Friday, 26 February 2010

Kutyala Kudlu Temples

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ



ಕೂಡ್ಲು ಎಂಬ ಈ ಪುಟ್ಟ ಗ್ರಾಮವಿರುವುದು ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಕಾಸರಗೋಡಿನಲ್ಲಿ. ಕಾಸರಗೋಡಿನಿಂದ ಮಧೂರು ಸಿದ್ದಿವಿನಾಯಕ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 3km. ಪ್ರಯಾಣಿಸಿ, ರಾಮದಾಸ ನಗರದಿಂದ ಎಡಕ್ಕೆ ತಿರುಗಿ 1/2 km. ದೂರ ಸಾಗಿದರೆ ನೀವು ಸರಿಯಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಇರುತ್ತೀರಿ. ಪಟ್ಟಣದ ಗಜಿ ಬಿಜಿಯಿಂದ ದೂರವಾಗಿ ಪ್ರಶಾಂತಮಯ ಪರಿಸರದಲ್ಲಿ ತನ್ನದೇ ಆದ ವಿಶಿಷ್ಟವಾದ ಗೋಪುರವನ್ನು ಹೊಂದಿರುವ ಈ ದೇವಾಲಯವು ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿದೆ. ಕೂಡ್ಲು ಶ್ಯಾನುಭಾಗರ ಮನೆಯ ಹಿರಿಯರಿಂದ ಪ್ರತಿಷ್ಟಾಪನೆಗೊಂಡ ಈ ದೇವಾಲಯವು ಕಾಲಾನಂತರ ಈಗಿರುವ ಭವ್ಯ ಗೋಪುರವನ್ನು ಹೊಂದಿಕೊಂಡು ನವೀಕರಿಸಲ್ಪಟ್ಟಿದೆ.
-----
-----
ಸುಮಾರು 3ಅಡಿಗಳಷ್ಟು ಎತ್ತರವಿರುವ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವು ನೋಡಲು ಸುಂದರವಾಗಿದ್ದು ಕೈಗಳಲ್ಲಿ ಪುಟ್ಟ ಮಗುವನ್ನು ಕಾಣಬಹುದು. ಭಕ್ತಿಯಿಂದ ಬೇಡಿದ ಭಕ್ತರಿಗೆ ಸಂತಾನ ಭಾಗ್ಯವನ್ನು ಕರುಣಿಸಿರುವ ಹಲವಾರು ನಿದರ್ಶನಗಳು ಇವೆ, ಮತ್ತು ಈ ದೇವರನ್ನು ಸಂತಾನ ಗೋಪಾಲಕೃಷ್ಣನೆಂದೇ ಕರೆಯುತ್ತಾರೆ. ಇದಲ್ಲದೆ ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಧರ್ಮ ಶಾಸ್ಥಾರ ಪ್ರತಿಷ್ಠೆಗಳೂ ಇಲ್ಲಿವೆ. ದೇವಾಲಯವನ್ನು ಪ್ರವೆಶಿಸುತಿದ್ದಂತೆ ನಿಮಗೆ ತಂಪಾದ ಗಾಳಿಯು ಸ್ವಾಗತ ಕೋರುತ್ತದೆ. ಗೋಪುರದ ಒಳ ಭಾಗದಲ್ಲಿ ಎತ್ತರವಾದ ಕಂಚಿನ ದ್ವಜಸ್ಥಂಭ, ಬಲಿಕಲ್ಲುಗಳನ್ನು ಕಾಣಬಹುದು. ವಿಶಾಲವಾದ ರಾಜಾಂಗಣ, ಮತ್ತು ಪ್ರದಕ್ಷಿಣಾಪಥವನ್ನು ಹೊಂದಿದೆ. ಅಂಗಣದ ಸುತ್ತಲೂ ಜಾತ್ರೆಯ ಸಮಯದಲ್ಲಿ ಕುಳಿತುಕೊಳ್ಳಲು ಗೋಪುರಗಳಿದ್ದು, ಪ್ರತ್ಯೇಕ ಅಗ್ರಶಾಲೆ, ದಾಸ್ತಾನು ಉಗ್ರಾಣ ಇವೆ.
ಎಡನಾಳಿಗೆಯಿಂದ ಸುತ್ತುವರೆದ ದೇವಸ್ಥಾನದ ಒಳಗೆ ಪ್ರವೇಶಿಸಿದರೆ, ಪಶ್ಚಿಮಾಭಿಮುಖನಾಗಿ ನಿಂತಿರುವ ಶ್ರೀ ಗೋಪಾಲಕೃಷ್ಣ ದೇವರ ದರ್ಶನವಾಗುವುದು. ಅಲ್ಲೇ ಇನ್ನೊಂದು ಗರ್ಭಗೃಹದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಕೂಡಾ ಆಗುತ್ತದೆ.
ದೇವರಿಗೆ ಒಂದು ಪ್ರದಕ್ಷಿಣೆ ಹಾಕಿ ಬರುವಾಗ ಅಲ್ಲಿಯೇ ಇರುವ ರಾಜರಾಜೇಶ್ವರಿ ದೈವದ ಸ್ಥಾನವನ್ನು ನೋಡಿ ಕೈ ಮುಗಿದು ಬರಬಹುದು. ಇಲ್ಲಿ ನಿತ್ಯ ಮೂರೂ ಹೊತ್ತು ಪೂಜೆ ನಡೆಯುತ್ತದೆ.
-----
-----
ಪ್ರತೀ ವರ್ಷ ಕುಂಭ ಮಾಸದ ನವಮಿಯಂದು ದ್ವಜಾರೋಹಣಗೊಂಡು ಶ್ರೀ ಗೋಪಾಲಕೃಷ್ಣ ದೇವರ ಜಾತ್ರೆ ಪ್ರಾರಂಭವಾಗಿ ಪೌರ್ಣಮಿಯಂದು ರಥೋತ್ಸವ, ಮರುದಿನ ಅವಭೃತ  ಸ್ನಾನ, ದ್ವಜಾವರೋಹಣದ ನಂತರ ಜಾತ್ರೆ ಮುಕ್ತಾಯಗೊಳ್ಳುತ್ತದೆ. ಮಾರನೆ ದಿವಸ ರಾಜ ರಾಜೇಶ್ವರಿ ದೈವದ ನೇಮ ಕೂಡಾ ನಡೆಯುತ್ತದೆ. ಅದೇ ರೀತಿ ಪ್ರತೀ ವರ್ಷ ಅನ್ನಪೂರ್ಣೆಶ್ವರಿ ದೇವರ ನವರಾತ್ರಿ ಉತ್ಸವ ಮತ್ತು ವಿಜಯ ದಶಮಿಯಂದು ಹೊಸಾರೋಗಣೆ ಕೂಡ ನಡೆಯುತ್ತದೆ. ಈ ಎರಡೂ ಜಾತ್ರೆಗಳು ಬಹಳ ಪ್ರಸಿದ್ಧವಾಗಿದ್ದು, ಊರ, ಪರಊರ ಭಕ್ತ ಜನರೆಲ್ಲರೂ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ತುಂಬಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಬಯಲಾಟವು ಸಹಾ ನಡೆಯುತ್ತದೆ.
ಕುತ್ಯಾಳ ಗೋಪಾಲಕೃಷ್ಣ ದೇವರು ಯಕ್ಷಗಾನಪ್ರಿಯ! ಅಂತೆಯೇ ಶ್ರೀ ದೇವರ ಹೆಸರಿನಲ್ಲಿ ನಡೆಯುವ ಒಂದು ಯಕ್ಷಗಾನ ಮೇಳ ಕೂಡ ಇದೆ. ಕುತ್ಯಾಳ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಎಂಬ ಈ ಮೇಳವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮೇಳಗಳಿಗೆ ಸರಿಸಾಟಿಯಾಗಿದ್ದು, ಬಹಳ ಜನ ಹೆಸರಾಂತ ಯಕ್ಷಗಾನ ಕಲಾವಿದರು ಇಲ್ಲಿಂದಲೇ ತಮ್ಮ ಕಲಾ ಜೀವನವನ್ನು ಆರಂಬಿಸಿದ್ದಾರೆ. ಈಗಲೂ ಸಹಾ ಸೇವೆಯ ಆಟ, ಸಣ್ಣ ಮಟ್ಟಿನ ತಿರುಗಾಟದ ಆಟಗಳು ನಡೆಯುತ್ತಿರುತ್ತವೆ.

ಶ್ರೀ ಕ್ಷೇತ್ರದಲ್ಲಿ ವಿವಾಹ ಮತ್ತಿತರ ಶುಭ ಕಾರ್ಯಗಳು ಜರಗುತ್ತಿರುತ್ತವೆ ಮತ್ತು ಅದಕ್ಕೆ ಬೇಕಾದ ಉತ್ತಮ ಸೌಲಭ್ಯಗಳೂ ಇಲ್ಲಿವೆ.


ಶ್ರೀ ಶಿವಮಂಗಿಲ ಸದಾಶಿವ ದೇವಸ್ಥಾನ


ಕೂಡ್ಲು ಶಿವಮಂಗಿಲ ಸದಾಶಿವ ದೇವಸ್ತಾನವು, ಬಹಳ ಪ್ರಶಾಂತವಾದ ಸ್ಥಳದಲ್ಲಿದೆ. ಗೋಪಾಲಕೃಷ್ಣ ದೇವಳದಿಂದ ಬರೇ 250 ಮೀಟರ್ ದೂರದಲ್ಲಿದೆ. ಈ ದೇವಸ್ತಾನದ ಸ್ಥಾಪನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೂ ಬಹಳ ವರ್ಷಗಳಿಂದ ಕೂಡ್ಲು ಶ್ಯಾನುಭಾಗ ಮನೆತನದವರು ಇದನ್ನು ನಡೆಸಿಕೊಂಡು ಬರುತಿದ್ದಾರೆ. ಇದಕ್ಕಾಗಿ ಇವರಿಗೆ ಸರಕಾರದಿಂದ ಸನದನ್ನು ಸಹಾ ಕೊಡಲಾಗಿದೆ. ಕೂಡ್ಲು ಮನೆಯ ಮನೆ ದೇವರು ಅಂತ ನಂಬಿಕೊಂಡು ಬಂದಿದ್ದಾರೆ. ಮೊದಲು ಜೀರ್ಣಾವಸ್ಥೆಯಲ್ಲಿದ್ದ ದೇವಸ್ತಾನವನ್ನು ಜೀರ್ಣೋದ್ಧಾರ ಮಾಡಿಸಿ, ನಿತ್ಯ ಮೂರೂ ಹೊತ್ತು ಪೂಜೆಯ ಏರ್ಪಾಡು ಮಾಡಿದ್ದಾರೆ.
-----
-----
ಇಲ್ಲಿಗೆ ಬರಲು ಮಾರ್ಗ ಸೌಕರ್ಯವಿದ್ದು ದೇವಸ್ಥಾನದ ಮುಂಭಾಗದ ವರೆಗೆ ವಾಹನಗಳಲ್ಲಿ ಬರಬಹುದಾಗಿದೆ. ಇಲ್ಲಿಂದಲೇ ಪಕ್ಕದಲ್ಲಿರುವ ಸಣ್ಣ ಸೇತುವೆ ದಾಟಿ ಮುಂದೆ ಹೋದರೆ ಮಧೂರು ರಸ್ತೆಗೆ ಸೇರುತ್ತದೆ. ಈ ದೇವಸ್ಥಾನವು ಚಿಕ್ಕದಾದರೂ ಚೊಕ್ಕವಾಗಿ,ಸುಂದರವಾಗಿದೆ. ಒಳ ಹೊಕ್ಕೊಡನೆ ಕೊಡಿಮರ, ಬಲಿಕಲ್ಲು ಮತ್ತು ಕಟ್ಟೆಗಳನ್ನು ಕಾಣಬಹುದು. ರಾಜಾಂಗಣ ಮತ್ತು ಸುತ್ತಲಿನ ಅಂಗಣಗಳು ಚೆನ್ನಾಗಿವೆ. ಸುತ್ತಲೂ ಇರುವ ಹಸಿರಾದ ಅಡಿಕೆ ತೋಟ ದೇವಾಲಯಕ್ಕೆ ಒಂದು ಪ್ರಶಾಂತ ಪರಿಸರವನ್ನು ನೀಡುತ್ತದೆ. ಇಲ್ಲಿಗೆ ಬಂದ ಭಕ್ತಾದಿಗಳು ಈ ಪ್ರಶಾಂತತೆಯನ್ನು ಅನುಭವಿಸಿ ದೇವಸ್ಥಾನವನ್ನು ಪ್ರವೇಶಿಸಿದಾಗ ಎದುರಿಗೆ ಇರುವ ಗರ್ಭಗೃಹದಲ್ಲಿರುವ ಸದಾಶಿವ ದೇವರ ದರ್ಶನವಾಗುತ್ತದೆ. ಗರ್ಭಗೃಹದ ಎದುರಿಗೆ ನಮಸ್ಕಾರ ಮಂಟಪವಿದೆ. ದೇವಾಲಯದ ವಾಸ್ತುವು ಕೇರಳ ಮತ್ತು ದಕ್ಷಿಣ ಕನ್ನಡದ ಶೈಲಿಯಲ್ಲಿದೆ.
-----
-----
ಇಲ್ಲಿ ವರ್ಷಂಪ್ರತಿ ಜಾತ್ರಾ ಮಹೋತ್ಸವವು, ಮಹಾ ಶಿವರಾತ್ರಿಯಂದು ಪ್ರಾರಂಭವಾಗಿ ಐದು ದಿನಗಳ ಕಾಲ ನಡೆಯುತ್ತದೆ. ಊರಿನ ಎಲ್ಲಾ ಭಕ್ತಾದಿಗಳು ಶ್ರೀ ದೇವರ ಜಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಾರೆ. ಜಾತ್ರೆಯ ಮೂರನೆ ದಿವಸ ದೇವರನ್ನು ರಾಮದಾಸನಗರದ     ಗೋಪಾಲಕೃಷ್ಣ ಹೈಸ್ಕೂಲ್ ನ ಎದುರು ಇರುವ ಕಟ್ಟೆಗೆ ಘೋಷ ಯಾತ್ರೆಯಲ್ಲಿ ಕೊಂಡೊಯ್ಯುವುದು, ಐದನೇ ದಿವಸ ಅವಭೃತ ಸ್ನಾನಕ್ಕಾಗಿ, ಶ್ರೀ ವಿಷ್ಣುಮಂಗಿಲ ದೇವಸ್ತಾನದ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾ ವಿಷ್ಣು ದೇವರ ದರ್ಶನ ಮಾಡುವುದು ವಾಡಿಕೆ. ಜಾತ್ರೆಯ ಮಾರಣೆ ದಿವಸ, ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುತ್ತದೆ.
------
------
ಇಲ್ಲಿ ಎರಡು ವರ್ಷಗಳಿಗೊಮ್ಮೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು (ಕೆಂಡ ಸೇವೆ) ಸಹಾ ಜರಗುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹಾವತಾರದ ಪ್ರತೀಕವಾಗಿರುವ ವಿಷ್ಣುಮೂರ್ತಿಯ ಈ ಒತ್ತೆಕೋಲ ಮಹೋತ್ಸವವು ಊರಿನ ಮತ್ತು ಪರ ಊರಿನ ಬಹಳ ಭಕ್ತರನ್ನು ಬರಮಾಡಿಸುತ್ತದೆ.
-----


-----
ಭಯ ಮತ್ತು ಭಕ್ತಿಗಳನ್ನು ಏಕ ಕಾಲಕ್ಕೆ ಮೂಡಿಸುವ ಈ ಒತ್ತೆಕೋಲ ಮಹೋತ್ಸವವು ಕಾಸರಗೋಡು ಮತ್ತು ಕುಂಬಳೆ ಮತ್ತು ಸುತ್ತು ಮುತ್ತಲ ಪ್ರದೇಶಗಳಲ್ಲಿ ಮಾತ್ರ ಜರಗುತ್ತದೆ. ಒಮ್ಮೆಯಾದರೂ ಇದನ್ನು ನೋಡಲೇ ಬೇಕು.


ವಿಷ್ಣುಮಂಗಿಲ ಶ್ರೀ ಮಹಾವಿಷ್ಣು ದೇವಸ್ಥಾನ

ಕೂಡ್ಲು ದೇವಸ್ಥಾನಗಳಲ್ಲಿ ಒಂದಾದ ವಿಷ್ಣುಮಂಗಿಲ ಮಹಾವಿಷ್ಣು ದೇವಾಲಯವು ಮೇಲೆ ಹೇಳಿದ ಎರಡೂ ದೇವಾಲಯಗಳಿಂದ ಸುಮಾರು 1 km. ದೂರದಲ್ಲಿದೆ. ಸುತ್ತಲೂ ಬತ್ತದ ಗದ್ದೆಗಳಿಂದ ಆವೃತವಾಗಿ ಬಹಳ ಶಾಂತ ಪರಿಸರದಲ್ಲಿದೆ. ಹಸಿರಾದ ಬತ್ತದ ಬೆಳೆ ಈ ದೇವಸ್ಥಾನಕ್ಕೆ ಒಂದು ವಿಶೇಷ ಸೌಂದರ್ಯವನ್ನಿಯುತ್ತದೆ.
------
-----
ಬಹಳ ಪುರಾತನ ದೇವಾಲಯವಿದು. ಇಲ್ಲಿಗೆ ಮದ್ವಾಚಾರ್ಯರು ಬಂದು ಇಲ್ಲಿನ ಚಕ್ರ ತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರನ್ನು ಪೂಜಿಸಿದ್ದರೆಂದು, ವಿಷ್ಣುಮಂಗಿಲದ  ತ್ರಿವಿಕ್ರಮ ಪಂಡಿತಾಚಾರ್ಯರೊಡನೆ ಹದಿನೈದು ದಿನಗಳ ಕಾಲ ದ್ವೈತ -ಅದ್ವೈತ ತತ್ವಗಳ ವಾದವನ್ನು ಮಾಡಿ ಅವರನ್ನು ವಾದದಲ್ಲಿ ಪರಾಭವಗೊಳಿಸಿದ್ದರು  ಮತ್ತು ಅವರನ್ನು ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಿದರು ಎಂದು ಮದ್ವ ವಿಜಯ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದು ಹೇಳುತ್ತಾರೆ.

ಶ್ರೀ ಮದ್ವಾಚಾರ್ಯರ ಕಾಲ 1238-1317 ರ ವರೆಗೆ.ಈ ಮಾಹಿತಿಯನ್ನು ಪರಿಗಣಿಸಿದರೆ ಈ ದೇವಾಲಯ ಮತ್ತು ಚಕ್ರತೀರ್ಥ ಎಂಬ ಕೆರೆ ಸುಮಾರು 800 ವರ್ಷಗಳಷ್ಟು ಹಳೆಯದಿರಬಹುದು ಎಂದು ಊಹಿಸಬಹುದು. ಈ ದೇವಸ್ಥಾನವನ್ನು ಯಾರು ಸ್ಥಾಪಿಸಿರಬಹುದು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಉಡುಪಿಯ ಅಷ್ಟ ಮಠದ ಯತಿಗಳಿಗೆ ಮತ್ತು ಮಾಧ್ವ ಸಂಪ್ರದಾಯಸ್ಥರಿಗೆ ಈ ದೇವಸ್ಥಾನವು ತುಂಬಾ ಪ್ರಾಮುಖ್ಯವಾದದ್ದು. ಈಗಲೂ ಸಹಾ ಉಡುಪಿಯ ಸ್ವಾಮೀಜಿಗಳು ಬಂದರೆ ಅವರು ಮೊದಲು ಚಕ್ರತೀರ್ಥದಲ್ಲಿ ಮಿಂದು ಶ್ರೀ ಮಹಾವಿಷ್ಣು ದೇವರ ಪೂಜೆ ಮಾಡಿ ಹೋಗುವುದು ಸಂಪ್ರದಾಯವಾಗಿದೆ.
------
-----
ಈ ದೇವಸ್ಥಾನದ ಗೋಪುರ ಮತ್ತು ಮುಖ್ಯ ದೇವಾಲಯದ ಸಂಪೂರ್ಣ ನವೀಕರಣವನ್ನು ದಿವಂಗತ ಕೂಡ್ಲು ಸದಾಶಿವ ಶಾನುಭಾಗರು ಮಾಡಿಸಿದ್ದರು. ನಿತ್ಯವೂ ಮೂರೂ ಹೊತ್ತು ಪೂಜೆ ಇಲ್ಲಿ ನಡೆಯುತ್ತಿದೆ.ಇಲ್ಲಿಗೆ ಬಂದ ಭಕ್ತರಿಗೆ ಇಲ್ಲಿನ ಪರಿಸರ ಪ್ರಶಾಂತ ವಾತಾವರಣ, ಇಲ್ಲಿನ ಪಾವಿತ್ರ್ಯತೆ ಎಲ್ಲವೂ ಮೆಚ್ಚಿಗೆಯಾಗುವಂತಹದು.
-----
-----
ಮಕರ ಸಂಕ್ರಮಣದ ಪುಣ್ಯ ದಿನದಂದು ಇಲ್ಲಿ ಒಂದು ದಿವಸದ ಉತ್ಸವ ಬಹಳ ವಿಜೃಂಭಣೆಯಿಂದ ಜರಗುತ್ತದೆ.ಊರಿನ ಎಲ್ಲಾ ಭಕ್ತ ಜನರು ಬಂದು ಶ್ರೀ ಮಹಾವಿಷ್ಣು ದೇವರ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ.
-----
-----
ಜಾತ್ರೆ ಕಳೆದ ಮರುದಿನ ಬೆಳಿಗ್ಗೆ ಪಕ್ಕದಲ್ಲಿರುವ ಧೂಮಾವತಿ ದೈವಕ್ಕೆ ಕೋಲ ಕೊಡುತ್ತಾರೆ. ಇದರ ಮಾರಣೆ ದಿನ ಕೂಡ ಭೂತ ಕೋಲ ನಡೆಯುತ್ತದೆ. ಬಹಳ ಕಾರಣಿಕದ ಭೂತ ಇದಾಗಿದ್ದು, ಇಲ್ಲಿ ಬಂದು ಬೇಡಿಕೊಂಡರೆ ಅವರ ಕೋರಿಕೆ ನೆರವೇರುತ್ತದೆ ಎಂತ ನಂಬಿಕೆಯಿದೆ.

Tuesday, 2 February 2010

Belam Caves

ಬೇಲಂ ಗುಹೆಗಳಿಗೆ ನಾವು ಎರಡು ತಿಂಗಳ ಹಿಂದೆ ಭೇಟಿ ಕೊಟ್ಟಿದ್ದೆವು. ಈ ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಗುಹೆಗಳಿರುವುದು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ. ನಾವು ಬೆಂಗಳೂರಿನಿಂದ ಧರ್ಮಾವರಂ ಮಾರ್ಗವಾಗಿ ತಾಡಪತ್ರಿಗೆ ಬಂದು ಅಲ್ಲಿ ನಮ್ಮ ಊರಿನವರಾದ ಕೆ. ಎಂ. ಭಟ್ ಅವರ ಮನೆಯಲ್ಲಿ ಉಳಿದುಕೊಂಡು ಮರು ದಿನ ಬೆಳಿಗ್ಗೆ ಅವರ ಶ್ರೀಮತಿ, ಜಯಂತಿ ಭಟ್ ಅವರ ಜೊತೆಯಲ್ಲಿ  ಕಾರಿನಲ್ಲಿ ಪ್ರಯಾಣ ಹೊರಟೆವು. ಸುಮಾರು 25 km. ದೂರ ಸಾಗಿದಾಗ ನಮಗೆ ಈ ಬೇಲಂ ಗುಹೆಗಳು ಕಾಣ ಸಿಗುತ್ತವೆ. ಇಲ್ಲಿಗೆ ಬರಲು ಉತ್ತಮ ರಸ್ತೆ ಇದ್ದು,ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ 270 km. ಅನಂತಪುರಂನಿಂದ 85 km. ಮತ್ತು ಕರ್ನೂಲ್ ನಿಂದ 110 km. ದೂರದಲ್ಲಿದೆ.



ಇಲ್ಲಿನ ಆಫೀಸಿನಲ್ಲಿ ಟಿಕೆಟ್ ಪಡೆದುಕೊಂಡು ಗುಹೆಗಳ ಒಳಗೆ ಇಳಿದೆವು. ಪ್ರವೇಶ ಶುಲ್ಕ ತಲಾ 30 ರು. ಉಚಿತ ಮಾರ್ಗದರ್ಶಿಗಳೂ ಇಲ್ಲಿ ಲಬ್ಯ, ಇವರು ನಮ್ಮನ್ನು ಗುಹೆಗಳ ಎಲ್ಲಾ ಪ್ರಮುಖ ಜಾಗೆಗಳಿಗೆ ಕರೆದೊಯ್ಯುತ್ತಾರೆ ಮತ್ತು ಚೆನ್ನಾಗಿ ವಿವರಣೆ ಕೊಡುತ್ತಾರೆ. ಈ ಗುಹೆಗಳು ಸುಮಾರು 2 km. ವರೆಗೆ ಸಾಗಿದೆ. ಕೆಲವೆಡೆ ವಿಶಾಲವಾದ ಸ್ಥಳಗಳಿದ್ದರೆ ಇನ್ನು ಕೆಲವೆಡೆ ಇಕ್ಕಟ್ಟಾದ ಜಾಗೆಗಳಿವೆ. ಅದೊಂದು ಅದ್ಬುಥ ಲೋಕ! ಹಿಂದಿನ ಯಾವುದೋ ಒಂದು ಯುಗದಲ್ಲಿ ನದಿಯೊಂದು ಗುಪ್ತಗಾಮಿನಿಯಾಗಿ ಹರಿದಿದ್ದ ಪರಿಣಾಮವಾಗಿ ಈ ಗುಹೆಗಳು ನಿರ್ಮಾಣವಾದವಂತೆ. ಗುಹೆಯ ಮುಂಭಾಗದಲ್ಲೇ ಒಂದು ವಿಶಾಲವಾದ ವೃತ್ತಾಕಾರದ ಹಜಾರವೊಂದಿದ್ದು ಅಲ್ಲೇ ಇಲ್ಲಿನ ಇತಿಹಾಸ, ವರ್ಣನೆ, ಕಾಲಮಾನ ಎಲ್ಲಾ ಚೆನ್ನಾಗಿ ವಿವರಿಸುವ ಫಲಕಗಳನ್ನು ಇರಿಸಿದ್ದಾರೆ. ಈ ಗುಹೆಗಳ ಅಸ್ತಿತ್ವವನ್ನು 1884 ರಲ್ಲೇ ಕಂಡುಕೊಂಡಿದ್ದರು. ಆದರೆ ಇತ್ತೀಚಿಗೆ 1983 ರಲ್ಲಿ ಜರ್ಮನಿಯ ಹರ್ಬರ್ಟ್ ಡೇನಿಯಲ್ ಗೆಬುಎರ್ ರಿಂದ ಅನ್ವೇಷಣೆಯಾಗಿ, ಮುಂದೆ 2002 ನೆ ಇಸವಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಯಿತು. ಇಲ್ಲಿ ಬೌದ್ಧ ಸನ್ಯಾಸಿಗಳು ಇದ್ದರು ಎಂಬುದಕ್ಕೆ ಕುರುಹುಗಳು ಸಿಕ್ಕಿವೆಯಂತೆ.

ಆಲ್ಲಿಂದ ಮುಂದೆ ಗುಹೆ ತೆರೆದುಕೊಳ್ಳುತ್ತದೆ. ಬಂಗಾರವರ್ಣದ ವಿದ್ಯುತ್ ದೀಪಗಳನ್ನು ಕಣ್ಣಿಗೆ ರಾಚದ ರೀತಿಯಲ್ಲಿ ಅಳವಡಿಸಿದ್ದಾರೆ. ಹಾಗಾಗಿ ಆ ಬೆಳಕಿನಲ್ಲಿ ಯಾವುದೋ ಒಂದು ರಮ್ಯ ನಿಘೂಡ ಲೋಕಕ್ಕೆ ಕಾಲಿರಿಸಿದಂತಾಗುತ್ತದೆ. ಮೇಲ್ಭಾಗದಲ್ಲಿ, ಅಕ್ಕಪಕ್ಕ ಎಲ್ಲಾ ವಿಚಿತ್ರವಾದ  ಬಣ್ಣ ಬಣ್ಣದ ಶಿಲಾಕೃತಿಗಳು, ಎಲ್ಲವೂ ಪ್ರಕೃತಿ ನಿರ್ಮಿತ!ಭೂಮಿಯ ಮೇಲ್ಭಾಗದಿಂದ ನೀರು ಮಣ್ಣಿನೊಳಗೆ ಇಂಗಿ ಕೆಳಕ್ಕೆ ಹೋಗುತ್ತದೆ. ಕೆಳಗಡೆ ಗುಹೆಗಳು ಇದ್ದರೆ ಆಗ ನೀರು ತೊಟ್ಟಿಕ್ಕುತ್ತದೆ ಮತ್ತು ನೀರಿನಲ್ಲಿ ಕರಗಿರುವ ಖನಿಜಗಳು ಅಲ್ಲೇ ಪದರಗೊಳ್ಳುತ್ತವೆ ಮತ್ತು ಕ್ರಮೇಣ ಕೆಳಮುಖವಾಗಿ ಬೆಳೆಯಲಾರಂಭಿಸುತ್ತದೆ. ಅದೇ ತರಹ ನೀರು ಬಿಂದು ಬಿಂದಾಗಿ ಕೆಳಗೆ ಬಿದ್ದಾಗ ಅಲ್ಲಿಯೂ ಶಿವಲಿಂಗ ಆಕೃತಿಗಳೂ, ಇನ್ನಿತರ ವಿಚಿತ್ರ ಶಿಲ್ಪಾಕಾರಗಳು ಮೊಳೆಯುತ್ತವೆ.ಹೀಗೆ ಕಲ್ಲಿನ ಆಕೃತಿಗಳು ಒಂದಿಂಚು ಬೆಳೆಯಲು 100 ವರ್ಷಗಳು ಬೇಕಂತೆ. ಇದಕ್ಕೆ Stalachite ಮತ್ತು Stalagmite formation ಎನ್ನುತ್ತಾರೆ. ಇವುಗಳೇ ಈ ಗುಹೆಗಳ ಮುಖ್ಯ ಆಕರ್ಷಣೆ. ಇವುಗಳ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲಿತವಾಗಿ ಬಣ್ಣದ ದೀಪಗಳು ಮಿನುಗಿದಂತಾಗುತ್ತದೆ. ಸ್ವಲ್ಪ ಮುಂದೆ ಹೋದಾಗ ಒಂದು ಪ್ರತ್ಯೇಕ ಗುಹೆ ಇದೆ ಅದು ಧ್ಯಾನ ಮಂದಿರ! ಮತ್ತೂ ಮುಂದೆ ಒಂದು ಏಕಶಿಲಾ ಮಂಚ! ಅಕ್ಕ ಪಕ್ಕದಲೆಲ್ಲಾ ಇನ್ನೂ ಯಾರೂ ಪ್ರವೇಶಿಸದೇ ಇರುವ ಕೆಲ ಗುಹೆಗಳು. ಇವುಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಅಲ್ಲಲ್ಲಿ ಬಿದ್ದುಕೊಂಡು, ಒಳಗೆ ಹೋಗಲು ಸಾಧ್ಯವಿಲ್ಲ. ಆ ಬಂಡೆಗಳನ್ನು ಹೊರ ತೆಗೆದರೆ ಗುಹೆಗಳ ವಿಸ್ತಾರ ಇನ್ನೂ ಹೆಚ್ಚಬಹುದು. ಮುಂದೆ ಸಪ್ತಸ್ವರ ಗುಹೆ ಮತ್ತು ಆಲದ ಮರ ಸಿಗುತ್ತದೆ. ಪ್ರಕೃತಿ ನಿರ್ಮಿತ ಬಂಡೆಯ ಸ್ಥಂಭಗಳನ್ನು ಬಡಿದಾಗ ಸಪ್ತಸ್ವರ ಹೊರಡುತ್ತದೆ. ಮುಂದೆ ನಡೆದಾಗ ಆಲದ ಮರವನ್ನು ಕಂಡು ಬೆರಗಾಗುತ್ತೇವೆ. ಇದು ಸಾವಿರ ಹೆಡೆಯ ನಾಗನ ಹಾಗೆಯೂ ಕಾಣುತ್ತದೆ. ಈಗ ನಾವು ಭೂಗರ್ಭದಲ್ಲಿ ಸುಮಾರು 100 ಅಡಿಗಳಷ್ಟು ಕೆಳಗಡೆ ಬಂದಿರುತ್ತೇವೆ. ಈಗ ಸೆಕೆಯ ಅನುಭವವಾಗುತ್ತದೆ. ಉಸಿರಾಡಲೂ ಕೆಲವರಿಗೆ ಕಷ್ಟವೆನಿಸಬಹುದು. ಆದರೆ ಗಾಬರಿಯಾಗುವುದು ಬೇಡ, ಅಲ್ಲಿ ಒಳಗಡೆಗೆ ಮೇಲಿಂದ ತಂಪಾದ ಗಾಳಿಯನ್ನು ಸರಬರಾಜು ಮಾಡುವ ವ್ಯವಸ್ಥೆ ಇದೆ. ಹಾಗಾಗಿ ಯಾವ ಅಪಾಯವೂ ಇಲ್ಲ. ಅಲ್ಲಿ ಸ್ವಲ್ಪ ಹೊತ್ತು ನಿಂತರೆ ತಂಗಾಳಿಯನ್ನು ಸೇವಿಸಿ ಸುದಾರಿಸಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕೈ ಕೊಟ್ಟರೆ ಜನರೇಟರಿನ ಸೌಲಭ್ಯವು ಕೂಡಲೇ ದೊರೆಯುತ್ತದಂತೆ. 

ಆಲ್ಲಿಂದ ಇನ್ನೂ ಕೆಳಗೆ ಹೋಗಲು ಒಂದು ಪುಟ್ಟ ಸೇತುವೆ ಮತ್ತು ಇಳಿಯಲು ಮೆಟ್ಟಿಲುಗಳು ಸಿಗುತ್ತವೆ. ಎಲ್ಲಾ ಗಟ್ಟಿ ಮುಟ್ಟಾದ ಕಬ್ಬಿಣ ದಿಂದ ಮಾಡಿರುವುದು. ಅದರಲ್ಲಿ ನಾವು ಕೆಳಗೆ ಇಳಿದು ಹೋದರೆ ಇನ್ನೊಂದು ಅಚ್ಚರಿ ಕಾಣಸಿಗುತ್ತದೆ. ಇಲ್ಲಿ ಕಿರಿದಾದ ಒಂದು ಗುಹೆಯಿಂದ ನೀರು ಹರಿದು ಬಂದು ಸುಮಾರು 5 ಅಡಿಗಳಷ್ಟು ಕೆಳಗೆ ಬೀಳುತ್ತದೆ, ಒಂದು ಪುಟ್ಟ ಜಲಪಾತ! ಆದರೆ ಇನ್ನೂ ಒಂದು ವಿಸ್ಮಯವೆಂದರೆ ನೀರು ಕೆಳಗೆ ಬೀಳುವ ಜಾಗದಲ್ಲೇ ಒಂದು ಶಿವಲಿಂಗವನ್ನು ಪ್ರಕೃತಿಯೇ ನಿರ್ಮಿಸಿದೆ. ಈ ಶಿವಲಿಂಗವನ್ನು ಸುತ್ತುವರಿದು ನೀರು ಕೆಳಗೆ ಬೀಳುತ್ತದೆ ಮತ್ತು ಪಾತಾಳ ಗಂಗೆ ಅಂತ ಕರೆಸಿಕೊಳ್ಳುತ್ತದೆ. ಆ ನೀರು ನಿಜಕ್ಕೂ ಗಂಗೆಯೇ ಸರಿ! ಅಷ್ಟು ಸಿಹಿಯಾಗಿದೆ, ತಂಪಾಗಿದೆ. ಶಿವನಿಗೆ ನಮಿಸಿ ಬೊಗಸೆ ತುಂಬಾ ತೀರ್ಥ ಕುಡಿದು ಅಲ್ಲಿ ಸ್ವಲ್ಪ ಹೊತ್ತು ನಿಂತಾಗ ನಮ್ಮ ಪಯಣ ಸಾರ್ಥಕ ವೆನಿಸುತ್ತದೆ. ಈಗ ನಾವು 185 ಅಡಿಗಳಷ್ಟು ಕೆಳಗೆ ಇಳಿದಿರುತ್ತೇವೆ. ಇಲ್ಲಿಂದ ಹರಿಯುವ ನೀರು ಇಕ್ಕಟ್ಟಾದ ಗುಹೆಯಲ್ಲಿ ಹರಿದು ಮುಂದೆ ಸುಮಾರು ದೂರದಲ್ಲಿರುವ ಬೇಲಂ ಸರೋವರವನ್ನು ಸೇರುತ್ತದಂತೆ. ಇಷ್ಟೆಲ್ಲವನ್ನೂ ಸುಮಾರು 2-3 ತಾಸುಗಳಲ್ಲಿ ನೋಡಬಹುದು. ಹೆಚ್ಚೇನೂ ಕಷ್ಟವಿಲ್ಲದೆ ಮೇಲಕ್ಕೆ ಏರಿ ಬರಬಹುದು. ದಣಿದು ಬಂದ ಯಾತ್ರಿಕರಿಗಾಗಿ ಒಂದು ಉಪಹಾರ ಗೃಹ ಮತ್ತು ಒಂದು ವಿಶ್ರಾಂತಿ ಗೃಹವೂ ಇದೆ. ಇಲ್ಲೇ ಪಕ್ಕದಲ್ಲಿ ಬುದ್ಧನ ಒಂದು ದೊಡ್ಡ ಪ್ರತಿಮೆ ರಚಿಸಿದ್ದಾರೆ. ಅದರ ಅಕ್ಕ ಪಕ್ಕ ಮತ್ತು ಹಿಂದುಗಡೆಯಲ್ಲಿ ದೊಡ್ಡ ಬೆಟ್ಟಗಳು ಇದ್ದು ಈ ಪ್ರತಿಮೆ ಎದ್ದು ಕಾಣುತ್ತಿದೆ. ನಮಗೆ ಹತ್ತಿರದಲ್ಲೇ ಇರುವ ಈ ಬೇಲಂ ಗುಹೆಗಳಿಗೆ ಬಂದು ಆನಂದಿಸಲೇ ಬೇಕು. ಇಲ್ಲಿನ ಸೌಕರ್ಯ ಮತ್ತು ಶುಚಿತ್ವವನ್ನು ನಿಜಕ್ಕೂ ಮೆಚ್ಚಲೇ ಬೇಕು.

ವಾಪಸು ಹೋಗುವಾಗ ತಾಡಪತ್ರಿಯಲ್ಲಿ ಪೆನ್ನಾ ನದಿ ದಂಡೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಮತ್ತು ವೆಂಕಟೇಶ್ವರ ದೇವಾಲಯ ಗಳಿಗೆ ಬೇಟಿ ಕೊಡಬಹುದು. ವಿಜಯನಗರದ ಅರಸರ ಕಾಲದ ಈ ದೇವಾಲಯಗಳ ಶಿಲ್ಪಕಲೆಗಳನ್ನು ನೋಡಿ ಆನಂದಿಸಬಹುದು. ಹಾಗೆಯೇ ಪುಟ್ಟಪರ್ತಿ, ಲೇಪಾಕ್ಷಿಗಳನ್ನು ಕೂಡಾ ಸಂದರ್ಶಿಸಬಹುದು.