Tuesday, 31 December 2013

DWARAKAA



ದ್ವಾರಕಾಧೀಶನ ಸನ್ನಿಧಿಗೆ


ನಮ್ಮ ಬಹುದಿನದ ಕನಸು ಕಳೆದ ನವಂಬರ್ ತಿಂಗಳಲ್ಲಿ ನನಸಾಯಿತು. ದ್ವಾರಕಾ, ಸೋಮನಾಥ,ಮೌಂಟ್ ಅಬು ಮತ್ತು ಮೊಧೇರಾದ ಸೂರ್ಯ ದೇವಾಲಯಗಳನ್ನು ನೋಡಬೇಕೆಂಬ ಹಂಬಲವಿರಿಸಿಕೊಂಡಿದ್ದೆವು. ಇದಕ್ಕಾಗಿ 2 ತಿಂಗಳ ಮೊದಲೇ ರೈಲು ಟಿಕೇಟು ಕಾದಿರಿಸಿ 19 ನೇ ತಾರೀಕಿನಂದು ಬೆಂಗಳೂರು-ಮುಂಬಯಿ ರೈಲು ಹತ್ತಿದೆವು. ಅಲ್ಲಿಂದ ಮುಂದಕ್ಕೆ ಸೌರಾಷ್ಟ್ರ ಮೈಲ್ ನಲ್ಲಿ ಅಹಮದಾಬಾದ್ ಮಾರ್ಗವಾಗಿ ದ್ವಾರಕಾ ತಲುಪಿದೆವು. ದಾರಿಯುದ್ದಕ್ಕೂ ಹತ್ತಿಯ ಮತ್ತು ಹರಳಿನ ಬೆಳೆಗಳು ಕಂಗೊಳಿಸುತ್ತಿತ್ತು 



ಗುಜರಾತಿನ ಕ್ಯಾಂಬೆ ಕೊಲ್ಲಿಯಲ್ಲಿ ಸೌರಾಷ್ಟ್ರ ಕರಾವಳಿಯಲ್ಲಿರುವ ದ್ವಾರಕಾ- ಈ ಪಟ್ಟಣವು ಹಿಂದೆ ದ್ವಾರಾವತಿ ಎಂದು ಕರೆಯಲ್ಪಡುತಿತ್ತು. ಮಹಾಭಾರತ ಮತ್ತು ಭಾಗವತ ಪುರಾಣಗಳಲ್ಲಿ ಇದರ ವರ್ಣನೆ ಇದೆ.ದ್ವಾಪರಾ ಯುಗದಲ್ಲಿ ಭಗವಂತನ ಅವತಾರವಾದ ಶ್ರೀಕೃಷ್ಣನು ಈ ಪಟ್ಟಣವನ್ನು ನಿರ್ಮಿಸಿದನೆಂದು ಉಲ್ಲೇಖವಿದೆ. ಶ್ರೀಕೃಷ್ಣನ ಮೇಲಿನ ವ್ಯೆರತ್ವದಿಂದ ಜರಾಸಂಧನು ಹಲವು ಬಾರಿ ಮಧುರೆಯನ್ನು ಆಕ್ರಮಿಸಿ ಶ್ರೀಕೃಷ್ಣನನ್ನು ಕೊಲ್ಲಬೇಕೆಂದು ಪ್ರಯತ್ನಿಸಿದರೂ ಕೊನೆಗೆ ಸೋತು ಹೋಗಿದ್ದನು. ಆದರೂ ಮರಳಿ ಇನ್ನೂ ದೊಡ್ಡ ಸ್ಯೆನ್ಯವನ್ನು ಕಟ್ಟಿ ಮಧುರೆಗೆ ದಂಡೆತ್ತಿ ಬರಲು ಕಾಯುತಿದ್ದನು. ಅದೇವೇಳೆಗೆ ಕಾಲಯವನನೆಂಬ ಕ್ರೂರ ರಾಕ್ಷಸನೂ ಕೃಷ್ಣನನ್ನು ಮುಗಿಸಿಬಿಡಬೇಕೆಂಬ ಉದ್ದೇಶದಿಂದ ಜರಾಸಂಧನೊಂದಿಗೆ ಕೂಡಿ ಆಕ್ರಮಣಕ್ಕೆ ಸಿದ್ಧತೆ ಮಾಡಿಕೊಂಡನು. ಇದನ್ನೆಲ್ಲಾ ತಿಳಿದ ಕೃಷ್ಣನು ತನ್ನ ವೈರಿಗಳು ಪ್ರಭಲರಾಗಿರುವುದರಿಂದ ತಮಗೆ ಈ ಸಲ ಜಯ ಗಳಿಸಲು ಅಸಾಧ್ಯ ಎಂದು ಅರಿತು ಸಮಸ್ತ ಯಾದವರನ್ನು ಕೂಡಿಕೊಂಡು ಸೌರಾಷ್ಟ್ರದ ಕಡಲ ತೀರಲ್ಲಿರುವ ದ್ವಾರಕೆಗೆ ಬಂದು ನೆಲಸಿದರು.



 ಅಲ್ಲಿ ಸಮುದ್ರ ನಾರಾಯಣನ ಅನುಗ್ರಹ ಪಡೆದು ದೇವ ಶಿಲ್ಪಿ ವಿಶ್ವಕರ್ಮನ ನೆರವಿನಿಂದ ಒಂದು ಸುಂದರ ನಗರಿಯನ್ನು ನಿರ್ಮಿಸುತ್ತಾನೆ.ಅಲ್ಲಿ ಯಾದವರು ಕೃಷಿ,ಗೋಪಾಲನೆ ಮತ್ತು ಸಮುದ್ರ ವ್ಯಾಪಾರ ಮೊದಲಾದ ಕಾಯಕಗಳಿಂದ ಬಹಳ ಉನ್ನತಿಯನ್ನು ಸಾಧಿಸುತ್ತಾರೆ. ಹಾಗೆ ಸ್ವತಃ ಶ್ರೀಕೃಷ್ಣನು ನಡೆದಾಡಿದ ಪವಿತ್ರ ನಾಡು, ಎಲ್ಲ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರತಾಣವಾಗಿದೆ. ಈ ದೇವಾಲಯವನ್ನು ಶ್ರೀಕೃಷ್ಣನ ಮರಿಮಗನಾದ ವಜ್ರನಾಭನು ನಿರ್ಮಿಸಿದನೆಂದು ಹೇಳುತ್ತಾರೆ. ಇಲ್ಲಿನ ವಿಗ್ರಹವನ್ನು ಆದಿಶಂಕರಾಚಾರ್ಯರು ಪ್ರತಿಷ್ಠೆ ಮಾಡಿದರೆಂದೂ ಹೇಳುತ್ತಾರೆ. ಅದ್ವೈತ ಮತದ ಪ್ರಕಾರ ದ್ವಾರಕೆಯು ಚಾರ್ ಧಾಮ್ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ,ದಕ್ಷಿಣದಲ್ಲಿ ರಾಮೇಶ್ವರ ಹಾಗೂ ಪಶ್ಚಿಮದಲ್ಲಿ ದ್ವಾರಕೆಗಳೇ ಈ ನಾಲ್ಕು ಪವಿತ್ರ ಧಾಮಗಳು.

ನಾವು ದ್ವಾರಕೆಗೆ 21ನೇ ತಾರೀಖು ಮದ್ಯಾಹ್ನ 3ಘಂಟೆಗೆ ತಲುಪಿದೆವು. ಆಟೋ ದಲ್ಲಿ ನಾವು ಉಡುಪಿ ಮಾಧ್ವ ಮಠಕ್ಕೆ ಬಂದೆವು. ನಮ್ಮ ರೂಮು ಚೆನ್ನಾಗಿತ್ತು. ಸ್ವಲ್ಪ ವಿಶ್ರಮಿಸಿ, ಸ್ನಾನಾದಿಗಳನ್ನು ಮುಗಿಸಿ, ದೇವಾಲಯದ ಕಡೆ ಹೊರಟೆವು. ಬಹಳ ಸಮೀಪವಾದ್ದರಿಂದ ನಡೆದೇ ಹೊರಟೆವು. ದಾರಿಯಲ್ಲಿ ತುಂಬಾ ದನಗಳಿದ್ದವು. ಗೋಪಾಲಕೃಷ್ಣನ ಊರಲ್ಲವೇ.



 ಎಲ್ಲಾ ದನಗಳೂ ಸಾಧು ಸ್ವಭಾವ ಹೊಂದಿದ್ದವು. ಅವುಗಳಿಗೆ ಯಾರೂ ಹೊಡೆದು ಬಡಿಯುತ್ತಿರಲಿಲ್ಲ. ನಾವು ಮುಂದೆ ಹೋಗುತ್ತಿರಬೇಕಾದರೆ ಹುಲ್ಲು ತುಬಿದ ಒಂದು ಟ್ರಾಕ್ಟರ್ ಒಂದುಬಂದಾಗ ಎಲ್ಲ ದನಗಳೂ ಆ ಹುಲ್ಲು ತಿನ್ನಲು ಮುಂದಾದವು. ಕಡೆಗೆ ಅದರ ಚಾಲಕನು ಟ್ರಾಕ್ಟರ್ ಅನ್ನು ನಿಲ್ಲಿಸಿಯೇ ಬಿಟ್ಟನು. ದನಗಳೆಲ್ಲ ಸಾಕಷ್ಟು ಹುಲ್ಲು ತಿಂದವು!ನಾವು ಮುಂದೆ ಒಂದು ಸಂಧಿಯಲ್ಲಿ ಸಾಗಿದಾಗ ಗೋಮತೀ ನದಿಯ ಸ್ನಾನ ಘಟ್ಟ ತಲುಪಿದೆವು. ಇಲ್ಲಿ ಮಾರ್ಗ ಮದ್ಯದಲ್ಲಿ ಒಂದು ಸ್ಥಂಭವನ್ನು ನಿರ್ಮಿಸಿದ್ದಾರೆ.

 ನದಿಯ ದಂಡೆಗೆ ಸಮಾನಾಂತರವಾಗಿ ಸುಂದರವಾದ ಕಂಭಗಳಿಂದ ಕೂಡಿದ, ಮೇಲ್ಚಾವಣಿ ಹೊಂದಿದ ದಾರಿಯನ್ನು ನಿರ್ಮಿಸುತ್ತಿದ್ದಾರೆ.

 ಹೆದ್ದಾರಿಯ ಪಕ್ಕದಲ್ಲಿ ಸುಂದರವಾದ ಮಹಾದ್ವಾರವೂ ಅದರಇಕ್ಕೆಲಗಳಲ್ಲಿ ದೊಡ್ಡದಾದ 2 ಆನೆಗಳ ಪ್ರತಿಮೆಗಳೂ ನಿರ್ಮಾಣದ ಮುಕ್ತಾಯ ಹಂತದಲ್ಲಿದೆ. 

ಈ ಕಾರ್ಯವು ರಿಲಾಯನ್ಸ್ ಕಂಪನಿಯ ವತಿಯಿಂದ ನಡೆಯುತ್ತಿದೆ. ಇದು ಪೂರ್ಣ ಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು.

 ನದಿಗೆ ಇಳಿಯಲು ಸೋಪಾನಗಳನ್ನು ಕಟ್ಟಿದ್ದಾರೆ. ಆದರೇನು, ನಾವು ಹೋದಾಗ ನದಿಯಲ್ಲಿ ಸ್ವಲ್ಪವೇ ನೀರು ಹರಿಯುತಿತ್ತು. ಗೋಮತಿ ನದಿಯು ಸಮುದ್ರವನ್ನು ಸೇರುವ ಸ್ಥಳವಿದು. ಸಮುದ್ರದಲ್ಲಿ ಭರತ ಬಂದಾಗ ನದಿಯ ನೀರೂ ಮೇಲೇರುತ್ತದೆ. ನಾವು ನದಿಯ ಪಕ್ಕದಲ್ಲೇ ಸಾಗಿ ನದಿಗೆ ಇಳಿದೆವು. ಮುಂದೆ ಹೋದಾಗ ನದಿಯಿಂದ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳು ಸಿಗುತ್ತವೆ. ಕೈಕಾಲು ತೊಳೆದು ಮೆಟ್ಟಿಲುಗಳನ್ನೆರಿದೆವು.



 ಮುಂದೆ ಸ್ವಲ್ಪ ದೂರ ಅಂಗಡಿಗಳ ಸಾಲು. ನಂತರ ಮತ್ತೆ ಮೆಟ್ಟಿಲುಗಳು. ಅಲ್ಲೇ ಮಹಾದ್ವಾರ. ಈ ದ್ವಾರಕ್ಕೆ ಸ್ವರ್ಗ ದ್ವಾರ ಎಂದು ಹೆಸರು. ಅದನ್ನು ಪ್ರವೇಶಿಸುವ ಮೊದಲು ತುಂಬಾ ಫೋಟೋ ತೆಗೆದೆವು. ಯಾಕೆಂದರೆ ಒಳಗಡೆಗೆ ಕೆಮರಾ ಮೊಬೈಲ್ ಏನನ್ನೂ ಕೊಂಡೊಯ್ಯುವಂತಿಲ್ಲ.ದೇವಾಲಯದ ಟ್ರಸ್ಟ್ ನ ಖಚೇರಿಯಲ್ಲಿ ಅವುಗಳನ್ನು ಜಮಾ ಮಾಡಿ ಒಳಗಡೆ ಹೋದೆವು.



 ಇಲ್ಲಿ ಬಹಳ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಾರೆ. ನನ್ನ ನಾದಿನಿಯ ಕೈಚೀಲದಲ್ಲಿ ಒಂದು ಬಾಲ್ ಪೆನ್ ಇತ್ತು.ಅದನ್ನು ಸಹಾ ಪೂರ್ತಿ ಬಿಚ್ಚಿ ನೋಡಿದರು. ಇದೆಲ್ಲಾ ಭಯೋತ್ಪಾದಕತೆಯ ಕೊಡುಗೆ.

 ದೇವಾಲಯದ ಭವ್ಯ ಗೋಪುರ ಚಾಲುಕ್ಯ ಶೈಲಿಯಲ್ಲಿದೆ. ಇದರಲ್ಲಿ 5 ಅಂತಸ್ತುಗಳಿದ್ದು ಮರಳುಗಲ್ಲಿನಲ್ಲಿ ನಿರ್ಮಿಸಿದ್ದಾರೆ. ಶಿಖರದಲ್ಲಿ ದ್ವಜವು ಹಾರಾಡುತ್ತಿದೆ. 


ಈ ದ್ವಜವನ್ನು ದಿನದಲ್ಲಿ 5 ಸಲ ಬದಲಾಯಿಸುತ್ತಾರೆ. ಹರಿಕೆ ರೂಪದಲ್ಲಿ ಭಕ್ತರು ಮೆರವಣಿಗೆಯಲ್ಲಿ ತಂದು ದ್ವಜಗಳನ್ನು ಒಪ್ಪಿಸುತ್ತಾರೆ. ದ್ವಜ ಸೇವೆ ಒಪ್ಪಿಸಲು ಮುಂಗಡವಾಗಿ ಬುಕ್ ಮಾಡಬೇಕಂತೆ. ಈಗ ಬುಕ್ ಮಾಡಿದರೆ ಅದರ ಸರದಿ ಬರುವುದು 3 ವರ್ಷಗಳ ನಂತರವಂತೆ. ಅಷ್ಟೊಂದು ಹರಿಕೆ ಬಂದಿದೆಯಂತೆ. ದ್ವಾರಕಾದೀಶನ ಈ ದೇವಾಲಯಕ್ಕೆ ತ್ರೈಲೊಕ್ಯ ಸುಂದರ ಜಗತ್ ಮಂದಿರ ಎಂದು ಹೆಸರು.

ಇಲ್ಲಿ 2 ಮಹಾದ್ವಾರಗಳಿವೆ ಗೋಮತೀ ನದಿಭಾಗದಿಂದ ಬರುವ ದ್ವಾರಕ್ಕೆ ಸ್ವರ್ಗ ದ್ವಾರ ಎಂದೂ ಇನ್ನೊಂದು ಕಡೆಯಿಂದ ಬರುವ ದ್ವಾರವು ಮೋಕ್ಷ ದ್ವಾರ ಎಂದು ಹೇಳುತ್ತಾರೆ. ಇಲ್ಲಿ ಬಹಳ ಸುಂದರ ಶಿಲ್ಪ ಕಲಾಕೃತಿಗಳನ್ನು ಕೆತ್ತಿದ್ದಾರೆ.


 ದೇವಾಲಯದ ಒಳಗಡೆ ಗರ್ಭಗುಡಿಯಲ್ಲಿ ಕರಿಶಿಲೆಯಲ್ಲಿ ಕಡೆದ ಅತ್ಯಪೂರ್ವ ಸುಂದರವಾದ ಶ್ರೀಕೃಷ್ಣನ ವಿಗ್ರಹವಿದೆ. ವಜ್ರಾಲಂಕೃತ ದೇವರನ್ನು ಒಮ್ಮೆ ನೋಡಿದಾಗಲೇ ಭಾವಪರವಶರಾಗಿಬಿಡುತ್ತೇವೆ. ಮುಖದಲ್ಲಿ ಮಂದಹಾಸ ಬೀರುತ್ತಾ ನಮ್ಮನ್ನು ನೋಡುತ್ತಿರುವ ಭಗವಂತನೆದುರು ತಲೆಬಾಗಿ ನಮಸ್ಕರಿಸಿದಾಗ ಧನ್ಯತಾ ಭಾವ ಆವರಿಸುತ್ತದೆ. ನಮ್ಮ ಅದೃಷ್ಟದಿಂದ ಆ ದಿನ ಅಷ್ಟು ಜನಸಂದಣಿ ಇದ್ದಿರಲಿಲ್ಲ. ಹಾಗಾಗಿ ಮನದಣಿಯೆ ಹಲವಾರು ಬಾರಿ ದೇವರ ಧರ್ಶನ ಮಾಡಿದೆವು.ಇಲ್ಲಿ ಶ್ರೀ ದೇವರ ಆರತಿ ಸೇವೆಯು ರಾತ್ರಿ 7.45 ಕ್ಕೆ ನಡೆಯುವುದು. ಹಾಗಾಗಿ ನಾವು ಹೊರಗಡೆ ಹೋಗಿ ನದೀ ತೀರದಲ್ಲೇ ಸಾಗಿ ಸಾಗರ ನಾರಾಯಣ ದೇವಾಲಯನೋಡಲು ಹೋದೆವು. ಗೋಮತೀ ನದಿ ಸಮುದ್ರವನ್ನು ಸೇರುವ ಜಾಗದಲ್ಲಿದೆ ಈ ಸುಂದರ ದೇವಾಲಯ. ಅರಬೀ ಸಮುದ್ರದ ಹಿನ್ನಲೆಯಲ್ಲಿ ದೇವಾಲಯದ ಗೋಪುರ ಸುಂದರವಾಗಿ ಕಂಗೊಳಿಸುತ್ತದೆ.

 ಹಿತವಾದ ಗಾಳಿ ಬೀಸುತಿತ್ತು. ಸೂರ್ಯಾಸ್ತವಾಗುತಿದ್ದುದರಿಂದ ಬಾನೆಲ್ಲ ಕೆಂಬಣ್ಣಕ್ಕೆ ತಿರುಗಿ ಪರಿಸರ ಮತ್ತು ದೇವಾಲಯಗಳ ಗೋಪುರಗಳೂ ಕೆಂಬಣ್ಣಕ್ಕೆ ತಿರುಗಿತ್ತು.ಇಲ್ಲಿ ನಾವು ತುಂಬಾ ಫೋಟೋ ತೆಗೆದೆವು. ಕೆಲವು ಪ್ರಯೋಗಗಳನ್ನೂ ನಡೆಸಿದೆವು.
ಸೂರ್ಯ ಮುಳುಗಿದ ಮೇಲೆ ಅಲ್ಲಿಂದ ಹೊರಟು ಇಲ್ಲಿನ ಪೇಟೆ ಸುತ್ತಾಡಿದೆವು. ಅಷ್ಟೇನೂ ದೊಡ್ಡ ಪೇಟೆ ಇಲ್ಲಿಲ್ಲ. ದ್ವಾರಕೆಯ ಕಟ್ಟಡಗಳೂ ಬಹಳ ಹಳೆಯವು,

ಆರತಿಯ ಸಮಯಕ್ಕೆ ಮೊದಲೇ ನಾವು ದೇವಾಲಯಕ್ಕೆ ಮತ್ತೆ ಬಂದೆವು. ಈವಾಗ ಅಲ್ಲಿನ ಸೊಬಗೇ ಬೇರೆ! ಗೋಪುರಕ್ಕೆ ನಾಲ್ಕೂ ದಿಕ್ಕಿನಿಂದ ಲೈಟ್ ಬೀರುತ್ತಾರೆ.ಇದರಿಂದ ಗೋಪುರವು ಒಮ್ಮೆ ಶ್ರೀಗಂಧದ ಬಣ್ಣ ಹೊಂದಿದರೆ ಮತ್ತೊಮ್ಮೆ ರಕ್ತಚಂದನದ ಬಣ್ಣ, ಅರಶಿನ, ಹಸುರು, ನೇರಳೆ ಬಣ್ಣಗಳಿಂದ ಒಂದು ಕನಸಿನ ಲೋಕವನ್ನೇ ಸೃಷ್ಟಿಸುತ್ತಿದೆ. ರಾಜಾಂಗಣದಲ್ಲಿ ಭಕ್ತರು ಅಲ್ಲಲ್ಲಿ ಕುಳಿತು ಭಜನೆ ಮಾಡುತಿದ್ದಾರೆ. ನಾವೂ ಸ್ವಲ್ಪ ಹೊತ್ತು ಅವರೊಂದಿಗೆ ಕುಳಿತಿದ್ದೆವು. ಆರತಿಯ ಸಮಯವಾದ್ದರಿಂದ ಎಲ್ಲರೂ ಒಳಗಡೆ ಹೋದೆವು. ದೇವರಿಗೆ ಅಡ್ಡವಾಗಿ ಪರದೆ ಎಳೆದು ಅಲಂಕಾರ ನಡೆಯುತ್ತಿತ್ತು. ಅಷ್ಟೂ ಹೊತ್ತು ನೆರೆದ ಭಕ್ತರೆಲ್ಲಾ ಜಯಘೋಷ ಮಾಡುತಿದ್ದರು. ಎರಡೂ ಕೈಗಳನ್ನುಮೇಲೆತ್ತಿ ಭಗವಂತನನ್ನು ಪ್ರಾರ್ಥಿಸುತ್ತಿದ್ದರು. ಪರದೆ ಸರಿಯಿತು. ಆರತಿ ಎತ್ತಿದರು, ಭಗವಂತನ ವೈಭವಪೂರ್ಣ ಧರ್ಶನ ಪಡೆದು ಎಲ್ಲರೂ ಧನ್ಯರಾದರು.

ನಾವೂ ಅಲ್ಲಿಂದ ಹೊರಟು ಹೋಟೆಲ್ ನಲ್ಲಿ ಗುಜರಾತಿ ಊಟ ಮಾಡಿ, ಪಕ್ಕದಲ್ಲೇ ಇದ್ದ ಟ್ರಾವೆಲ್ ಏಜನ್ಸಿಯಲ್ಲಿ ಮರುದಿನದ ಬೆಟ್ ದ್ವಾರಕಾ ಧರ್ಶನಕ್ಕಾಗಿ ತಲಾರೂ.70. ರ  ಟಿಕೆಟ್ ಕೊಂಡು ರೂಮಿಗೆ ಬಂದು ನಿದ್ರಿಸಿದೆವು.

ಬೆಟ್ ದ್ವಾರಕಾ

ಬೆಟ್ ದ್ವಾರಕಾ ಒಂದು ದ್ವೀಪ, ದ್ವಾರಕೆಯಿಂದ ಸುಮಾರು 30 ಕಿ.ಮಿ.ದೂರದಲ್ಲಿದೆ. ಕ್ಯಾಂಬೆ ಕೊಲ್ಲಿಯ ಪ್ರಮುಖ ಬಂದರು, ಓಖಾ ಬಂದರಾಗಿದೆ. ಇಲ್ಲಿಂದ ಬೋಟ್ ನಲ್ಲಿಸುಮಾರು 5 ಕಿ.ಮಿ ಸಮುದ್ರ ಪ್ರಯಾಣ ಮಾಡಿ ಬೆಟ್ ದ್ವಾರಕಾ ತಲುಪಬೇಕು. ನಾವು ಬೆಳಗ್ಗೆ ತಿಂಡಿ ಮುಗಿಸಿ 8 ಘಂಟೆಗೆ ಮಿನಿ ಬಸ್ ನಲ್ಲಿ ಹೊರಟೆವು. ಸುಮಾರು 20ಜನರಿದ್ದೆವು. ಮೊದಲಿಗೆ ನಮ್ಮ ಬಸ್ ಹೊರಟು 8 ಕಿ.ಮಿ ದೂರದಲ್ಲಿರುವ ರುಕ್ಮಿಣಿ ಮಂದಿರಕ್ಕೆ ತಲುಪಿತು..ಇಲ್ಲಿ ಶ್ರೀಕೃಷ್ಣನ ಮಡದಿ ರುಕ್ಮಿಣಿಯ ಸುಂದರವಾದ ಮಂದಿರವಿದೆ.

ನಮ್ಮ ಗೈಡ್ ನ ವಿವರಣೆಯ ಪ್ರಕಾರ, ದೂರ್ವಾಸ ಮುನಿ ದ್ವಾರಕೆಗೆ ಬಂದಾಗ ರಾಣಿ ರುಕ್ಮಿಣಿ ಅವರನ್ನು ಬಹಳ ತಡವಾಗಿ ಎದುರುಗೊಂಡದಕ್ಕೆ ಕುಪಿತರಾಗಿ 12 ವರ್ಷ ಕಾಲ ನೀನು ಶ್ರೀಕೃಷ್ಣನಿಂದ ದೂರ ಇರಬೇಕು ಎಂದು ಶಾಪ ಕೊಟ್ಟರಂತೆ. ಹಾಗೆ ಅವಳಿಗೆ ಇಲ್ಲಿ ದೇವಾಲಯ ಕಟ್ಟಿದ್ದಾರೆ. ಇದು ಸಹಾ ಸಮುದ್ರ ಬದಿಯಲ್ಲೇ ಇದ್ದು ಬಹಳ ಸುಂದರ ಗೋಪುರವನ್ನು ಒಳಗೊಂಡಿದೆ. ಒಳಗಡೆ ರುಕ್ಮಿಣಿಯ ಸುಂದರ ಅಮೃತಶಿಲೆಯ ಮೂರ್ತಿ ಇದೆ. ನಮ್ಮ ಮುಂದಿನ ತಾಣ ನಾಗೇಶ್ವರ.

ನಾಗೇಶ್ವರಲಿಂಗವು ಭಾರತಾದ್ಯಂತ ಇರುವ ದ್ವಾದಶ ಜ್ಯೋತಿರ್ಲಿಂಗಳಲ್ಲಿ 12 ನೇ ಜ್ಯೋತಿರ್ಲಿಂಗವಾಗಿದೆ. ಸುಂದರವಾದ ದೇವಾಲಯ ಮತ್ತು ಪರಿಸರವಿದೆ.
 ಒಳಗಡೆ ಪ್ರಶಾಂತವಾಗಿದ್ದು ನಾವು ನಾಗೇಶ್ವರನ ಧರ್ಶನ ಮಾಡಿದೆವು. ಹೊರಗಡೆ ಬಹಳ ದೊಡ್ಡ ಪರಮೇಶ್ವರನ ಕಾಂಕ್ರೀಟ್ ನ ವಿಗ್ರಹ ನಿರ್ಮಿಸಿದ್ದಾರೆ.


 ಅಲ್ಲಿಂದ ಹೊರಟು ನಾವು ಗೋಪಿ ತಲಾವ್ ಎಂಬಲ್ಲಿಗೆ ಬಂದೆವು. ಇಲ್ಲಿ ಒಂದು ದೇವಾಲಯವಿದ್ದು ಪಕ್ಕದಲ್ಲೇ ಒಂದು ದೊಡ್ಡ ಸರೋವರವಿದೆ. ಇಲ್ಲಿ ಗೋಪಿಯರು ಜಲಕ್ರೀಡೆ ಆಡುತ್ತಿದ್ದರಂತೆ. ಕೊನೆಗೆ ಕೃಷ್ಣನು ಅವರಿಗೆಲ್ಲ ಈ ಸರೋವರದಲ್ಲೇ ಮೋಕ್ಷವನ್ನು ಕೊಡಿಸಿದನು ಎಂದು ಐತಿಹ್ಯ.



ಕೊನೆಗೆ ನಾವು ಒಖಾ ತಲುಪಿದೆವು. ಅಲ್ಲಿನ ಬೋಟ್ ಜೆಟ್ಟಿಯಲ್ಲಿ ಸರದಿಯಲ್ಲಿ ನಿಂತು ಬೋಟ್ ಏರಿದೆವು. ಸುಮಾರು 150 ಜನರನ್ನು ಹತ್ತಿಸುತ್ತಾರೆ.


 5  ಕಿ.ಮಿ. ಸಮುದ್ರ ಯಾನ, ಬಹಳ ಮಜಾ ಆಗಿತ್ತು. ಬಂದರಿನಲ್ಲಿ ನಿಂತಿರುವ ದೊಡ್ಡ ಹಡಗುಗಳನ್ನೂ ನೋಡಿದೆವು. ಮೀನುಗಾರಿಕೆಯಲ್ಲಿ ತೊಡಗಿರುವ ಹಲವಾರು ನಾವೆಗಳೂ ಇದ್ದವು.












 ಒಟ್ಟು ಅರ್ಧಘಂಟೆ ಪ್ರಯಾಣಿಸಿ ಬೆಟ್ ತಲುಪಿದೆವು. ಅಲ್ಲಿಯೂ ಜೆಟ್ಟಿ ಇತ್ತು. ಪ್ರಯಾಣ ದರ ಒಬ್ಬರಿಗೆ 10 ರೂ. ಬೆಟ್ ದ್ವಾರಕ ಒಂದು ದ್ವೀಪ.ಇಲ್ಲಿ ಸುಮಾರು 5000 ಜನಸಂಖ್ಯೆ ಇದ್ದು ಹೆಚ್ಚಿನವರು ಮುಸ್ಲಿಮರು.


 ಬರಿಯ 1000 ಮಂದಿ ಹಿಂದೂಗಳು ಮತ್ತು ಕೆಲವೇ ಬ್ರಾಹ್ಮಣ ಕುಟುಂಬಗಳಿವೆಯಂತೆ. ಅವರಿಗೆಲ್ಲಾ ಅಕ್ಕಿ ಮತ್ತಿತರ ಅಹಾರ ವಸ್ತುಗಳು ಒಖಾದಿಂದಲೇ ಬರಬೇಕು. ಮೀನುಗಾರಿಕೆ ಇಲ್ಲಿನ ನಿವಾಸಿಗಳ ಮುಖ್ಯ ಕಸುಬು.

ಶ್ರೀಕೃಷ್ಣನ ಕಾಲದ ಸುಂದರ ನಗರಿ ಈಗ ಕಾಣಸಿಗುವುದೇ ಇಲ್ಲ. ದ್ವಾಪರಾ ಯುಗದ ಅಂತ್ಯ ಕಾಲದಲ್ಲಿ ಯಾದವರೆಲ್ಲಾ ತಮ್ಮ ತಮ್ಮಲ್ಲೇ ಹೊಡೆದಾಡಿ ಸತ್ತರು ಎಂದು ಪುರಾಣ ಹೇಳುತ್ತದೆ. ಇದರಿಂದ ಶ್ರೀಕೃಷ್ಣನಿಗೆ ತುಂಬಾ ದುಃಖವಾಗಿ ಪೂರ್ತಿ ದ್ವಾರಕಾ ನಗರಿಯನ್ನೇ ಸಮುದ್ರದಲ್ಲಿ ಮುಳುಗಿಸುತ್ತಾನೆ. ಮತ್ತು ತಾನು ತನ್ನ ಅವತಾರವನ್ನು ಸಮಾಪ್ತಿಗೊಳಿಸುತ್ತಾನೆ. ಈಗಲೂ ಸಮದ್ರದ ಅಡಿಯಲ್ಲಿ ಸುಮಾರು 40 ಅಡಿಗಳಷ್ಟು ಕೆಳಗಡೆ ಒಂದು ದೊಡ್ಡ ನಗರಿಯೇ ಮುಳುಗಡೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.2001 ರಲ್ಲಿ ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನೋಲಜಿ (NIOT) ಮತ್ತು S .R. RAO ಎಂಬ ಸಂಶೋಧಕರು ಮುತುವರ್ಜಿವಹಿಸಿ ಈ ಪಟ್ಟಣವನ್ನು  ಕಂಡುಹಿಡಿದಿದ್ದಾರೆ. ಇದನ್ನು ನಾವು ಯು ಟ್ಯೂಬ್ ನಲ್ಲಿ ನೋಡಬಹುದು. ಆದರೆ ಇದು ನಿಜವಾದ ಶ್ರೀಕೃಷ್ಣನ ದ್ವಾರಕೆ ಎಂಬುದು ಇನ್ನೂ ವಿವಾದದಲ್ಲಿದೆ. ನಾವು ಬೋಟ್ ನಲ್ಲಿ ಸಾಗಿದ ಸಮುದ್ರದ ಕೆಳಗಡೆಯೇ ಈ ಮುಳುಗಿರುವ ಪಟ್ಟಣ ಇದೆಯಂತೆ.

ಬೆಟ್ ಎಂದರೆ ಭೇಟಿ ಎಂದೂ ಆಗುತ್ತದೆ, ಭೇಂಟ್ ಎಂದರೆ ಕಾಣಿಕೆ ಎಂದೂ ಆಗುತ್ತದೆ. ಇಲ್ಲಿ ಕೃಷ್ಣನ ಗೆಳೆಯ ಸುಧಾಮನು ತನ್ನ ಕಷ್ಟ ಕಾಲದಲ್ಲಿ ಕೃಷ್ಣನನ್ನು ಭೇಟಿ ಆಗಲು ಬಂದ ಸ್ಥಳವಂತೆ. ಹಾಗೆ ಬರುವಾಗ ಅವಲಕ್ಕಿಯ ಪುಟ್ಟ ಗಂಟನ್ನು ಕೃಷ್ಣನಿಗೆ ಅರ್ಪಿಸಲು ತರುತ್ತಾನೆ. ಹಾಗಾಗಿ ಭೆಟ್ ದ್ವಾರಕ ಎಂದು ಹೆಸರು ಬಂತು.ಇಲ್ಲಿ ದ್ವಾರಕಾ ದೆವಾಲಯಕ್ಕಿಂತಲೂ ಪುರಾತನವಾದ ದ್ವಾರಕಾದೀಶನ ದೇವಾಲಯವಿದೆ. ಅಷ್ಟೇನು ದೊಡ್ಡ ಮಂದಿರವಲ್ಲ. ಇಲ್ಲಿ ಕೃಷ್ಣ, ಬಲರಾಮ ಮತ್ತು ಕೃಷ್ಣನ ರಾಣಿಯರಾದ ರುಕ್ಮಿಣಿ, ಸತ್ಯಭಾಮ, ಜಾಂಬವತಿ ಮತ್ತು ರಾಧೆಯರ ಗುಡಿ ಇದೆ. ನಮಗೆ ಕೊಟ್ಟಿರುವ ಕಾಲಾವಕಾಶ ಕಡಿಮೆ ಇದ್ದುದರಿಂದ ಅಲ್ಲಿಂದ ಬೇಗನೆ ಮರಳ ಬೇಕಾಯಿತು. ದ್ವೀಪದಲ್ಲಿ ಸುತ್ತಾಡುವ ಅವಕಾಶ ಇರಲಿಲ್ಲ. ಮರಳಿ ಬೋಟ್ ನಲ್ಲಿ ಪಯಣಿಸಿ ನಂತರ ಬಸ್ ನಲ್ಲಿ ದ್ವಾರಕಾ ತಲುಪುವಾಗ ಮಧ್ಯಾಹ್ನ 2 ಘಂಟೆ. ಅಲ್ಲೇ ಊಟ ಮುಗಿಸಿ ರೂಮಿಗೆ ಬಂದು ಸ್ವಲ್ಪ ವಿಶ್ರಾಮ ಪಡೆದೆವು. ಮತ್ತೊಮ್ಮೆ ದ್ವಾರಕಾದೀಶನ ಧರ್ಶನ, ಆರತಿ, ಪ್ರಸಾದ ಎಲ್ಲಾ ಪಡೆದು ಧನ್ಯತೆಯಿಂದ ರೂಮಿಗೆ ಮರಳಿದೆವು.

ಮರುದಿನ ಬೆಳಿಗ್ಗೆ ನಮ್ಮ ಪ್ರಯಾಣ ಸೋಮನಾಥಕ್ಕೆ.


























Friday, 20 December 2013

BEKAL FORT KASARAGOD



ಬೇಕಲ ಕೋಟೆ
ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು 18 ಕಿ.ಮೀ.ದೂರದಲ್ಲಿ ಅರಬೀ ಸಮುದ್ರಕ್ಕೆ ಮೈಯೊಡ್ಡಿ ನಿಂತಿದೆ ಒಂದು ಪರಿಪೂರ್ಣ ಸುಂದರ, ಐತಿಹಾಸಿಕ ಕೋಟೆ- ಬೇಕಲ ಕೋಟೆ. ಇಲ್ಲಿಗೆ ಭೇಟಿ ಕೊಡುವುದೆಂದರೆ ಒಂದು ಅನಿರ್ವಚನೀಯ ಅನುಭವ. ಐತಿಹಾಸಿಕ ಅನುಭವಗಳೊಂದಿಗೆ ಅರಬೀ ಸಮುದ್ರದ ಆಹ್ಲಾದಕರ ನೋಟವನ್ನೂ ಅನುಭವಿಸಬಹುದು.ಈ ಕೋಟೆಯನ್ನು ಇಕ್ಕೇರಿ ನಾಯಕರಲ್ಲಿ ಪ್ರಸಿದ್ಧನಾಗಿರುವ ಶಿವಪ್ಪನಾಯಕನು ಸುಮಾರು 1650 ನೇ ಇಸವಿಯಲ್ಲಿ ಕಟ್ಟಿಸಿದನಂತೆ. ತುಳುನಾಡು ಎಂದು ಕರೆಸಿಕೊಳ್ಳುತಿದ್ದ ಪ್ರದೇಶದ ಒಂದು ಪ್ರಮುಖ ರಕ್ಷಣಾ ಕೋಟೆ ಇದಾಗಿತ್ತು.
ಸ್ಥಳೀಯರು ಆಗ ಇದನ್ನು ದೇಕಲ ಕೋಟೆ ಎಂದು ಕರೆಯುತಿದ್ದರು. ಇದನ್ನು ಕಟ್ಟಿ ಮುಗಿಸಿದಾಗ ಇದಕ್ಕೆ ಒಂದು ಹೆಸರು ಇಡಬೇಕಿತ್ತು. ಹಲವಾರು ಹೆಸರು ಸೂಚಿತವಾದರೂ ಯಾವ ಹೆಸರೂ ನಾಯಕರಿಗೆ ತೃಪ್ತಿ ತರಲಿಲ್ಲ. ಯಾವುದಾದರೊಂದು ಹೆಸರು ಬೇಕಲ್ಲಾ, ಬೇಕಲ್ಲಾ ಎಂದು ಚರ್ಚಿಸಿದಾಗ ಕೊನೆಗೆ ಬೇಕಲವೆಂಬ ಹೆಸರೇ ಖಾಯಂ ಆಯಿತಂತೆ.ಇದು ಅಂತೆ ಕಂತೆ ಅಷ್ಟೇ.
ನಾಯಕರ ಆಳ್ವಿಕೆ ಕೊನೆಗೊಂಡು ಈ ಕೋಟೆಯು ಟಿಪ್ಪು ಸುಲ್ತಾನನ ವಶಕ್ಕೆ ಬಂದು ತರುವಾಯ 1799 ರಲ್ಲಿ ಆತನ ಮರಣದ ನಂತರ ಬ್ರಿಟಿಷರ ವಶವಾಯಿತು. ಆ ಮೇಲೆ ಸ್ವಾತಂತ್ರ್ಯ ದೊರೆತಮೇಲೆ ಸರಕಾರದ ಸೊತ್ತು ಆಗಿ ಉಳಿಯಿತು. ಈ ಕಾಲದಲ್ಲಿ ಏನೊಂದೂ ವಿಷೆಶಗಳಿಲ್ಲದೆ ಕೋಟೆಯೂ ತನ್ನ ಗತಕಾಲದ ನೆನಪುಗಳನ್ನು ಮೆಲುಕಾಡುತ್ತಾ ತೂಕಡಿಸುತಿತ್ತು. ಅಲ್ಲಿ ಒಂದು ಪ್ರವಾಸಿ ಬಂಗಲೆ ಮತ್ತು ಅಡಿಗೆ ಮನೆ, ಕಾವಲುಗಾರನ ನಿವಾಸ ನಿರ್ಮಿತವಾಯಿತು.
ನಾವು ಚಿಕ್ಕಂದಿನಲ್ಲಿ ಇಲ್ಲಿಗೆ ಪಿಕ್ನಿಕ್ ಗೆಂದು ಬರುತಿದ್ದೆವು. ಆಗ ಇಲ್ಲಿ ಯಾವುದೇ ಪ್ರೆವೇಶ ಧನ, ಕಟ್ಟುಪಾಡುಗಳು ಇರುತ್ತಿರಲಿಲ್ಲ. ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಸಹಾ ಇರಲಿಲ್ಲ. ನಮಗೆ ಬೇಕಾದ ತಿಂಡಿ, ನೀರು ಎಲ್ಲಾ ಕಟ್ಟಿಕೊಂಡು ಬೆಳಗ್ಗೆ ಕಾಸರಗೋಡಿನಿಂದ ಬಂದು, ನಮ್ಮಿಷ್ಟ ಬಂದಂತೆ ಆಟವಾಡಿ, ಸಮುದ್ರ ಸ್ನಾನ ಮಾಡಿ ಸಂಜೆಯಾದ ಮೇಲೆ ವಾಪಾಸು ಮನೆಗೆ ಮರಳುತಿದ್ದೆವು. ಹೆಚ್ಚೂ ಕಮ್ಮಿ ನಿರ್ಜನ ಕೋಟೆಯಾಗಿತ್ತು.
ಯಾವಾಗ ಇಲ್ಲಿ ತಮಿಳು ಸಿನೆಮಾ ಬೋಂಬೈ ಚಿತ್ರೀಕರಣವಾಯಿತೋ, ಈ ಕೋಟೆಯ ಭಾಗ್ಯದ ಬಾಗಿಲು ತೆರೆಯಿತು. ಬಹಳ ಸುಂದರವಾಗಿ ಕೋಟೆಯನ್ನು ಸಿನೆಮಾದಲ್ಲಿ ಚಿತ್ರಿಸಿದರು ಮಣಿರತ್ನಂ. ಆಮೇಲೆ ಇಲ್ಲಿಗೆ ಚಿತ್ರ ನಿರ್ಮಾಪಕರ, ಜಾಹಿರಾತುದಾರರ ದಂಡೇ ಬಂದವು. ಸರಕಾರಕ್ಕೂ ಈಗ ಎಚ್ಚರವಾಗಿರಬೇಕು. ಇಲ್ಲಿನ ಮಹತ್ವ ಮನವರಿಕೆಯಾಗಿ 1995 ರಲ್ಲಿ ಬೇಕಲ ಕೋಟೆಯನ್ನು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರ ಎಂದು ಘೋಷಿಸಿ ಅದಕ್ಕೆ ಒಂದುನಿಗಮವನ್ನು ಸ್ಥಾಪಿಸಿತು. ಇದರ ಫಲವಾಗಿ ಕೋಟೆಯು ಬಹಳ ಅಭಿವೃದ್ಧಿ ಪಡೆಯಿತು. ದುರಸ್ತಿ ಕಾರ್ಯಗಳೂ ಚೆನ್ನಾಗಿ ನಡೆದವು. ಸುಂದರವಾದ ಉದ್ಯಾನವನ್ನು ಬೆಳೆಸಿ ಪ್ರವಾಸಿಗಳ ಮನಕ್ಕೆ ಮುದವನ್ನು ಕೊಡುವ ತಾಣವನ್ನಾಗಿಸಿದರು. ಪ್ರವೇಶಧನ ರೂ.5  ಮತ್ತು ಕೆಮರಾಕ್ಕೆ ರೂ.25 ಇರಿಸಿದ್ದಾರೆ. ಸೂರ್ಯಾಸ್ತವಾದಮೇಲೆ ಇಲ್ಲಿ ಪ್ರವೇಶ ನಿಷಿದ್ಧ. ಕೋಟೆಯ ಒಳಗಡೆ ಒಂದೆರಡು ಅಂಗಡಿಗಳಿದ್ದು ಪ್ರವಾಸಿಗಳ, ಮಕ್ಕಳ ಬೇಡಿಕೆ ಪೂರಯಿಸುತ್ತಿವೆ. ಕೋಟೆಯ ಹೊರ ಭಾಗದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು ಪಕ್ಕದಲ್ಲಿ ಹಲವಾರು ಸ್ಟಾಲ್ ಗಳು ತಲೆ ಎತ್ತಿವೆ.
ಕೋಟೆಯ ಮುಂಭಾಗದಲ್ಲಿ ಕಂದಕವಿದ್ದು ಹಿಂದೊಮ್ಮೆ ಅದರ ತುಂಬಾ ನೀರು ತುಂಬಿಸಿ ಮೊಸಳೆಗಳನ್ನು ಅದರಲ್ಲಿ ಸಾಕುತ್ತಿದ್ದಿರಬೇಕು. ಮುಂಭಾಗದ ಮುಖ್ಯ ದ್ವಾರವನ್ನು ದಾಟುತ್ತಿದ್ದಂತೆಯೇ ಕೋಟೆಯ ರಕ್ಷಕ ಸ್ವಾಮಿಯಾದ ಆಂಜನೇಯನ ಗುಡಿ ಸಿಗುತ್ತದೆ. ಇದನ್ನು ಮುಖ್ಯಪ್ರಾಣ ದೇವಸ್ಥಾನ ಎಂದು ಕರೆಯುತ್ತಾರೆ. ಅಲ್ಲಿಂದ ಎಡಗಡೆಗೆ ತಿರುವಿನಲ್ಲಿ ಸಾಗಿದರೆ ಪ್ರವೇಶಕ್ಕಾಗಿ ಟಿಕೆಟ್ ಕೊಡುವ ಕೌಂಟರ್ ಸಿಗುತ್ತದೆ. ಟಿಕೆಟ್ ಪಡಕೊಂಡು ಮುಂದಿನ ದ್ವಾರ ಪ್ರವೇಶಿಸಿದೊಡನೆ ನಮಗೆ ಕೋಟೆಯ ಸಮಗ್ರ ಧರ್ಶನವಾಗುತ್ತದೆ. ಸುಂದರವಾದ ಹುಲ್ಲುಗಾವಲನ್ನು ಬೆಳೆಸಿದ್ದಾರೆ. ಅದರ ಅಂಚಿನಲ್ಲಿ ಹೂವಿನ ಗಿಡಗಳು ನಮ್ಮನ್ನು ಆಮಂತ್ರಿಸುತ್ತವೆ.


 ಮಧ್ಯದಲ್ಲಿ ಇರುವ ದಾರಿಯಲ್ಲಿ ಸಾಗಿದರೆ ನಮಗೆ ಎತ್ತರವಾದ ಒಂದು ಬುರುಜು, ವೀಕ್ಷಣಾಸ್ಥಳ ಕಾಣುತ್ತದೆ. ಇದನ್ನು ಏರಲು ಉತ್ತಮ ಏರುದಾರಿಯಿದೆ. ಹಿಂದೆ ಇದರಲ್ಲೇ ಫಿರಂಗಿಗಳನ್ನೂ ಮೇಲ್ಗಡೆ ಸಾಗಿಸುತ್ತಿದ್ದರಂತೆ. ಅಲ್ಲಿಂದ ನೋಡಿದರೆ ನಮಗೆ ಸುತ್ತಲಿನ 360 ಡಿಗ್ರಿಯ ನೋಟ ಸಾಧ್ಯ.



 ದೂರದ ಪಳ್ಳಿಕ್ಕೆರೆ, ಉದುಮ ಮತ್ತು ಹೊಸದುರ್ಗಗಳವರೆಗೆಗಿನ ನೋಟಗಳು ಕಾಣುತ್ತವೆ. ಹಾಗೇನೆ ಪಶ್ಚಿಮದಲ್ಲಿ ವಿಶಾಲ ಅರಬಿ ಸಮುದ್ರವೂ ಅದರಲ್ಲಿ ಸಾಗುತ್ತಿರುವ ಹಡಗು, ಮೀನುಗಾರಿಕಾ ನಾವೆಗಳೂ ಕಾಣುತ್ತವೆ. ಕೋಟೆಯ ಬಹುಪಾಲು ಸಮುದ್ರ ಆವರಿಸಿಕೊಂಡಿದೆ.



 ಎಂಥಹಾ ಬೇಸಿಗೆಯಲ್ಲೂ ಇಲ್ಲಿ ಸಮುದ್ರದಿಂದ ಬೀಸುವ ತಂಪಾದ ಗಾಳಿ ನಮ್ಮನ್ನು ಮುದಗೊಳಿಸುತ್ತದೆ. ಇಲ್ಲೇ ಕೆಳಗಡೆ ಒಂದು ನೀರಿನ ಭಾವಿ ಸಹಾ ಕಾಣಬಹುದು.
 ಇಲ್ಲಿಂದ ಕೆಳಗಿಳಿದು ಮುಂದೆ ಸಾಗಿದರೆ ಅಲ್ಲಿ ಮತ್ತೊಂದು ಬುರುಜು ಸಿಗುತ್ತದೆ. ಅಲ್ಲೇ ಪಕ್ಕದಲ್ಲಿ ಹಿಂದಿನಕಾಲದ ಮದ್ದು ಗುಂಡು ಮೊದಲಾದ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಒಂದು ಉಗ್ರಾಣ ಸಿಗುತ್ತದೆ.



 ಮುಂದೆಲ್ಲಾ ಸಾಗಿದಂತೆ ಕೋಟೆಯ ಗೋಡೆಯ ಅಂಚಿನಲ್ಲೇ ನಮಗೆ ಇನ್ನೂ ಹಲವು ಬುರುಜುಗಳು ಎದುರಾಗುತ್ತವೆ. ಇಲ್ಲಿ ಅರಬೀ ಸಮುದ್ರದ ಸುಂದರ ನೋಟ ಸಿಗುತ್ತದೆ. ಕೋಟೆಯ ಗೋಡೆಗಳಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಕಂಡಿಗಳಿದ್ದು ಕೊವಿಗಳಿಂದ ಗುಂಡು ಹಾರಿಸಲು ಮಾಡಿದ ರಚನೆಗಳು ಎಂದು ಗೊತ್ತಾಗುತ್ತದೆ. ಅಂತೆಯೇ ಬುರುಜುಗಳಲ್ಲಿ ಫಿರಂಗಿಗಳಿಂದ ಗುಂಡು ಸಿಡಿಸಲು ಕೊಂಚ ಅಗಲವಾದ ಸಂಧಿಯನ್ನೂ ರಚಿಸಿದ್ದಾರೆ.



 ಇಲ್ಲಿ ಕೋಟೆಯ ಎಡಭಾಗದಲ್ಲಿ ಒಂದು ಗುಹಾ ಮಾರ್ಗವಿದ್ದು ಅದರಲ್ಲಿ ಇಳಿದು ಬಗ್ಗಿಕೊಂಡು ಸಾಗಿದರೆ ಕಡಲ ತೀರಕ್ಕೆ ಹೋಗಬಹುದು. ಹಿಂದೆ ನಾವೆಷ್ಟೋ ಸಲ ಅದರಲ್ಲಿ ಸಾಗಿದ್ದೆವು. ಆದರೆ ಈಗ ಅಲ್ಲೆಲ್ಲಾ ಒಂದು ಜಾತಿಯ ಎತ್ತರವಾದ ಹುಲ್ಲು ಬೆಳೆದು ಆ ಸುರಂಗ ಎಲ್ಲಿದೆ ಎಂದು ತಿಳಿಯುವುದೇ ಇಲ್ಲ. ಈ ಹುಲ್ಲನ್ನು ತೆಗೆದರೆ ಖಂಡಿತಾ ಆ ಸುರಂಗ ಮಾರ್ಗ ಗೋಚರಿಸುವುದು. ಇಲಾಖೆಯವರು ಈ ಬಗ್ಗೆ ಅವಶ್ಯ ಗಮನಹರಿಸಬೇಕು.






 ಮುಂದೆ ಹೋದಂತೆ ಕೋಟೆಯಿಂದ ಸಮುದ್ರಮುಖವಾಗಿ ಒಂದು ಬಾಗಿಲು ಇದೆ. ಅಲ್ಲಿಂದ ಕೆಳಗಿಳಿಯಲು ಮೆಟ್ಟಿಲುಗಳಿವೆ. ಇದರಲ್ಲಿಳಿದು ಹೋದರೆ ನೇರ ಸಮುದ್ರಕ್ಕೆ ತಾಗಿಕೊಂಡೇ ಇರುವ ಒಂದು ಬುರುಜು ಸಿಗುತ್ತದೆ.












 ಇದೇ ಇಲ್ಲಿನ ಮುಖ್ಯ ಆಕರ್ಷಣೆ ಎನ್ನಬಹುದು. ಇಲ್ಲಿ ನಿಂತರೆ ಸಿಗುವ ಆನಂದ ಅಷ್ಟಿಷ್ಟಲ್ಲ. ನೀರಿನ ತೆರೆಗಳು ಭೋರ್ಗರೆಯುತ್ತಾ ಬುರುಜು ಮತ್ತು ಅದರ ಸುತ್ತಲಿನ ಬಂಡೆಗಳಿಗೆ ಅಪ್ಪಳಿಸುವಾಗ  ಅಷ್ಟೆತ್ತರಕ್ಕೆ ನೀರು ಚಿಮ್ಮಿ ಪ್ರವಾಸಿಗಳನ್ನು ಕೇಕೆ ಹಾಕುವಂತೆ ಮಾಡುತ್ತದೆ. ಕೆಲವೊಮ್ಮೆ ಅಲ್ಲಿ ನಿಂತವರ ಮೇಲೂ ನೀರಿನ ಪ್ರೋಕ್ಷಣೆ ಮಾಡುತ್ತವೆ. ಇಲ್ಲಿ ಸೂರ್ಯಾಸ್ತವನ್ನೂ ನೋಡಬಹುದು.





ಕೋಟೆಯಲ್ಲಿ ಹಿಂದಿನ ಕಾಲದ ಕಟ್ಟಡಗಳು ಯಾವುದೂ ಈಗ ಕಾಣಲಾರೆವು. ಕೆಲವು ಕಡೆ ಹಳೆಯ ಕಟ್ಟಡದ ತಳಪಾಯ ಮಾತ್ರ ಇದೆ. ಇಲ್ಲಿನ ಒಂದು ಕೊರತೆ ಎಂದರೆ ಮಳೆ ಬಂದಾಗ ಆಶ್ರಯ ಪಡೆಯಲು ಯಾವ ಸೌಕರ್ಯವೂ ಇಲ್ಲ. ಬೇಕಿದ್ದರೆ ಪ್ರವಾಸಿ ಬಂಗಲೆಯ ಜಗಲಿಗೆ ಓಡಬೇಕಷ್ಟೇ.
ನಿಜಕ್ಕೂ ಇದೊಂದು ಅವಶ್ಯವಾಗಿ ನೋಡಲೇ ಬೇಕಾದ ತಾಣ. ನೀವೂ ನೋಡಬನ್ನಿ.