Friday, 19 March 2010

ಯಾಣಕ್ಕೊಂದು ಪ್ರಯಾಣ

ಯಾಣವನ್ನು ನೋಡಲೇಬೇಕೆಂಬ ಆಸೆ ಮನಸಲ್ಲಿ ಮೂಡಿ ಹಲವು ವರ್ಷಗಳೇ  ಕಳೆದಿತ್ತು. ಆದರೆ ಬೇಕಾದ ಸಂದರ್ಭ ಕೂಡಿ ಬರಲಿಲ್ಲ. ಕೊನೆಗೂ ಒಮ್ಮೆ ಎಲ್ಲರೂ ಕೂಡಿದಾಗ, ಈ ಸಲ  ಯಾಣವನ್ನು ನೋಡಿಯೇಬಿಡೋಣ ಅಂತ ತೀರ್ಮಾನಿಸಿದೆವು.ನಾವು ಹದಿನಾರು ಮಂದಿ ದೊಡ್ಡವರು ಮತ್ತು ನಾಲ್ಕು ಚಿಕ್ಕ ಮಕ್ಕಳು ಕ್ರಿಸ್ಮಸ್ ದಿನದಂದು ಕಾಸರಗೋಡಿನಿಂದ ಹೊರಟು ಮಂಗಳೂರಿಗೆ ಬಂದು ಮುಂಜಾನೆ ಏಳು ಗಂಟೆಗೆ ಹೊರಡುವ ವೆರ್ನಾ ಪ್ಯಾಸೆಂಜರ್ ರೈಲು ಹತ್ತಿದೆವು. ಮಕ್ಕಳಿಗಂತೂ ರೈಲು ಪ್ರಯಾಣವು ಬಹಳ ಖುಷಿಯಾಗಿತ್ತು. ರೈಲಿನಲ್ಲಿ ಹೋಗುತ್ತಾ ಬೆಳಗಿನ ಉಪಹಾರ ಮುಗಿಸಿದೆವು. ಮನೆಯಿಂದ ತಂದ ಹಲಸಿನ ಎಲೆಯಲ್ಲಿ ಮಾಡಿದ ಕೊಟ್ಟಿಗೆ ಮತ್ತು ಮಿಡಿ ಉಪ್ಪಿನಕಾಯಿ ಮತ್ತು ಚಟ್ನಿ ಬಹಳ ರುಚಿಕರವಾಗಿತ್ತು. ಹೋಗುವಾಗ ದಾರಿಯಲ್ಲಿ ಮುರುಡೇಶ್ವರ ಕ್ಷೇತ್ರ ಸಿಗುತ್ತದೆ. ಅಲ್ಲಿ ಇಳಿದು ದೇವರ ದರ್ಶನ ಮಾಡಿ ಎಲ್ಲಾ ನೋಡಿಕೊಂಡು ಮುಂದೆ ಹೋಗುವುದು ಅಂತ ಮೊದಲೇ ನಿಶ್ಚಯಿಸಿದ್ದೆವು.
ಸುಮಾರು ಹನ್ನೊಂದು ಗಂಟೆಗೆ ಮುರುಡೇಶ್ವರದಲ್ಲಿ ಇಳಿದು ದೇವಸ್ಥಾನಕ್ಕೆ  ಹೋದೆವು. ದೇವರ ದರ್ಶನವಾಯಿತು. ಸುತ್ತು ಮುತ್ತು ಎಲ್ಲಾ ನೋಡಿದೆವು.
--
--
ಸಮುದ್ರ ಕಿನಾರೆಯಲ್ಲಿರುವ ಈ ದೇವಾಲಯ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಬೃಹತ್, ಶಿವನ ಮೂರ್ತಿ ನಮ್ಮನ್ನು ಬೆರಗು ಗೊಳಿಸುತ್ತದೆ ಮಾತ್ರವಲ್ಲ ಬಹಳ ದೂರದವರೆಗೂ ಕಾಣಿಸಿಕೊಂಡು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿನ ಪರಿಸರವು ಬಹಳ ಶುಚಿಯಾಗಿದ್ದು ಮನಸ್ಸಿಗೆ ಆನಂದವನ್ನು ಕೊಡುತ್ತದೆ. ಮುರುಡೇಶ್ವರನ ಪ್ರಸಾದ ಭೋಜನ ಉಂಡು ನಾವು ಕುಮಟಾ ಗೆ ಬಂದೆವು. ಅಲ್ಲಿ ಬಸ್ಸು ನಿಲ್ದಾಣದಲ್ಲಿ ವಿಚಾರಿಸಿದಾಗ ಯಾಣಕ್ಕೆ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ಸು ಇದೆ ಅಂತ ತಿಳಿಯಿತು. ಹಾಗಾಗಿ ನಾವು ಗೋಕರ್ಣಕ್ಕೆ ಹೋದೆವು.
--

--
ಅಲ್ಲಿ ಸಮುದ್ರ ಕಿನಾರೆಯಲ್ಲಿ ಸೂರ್ಯಾಸ್ತ ನೋಡಿಕೊಂಡು ಮಹಾಬಲೇಶ್ವರನ ದರ್ಶನ ಮಾಡಿಕೊಂಡು ರಾತ್ರಿ ಅಲ್ಲೇ ಒಂದು ಮನೆಯ ದೊಡ್ಡ ಹಾಲ್ ಬಾಡಿಗೆಗೆ ಪಡಕೊಂಡು ಚೆನ್ನಾಗಿ ನಿದ್ರಿಸಿ ಮರುದಿನ ಮುಂಜಾನೆ ಪುನಃ ಕುಮಟಾ ತಲುಪಿದೆವು.
ಕುಮಟಾದಿಂದ ಯಾಣಕ್ಕೆ ಸುಮಾರು 26 k.m. ಪ್ರಯಾಣಿಸಬೇಕು, ಸಿರ್ಸಿಯಿಂದಲೂ ಯಾಣಕ್ಕೆ ಬರಬಹುದು ಆದರೆ ಸುಮಾರು 45 k.m. ದೂರವಿದೆ. ಚಾರಣಿಗರಿಗಾದರೆ ಕಾಡೊಳಗಿನ ಏರಿಳಿತದ ಕಷ್ಟಕರವಾದ ದಾರಿಯೂ ಇದೆ.  
ಒಂಬತ್ತು ಗಂಟೆಗೆ ಬರಬೇಕಾದ ಬಸ್ಸು ಹತ್ತೂವರೆಗೆ ಬಂತು, ಎಲ್ಲರೂ ಕುಳಿತುಕೊಂಡೆವು. ಸುಮಾರು ದೂರ ಹೋದಮೇಲೆ ಬಸ್ಸಿನ ಕಂಡಕ್ಟರ್ ಬಂದು ಟಿಕೆಟ್ ಕೊಡಲು ಬಂದ. ಆಗಷ್ಟೇ ನಮಗೆ ಆಘಾತವಾದದ್ದು, ಈ ಬಸ್ಸು ಕೆಲ ತಿಂಗಳಿಂದ ಯಾಣದವರೆಗೆ ಹೋಗುವುದಿಲ್ಲ, ಅಲ್ಲೇ ಯಾವುದೋ ಒಂದು ಹಳ್ಳಿಯವರೆಗೆ ಮಾತ್ರ ಹೋಗುವುದು ಅಂತ. ಮಾರ್ಗ ರಿಪೇರಿಯಲ್ಲಿರುವ ಕಾರಣ ಬಸ್ಸು ಹೋಗುವುದಿಲ್ಲವಂತೆ. ಬಸ್ಸಿನ ಬೋರ್ಡಿನಲ್ಲಿ ಗಡದ್ದಾಗಿ ಕುಮಟಾ--ಯಾಣ ಅಂತ ಬರೆದಿದ್ದರು. ಹಿಂದಿನ ದಿನ ಬಸ್ ನಿಲ್ದಾಣದಲ್ಲಿ ವಿಚಾರಿಸುವಾಗ ಸಹಾ ಯಾಣದವರೆಗೆ ಬಸ್ಸು ಹೋಗುತ್ತದೆ ಎಂದಿದ್ದರು. ಕೊನೆಯ ಪಕ್ಷ ಬಸ್ಸು ಹೊರಡುವ ಮೊದಲೇ ಈ ವಿಷಯ ತಿಳಿಸಿದ್ದರೆ ಬೇರೆ ವಾಹನವನ್ನಾದರೂ ಗೊತ್ತುಮಾಡಿಕೊಂಡು ಹೋಗಬಹುದಾಗಿತ್ತು. ನಮ್ಮ ಹಾಗೆ ಇನ್ನೂ ಕೆಲವರು ಬೇಸ್ತು ಬಿದ್ದಿದ್ದರು. ನಮ್ಮ ಪೇಚಾಟ ನೋಡಿ ನಮ್ಮ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಹುಡುಗ ಹೇಳಿದ- ಏನು ಯೋಚಿಸಬೇಡಿ ಸಾರ್, ನಮಗೆ ಅಲ್ಲಿ ಅಂಗಡಿ ಇದೆ ಮತ್ತು ಜೀಪು ಸಹಾ  ಇದೆ, ನಿಮಗೆ ಬೇಕಾದರೆ ನಾನು ಏರ್ಪಾಡು ಮಾಡಿಕೊಡುತ್ತೇನೆ ಎಂದಾಗ ನಮ್ಮ ಆತಂಕ ಕಡಿಮೆ ಆಯಿತು. ಯಾಕೆಂದರೆ ಆಲ್ಲಿಂದ ಮುಂದೆ ಎಂಟು k.m.ಹೋಗಬೇಕಾಗಿತ್ತು. ಮಕ್ಕಳು, ಪ್ರಾಯದವರು ಎಲ್ಲರನ್ನು ಕಟ್ಟಿಕೊಂಡು ಯಾಣಕ್ಕೆ  ಹೋಗಿ ತಿರುಗಿ ಬರಲು ಸಾಧ್ಯವೇ ಇರಲಿಲ್ಲ. ಅಂತೂ ಸೊಂಡಳ್ಳಿಯಲ್ಲಿ  ಬಸ್ಸು ಇಳಿದೆವು. ಸ್ವಲ್ಪ ಹೊತ್ತಿನಲ್ಲಿ ನಮಗಾಗಿ ಜೀಪು ಬಂತು. ಆಹಾ ಎಂಥಹಾ  ಲಕ್ಷುರಿ ಜೀಪು!
---
--
ಅಲ್ಲಿದ್ದ ಕೆಲವರೆಲ್ಲಾ ಸಿಕ್ಕಿದ ಲಾರಿ ಹತ್ತಿ ಹೋದರು, ಕೆಲವರು ನಡೆದೇ ಹೊರಟರು. ಪಾಪ ನಮ್ಮೊಂದಿಗೆ ಬೆಂಗಳೂರಿನ ದಂಪತಿಗಳು ಮತ್ತು ಅವರ ಮಗು ಅಲ್ಲಿ ಉಳಿದಿದ್ದರು. ಸರಿ ಹೇಗಾದರೂ ಮಾಡಿ ಎಲ್ಲರನ್ನೂ ತನ್ನೊಳಗೆ ತುಂಬಿಕೊಂಡಿತು ನಮ್ಮ ವಾಹನ. ಇದಲ್ಲದೇ ಅದರೊಳಗೆ ಮೊದಲೇ ತುಂಬಿರುವ ತಂಪು ಪಾನಿಯದ ಕ್ರೆಟರ್ ಗಳೂ ಟಾಪ್ ನಲ್ಲಿ ಹಾಕಿದ್ದ ಪೈಪು  ಇನ್ನಿತರ ಸಾಮಗ್ರಿಗಳಿಂದ ತುಂಬಿ ಹೋಗಿತ್ತು. ನಾವೆಲ್ಲಾ ಅದರೊಳಗೆ ಹೇಗೆ  ಹಿಡಿಸಿದೆವು? ಎಂಬುದೇ  ನಮಗೆ ಸೋಜಿಗ! ಪ್ರಯಾಣ ಮುಂದುವರೆಯಿತು. ಧೂಳು ತುಂಬಿದ ಹಳ್ಳ ದಿಣ್ಣೆಗಳ   ಮಣ್ಣಿನ ಮಾರ್ಗ. ಅಲ್ಲಲ್ಲಿ ರಿಪೇರಿ ಕೆಲಸ ನಡೆದಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಪುಟ್ಟ ಅಂಗಡಿಗಳಿಗೆ ತಂಪು ಪಾನೀಯ, ಮತ್ತಿತರ ಸಾಮಾನುಗಳನ್ನು ಇಳಿಸಿಕೊಂಡು ಮುಂದೆ ಹೋಗುತ್ತಾ ಇತ್ತು ನಮ್ಮ ಜೀಪು. ಸಾಮಾನು ಖಾಲಿ ಆದ ಹಾಗೆ ಕಾಲುಗಳನ್ನು ಸ್ವಲ್ಪ ಚಾಚಲು ಸಾಧ್ಯವಾಯಿತು.
ಅಲ್ಲೊಂದೆಡೆ ಮಾರ್ಗ ರಿಪೇರಿ ಭರ್ಜರಿಯಾಗಿ ಸಾಗುತಿತ್ತು, ಅಲ್ಲಿ ಮಣ್ಣಿನಲ್ಲಿ ನಮ್ಮ ಜೀಪಿನ ಚಕ್ರ ಹೂತು ಹೋಯಿತು, ಮೇಲೆ ಏಳುವುದೇ ಇಲ್ಲ, ಆಮೇಲೆ ಅದು ಸ್ಟಾರ್ಟ್ ಆಗುವುದನ್ನು ಸಹಾ  ನಿಲ್ಲಿಸಿಯೇ ಬಿಟ್ಟಿತು. ಇನ್ನೂ ಸುಮಾರು ದೂರ ಹೋಗಬೇಕು. ನಾವೆಲ್ಲಾ ಇಳಿದೆವು ಜೀಪನ್ನು ತಳ್ಳಲು ನೋಡಿದೆವು, ಊಹುಂ ನಮ್ಮಿಂದ ಆಗಲೇ ಇಲ್ಲ. ಆಮೇಲೆ ಅಲ್ಲಿದ್ದ JCB ಯ ಸಹಾಯ ಕೇಳಿದೆವು. ಆ ಯಂತ್ರ ಬಂದು ನಮ್ಮ ಜೀಪನ್ನು ತನ್ನ ಸೊಂಡಿಲಿನಿಂದ ಮುಂದೆ ತಳ್ಳಿ ಸರಿ ದಾರಿಗೆ ತಂದು ನಿಲ್ಲಿಸಿತು. ನಮ್ಮ ಡ್ರೈವರ್ ಏನೇನೋ  ಮಾಡಿ ಸ್ಟಾರ್ಟ್ ಮಾಡಿದ. ಮತ್ತೆ ಎಲ್ಲರೂ ಅದರೊಳಗೆ ತುಂಬಿಕೊಂಡೆವು.
----

----


ಅಂತೂ ಯಾಣಕ್ಕೆ ಬಂದೆವು. ಜೀಪಿನವನು ಸಂಜೆಗೆ ಬಂದು ನಮ್ಮನ್ನು ಕರೆದೊಯ್ಯುತ್ತೇನೆ ಅಂತ ಹೇಳಿ ಹೊರಟು ಹೋದನು. ನಮಗೆ ಇನ್ನೂ ಮೂರು k.m. ನಡೆಯಬೇಕಾಗಿತ್ತು. ಆದರೆ ಯಾಣದ ಹತ್ತಿರ ಬಂದ ಹುರುಪಿನಲ್ಲಿ ಎಲ್ಲರೂ ಉತ್ಸಾಹದಿಂದ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಸಹ್ಯಾದ್ರಿಯ ಕಾಡು, ಅಲ್ಲಲ್ಲಿ ನೀರಿನ ಹರಿವು, ಜೀರುಂಡೆಯ ನಾದ, ತಂಪಾದ ವಾತಾವರಣ!
--
--
ಜೀಪಿನ 'ಸುಖಪ್ರಯಾಣವನ್ನು' ಪ್ರಕೃತಿ ಮರೆಸಿತ್ತು. ಅಲ್ಲಲ್ಲಿ ಸ್ವಲ್ಪ ವಿಶ್ರಮಿಸಿಕೊಂಡು ಕಾಡಿನ ಸೊಬಗನ್ನು ನೋಡುತ್ತಾ ಹೋಗುತಿದ್ದಂತೆ ನಮಗೆ ದಾರಿ ಸವೆದದ್ದೇ ತಿಳಿಯಲಿಲ್ಲ.   
--
--
ಅಗೋ ಅಲ್ಲಿ ಯಾಣ ಅಂತ ನಮ್ಮಲ್ಲಿ ಯಾರೋ ಕೂಗಿದರು. ಎಲ್ಲರೂ ಮೇಲೆ ನೋಡುವಾಗ ನಮಗೆ ಕರಿ ಕಲ್ಲಿನ ಚೂಪಾದ ಒಂದು ಶಿಖರ ಕಾಣಿಸಿತು,ಅದೇ ಮೋಹಿನಿ ಶಿಖರ! ಅರಣ್ಯದ ಹಸಿರಿನ ಮಧ್ಯದಿಂದ ತಲೆ ಎತ್ತಿ ನಿಂತಿದೆ ಯಾಣದ ಅತ್ಯಂತ ಸುಂದರ ಶಿಖರ.
----

----
ಮುಂದೆ ಹೋಗುತಿದ್ದಂತೆ ಮೇಲೆ ಏರಲು ಕಟಾಂಜನವಿರುವ ಮೆಟ್ಟಲುಗಳು , ಅದನ್ನು ಏರಿ ಹೋದಾಗ ಮೋಹಿನಿಯ ಸುಂದರ ಆಕೃತಿ ಗೋಚರಿಸುತ್ತದೆ. ಈ ಶಿಖರವು ಸುಮಾರು ಮುನ್ನೂರು ಅಡಿಗಳಷ್ಟು ಎತ್ತರವಿದೆ. ಅಲ್ಲೇ ವಿಚಿತ್ರಾಕಾರದ ಬಂಡೆಗಳು ಗುಹೆಗಳು ಎಲ್ಲಾ ಇವೆ.



ವಿಶಾಲವಾದ ಒಂದು ದೊಡ್ಡ ಬಂಡೆಯ ಅಡಿಯಲ್ಲಿ ನಾವು ಹಾದು ಹೋಗುತಿದ್ದೇವೆ. ಕೆಲವರು ಅದನ್ನು ಗೋವರ್ಧನಗಿರಿ ಎಂಬಂತೆ ಕಿರುಬೆರಳಿನಿಂದ ಎತ್ತಿ ಹಿಡಿದು ಫೋಟೋ ತೆಗೆಸಿಕೊಂಡರು.       
--
--
ಮತ್ತೆ ಮುಂದುವರೆದಂತೆ ನಮಗೆ ತಣ್ಣನೆಯ ನೀರಿನ ಆಸರೆಯೊಂದು ಸಿಕ್ಕಿತು, ನೀರು ಕುಡಿದು ಮುಂದೊತ್ತಿದಾಗ ಯಾಣದ ಪ್ರಮುಖ ಶಿಖರವಾದ ಭೈರವ ಶಿಖರದ  ದರ್ಶನವಾಗುತ್ತದೆ. ಅಬ್ಭಾ ಏನು ಗಾಂಭೀರ್ಯ! ಎಷ್ಟೊಂದು ಸುಂದರ! ಪ್ರಕೃತಿ ನಿರ್ಮಿಸಿದ ಪರಶಿವನ ನಿಜ ರೂಪವೇ ಇದು. ನಾವು ಮನದಲ್ಲಿ ಹೇಗೆ ಕಲ್ಪಿಸುತ್ತೇವೋ ಹಾಗೆ ಇದು ರೂಪುಗೊಳ್ಳುತ್ತದೆ. ಸುತ್ತಲೂ ದಟ್ಟವಾದ ಹಸಿರು  ಕಾಡು, ನಿಶಬ್ಧ, ನೀರವ, ಚುಮು ಚುಮು ಚಳಿ ಬೇರೆ, ಮನಸ್ಸು ಪ್ರಕೃತಿಯಲ್ಲಿ ಲೀನವಾಗಿದೆ.
--
--
ಭೈರವೇಶ್ವರ ಪರ್ವತ ಶಿಖರವು ಸುಮಾರು ನಾನ್ನೂರು ಅಡಿಗಳಷ್ಟು ಎತ್ತರವಿದ್ದು ಇದರ ತಳಭಾಗದ ದೇವಸ್ಥಾನದಲ್ಲಿ ಸ್ವಯಂಭು ಲಿಂಗ ರೂಪಿಯಾದ ಶಿವಲಿಂಗವಿದೆ, ಲಿಂಗದ ಮೇಲೆ ಪ್ರಕೃತಿಯೇ ನೀರನ್ನು ತೊಟ್ಟಿಕ್ಕುತ್ತದೆ. ಈ ನೀರು ಎಲ್ಲಿಂದ ಬರುತ್ತದೆ ಅಂತ ಯಾರಿಗೂ ತಿಳಿದಿಲ್ಲ. ಈ ಪರ್ವತದ ಕಲ್ಲಿನಲ್ಲಿ, ಸುಣ್ಣ, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳಿವೆಯಂತೆ. ಭಸ್ಮಾಸುರ ಮೋಹಿನಿಯರ ಕಥೆಯನ್ನು ಈ ಪರ್ವತಗಳಿಗೆ ಜೋಡಿಸಿದ್ದಾರೆ. ಗಾಳಿ, ಮಳೆ, ಬಿಸಿಲು ಎಲ್ಲದಕ್ಕೂ ಮೈಯೊಡ್ಡಿ ನಿಂತ ಈ ಪರ್ವತಗಳು ಅದೆಷ್ಟು ಕಾಲದಿಂದ ಹೀಗೇ ನಿಂತಿವೆಯೋ ಏನೋ. ತನ್ನ ಮೈಯನ್ನೆಲ್ಲಾ ರೂಕ್ಷವನ್ನಾಗಿಸಿಕೊಂಡು ಬೇರೆಲ್ಲೂ ಕಂಡರಿಯದ ತೆರದಲ್ಲಿ  ಸಿಂಗರಿಸಿಕೊಂಡು  ಪ್ರವಾಸಿಗರನ್ನು, ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ.
ದೇವರ  ದರ್ಶನ  ಮಾಡಿ ಅಲ್ಲೇ ಪಕ್ಕದಲ್ಲಿದ್ದ ಒಂದು ಪಡಸಾಲೆಯಲ್ಲಿ ಕುಳಿತು ನಾವು ತಂದಿರುವ ಬುತ್ತಿ ಬಿಚ್ಚಿದೆವು. ಬಾಳೆ ಎಲೆಯಲ್ಲಿ, ಕೊಟ್ಟಿಗೆ, ಚಕ್ಕುಲಿ, ಲಾಡು, ಹೋಳಿಗೆ, ಬಾಳೆಹಣ್ಣು ಎಲ್ಲಾ ಸೇರಿದಾಗ  ಗಡದ್ದಾದ ಒಂದು ಔತಣವೇ ಆಯಿತು. ತಂಪಾದ ಲಿಂಬೆ ಶರಬತ್ತು ಕುಡಿದು ಸ್ವಲ್ಪ ವಿಶ್ರಮಿಸಿ ಆಮೇಲೆ ಯಾಣವನ್ನು ಸರಿಯಾಗಿ ಅವಲೋಕಿಸಲು ಹೋದೆವು. ಪರ್ವತದ ಹಿಂಭಾಗದಲ್ಲಿ ಒಂದು ಗುಹೆಯ ಸ್ವರೂಪವಿದ್ದು ಅಲ್ಲಿಗೆ ಹೋಗಲು ಮೆಟ್ಟಲುಗಳು ಇವೆ. ಅದನ್ನೇರಿದರೆ ನಾವು ಯಾಣದ ಗರ್ಭದ ಒಳಗಡೆ ಹೋಗಲು ಸಾದ್ಯವಾಗುತ್ತದೆ. ದೊಡ್ಡ ಬಂಡೆ ಮಧ್ಯ ಸೀಳು ಬಿಟ್ಟಾಗ ಆಗುವ ಕೊರಕಲಾದ ಜಾಗ!
---

---

ಮೇಲೆ ಕಿರಿದಾದ ಸಂದಿಯಲ್ಲಿ ಆಕಾಶ ಕಾಣಿಸುತ್ತದೆ. ಈ ಸಂದಿಯಲ್ಲೇ ಒಂದೆರಡು ಮರಗಳು ಸಹಾ ಬೆಳೆದು ನಿಂತಿವೆ! ಅಂಕು ಡೊಂಕಾದ ಈ ದಾರಿಯಲ್ಲಿ ಆಟವಾಡಲು ತುಂಬಾ ಚೆನ್ನಾಗಿರುತ್ತದೆ.
--

-- 

ಆದರೆ ಹುಷಾರಾಗಿರಬೇಕು, ಇಲ್ಲಿನ ಕತ್ತಲ ಸಂದಿಗಳಲ್ಲಿ ದೊಡ್ಡ ದೊಡ್ಡ ಹೆಜ್ಜೇನು ಗೂಡುಗಳಿವೆ, ಅವಕ್ಕೆ ಏನಾದರೂ  ತೊಂದರೆ ಆದಲ್ಲಿ ಅಪಾಯ ತಪ್ಪಿದ್ದಲ್ಲ.  ಆದರೆ ಇಂತಹ ದುರ್ಗಮ ಜಾಗ ನೋಡುವುದೇ ಒಂದು  ಸಾಹಸ.  ಇಲ್ಲಿಂದ ಶ್ರಮ ಪಟ್ಟು ಮೇಲೆ ಹತ್ತಿದರೆ ಶಿಖರದ ತುದಿಯವರೆಗೆ ಏರಬಹುದಂತೆ.  ಆದರೆ ಇದು ಪರಿಣಿತರಿಗೆ ಮಾತ್ರ ಸಾಧ್ಯ. 
ಹಾಗೇನೆ ಮುಂದುವರಿದಲ್ಲಿ  ನಾವು ಈ ಗುಹಾ ಮಾರ್ಗದ ಇನ್ನೊಂದು ಬದಿಯಲ್ಲಿರುತ್ತೇವೆ.
---

-- 

ಅಲ್ಲಿ ಇಳಿಯಲು ಕಡಿದಾದ ದಾರಿಯಿದೆ. ಅದರಲ್ಲಿಳಿದು ಸ್ವಲ್ಪ ನಡೆದರೆ ನಾವು ಭೈರವ ಶಿಖರದ ಮುಂಭಾಗಕ್ಕೆ ಬಂದಿರುತ್ತೇವೆ. ಆಲ್ಲಿಂದ ತಲೆ ಎತ್ತಿ ನೋಡಿದಾಗ ತುಂಬಾ ಮೇಲೆ, ನೂರಾರು ಹೆಜ್ಜೇನು ಹುಟ್ಟುಗಳು ತೂಗುತ್ತಿರುವುದು ಕಾಣಿಸುತ್ತದೆ.
---

--

ಮತ್ತೊಮ್ಮೆ ಸುತ್ತು ಮುತ್ತು ಅಲೆದು, ಕಾಡೊಳಗೆ ನುಗ್ಗಿ ಆನಂದಿಸಿದೆವು, ಬೇರೆ ಬೇರೆ ಕೋನಗಳಿಂದ ಯಾಣದ ಸೊಬಗನ್ನು ಸೆರೆ ಹಿಡಿದೆವು. ಅಲ್ಲೇ ಕೆಳಗಡೆ ನೀರು ಹರಿಯುತಿತ್ತು. ಅಲ್ಲಿ, ನಮ್ಮ ಕೆಲವರು ಸ್ನಾನ ಮಾಡಿದರು. ಮತ್ತೊಮ್ಮೆ ತಿಂಡಿ ಸಮಾರಾಧನೆ ಆಯಿತು.
---

---

ಇನ್ನೇನು ಹೊರಡಲು ಹೊತ್ತಾಯಿತು, ಆದರೂ ಹೊರಡುವ ಆತುರ ಯಾರಿಗೂ ಇಲ್ಲ. ಅಲ್ಲೇ ಒಂದು ರಾತ್ರಿ ಕಳೆದರೆ ಚೆನ್ನಾಗಿರುತಿತ್ತು ಎಂತ ಎಲ್ಲರ ಆಸೆ, ಆದರೆ ಚಳಿ ಜಾಸ್ತಿ ಆಗತೊಡಗಿತ್ತು, ಮತ್ತು ಜೀಪು ಸಹಾ ನಮ್ಮನ್ನು ಕಾಯುತ್ತಿರಬಹುದು. ಹಾಗಾಗಿ ಮೆಲ್ಲನೆ ಹೊರಟೆವು. ಕೊನೆಯ ಬಾರಿಗೆ ಒಮ್ಮೆ ಮೋಹಿನಿಯನ್ನು ನೋಡಲು ಆಸೆ!

--

--
ಹಲವಾರು ದಿಕ್ಕಿನಿಂದ ಅವಳ ಫೋಟೋ ಸೆರೆಹಿಡಿದೆವು. ಇದೇ ತರಹದ ಚಿಕ್ಕ ಪುಟ್ಟ ಶಿಲಾ ಶಿಖರಗಳು ಈ ಕಾಡಿನಲ್ಲಿ ತುಂಬಾ ಇದೆಯಂತೆ. ಅದನ್ನೆಲ್ಲಾ ನೋಡಲು ಮತ್ತು ಇಲ್ಲಿ ಒಂದು ರಾತ್ರಿ ಕಳೆಯಲು ಇನ್ನೊಂದು ಸಲ ಖಂಡಿತಾ ಬರಬೇಕು ಎಂದು ನಿಶ್ಚಯಿಸಿ ಆಲ್ಲಿಂದ ಹೊರಟೆವು.
ಕೊನೆಯ ಬಾರಿಗೆ ಎಲ್ಲರೂ ಭೈರವೇಶ್ವರನ ಮುಂದೆ ನಿಂತು ಫೋಟೋ ತೆಗೆಸಿಕೊಂಡೆವು.

---

---

ಈಗ ನಾವು ಕೆಳಗೆ ಇಳಿಯ ಬೇಕಾಗಿರುವುದರಿಂದ ಆಯಾಸವಿಲ್ಲದೆ ನಮ್ಮ ಜೀಪು ನಿಂತಿರುವಲ್ಲಿಗೆ ತಲುಪಿದೆವು. ಮತ್ತೆ ಅದೇ 'ಸುಖ ಪ್ರಯಾಣ'. ಜೀಪಿನಿಂದ ಇಳಿದು ಅಲ್ಲೇ ಅಂಗಡಿಯಲ್ಲಿ ಕಾಫಿ ಕುಡಿದು ಬಸ್ಸು ಹತ್ತಿ ಕುಮಟಾ ಬಂದು ಸೇರಿದೆವು.
ಆಲ್ಲಿಂದ ರಾತ್ರಿ ಬಸ್ಸಿನಲ್ಲಿ ಹೊರಟು, ಮಂಗಳೂರಿಗೆ ತಲುಪಿ ಆಲ್ಲಿಂದ ಕಾಸರಗೋಡಿಗೆ ಬಂದೆವು. 
 
 



 

   
 

No comments:

Post a Comment