Friday, 29 May 2020

Chidambaram


ಚಿದಂಬರಂ

ಪಾಂಡಿಚೇರಿ ಬಿಡುವಾಗಲೇ ಬೆಳಗ್ಗೆ 10 ಘಂಟೆ ಆಯಿತು. ಇಲ್ಲಿಂದ ಸುಮಾರು 65 ಕಿ.ಮಿ. ದೂರ ಚಿದಂಬರಂ ಗೆ. ಕಡಲೂರು ದಾರಿಯಾಗಿ ಸಾಗಿದೆವು. ಹಚ್ಚ ಹಸಿರಾದ ಹೊಲಗಳು ಇಕ್ಕೆಲಗಳಲ್ಲಿ ಕಣ್ಣಿಗೆ ಅಪ್ಯಾಯಮಾನವಾಗಿತ್ತು.



















 ಅಂತೂ 11.45 ಕ್ಕೆ ಅಲ್ಲಿಗೆ ತಲುಪಿದೆವು. ಚಿದಂಬರಂ ನ ನಟರಾಜ ದೇವಾಲಯವು ಮಧ್ಯಾಹ್ನ 12 ಘಂಟೆಗೆ ಮುಚ್ಚುತ್ತದೆ ಎಂದು ತಿಳಿದು ಲಗುಬಗೆಯಿಂದ ಒಳಗೆ ಹೋದೆವು. ಅದಾಗಲೇ ಗರ್ಭ ಗುಡಿಯ ಬಾಗಿಲು ಹಾಕಿದ್ದರು. ಅಲ್ಲಿಂದಲೇ ಕೈ ಮುಗಿದೆವು. ಎದುರುಗಡೆ ದೊಡ್ಡದಾದ ಸ್ವರ್ಣ ಲೇಪನಗೊಂಡ ನಟರಾಜನ ಸುಂದರ ಮೂರ್ತಿ. ಇದಕ್ಕೆ ಕನಕ ಸಭಾ ಎನ್ನುತ್ತಾರೆ. ಫೊಟೋ ತೆಗೆಯಲು ಅಲ್ಲಿ ನಿರ್ಭಂಧವಿದೆ.




ಬೇರೆ ಕಡೆ ಯಾರೂ ಇಲ್ಲದ ಜಾಗದಲ್ಲಿ ಕೆಲ ಫೊಟೋ ತೆಗೆದೆ. ಆಗಲೇ ಅಲ್ಲಿನ ಪರಿಚಾರಕ ಮುದುಕನೊಬ್ಬ ನಮ್ಮನ್ನು ಗದರಿಸುತ್ತಾ ಹೊತ್ತಾಯಿತು ಹೊರಗೆ ಹೋಗಿ ಎಂದು ಅಪ್ಪಣೆ ಮಾಡಿದ. ಇನ್ನೇನು ನಾವು ಹೊರ ಬಂದೆವು.







ಇದು ಚೋಳರ ಕಾಲದಲ್ಲಿ ಬಹಳ ಅಭಿವೃದ್ದಿ ಹೊಂದಿದ ದೇವಾಲಯ. 10ನೇ ಶತಮಾನದಲ್ಲಿ ರಾಜ ರಾಜ ಚೋಳನು ಇಲ್ಲಿನ ಗೋಪುರ, ಕಲ್ಯಾಣಿ, ಸಾವಿರ ಕಂಭಗಳ ವಿಶಾಲವಾದ ಪೌಳಿ ಗಳನ್ನು ಕಟ್ಟಿಸಿದ. ಬಹಳಷ್ಟು ಭೂಮಿಯನ್ನು ದತ್ತಿ ಬಿಟ್ಟಿದ್ದ. ಅವನ ನಂತರದ ಅರಸರೂ ಈ ದೇವಾಲಯಕ್ಕೆ ತುಂಬಾ ಸಂಪತ್ತನ್ನು ಕೊಟ್ಟಿರುತ್ತಾರೆ. ವಿಶಾಲವಾದ ಪ್ರಾಂಗಣವಿದೆ. ದೊಡ್ಡ ಗೋಪುರವಿದೆ.


 ಬೇಗನೇ ಬಂದಿದ್ದರೆ ದೇವರನ್ನು ನೋಡಬಹುದಿತ್ತು. ನಮ್ಮ ಪಾಲಿಗೆ ಅದೇ ಚಿದಂಬರ ರಹಸ್ಯವಾಗುಳಿಯಿತು. ಇದು 10ನೇ ಶತಮಾನದಲ್ಲ, ಇನ್ನೂ ಕೆಲ ಶತಮಾನಗಳ ಹಿಂದಿನ ದೇವಾಲಯ. ಇಲ್ಲಿ ಪೂಜಾವಿಧಿ ನಡೆಸುವವರು ದೀಕ್ಷಿತರು ಎಂಬ ಬ್ರಾಹ್ಮಣರು. ಇವತ್ತಿಗೂ ಅವರೇ ವಂಶ ಪಾರಂಪರ್ಯವಾಗಿ ಮುಂದುವರಿಯುತಿದ್ದಾರೆ. ಈ ದೇವಾಲಯದ ಆಡಳಿತವೂ ಅವರದ್ದೆ. ಅಲ್ಲಿ ಕಾಣಿಕೆ ಹುಂಡಿ ಇಲ್ಲ, ತಟ್ಟೆಗೇ ಹಾಕಿ ಎನ್ನುತ್ತಾರೆ. ಸ್ವಲ್ಪ ಒರಟು ಜನ.
ದೇವಾಲಯದ ಹೊರಭಾಗದಲ್ಲಿ ರಸ್ತೆ ಇದೆ. ಇದು ರಥಬೀದಿ ಇರಬೇಕು. ಇಲ್ಲಿ 2 ಅಲಂಕೃತ ತೇರು ಇದ್ದವು. ಸುಂದರವಾಗಿತ್ತು.


 ಊಟದ ಹೊತ್ತಾಯಿತು. ನಾವು ವೆಜಿಟೇರಿಯನ್ ಹೊಟೆಲ್ ಎಲ್ಲಿದೆ ಎಂತ ವಿಚಾರಿಸಿದೆವು. ಯಾರೋ ನಮಗೆ ದಾರಿ ತೋರಿದರು. ಒಂದು ದೊಡ್ಡ ಮನೆಯಂತಿರುವ ಹೋಟೆಲ್. ಅಲ್ಲಿ ಊಟದ ಚೀಟಿ ಪಡೆದು ಊಟಕ್ಕೆ ಕುಳಿತೆವು. ಬಾಳೆ ಎಲೆಯ ಊಟ. ಅಷ್ಟರಲ್ಲಿ ಬಡಿಸುವ ಹುಡುಗರಲ್ಲಿ ಒಬ್ಬ ಮುಂದೆ ಬಂದು ಮುರಳಿಯಣ್ಣಾ ಎಂದು ಕೂಗಿದನು. ನನ್ನ ಭಾವನಿಗೆ ಆಚ್ಚರಿ, ಇದ್ಯಾರಪ್ಪಾ ನನ್ನನ್ನು ಕರೆಯುತ್ತಿರುವುದು ಎಂತ. ನೋಡಿದರೆ ಅವರ ಒಕ್ಕಲಾಗಿದ್ದವನ ಮಗ ! ಅವನು ಇಲ್ಲಿ ಕೆಲಸ ಮಾಡುತಿದ್ದ. ನಮ್ಮನ್ನೆಲ್ಲಾ ವಿಚಾರಿಸಿದ. ನಮಗೆಲ್ಲಾ ಆದರದಿಂದ ಬಡಿಸಲು ಉಳಿದವರಿಗೆ ಹೇಳಿದ. ತಾನು ಮಾತ್ರ ನಮಗೆ ಬಡಿಸಲು ಬರಲೇ ಇಲ್ಲ. ನಾವು ಅವನ ಧಣಿಗಳಲ್ಲವೇ. ಹಾಗಾಗಿ ಸಂಕೋಚ. ಊಟ ಆದಮೇಲೆ ಒಂದು ದೊಡ್ಡ ಜಗ್ ನಲ್ಲಿ ಒಳ್ಳೆಯ ಮಜ್ಜಿಗೆ ಕೊಡಿಸಿದ. ನಮ್ಮ ಅತ್ತೆಯವರಿಗೆ ಎಲೆ ಅಡಿಕೆ ತಂದು ಕೊಟ್ಟ. ಬಹಳ ಗೌರವದಿಂದ ನಮ್ಮ ಕಾರ್ ನ ವರೆಗೆ ಬಂದು ನಮ್ಮನ್ನು ಬೀಳ್ಕೊಟ್ಟ. ಪಕ್ಕದ ಅಂಗಡಿಯಿಂದ ತುಂಬಾ ಎಳೆ ಸೌತೆಕಾಯಿ ಕೊಂಡು ಕಾರಲ್ಲಿ ತುಂಬಿಕೊಂಡೆವು. ಇನ್ನು ನಮ್ಮ ಪ್ರಯಾಣ ತಂಜಾವೂರು ಗೆ.






No comments:

Post a Comment