್ಲೇ ಚಾಟ್ ಅಂಗಡಿಗಳು ರಸ್ತೆಯ ಪಕ್ಕದಲ್ಲಿದ್ದು ಬನ್ನಿ ಬನ್ನಿ ಎಂದು ಕೂಗುತಿದ್ದರು.ನಾವೂ ಅಲ್ಲೇ ಉಪಹಾರ ಮಾಡಿದೆವು. ಒಳ್ಳೆಯ ರುಚಿಕಟ್ಟಾದ ಚಾಟ್ ಗಳನ್ನೂ ತಿಂದೆವು. ಮತ್ತೆ ಸ್ವಲ್ಪ ಕಾಲ ಕಳೆದು ನಿಧಾನವಾಗಿ ರೈಲ್ವೆ ನಿಲ್ದಾಣದೆಡೆಗೆ ನಡೆದೆವು. ಈಗ ಸಮಯ ರಾತ್ರಿ  9 ಘಂಟೆ. ನಮ್ಮ ಅಜ್ಮೀರ್ ಪ್ಯಾಸೆಂಜರ್ ಹೊರಡುವುದು ರಾತ್ರಿ11.15ಕ್ಕೆ. ಅಲ್ಲೇ ಪ್ಲಾಟ್ ಫಾರಂನಲ್ಲಿ ಕಾದೆವು. ರಾಜಸ್ತಾನಿ ಲಂಬಾಣಿಗಳ ಒಂದು ದೊಡ್ಡ ತಂಡ ಅಲ್ಲಿಗೆ ಬಂತು. ಎಲ್ಲ ಕರಿ ಬಟ್ಟೆ ಮತ್ತು ಕೈ ತೋಳುಗಳಿಗೆ ಬಿಳಿಯ ಬಳೆ ಧರಿಸಿದ್ದ ಹೆಂಗಳೆಯರು, ತಲೆಗೆ ದೊಡ್ಡ ಬಣ್ಣದ ರುಮಾಲು ಧರಿಸಿದ ಗಂಡಸರು ಎಲ್ಲವೂ ನೋಡಲು ಆಕರ್ಷಣೀಯವಾಗಿತ್ತು. ರೈಲು ಹತ್ತಿದೆವು. ನಮ್ಮ ಅದೃಷ್ಟದಿಂದ ಪಕ್ಕದ ಸೀಟ್ ನಲ್ಲಿದ್ದ ಒಬ್ಬರು ರಾಜಸ್ಥಾನಿ ದಂಪತಿಗಳು ನಮ್ಮನ್ನು ಮಾತಾಡಿಸಿದರು. ಅವರು ಬೆಂಗಳೂರು, ಚೆನ್ನೈನಲ್ಲಿ ಇದ್ದವರು. ಹಾಗಾಗಿ ಸ್ವಲ್ಪ ಕನ್ನಡ ಬರುತಿತ್ತು. ಅವರೂ ನಮ್ಮ ಹಾಗೆ ಅಬು ರೋಡ್ ಸ್ಟೇಷನ್ ನಲ್ಲಿ ಇಳಿಯುವವರು. ನಮಗೆ ಒಳ್ಳೆಯ ಜೊತೆ ಆಯಿತು. ಬೆಳಗ್ಗೆ 6.15 ಕ್ಕೆ ಅಬುರೋಡ್ ತಲುಪಿದೆವು. ಅಲ್ಲಿಂದ ಬಸ್ ನಿಲ್ದಾಣ ಹತ್ತಿರದಲ್ಲೇ ಇತ್ತು. ಅಲ್ಲಿಗೆ ಹೋದಾಗ ಮೌಂಟ್ ಅಬುಗೆ ಹೋಗುವ ಬಸ್ ತಯಾರಾಗಿ ನಿಂತಿತ್ತು. ಬಸ್ ನಲ್ಲಿ ಒಟ್ಟು10 ಜನ ಇದ್ದೆವಷ್ಟೇ. ನಿಧಾನವಾಗಿ ಏರು ದಾರಿಯಲ್ಲಿ ಬಸ್ ಸುಮಾರು 22 ಕಿ.ಮಿ.ಸಾಗಬೇಕಿತ್ತು. ಎರಡೂ ಪಕ್ಕದಲ್ಲಿ ಬೆಟ್ಟ ಗುಡ್ಡ ಮತ್ತು ಕಾಡು.ಮಂಜು ಆವರಿಸಿ ಸೂರ್ಯನ ಬೆಳಕು ಮಸುಕು ಮಸುಕಾಗಿ ರಮ್ಯವಾದ ಒಂದು ಪರಿಸರ ನಮಗಾಗಿ ಕಾದಿತ್ತು.



 ಮೌಂಟ್ ಅಬು ಬಸ್ ಸ್ಟಾಂಡ್ ನಲ್ಲಿ ಇಳಿದು ಪಕ್ಕದಲ್ಲೇ ಇರುವ ಒಂದು ಹೋಟಲಿಗೆ ಚಹಾ ಕುಡಿಯಲು ಹೋದೆವು. ಅಲ್ಲೇ ನಮ್ಮ ಬೆಳಗ್ಗಿನ ಉಪಹಾರವೂ ಆಯಿತು. ನಾವು ಕಾದಿರಿಸಿದ್ದ ಹೋಟೆಲ್ SRP INN ಸಮೀಪದಲ್ಲೇ ಇದೆ ಎಂದು ತಿಳಿಯಿತು. ನಿಧಾನವಾಗಿ ನಡೆದುಕೊಂಡು ಹೋಟೆಲ್ ತಲುಪಿದೆವು.



 ನಮ್ಮ ಚೆಕ್ ಇನ್ ಸಮಯ ಬೆಳಗ್ಗೆ 10 ಘಂಟೆಗೆ. ಆದ್ದರಿಂದ ಅಲ್ಲೇ ಲಾಂಜ್ ನಲ್ಲಿ ಕುಳಿತೆವು. ಸುಮಾರು 9 ಘಂಟೆಗೆ ನಮಗೆ ರೂಂ ಒದಗಿಸಿದರು. ಚೆನ್ನಾಗಿರುವ ಡಬಲ್ ರೂಂ. ಬಾಡಿಗೆ ದಿನವೊಂದರ 600 ರೂ. ಮೂವರಿಗೆ. ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದಾಗ ನಮ್ಮ ಆಯಾಸವೆಲ್ಲಾ ಪರಿಹಾರ. ಬೇಗನೇ ಅಲ್ಲಿಂದ ಹೊರಟು ದಿಲ್ ವಾರಾ ಟೆಂಪಲ್ ನೋಡಲು ಹೊರಟೆವು. ಬಾಡಿಗೆ ಜೀಪ್ ನಲ್ಲಿ ತಲಾ 10 ರೂ. ಕೊಟ್ಟು ಅಲ್ಲಿಗೆ ತಲುಪಿದೆವು. ಇದೇನಿದು ದಿಲ್ವಾರ ಎಂದರೆ ಇಷ್ಟೇನೇ ಎಂಬ ನಿರಾಸೆ ಆಯಿತು ನಮಗೆ. ಸುತ್ತಲೂ ಎತ್ತರವಾದ ಪೌಳಿ ಇದ್ದು ಗೋಪುರದ ಸ್ವಲ್ಪ ಭಾಗ ಮಾತ್ರ ಕಾಣುತಿತ್ತು. 


ಮತ್ತೆ ಇಲ್ಲಿ ಒಳಗಡೆ ಮೊಬೈಲ್ ಕೆಮರಾ ಏನನ್ನೂ ಒಯ್ಯುವಂತಿಲ್ಲ. ಆದ್ದರಿಂದ ಹೊರಗಿನಿಂದಲೇ ನಮಗೆ ಎಷ್ಟು ಕಾಣುತ್ತದೋ ಅಷ್ಟನ್ನೇ ಫೋಟೋ ತೆಗೆದೆವು. ಈ ಜೈನ ಮಂದಿರಕ್ಕೆ ಮಧ್ಯಾಹ್ನ 12 ಘಂಟೆಗೆ ಪ್ರವೇಶ ಲಭ್ಯ. ಅಲ್ಲಿಯವರೆಗೆ ಅಲ್ಲೇ ಹೊರಗಡೆ ಸ್ವಲ್ಪ ಸುತ್ತಾಡಿದೆವು.




 ಒಬ್ಬ ಸರ್ಧಾರ್ಜಿಯ ಅಂಗಡಿಗೆ ಹೋದೆವು. ಆತನು ಚಂಡೀಘರ್ ನವನು. ನಾನು ಸಹಾ ಉದ್ಯೋಗದಲ್ಲಿರುವಾಗ 2 ವರ್ಷ ಚಂಡೀಘರ್ ನಲ್ಲಿದ್ದೆ. ಹಾಗಾಗಿ ಅಲ್ಪ ಸ್ವಲ್ಪ ಪಂಜಾಬಿ ಭಾಷೆ ಬರುತಿತ್ತು. ಅವನಿಗೂ ನಮ್ಮಲ್ಲಿ ಆತ್ಮೀಯತೆ ಹುಟ್ಟಿತು. ಅವನಲ್ಲಿ ಸ್ವಲ್ಪ ವ್ಯಾಪಾರ ಮಾಡಿದೆವು. ಮಂದಿರದ ಒಳಗಡೆ ಹೋಗುವ ಸಮಯವಾಯಿತು. ಹೆಚ್ಚು ಜನಸಂದಣಿಯಿರಲಿಲ್ಲ. ಬಹಳ ಕಟ್ಟುನಿಟ್ಟಿನ ತಪಾಸಣೆಯ ನಂತರ ನಮ್ಮನ್ನು ಒಳಗೆ ಬಿಟ್ಟರು.ಒಳಗಡೆ ಸಾಗುತಿದ್ದಂತೆಯೇ ನಮ್ಮ ಮನದಲ್ಲಿ ಮೂಡಿದ್ದ ಅಭಿಪ್ರಾಯವೇ ಬದಲಾಯಿತು. ಸ್ವರ್ಗ ಸದೃಶ ಕಲಾಲೋಕ ನಮ್ಮೆದುರು ಅನಾವರಣಗೊಂಡಿತ್ತು.
ಮೊದಲ 2 ಮಂದಿರಗಳು ಸುಂದರವಾಗಿದ್ದವು. ಇಲ್ಲಿ ಅಮೃತಶಿಲೆಯಲ್ಲಿ ಕಟೆದ ಮೂರ್ತಿಗಳು, ಕಂಭಗಳು ಮತ್ತು ಮಧ್ಯದಲ್ಲಿ ಗರ್ಭ ಗೃಹಗಳಿದ್ದು ಒಳಗಡೆ ಜಿನ ಮೂರ್ತಿ ಇದ್ದವು. ಚಿಕ್ಕ ಚೊಕ್ಕ ಮಂದಿರಗಳನ್ನು ನೋಡಿ ನಾವು ಹೊರ ಬಂದೆವು.ಅಲ್ಲೇ ಸ್ವಲ್ಪ ಎತ್ತರವಾದ ಜಾಗದಲ್ಲಿ ಒಂದು ಪುಟ್ಟ ಮಂದಿರವಿತ್ತು.ಇದು ದಿಗಂಬರ ಜೈನ ಪಂಥಕ್ಕೆ ಸೇರಿದ್ದಾಗಿದೆ. ಇಲ್ಲೇನೂ ವಿಶೇಷ ಕಾಣಲಿಲ್ಲ. ಮುಂದೆ ಹೋದಾಗ ವಿಶಾಲವಾದ ಮಂದಿರ ಸಿಗುತ್ತದೆ. ಇದೇ ಇಲ್ಲಿನ ಪ್ರಮುಖ ಆಕರ್ಷಣೆ. ಇದನ್ನು ಹೇಗೆ ವರ್ಣಿಸುವುದು ಎಂಬುದೇ ನನ್ನ ಸಮಸ್ಯೆ.
ಈ ದೇವಾಲಯವನ್ನು ಸೋಲಂಕಿ ಮಹಾರಾಜ ಭೀಮದೇವನ ಮಂತ್ರಿಯಾದ ವಿಮಲ್ ಷಾ ಎಂಬವನು 1031ರಲ್ಲಿ ನಿರ್ಮಿಸಿದನಂತೆ. ಇದಕ್ಕೆ ವಿಮಲ್ ವಾಶೀ  ಎಂದು ಹೆಸರು. ಮೊದಲು ನಾವು ಮಂದಿರದ ಒಳ ಪರಿಕ್ರಮದಲ್ಲಿ ಸಾಗಿದೆವು. ಇಲ್ಲಿ ಒಟ್ಟು 54 ಕೋಷ್ಟಕಗಳಿದ್ದು ಅವುಗಳಲ್ಲಿ ಜೈನ ತೀರ್ಥಂಕರರ ಮತ್ತು ಇತರ ದೇವತೆಗಳ ಮೂರ್ತಿಗಳನ್ನು ಇರಿಸಿದ್ದಾರೆ. ದಿಗಂಬರ ಮೂರ್ತಿಗಳಿಗೆ ಶ್ವೇತವಸ್ತ್ರ ಉಡಿಸಿದ್ದಾರೆ. ಆ ಮೂರ್ತಿಗಳ ಮಂದಸ್ಮಿತ ಧರ್ಶನ ಬಹಳ ಆಕರ್ಷಣೀಯವಾಗಿದೆ. ಪ್ರತಿಯೊಂದು ಕೊಷ್ಟಕವೂ ಅತಿಶಯವಾದ ಶಿಲ್ಪ ಸೌಂದರ್ಯದಿಂದ ಅಲಂಕರಿಸಲ್ಪಟ್ಟಿದೆ.ಅವುಗಳ ದ್ವಾರ ಮತ್ತು ಬಾಗಿಲುವಾಡಗಳೂ ಮೇಲ್ಚಾವಣಿಗಳೂ ಹಾಲುಗಲ್ಲಿನಿಂದ ಕೆತ್ತಲ್ಪಟ್ಟ ಅಸಂಖ್ಯಾತ ದೇವಾನುದೇವತೆಗಳೂ ಪ್ರಾಣಿ ಪಕ್ಷಿ, ಹೂವು ಬಳ್ಳಿಗಳಿಂದ ಅಲಂಕರಿಸಿದ್ದಾರೆ. ಆದರೆ ಒಂದರ ಹಾಗೆ ಇನ್ನೊಂದಿಲ್ಲ.ಅಷ್ಟೊಂದು ವ್ಯೆವಿಧ್ಯಮಯವಾಗಿ ನಮ್ಮನ್ನು ಬೇರೆಯೇ ಒಂದು ಕಲಾಲೋಕಕ್ಕೆ ಒಯ್ಯುತ್ತದೆ. ಯಾವುದನ್ನು ನೋಡಲಿ ಯಾವುದನ್ನು ಬಿಡಲಿ ಎಂಬ ಗೊಂದಲಕ್ಕೆ ಒಳಗಾಗುತ್ತೇವೆ. ಆದರೆ ಇನ್ನೂ ಬಹಳ ನೋಡುವುದಿದೆ ಎಂಬ ಯೋಚನೆಯಿಂದ ಬೇಗ ಬೇಗ ಮುಂದೆ ಸಾಗಿದೆವು. ಇಷ್ಟನ್ನು ನೋಡುವಾಗಲೇ ಸುಮಾರು1 ½ ಘಂಟೆ ಕಳೆಯಿತು. ಮುಂದೆ ರಂಗಮಂಟಪ ಇದೆ. ಇಷ್ಟು ಸುಂದರವಾದ, ಅದ್ಬುತವಾದ ರಂಗಮಂಟಪ ಇನ್ನೊಂದಿಲ್ಲ. ಇದು 12 ಕಂಭಗಳಿಂದ ಕೂಡಿದ್ದು ಅಷ್ಟಭುಜಾಕೃತಿಯ ಮೇಲ್ಚಾವಣಿಯನ್ನು ಹೊಂದಿದೆ. ಒಂದೊದು ಕಂಬವೂ ಬೇರೆ ಬೇರೆ ಶಿಲ್ಪಗಳಿಂದ ಅಲಂಕೃತಗೊಂಡಿದ್ದರೆ ಅವುಗಳನ್ನು ಜೋಡಿಸುವ ಮಕರ ತೋರಣದ ಸೊಬಗೇ ಬೇರೆ. ಕಂಭಗಳಲ್ಲಿ ಸಂಗೀತ ನುಡಿಸುತ್ತಿರುವ ಅಪ್ಸರೆಯರು, 16 ವಿದ್ಯಾದೇವಿಯರನ್ನು ಕೆತ್ತಿದ್ದಾರೆ. ಮೇಲ್ಗಡೆ ನೋಡಿದರೆ ನಮಗೆ ಭ್ರಮೆ ಹುಟ್ಟಿಸುವ ಕಲಾ ಭಂಡಾರವಿದೆ. ವೃತ್ತಾಕಾರದ ಇದರಲ್ಲಿ ದೇವತೆಗಳೂ ಪ್ರಾಣಿ ಪಕ್ಷಿಗಳೂ ಹೂವು ಬಳ್ಳಿಗಳೂ ಇನ್ನೂ ಅನೇಕ ಸೂಕ್ಷ್ಮ ಕೆತ್ತನೆಗಳೂ ಇವೆ, ಮದ್ಯದಲ್ಲಿ ತೂಗುದೀಪದಂತೆ ಇಳಿಬಿಟ್ಟ ಅತಿ ಸುಂದರ ಹೂ ಗೊಂಚಲಿದೆ. ಇಲ್ಲಿ ಕೆಲವು ಹಿಂದೂ ದೇವರುಗಳ ಶಿಲ್ಪಗಳನ್ನೂ  ಕಾಣ ಬಹುದು. ಇಲ್ಲಿನ ಶಿಲ್ಪಗಳು ಒಂದಿನಿತೂ ಹಾಳಾಗದೆ ನೋಡುಗರ ಮನಸ್ಸಿಗೆ ಆನಂದ ನೀಡುತ್ತವೆ.
ರಂಗ ಮಂಟಪದ ಎದುರಲ್ಲಿ ಗರ್ಭ ಗೃಹವಿದೆ. ಇದರ ಅಲಂಕೃತ ಬಾಗಿಲು ಹಾಗೂ ಚೌಕಟ್ಟು ಸಹಾ ಬಹಳ ಸುಂದರವಾಗಿದೆ. ಒಳಗಡೆ ಶಾಂತಮೂರ್ತಿಯಾದ ಆದಿನಾಥನ ವಿಗ್ರಹವಿದೆ. ಇದನ್ನೆಲ್ಲಾ ನೋಡುವಾಗಲೇ ಬಹಳ ಸಮಯ ಕಳೆದು ಹೋಯಿತು. ಲಗುಬಗೆಯಿಂದ ಇನ್ನೊಂದು  ದೇವಾಲಯಕ್ಕೆ ಹೋದೆವು.
ಇಲ್ಲಿ ಸಹಾ ಹಿಂದಿನ ದೇವಾಲಯದ ಸೋಬಗೇ ಪುನರಾವರ್ತನೆಯಾಗುತ್ತದೆ. ಅಷ್ಟೇ ಸುಂದರ ಅದ್ಬುತ ಕಲೆಯ ಭಂಡಾರ, ಹಿಂದಿನ ದೇವಾಲಯದ ಪ್ರತಿ ಕೃತಿ ಎನ್ನಬಹುದು. ಈ ದೇವಾಲಯವನ್ನು ಲೂನಾ ವಾಶೀ ಎನ್ನುತ್ತಾರೆ. ಇದು ನೇಮಿನಾಥನಿಗೆ ಸಮರ್ಪಿತವಾಗಿದೆ, ಅದನ್ನು ನೋಡಿ ಕೊನೆಯ ದೇವಾಲಯಕ್ಕೆ ಬಂದೆವು. ಇದರ ಗೋಪುರವು ಬೇರೆಯೇ ರೀತಿಯದ್ದು. ಇಲ್ಲಿ ಅಷ್ಟು ಸೊಬಗಿನ ಶಿಲ್ಪ ವೈಭವವಿಲ್ಲ. ಸ್ವಲ್ಪ ಮಟ್ಟಿಗೆ ಅಪೂರ್ಣ ಶಿಲ್ಪಗಳು ಇದ್ದವು. ಅಷ್ಟರಲ್ಲಿ 6 ಘಂಟೆ ಆಯಿತು. ನಾವು ಹೊರಡಲೇಬೇಕಾದ ಸಮಯ ಅದು. ಮನಸ್ಸಿಲ್ಲದ ಮನಸಿನಿಂದ ಹೊರ ಬಂದೆವು. ಒಂದು ಅದ್ಬುತ ಕಲಾ ಜಗತ್ತಿನಿಂದ ಹೊರಬೀಳುವಾಗ ನನ್ನ ಮನಸ್ಸಿನಲ್ಲಿಉಳಿದುಕೊಂಡ ಒಂದೇ ಒಂದು ಕೊರಗು ಎಂದರೆ ಛೆ! ಈ ಸೌಂದರ್ಯವನ್ನು ಫೋಟೋದಲ್ಲಿ ಸೆರೆ ಹಿಡಿಯಲಾಗಲಿಲ್ಲವಲ್ಲಾ ಎಂದು.
ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಉಪಹಾರ ಮುಗಿಸಿ ಜೀಪ್ ಹಿಡಿದು ಮೌಂಟ್ ಅಬುವಿನ ಇನ್ನೊಂದು ಆಕರ್ಷಣೆಯಾದ ನಕ್ಕಿ ಸರೋವರ (ಲೇಕ್) ಗೆ ಬಂದೆವು.ನಕ್ಕಿ ಲೇಕ್ ಅಬು ಬೆಟ್ಟದ ಹೃದಯ ಭಾಗದಲ್ಲಿದೆ. ಇಲ್ಲಿನ ಪೇಟೆಗಳೆಲ್ಲಾ ಇದರ ಸಮೀಪದಲ್ಲೇ ಇದೆ. ಈ ಸರೋವರವನ್ನು ದೇವತೆಯೊಬ್ಬನು ತನ್ನ ನಖಗಳಿಂದಲೇ ಬಗೆದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿದನೆಂದು ದಂತ ಕಥೆಯಿದೆ.



ಇದು ಸುಮಾರು 1ಕಿ.ಮಿ. ಉದ್ದ ಹಾಗೂ 1/2 ಕಿ.ಮಿ. ಅಗಲವಿದೆ. ಅಲ್ಲದೆ ಬಹಳ ಆಳವಾಗಿದೆ. ಸುತ್ತಲೂ ಹಸಿರಿನ ಬೆಟ್ಟಗಳಿದ್ದು ಅವುಗಳ ಪ್ರತಿಬಿಂಬವು ನೀರಲ್ಲಿ ಪ್ರತಿಫಲಿಸುತ್ತಿದೆ. ಇಲ್ಲಿ ಬಗೆ ಬಗೆಯ ಬೋಟ್ ಗಳು ಯಾತ್ರಿಕರಿಗೆ ಜಲಸವಾರಿ ಮಾಡಿಸಲು ಕಾದು ನಿಂತಿವೆ.



 ಇಲ್ಲಿಂದ ಮೇಲೆ ನೋಡಿದರೆ ದೊಡ್ಡದೊಂದು ಕೊಡುಗಲ್ಲು ಕಾಣಿಸುತ್ತದೆ. ಇದರ ಆಕೃತಿಯು ದೊಡ್ಡ ಕಪ್ಪೆಯಂತಿದ್ದು ಇದಕ್ಕೆ ಟೋಡ್ ರಾಕ್ ಎನ್ನುತ್ತಾರೆ.







 ಸಂತೆಗಳೂ ಉಪಹಾರ ಮಂದಿರಗಳೂ ಬಹಳಷ್ಟಿವೆ. ರಾತ್ರಿ ಹೊತ್ತು ವಿದ್ಯುತ್ ದೀಪಗಳು ನೀರಲ್ಲಿ ಪ್ರತಿಫಲಿಸಿ ಸುಂದರ ನೋಟ ಸಿಗುತ್ತದೆ. ಇಲ್ಲಿ ತುಂಬಾ ಹೊತ್ತು ಕುಳಿತು ಕಾಲ ಕಳೆದೆವು.ಮೌಂಟ್ ಅಬುವಿನಲ್ಲಿ ತುಂಬಾ ಖರ್ಜೂರದ ಮರಗಳು ಕಾಣಸಿಗುತ್ತವೆ. ಆದರೆ ಇವುಗಳ ಹಣ್ಣು ಅಷ್ಟು ಶ್ರೇಷ್ಠ ಮಟ್ಟದಲ್ಲವಂತೆ.




 ನಂತರ ರಾಜಸ್ಥಾನಿ ಊಟ ಮಾಡಿ ರೂಂಗೆ ಬಂದೆವು. 
ಮರುದಿನ ನಾವು ಮೌಂಟ್ ಅಬು ಬಸ್ ಸ್ಟ್ಯಾಂಡ್ ಗೆ ಬಂದು ಬೆಳಗ್ಗೆ 8 ಘಂಟೆಗೆ ಹೊರಡುವ ಸೈಟ್ ಸೀಯಿಂಗ್ ಬಸ್ ನಲ್ಲಿ ಹೊರಟೆವು. ಇದಕ್ಕೆ ತಲಾ 70 ರೂ.ದರ.ಮೌಂಟ್ ಅಬು ನಲ್ಲಿರುವ ಎಲ್ಲ ಪ್ರೇಕ್ಷಣೀಯ ಜಾಗಗಳನ್ನು ತೋರಿಸುತ್ತಾರೆ. ಮೊದಲಿಗೆ ನಾವು ಶಂಕರ ಮಠಕ್ಕೆ ಹೋದೆವು. 




ನಂತರ ನಕ್ಕಿ ಲೇಕ್ ನ ಇನ್ನೊಂದು ಬದಿಯನ್ನು ನೋಡಿದೆವು. ಅಲ್ಲಿಂದ ಬ್ರಹ್ಮ ಕುಮಾರಿ ಸೆಂಟರ್ ಗೆ. ಇಲ್ಲಿ ಬಹಳ ಪ್ರಶಾಂತವಾದ ಜಾಗದಲ್ಲಿ  ಆಶ್ರಮವಿದೆ. 



 ಇಲ್ಲಿ ಸುಮಾರು 3000 ಮಂದಿ ಕುಳಿತು ಕೊಳ್ಳುವಷ್ಟು ವಿಶಾಲವಾದ ಸಭಾ ಮಂದಿರವಿದೆ. ಬಂದವರನ್ನು ಸ್ವಾಗತಿಸಿ ಬ್ರಹ್ಮ ಕುಮಾರಿ ಭಗಿನಿಯರೊಬ್ಬರು ಒಳಗೆ ಕರೆದುಕೊಂಡುಹೋಗಿ ಎಲ್ಲವನ್ನೂ ವಿವರಿಸಿದರು. ಜೊತೆಗೆ ಅವರ ಆದ್ಯಾತ್ಮಿಕ ತತ್ವ ಬೋಧನೆಯೂ ನಡೆಯಿತು. ನಂತರ ನಮ್ಮ ಬಸ್ಸು ಅಬುದಾ ದೇವಿ ಮಂದಿರದೆಡೆಗೆ ಸಾಗಿತು. ಅಬುದಾ ದೇವಿಯಿಂದಾಗಿ ಅಬು ಬೆಟ್ಟ ಎಂದು ಹೆಸರು ಬಂತು. ಈ ದೇವಾಲಯವು ಬೆಟ್ಟದ ತುದಿಯಲ್ಲಿದ್ದು ಸುಮಾರು 350 ಮೆಟ್ಟಲುಗಳನ್ನೆರಬೇಕು.



 ತಂಪಾದ ವಾತಾವರಣ ಹಸಿರು ಕಾಡು, ಬೆಟ್ಟ ಎಲ್ಲ ಚಾರಣದ ನೆನಪು ಹುಟ್ಟಿಸುತ್ತಿತ್ತು. ಮೇಲೆ ಹೋದಾಗ ಒಂದು ಸಣ್ಣ ದೇವಾಲಯ. 





ಒಳಗಡೆ ಪುಟ್ಟದೊಂದು ಗವಿ. ಇಲ್ಲಿ ಅಬುದಾ ದೇವಿಯ ದರ್ಶನ ಪಡೆದು ಕೆಳಗೆ ಇಳಿದೆವು. ನಮ್ಮ ಬಸ್ಸು ಮತ್ತೆ ಬಸ್ ಸ್ಟ್ಯಾಂಡ್ ಗೇ ಬಂದು ಎಲ್ಲರೂ ಊಟ ಮುಗಿಸಿ ಬರಲು ಹೇಳಿದರು. ಊಟ ಆದ ಮೇಲೆ ಮತ್ತೆ ಬಸ್ಸು ಹೊರಟಿದ್ದು  ದಿಲ್ವಾರ ಮಂದಿರಕ್ಕೆ. ಇಲ್ಲಿ ನಮಗೆ ವೀಕ್ಷಣೆಗೆ ಬರೇ 45 ನಿಮಿಷದ ಸಮಯ ಕೊಡುತ್ತಾರೆ. ಇದೆಲ್ಲಿಗೆ ಸಾಕು? ನಾವು ಹಿಂದಿನ ದಿನವೇ ನೋಡಿದ್ದರಿಂದ ಬೇರೆ ಯಾವುದನ್ನೂ ನೋಡದೆ ಆದಿನಾಥ ಮಂದಿರವನ್ನೇ ಇನ್ನೊಮ್ಮೆ ನೋಡಿ ಕಣ್ತುಂಬಿಸಿಕೊಂಡೆವು. ನಂತರ ನಮ್ಮ ಪಯಣ ಗುರುಶಿಖರ್ ಗೆ. ಇಲ್ಲಿ ಒಂದು ದತ್ತಾತ್ರೇಯನ ಮಂದಿರವಿದೆ. ಗುರುಶಿಖರವು ಅರಾವಳಿ ಪರ್ವತ ಶ್ರೇಣಿಯಲ್ಲೇ ಅತಿ ಎತ್ತರದ ಜಾಗ.




 ನಂತರ ನಮ್ಮನ್ನು ಅಚಲೇಶ್ವರ ಮಂದಿರಕ್ಕೆ ಕೊಂಡೊಯ್ದರು.







  
ಇಲ್ಲೇ ಒಂದುಪುಟ್ಟ ಲೇಕ್ ಸಹಾ ಇದೆ. ನಿಸರ್ಗ ಸೌಂದರ್ಯವನ್ನು ಚೆನ್ನಾಗಿ ಆನಂದಿಸಿದೆವು. ಮುಂದೆ ನಮ್ಮನ್ನು ಸನ್ ಸೆಟ್ ಪಾಯಿಂಟ್ ನಲ್ಲಿ ತಂದು ಬಿಟ್ಟರು.




 ಸೂರ್ಯಾಸ್ತ ಬೇಡ ಎಂದಿದ್ದವರು ಇದೆ ಬಸ್ ನಲ್ಲಿ ಬಸ್ ಸ್ಟ್ಯಾಂಡ್ ಗೆ ಬರಬಹುದು. ಅಲ್ಲೇ ನಿಂತು ಸೂರ್ಯಾಸ್ತ ನೋಡುವವರು ಆಮೇಲೆ ನಡೆದುಕೊಂಡೋ ಅಟೋ ದಲ್ಲೋ ವಾಪಸು ಬರಬೇಕು. ಆದಿನ ಸೂರ್ಯಾಸ್ತವು ಮೋಡ ಮುಸುಕಿದ್ದರಿಂದ ಸರಿಯಾಗಿ ಕಾಣಿಸಲೇ ಇಲ್ಲ. ನಡೆದುಕೊಂಡೆ ನಾವು ಹಿಂತಿರುಗಿದೆವು.



 ಮತ್ತೊಮ್ಮೆ ಅಬು ಪೇಟೆ ಸುತ್ತಾಡಿ ಊಟ ಮುಗಿಸಿ ರೂಮಿಗೆ  ಬಂದು ಬಿದ್ದುಕೊಂಡೆವು. ಮರುದಿನ ಬೆಳಿಗ್ಗೆ 6 ಘಂಟೆಯ ಬಸ್ ಗೆ ನಮಗೆ ಮೊಧೆರಾಗೆ ಹೋಗಬೇಕಿತ್ತು. ಇಲ್ಲಿಂದ ಸುಮಾರು 225 ಕಿ.ಮಿ. ಪ್ರಯಾಣ.
 ಅಂತೂ ನಮ್ಮ ಕನಸಿನ ಜಾಗವಾದ ಮೌಂಟ್ ಅಬು ದಿಲ್ವಾರ ಗಳನ್ನು ನೋಡಿದೆವೆಂಬತೃಪ್ತಿ ಯಿಂದ ಚೆನ್ನಾಗಿ ನಿದ್ರೆ ಬಂತು.
ಮುಂದೆ ಮೊಧೆರಾ ಸೂರ್ಯ ದೇವಾಲಯ  ನಮ್ಮನ್ನು ಕಾದಿತ್ತು.
                                                                                                                                                                                               

No comments:

Post a Comment