Sunday, 17 July 2011

Rameshwaram



 ಮದುರೈಯಲ್ಲಿ ರಾತ್ರಿ ಕಳೆದು ಮುಂಜಾನೆ 5 ಘಂಟೆಗೆಲ್ಲಾ ಎದ್ದು ರೈಲ್ವೆ ಸ್ಟೇಷನ್ ಗೆ ಹೊರಟೆವು. ಒಂದು ಆಟೋ ಸಿಕ್ಕಿದ್ದರಿಂದ ಬೇಗನೇ ತಲುಪಿ ಟಿಕೆಟ್ ಕೊಂಡು ಮದುರೈ- ರಾಮೇಶ್ವರಮ್ ಪ್ಯಾಸೆಂಜರ್ ಗಾಡಿ ಹತ್ತಿದೆವು. ಬೆಳಗ್ಗೆ 6.15 ಕ್ಕೆ ರೈಲು ಹೊರಟಿತು. ಸುಮಾರು 173 ಕಿ.ಮೀ. ಪ್ರಯಾಣ. ಹಾಗೇ ತೂಕಡಿಕೆ- ಅರ್ಧ ನಿದ್ರೆಯಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮುಂದೆ ಮಾನಾ ಮದುರೈ ಯಲ್ಲಿ ರೈಲು ನಿಂತಾಗ ಎಚ್ಚರವಾಯಿತು. ಬೆಳಗ್ಗಿನ ಉಪಾಹಾರದ ಗಡಿಬಿಡಿ ಗೌಜು. ಅದನ್ನು ಮಾರುವವರ ಪೈಪೋಟಿಯ ಗಲಾಟೆ. ಆದರೆ ಎಲ್ಲರೂ ಮಾರುತಿದ್ದುದು ಉದ್ದಿನ ವಡೆ, ಮಸಾಲವಡೆ. ತಮಿಳುನಾಡಿನಲ್ಲಿ ಒಳ್ಳೆಯ ಇಡ್ಲಿ ಸಿಗಬೇಕಿತ್ತು. ಆದರೆ ಅದರ ಸುಳಿವೇ ಇಲ್ಲ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಲು ಮನಸ್ಸಾಗಲಿಲ್ಲ. ಕಾಫಿ ಬಿಸ್ಕತ್ತಿನಲ್ಲಿ ಸುಧಾರಿಸಿದೆವು. ಪ್ಯಾಸೆಂಜರ್ ಗಾಡಿಯಾದ್ದರಿಂದ ಎಲ್ಲಾ ಸ್ಟೇಷನ್ ಗಳಲ್ಲೂ ರೈಲು ನಿಂತು ಸಾಗುತಿತ್ತು. ಆದರೂ ಇಡ್ಲಿ ಮಾತ್ರ ಸಿಗಲೇ ಇಲ್ಲ. ಕಿಟಕಿಯಿಂದ ಹೊರಗಿನ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಮನ ತುಂಬಿದೆವು.


ಹಲವಾರು ಕೇಳರಿಯದ ಊರುಗಳನ್ನು ಹಾದು ಪಾಂಬನ್ ಸ್ಟೇಷನ್ ಬಂದಿತು. ಇಲ್ಲಿಂದ ಮುಂದೆ ಸಮುದ್ರ.


ಅದರ ಮೇಲೆ ರೈಲಿಗಾಗಿ 90 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಒಂದು ಸೇತುವೆ ಇದ್ದರೆ, ಮೋಟಾರು ವಾಹನಕ್ಕಾಗಿ ಪ್ರತ್ಯೇಕವಾದ ಒಂದು ಸೇತುವೆಯಿದೆ. 1988 ರಲ್ಲಿ ನಿರ್ಮಿಸಲಾದ  ಇದನ್ನು ಪಾಂಬನ್ ಸೇತುವೆ ಎಂದು ಕರೆಯುತ್ತಾರೆ.   ನಾವು ಸಮುದ್ರದ ಮೇಲೆ ಕಟ್ಟಿರುವ ಎರಡನೇ ಅತೀ ಉದ್ದದ ಸೇತುವೆ ಇದು.


ಈ ಸೇತುವೆಯು ಸುಮಾರು 2.3 ಕಿ.ಮೀ.ಉದ್ದವಿದೆ. ಪಾಕ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ ಇದನ್ನು ನೋಡುವುದು, ಹಾಗೂ ಅದರ ಮೇಲೆ ಪ್ರಯಾಣಿಸುವುದೇ ಒಂದು ರೋಚಕ ಅನುಭವ.

 ಕೆಳಗಡೆ ಹಸಿರು ನೀಲಿ ವರ್ಣದ ಸಮುದ್ರ, ಅದರಲ್ಲಿ ಸಂಚರಿಸುವ ಬೋಟುಗಳು. ಬಿರುಸಾಗಿ ಬೀಸುವ ಗಾಳಿ, ಎಲ್ಲಾ ತುಂಬಾ ಆಕರ್ಷಣೀಯ.


ದೊಡ್ಡ ಬೋಟು ಮತ್ತು ಹಡಗುಗಳು ರೈಲು ಸೇತುವೆಯ ಅಡಿಯಿಂದ ಸಾಗಬೇಕಾದರೆ ಮಧ್ಯದಲ್ಲಿ ಅದನ್ನು ಇಬ್ಭಾಗವಾಗಿ ಮೇಲಕ್ಕೆ ಎತ್ತುವ ವ್ಯವಸ್ಥೆ ಇದೆ. ನಮ್ಮ ರೈಲು ಇದರ ಮೇಲೆ ನಿಧಾನವಾಗಿ ಚಲಿಸಿ ಮುಂದೆ ರಾಮೇಶ್ವರಮ್ ಸ್ಟೇಷನ್ ತಲುಪಿತು.
ರಾಮೇಶ್ವರಮ್ ಒಂದು ದ್ವೀಪ, ಶಂಕುವಿನ ಆಕೃತಿಯಲ್ಲಿದೆ. ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣಕ್ಕೆ ಹಿಂದೂ ಮಹಾಸಾಗರ. ಈ  ಜಾಗವನ್ನು ಮನ್ನಾರ್ ಕೊಲ್ಲಿ ಎನ್ನುತ್ತಾರೆ.  ಕೊಂಚ ಹೆಚ್ಚೇ ಎನ್ನಿಸಬಹುದಾದ ಉಷ್ಣ ವಾತಾವರಣ, ಗಾಳಿಯಲ್ಲಿನ ತೇವಾಂಶದಿಂದ ಬೆವರು ಸುರಿಯುತ್ತದೆ.
ರೈಲು ಇಳಿದಾಕ್ಷಣ ಅಲ್ಲೇ ಬಂದಿದ್ದ ಬಸ್ ಏರಿದೆವು. ಬರೇ 2 ರೂ. ಟಿಕೆಟ್ ಗೆ. ನಾವು ರಾಮೇಶ್ವರಮ್ ದೇಗುಲದ ಎದುರುಗಡೆಯೇ ಇಳಿದೆವು.


ಮೊದಲಿಗೆ ಹೊಟ್ಟೆ ತುಂಬಿಸ ಬೇಕಾಗಿತ್ತು. ಅಲ್ಲೇ ಇರುವ ಹೋಟೆಲ್ ಗೆ ಹೋಗಿ ಹಸಿವು ಇಂಗಿಸಿಕೊಂಡೆವು. ನಾವು ಮೊದಲೇ ಬುಕ್ ಮಾಡಿರುವ ಉಡುಪಿ ಛತ್ರ, ಪಕ್ಕದಲ್ಲೇ ಇದ್ದುದರಿಂದ ಅಲ್ಲಿಗೆ ಹೋಗಿ ರೂಮ್ ಪಡ ಕೊಂಡೆವು. ಉಡುಪಿಯ ಪೇಜಾವರ ಮಠದವರ ಈ ಛತ್ರ ವು ಬಹಳ ಚೆನ್ನಾಗಿದೆ. ಇವರದ್ದೇ ಇನ್ನೊಂದು ಛತ್ರವು ಪಕ್ಕದಲ್ಲೇ ಇದೆ. ಅಲ್ಲಿದ್ದ ಹೆಚ್ಚಿನವರು ನಮ್ಮೂರಿನವರೇ ಆದ್ದರಿಂದ, ನಿರಾಳವಾಗಿ ಇರುವಂತಾಯಿತು. ಸ್ನಾನ ಎಲ್ಲಾ ಮುಗಿಸಿ ದೇವರ ಧರ್ಶನಕ್ಕೆ ಹೊರಟೆವು. ಎತ್ತರವಾದ ಶ್ವೇತ ಬಣ್ಣ ಬಳಿದ ಗೋಪುರ.

 

ಇಲ್ಲಿ ಬಣ್ಣಗಳ ತಾಕಲಾಟ ಇಲ್ಲ. ಒಳಗಡೆ ಹೋದರೆ ಎತ್ತರವಾದ ಸ್ಥಂಭಗಳುಳ್ಳ ಪ್ರಾಂಗಣ.ಮದುರೈ ನಲ್ಲಿದ್ದಂತೆಯೇ, ಆದರೆ ಅಲ್ಲಿರುವಷ್ಟು ಕೆತ್ತನೆಗಳಿಲ್ಲ.


ಆದರೂ ಭವ್ಯವಾಗಿದೆ. ಅದರಲ್ಲಿ ಒಂದು ಸುತ್ತು ಬಂದೆವು. ಒಂದು ಪಕ್ಕದಲ್ಲಿ ಸಾಲಾಗಿ ಶಿವಲಿಂಗಗಳನ್ನು ಇರಿಸಿದ್ದಾರೆ. ರಾಮೇಶ್ವರಮ್ ವೈಷ್ಣವ ಹಾಗೂ ಶೈವರಿಗೆ ಬಹಳ ಪ್ರಾಮುಖ್ಯ ಕ್ಷೇತ್ರವಾಗಿದೆ. ಇದನ್ನು ' ಚಾರ್ ಧಾಮ್ ' ಎಂದು ಪರಿಗಣಿಸಲಾಗಿದೆ. ರಾಮೇಶ್ವರಮ್ ಗೆ ಬಂದವರು ಕಾಶಿಗೆ ಹೋಗಬೇಕೆಂದೂ, ಕಾಶಿಗೆ ಹೋದವರು ರಾಮೇಶ್ವರಮ್ ಗೆ ಬರಬೇಕೆಂಬ ಪ್ರತೀತಿ. ಇಲ್ಲಿಗೇ ಬಂದವರು ಸಮುದ್ರದ ಮರಳನ್ನು ಒಯ್ದು ಗಂಗೆಯಲ್ಲಿ ಸಮರ್ಪಿಸಿದರೆ, ಅಲ್ಲಿಂದ ಗಂಗಾಜಲವನ್ನು ತಂದು ಇಲ್ಲಿ ದೇವರಿಗೆ ಅಭಿಷೇಕ ಮಾಡಿಸುತ್ತಾರೆ. ಕಾಶೀ ಯಾತ್ರೆಯ ಫಲ ಪೂರ್ತಿಯಾಗಬೇಕಾದರೆ ಈ ಆಚರಣೆ ಮಾಡಬೇಕಂತೆ. ಹಾಗಾಗಿ ಇಲ್ಲಿ ದಕ್ಷಿಣ ಮತ್ತು ಉತ್ತರ ಭಾರತೀಯರು ಎಲ್ಲರೂ ಬರುತ್ತಾರೆ. ಎಲ್ಲಾ ಪ್ರದೇಶದ ಜನಗಳಿಗೂ ಅನುಕೂಲವಾಗುವಂತೆ ಅವರವರ ಮಠಗಳ ಛತ್ರಗಳೂ, ಹೋಟೆಲ್ ಗಳೂ ಇಲ್ಲಿವೆ. ಅಂತೆಯೇ ಆಯಾ ಪ್ರದೇಶದ ರೀತಿ ರಿವಾಜಿಗನುಸಾರವಾಗಿ ಪೂಜೆ, ಕ್ರಿಯೆಗಳನ್ನು ನಡೆಸಿಕೊಡುವ ಅರ್ಚಕ ಸಮೂಹವೂ ಇದೆ.
ಇಲ್ಲಿ ಕೋಟಿ ತೀರ್ಥಗಳೆಂಬ 22 ಬಾವಿಗಳಿವೆ. ಸಮುದ್ರ ಸ್ನಾನ ಮಾಡಿಕೊಂಡು, ಸೂರ್ಯೋದಯ ನೋಡಿಕೊಂಡು ಸೀದಾ ಇಲ್ಲಿಗೇ ಬಂದು ಎಲ್ಲಾ ತೀರ್ಥಗಳ ನೀರಿನಲ್ಲಿ ಮಿಂದು ರಾಮೇಶ್ವರನ ಧರ್ಶನ ಮಾಡುವುದು ಪುಣ್ಯಕರ ಎಂದು ನಂಬುತ್ತಾರೆ. ಈ ಸ್ನಾನದ ನಂತರ ಒಳಗಡೆ ಬರುವ ಭಕ್ತಾದಿಗಳಿಂದ ಸುರಿದ ನೀರಿನಿಂದಾಗಿ ಒಳಗಿನ ನೆಲವೆಲ್ಲಾ ಜಾರುತ್ತದೆ. ನಡೆಯುವಾಗ ಜಾಗ್ರತೆ ವಹಿಸಬೇಕು.
ಈಗಿರುವ ದೇವಾಲಯವು 12 ನೆ ಶತಮಾನದ್ದು ಎಂದು ತಿಳಿಯಲಾಗಿದೆ. ಆದರೆ ರಾಮೆಶ್ಹ್ವರವು ರಾಮಾಯಣ ಕಾಲದಲ್ಲೇ ಇತ್ತು ಎಂದು ಪುರಾಣಗಳ ಉಲ್ಲೇಖವಿದೆ. ಸೀತಾ ಮಾತೆಯನ್ನು ಅರಸುತ್ತಾ  ಶ್ರೀರಾಮಚಂದ್ರನು ಇಲ್ಲಿಗ ಬಂದು ಸಮುದ್ರ ಸೇತುವನ್ನು ಕಟ್ಟಿ, ಲಂಕೆಗೆ ಕಪಿ ಸೈನ್ಯ ಸಮೇತನಾಗಿ ಹೋಗಿ ರಾವಣವಧೆ ಮಾಡಿ ಸೀತಾದೇವಿಯನ್ನು ಬಿಡಿಸಿಕೊಂಡು ಹಿಂತಿರುಗಿ ಬಂದು, ಬ್ರಹ್ಮಹತ್ಯಾ ಧೋಷ ಪರಿಹಾರಕ್ಕಾಗಿ ಶಿವ ಪೂಜೆಗಾಗಿ ಶಿವಲಿಂಗ ಪ್ರತಿಷ್ಠೆ ಮಾಡುವ ಸಲುವಾಗಿ, ಕಾಶಿಯಿಂದ ಶಿವಲಿಂಗವನ್ನು ತರಲು ಆಂಜನೇಯನನ್ನು ಕಳುಹಿಸುತ್ತಾನೆ. ನಿಶ್ಚಯಿಸಿದ ಸುಮುಹೂರ್ಥಕ್ಕೆ ಸರಿಯಾಗಿ ಆಂಜನೇಯನು ಬರದ ಕಾರಣ ಸೀತಾದೇವಿಯೇ ಮರಳಿನಿಂದ ಶಿವಲಿಂಗ ರಚಿಸಿ ಪ್ರತಿಷ್ಠಾಪಿಸಿದಳಂತೆ. ಆಂಜನೇಯನು ತಡವಾಗಿ ಬಂದುದಕ್ಕೆ ನೊಂದುಕೊಂಡಾಗ ಅವನು ತಂದ ಶಿವಲಿಂಗವನ್ನೂ ಅಲ್ಲೇ ಸ್ಥಾಪಿಸಿದರಂತೆ. ಹಾಗಾಗಿ ಇದು ಶ್ರೀರಾಮ, ಸೀತಾ ಮಾತೆಯಿಂದ ಪೂಜಿಸಲ್ಪಟ್ಟ ಶಿವಲಿಂಗವೆಂದು ನಂಬುತ್ತಾರೆ. ಭಾರತ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಮನಾಥೇಶ್ವರ ಲಿಂಗವೂ ಸೇರಿದೆ. ರಾಮೇಶ್ವರವನ್ನು ದಕ್ಷಿಣ ಕಾಶಿ ಎನ್ನುತ್ತಾರೆ. ಅಂತೆಯೇ ಇದು ಅತೀ ಪವಿತ್ರ ಸ್ಥಳವೆಂದು ನಂಬಿಕೆ. ದೇವರ ಗರ್ಭಗುಡಿಯಲ್ಲಿ ಇನ್ನೂ ಒಂದು ಶಿವಲಿಂಗವಿದ್ದು ಇದು ಸ್ಪಟಿಕಲಿಂಗವಾಗಿದೆ. ಪ್ರತೀದಿನ ಬೆಳಗ್ಗೆ 5.10ಕ್ಕೆ ಸ್ಪಟಿಕಲಿಂಗ ದರ್ಶನವಿದೆ. ಇದಕ್ಕಾಗಿ 50 ರೂ. ಟಿಕೆಟ್ ಪಡಕೊಳ್ಳಬೇಕು.
ನಾವು ದೇವರ ದರ್ಶನಕ್ಕಾಗಿ ಒಳ ಹೋದೆವು. ಅಂದು ಗುರುವಾರ ಹೆಚ್ಚು ಸಂದಣಿ ಇರಲಿಲ್ಲ. ದೇವರನ್ನು ಸರಿಯಾಗಿ ನೋಡಲು ಸಾಧ್ಯವಾಯಿತು. ಸರಿಯಿರಿ, ಮುಂದೆ ಹೋಗಿ ಎಂದು ನೂಕುವವರಿಲ್ಲ. ಮನಸಾರೆ ದೇವರಿಗೆ ವಂದಿಸಿದೆವು. ಅದೆಷ್ಟೋ ದೂರದಿಂದ ಗಂಗಾಜಲವನ್ನು ಭಕ್ತಿಯಿಂದ ತಂದು ಶಿವನಿಗೆ ಅಭಿಷೇಕ ಮಾಡುವವರ ಶ್ರದ್ಧಾ ಭಕ್ತಿ ನೋಡುವಂತಾಗಿದೆ. ಬೇಕಾದರೆ ಇಲ್ಲೇ ಗಂಗಾಜಲದ ಪುಟ್ಟ ಕುಡಿಕೆ ಸಿಗುತ್ತದೆ. ಅದನ್ನೇ ಕೊಂಡು ನಾವೂ ಗಂಗಾಭಿಷೇಕ ಸೇವೆಯನ್ನು ಮಾಡಿಸಿದೆವು. ಮಧ್ಯಾಹ್ನದ ಪೂಜೆಯನ್ನೂ ನೋಡಿದೆವು. ಅಲ್ಲಿಂದ ಹೊರಬಂದು ಪಕ್ಕದಲ್ಲೇ ಇರುವ ದೇವಿಯ ಆಲಯಕ್ಕೆ ಹೋಗಿ ದರ್ಶನ ಪಡೆದೆವು.
ಹೊರಗೆ ಬಂದು ಮಾರ್ಗದಲ್ಲೇ ದೇವಸ್ಥಾನಕ್ಕೆ ಒಂದು ಸುತ್ತು ಬಂದೆವು. ಅಲ್ಲೆಲ್ಲಾ ಅಂಗಡಿಗಳು. ಪೂಜಾ ಸಾಮಗ್ರಿ, ಶಂಖ ಚಿಪ್ಪುಗಳನ್ನು ಸುಂದರವಾಗಿ ಜೋಡಿಸಿ ಮಾಡಿದ ಬಗೆ ಬಗೆಯ ಕಲಾಕೃತಿಗಳು, ಊದುವ ಶಂಖ ಇತ್ಯಾದಿಗಳ ಮಳಿಗೆಗಳು ತುಂಬಿವೆ.ಅಂತೆಯೇ ಹೋಟೆಲ್ ಗಳೂ ಛತ್ರ ಗಳೂ ಇವೆ. ನಾವು  ಊಟ ಮಾಡಿ ಸ್ವಲ್ಪ ಹೊತ್ತು ರೂಮಿನಲ್ಲಿ ವಿಶ್ರಮಿಸಿದೆವು. ಚೆನ್ನಾಗಿ ನಿದ್ರೆ ಬಂದಿತ್ತು. ಎಚ್ಚರವಾಗುವಾಗ 3.30. ಲಗುಬಗೆಯಿಂದ ಎದ್ದು ಹೊರಟೆವು. ನಮಗೆ ಧನುಷ್ಕೋಡಿಗೆ ಹೋಗಬೇಕು. ದೇವಸ್ಥಾನದ ಎದುರುಗಡೆಯೇ ಬಸ್ ಬರುತ್ತದೆ. ಅಲ್ಲಿ ಕಾದೆವು. 4.45ಕ್ಕೆ ಬಸ್ ಬಂದಿತು. ಸುಮಾರು 12 ಕಿ.ಮೀ. ದೂರ. ಅರ್ಧ ಘಂಟೆಯಲ್ಲಿ ಅಲ್ಲಿಗೆ ತಲುಪಿದೆವು. ಅಲ್ಲಿಯವರೆಗೆ ಮಾತ್ರ ರಸ್ತೆಯಿದೆ . ಮುಂದೆ ಮರಳದಾರಿ, ಜೀಪ್ ಮಾತ್ರ ಸಾಗಬಲ್ಲುದು.ಮುಂದೆ 7 ಕಿ.ಮೀ.ಸಾಗಬೇಕು.


ಆದರೆ ಅಲ್ಲಿ ಜೀಪುಗಳು ಇರಲಿಲ್ಲ. ಮತ್ತು ಸಂಜೆ 6 ಘಂಟೆಯ ನಂತರ ಅಲ್ಲಿ ಯಾರೂ ಇರಕೂಡದು ಎಂಬ ಭಾರತೀಯ ನೌಕಾಸೇನೆ, ಕೋಸ್ಟ್ ಗಾರ್ಡ್ಸ್ ನ  ಆಜ್ಞಾಪಣೆ ಇದೆ. ಹಾಗಾಗಿ ನಾವು. ಧನುಷ್ಕೋಡಿಯ ತುದಿ ಮುಟ್ಟಲಿಕ್ಕಾಗಲಿಲ್ಲ. ಸ್ವಲ್ಪ ನಿರಾಶೆಯಾಯಿತು. ನಮ್ಮ ಮದ್ಯಾಹ್ನದ ನಿದ್ರೆ ಈ ಒಳ್ಳೆಯ ಅವಕಾಶವನ್ನು ಕಸಿದಿತ್ತು. ಅಲ್ಲಿಯೂ ಇದೇ ರೀತಿ ಸಮುದ್ರ, ಮರಳು ಅಷ್ಟೇ. ಮತ್ತು ಹಿಂದೆ 1964 ರಲ್ಲಿ ಬಂದ ಸುನಾಮಿಯ ರೌದ್ರಾವತಾರದ ಸಾಕ್ಷಿ ಯಾಗಿ ನೆಲಸಮವಾಗಿರುವ ಮನೆ,ಕಟ್ಟಡಗಳು, ರೈಲುಮಾರ್ಗ, ಒಂದು ಹಳೆಯ ಚರ್ಚ್ ನ ಅವಶೇಷಗಳಿವೆಯಂತೆ. ಒಂದು ದೇವಸ್ಥಾನವಿದ್ದದ್ದು ಸಹಾ ನೀರಲ್ಲಿ ಮುಳುಗಿಹೋಗಿದೆ.
ಶ್ರೀರಾಮಪಾದ ಎಂಬ ಸ್ಥಳವಿದೆ. ಅಲ್ಲಿ ಪೂಜೆ ಮಾಡಬಹುದು. ಅಲ್ಲಿಂದ ಲಂಕೆಗೆ ಬರೇ 30 ಕಿ.ಮೀ. ಅಷ್ಟೇ.


ಹೇಗೂ ಇಲ್ಲಿಯವರೆಗೆ ಬಂದಿದ್ದೆವಲ್ಲಾ ಕಡಲ ತೀರದಲ್ಲೇ ಚಾರಣ ಮಾಡೋಣ ಎಂತ ಚಾರಣಪ್ರಿಯರಾದ ನಾವಿಬ್ಬರೂ ಒಮ್ಮತದಿಂದ ತೀರ್ಮಾನಿಸಿದೆವು.
ಇಲ್ಲಿ ಕಡಲು ಎರಡೂ ಕಡೆ ಇದೆ. ಮಧ್ಯದಲ್ಲಿ ಸುಮಾರು ಅರ್ಧ ಕಿ.ಮೀ ನಷ್ಟು ಭೂಮಿಯಿದೆ ಅಷ್ಟೇ. ಬರೇ ಮರಳು, ಮರಗಳೇ ಇಲ್ಲದಅಗಲ ಕಿರಿದಾದ ಜಾಗ! ಕೆಲವೆಡೆ ಮರಳ ದಿಬ್ಬಗಳು, ಕೆಲವೆಡೆ ಜವುಗು ಮರಳು.


 ಅದರಲ್ಲಿ ಕಾಲಿಡಲು ಧೈರ್ಯವಿರಲಿಲ್ಲ. ಒಂದುವೇಳೆ ಹೂತು ಹೋದರೆ? ಭರ್ರನೆ ಬೀಸುವ ಗಾಳಿ, ದಡಕ್ಕಪ್ಪಳಿಸುವ ತೆರೆಗಳು, ವ್ಯಗ್ರವಾದ ಸಾಗರ, ಅಲ್ಲಿ ನಾವಿಬ್ಬರೇ ನಡೆಯುತ್ತಾ ಸಾಗಿದೆವು. ಒಂದುವೇಳೆ ಸುನಾಮಿ ಬಂದರೆ? ಎಂಬ ಆತಂಕವೂ ಮನದಲ್ಲಿ ಮೂಡಿತು. ಅಲ್ಲೆಲ್ಲಾ ಚದುರಿರುವ ಚಿಪ್ಪು, ಶಂಖುಗಳನ್ನು ಆರಿಸುತ್ತಾ, ಕಸ್ತೂರಿ ಒಂದು ಕ್ಯಾರಿ ಬ್ಯಾಗ್ ನಲ್ಲಿ ತುಂಬಿಸುತಿದ್ದಳು. ಇದರಿಂದ ನಮ್ಮ ನಡೆ ನಿಧಾನಗತಿಯಲ್ಲಿ ಸಾಗುತಿತ್ತು. ಹೀಗೇ ಸುಮಾರು 3 ಕಿ.ಮೀ. ಮುಂದೆ ಹೋದೆವು.


ಇದೇ ದಾರಿಯಲ್ಲಿ ಅಲ್ಲವೇ? ಶ್ರೀರಾಮಚಂದ್ರನು, ಲಕ್ಷ್ಮಣ, ಸುಗ್ರೀವ, ಆಂಜನೇಯ, ಜಾಂಭವ ಮತ್ತು ಕಪಿ ಸೈನ್ಯದೊಂದಿಗೆ ಸಾಗಿದ್ದು! ಇದರ ನೆನಪಾಗಿ ಮೈ ಪುಳಕಿತವಾಯಿತು. ಅವರು ಹೋದ ದಾರಿಯಲ್ಲೇ ನಾವಿಂದು ಹೋಗುತಿದ್ದೇವೆ! ಮುಂದೆ ಧನುಷ್ಕೋಡಿಯಲ್ಲಿ ಸಮುದ್ರಕ್ಕೆ ಸೇತುವೆ ರಚಿಸಿ ಲಂಕೆಯನ್ನು ಮುತ್ತಿದರಂತೆ. ಆ ರಾಮಸೇತುವಿನ ಅವಶೇಷಗಳು ಈಗಲೂ ನೀರಿನ ಕೆಳಗೆ ಇದೆಯಂತೆ. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ನಿಜವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಿರಬಹುದೋ ಏನೋ? ಅಷ್ಟು ನೈಜವಾಗಿದೆ.
ಹೊತ್ತು ಕಂತಿತು, ಅಷ್ಟರಲ್ಲೇ ಧನುಷ್ಕೋಡಿಯಿಂದ ವಾಪಾಸು ಬರುತಿದ್ದ ಜೀಪು ಬಂದು ನಿಂತಿತು. ನಾವೂ ಕೂಡಲೇ ಅಲ್ಲಿಂದ ಹಿಂತಿರುಗಬೇಕೆಂದೂ, ಇಲ್ಲವಾದರೆ ಕೋಸ್ಟ್ ಗಾರ್ಡ್ ಗಳು ಬಂದು ಗದರಿಸುತ್ತಾರೆ ಎಂದು ತಿಳಿಸಿದರು. ನಾವೂ ಆದಷ್ಟು ಬೇಗನೇ ಹಿಂತಿರುಗಿದೆವು. ಬಸ್ ಬಂದಿತ್ತು. ಅದರಲ್ಲಿ ರಾಮೇಶ್ವರಮ್ ಗೆ ವಾಪಸಾದೆವು. ದಾರಿಯಲ್ಲಿ ಕೋದಂಡರಾಮ ದೇವಸ್ಥಾನ ಕಾಣಿಸುತಿತ್ತು. ಭಾರತದ ರಾಷ್ಟ್ರಪತಿಯಾಗಿದ್ದ ಶ್ರೀಯುತ  ಎ.ಪಿ.ಜೆ.ಅಬ್ದುಲ್ ಕಲಾಂ  ಅವರ ಹುಟ್ಟೂರು ಧನುಷ್ಕೋಡಿ. ಇಲ್ಲಿ ಅವರ ಮನೆ ಇದೆಯಂತೆ.
ಕಾಫಿ ತಿಂಡಿ ಆದಾಗ ಆಯಾಸವೆಲ್ಲ ಕಡಿಮೆಯಾಯಿತು. ನಮಗೆ ಬೇರೇನೂ ಕೆಲಸವಿರಲಿಲ್ಲ.


 ನೆಟ್ಟಗೆ ದೇವಸ್ಥಾನದ ಒಳಗೆ ಹೋದೆವು, ದೇವರ ದರ್ಶನ ಮಾಡಿದೆವು. ಮತ್ತೆ ಅಲ್ಲೇ ಇರುವ ಸಮುದ್ರದ ಕಿನಾರೆಯಲ್ಲಿ ಕುಳಿತೆವು. ಈಗ ಯಾರೂ ಸ್ನಾನ ಮಾಡುತ್ತಿರಲಿಲ್ಲ. ಹೆಚ್ಚು ರಶ್ ಇರಲಿಲ್ಲ. ಸಮುದ್ರದ ನೀರು ಈಗ ಕಪ್ಪಾಗಿ ತೋರುತಿತ್ತು. ಅದರ ಮೇಲೆ ಪಕ್ಕದ ಕಟ್ಟಡಗಳ ಲೈಟ್, ಬೋಟ್ ಗಳ ಬೆಳಕು ಎಲ್ಲಾ ಸೊಗಸಾಗಿ ಪ್ರತಿಫಲಿಸುತ್ತಿತ್ತು. ಸುಮಾರು ಹೊತ್ತು ಅಲ್ಲಿದ್ದೆವು. ನಂತರ ರಾತ್ರಿಯೂಟ ಮಾಡಿಕೊಂಡು ರೂಮಿಗೆ ಹೋದೆವು. ರಾತ್ರಿ ಬಾತ್ ರೂಮಿಗೆ ಹೋದಾಗ ಏನೋ ಗಬ್ಬು ವಾಸನೆ, ಏನೆಂದು ನೋಡುವಾಗ ನಾವು  ಅಲ್ಲಿಂದ ಆರಿಸಿ ತಂದ ಚಿಪ್ಪುಗಳ ಕರಾಮತ್ತು. ತಕ್ಷಣ ಪೂರ್ತಿ ಚೀಲವನ್ನೇ ಹೊರಗೆ ಎಸೆದೆವು.
 ಮರುದಿನ ಬೆಳಗ್ಗೆ 5 ಘಂಟೆಗೇ ಎದ್ದು ಸಮುದ್ರ ಸ್ನಾನಕ್ಕೆ ಹೋದೆವು. ಅಲ್ಲೆಲ್ಲ ಆಗಲೇ ಬಹಳ ಜನ ಸೇರಿದ್ದರು. ಸಮುದ್ರವು ಇಲ್ಲಿ ಶಾಂತವಾಗಿತ್ತು. ನೀರಿನಲ್ಲಿ ಬಹಳ ದೂರದವರೆಗೆ ಹೋಗಿ ಸ್ನಾನ ಮಾಡಿದೆವು. ಇಬ್ಬರಿಗೂ ಈಜು ಬರುವುದರಿಂದ ಏನೇನೂ ಭಯವಿಲ್ಲದೆ, ಬಹಳ ಹೊತ್ತು ನೀರಲ್ಲಿದ್ದೆವು. ಸೂರ್ಯೋದಯದ ಸೊಬಗನ್ನೂ ಸವಿದೆವು. ಬಹಳ ಕುಶಿ ಪಟ್ಟೆವು.
ಮುಂದೆ ಕೋಟಿ ತೀರ್ಥ ಸ್ನಾನ. ಇದಕ್ಕಾಗಿ ಟಿಕೆಟ್ ಪಡಕೊಂಡು, ಮತ್ತೆ ಒಬ್ಬ ಏಜೆಂಟ್ ನೊಂದಿಗೆ ಸಾಲಿನಲ್ಲಿ ಹೋಗಿ ನಿಂತೆವು. ಇಲ್ಲಿ ತುಂಬಾ ರಶ್ ಇರುತ್ತದೆ. ಆತನೊಂದಿಗೆ ಇನ್ನೂ ಹಲವಾರು ಮಂದಿ ಇದ್ದರು. ಎಲ್ಲರನ್ನೂ ಒಟ್ಟಿಗೇ ಕೊಂಡೊಯ್ದು ಒಂದೊಂದು ತೀರ್ಥಭಾವಿಯಿಂದಲೂ ಪುಟ್ಟ ಬಕೆಟ್ ನಲ್ಲಿ ನೀರು ಮೊಗೆದು ಒಬ್ಬೊಬ್ಬರ ತಲೆಗೆ ಸುರಿಯುತ್ತಾನೆ. ನಂತರ ಮುಂದಿನ ಭಾವಿಯೆಡೆಗೆ ದೌಡಾಯಿಸಬೇಕು. ಯಾರೂ ತಪ್ಪಿಸಿಕೊಳ್ಳಬಾರದು. ಇಲ್ಲಿನ ಹೆಚ್ಚಿನ ಎಲ್ಲಾ ಭಾವಿಗಳು ಹತ್ತಿರ ಹತ್ತಿರದಲ್ಲೇ ಇವೆ. ಆದರೆ ವಿಚಿತ್ರವೆಂದರೆ ಒಂದರ ನೀರು ಇನ್ನೊಂದರಂತಿಲ್ಲ. ಒಂದು ಸಿಹಿ ನೀರಾದರೆ ಇನ್ನೊಂದು ಸವಳು. ಒಂದು ಅತೀ ತಂಪು ಆದರೆ ಇನ್ನೊಂದು ಉಗುರುಬಿಸಿ ನೀರು.ಅವನು ನೀರು ಸುರಿಯುತ್ತಿರುವಾಗಲೇ ಕೆಲವರು ಅದನ್ನು ಬಾಟಲಿಯಲ್ಲಿ ತುಂಬಿಕೊಳ್ಳುತ್ತಿದ್ದರು. ಅಂತೂ ಎಲ್ಲಾ ತೀರ್ಥಗಳನ್ನು ಮಿಂದಾಯಿತು. ಇಲ್ಲೆಲ್ಲಾ ಫೋಟೋ ತೆಗೆಯಲು ಅವಕಾಶವಿಲ್ಲ. ಅದು ಸೌಜನ್ಯವೂ ಅಲ್ಲವೆನ್ನಿ. ನಾವು ಒಣಬಟ್ಟೆ ಧರಿಸಿ ಶ್ರೀದೇವರ ಧರ್ಶನ ಮಾಡಿದೆವು. ಅಂತೂ ಮನದಣಿಯೆ 3 ಸಲ ದೇವರನ್ನು ನೋಡಿದ ಹಾಗಾಯಿತು.
ಮದ್ಯಾಹ್ನದ ಊಟ ಮುಗಿಸಿ ನಾವು ಬಸ್ಸಿನಲ್ಲಿ ಮದುರೈಗೆ ಬಂದೆವು. ಅಲ್ಲಿನ ನೂತನ ಬಸ್ ಸ್ಟ್ಯಾಂಡ್ ಬಹಳ ಚೆನ್ನಾಗಿತ್ತು. ಸ್ವಲ್ಪ ಹೊತ್ತು ಅಲ್ಲಿ ಶಾಪಿಂಗ್ ಮಾಡಿ ಸಿಟಿ ಬಸ್ ನಲ್ಲಿ ಮದುರೈ ರೈಲ್ವೆ ಸ್ಟೇಷನ್ ಗೆ ಬಂದು ರಾತ್ರಿ 8 ಘಂಟೆಗೆ ಹೊರಡುವ ಟ್ಯುಟಿಕೊರಿನ್ - ಬೆಂಗಳೂರು ರೈಲು ಹತ್ತಿ ಬೆಳಗ್ಗೆ 6.40 ಕ್ಕೆ ಊರು ಸೇರಿದೆವು. ಬಹಳ ಕಾಲ ಸವಿ ನೆನಪಿನಲ್ಲಿರುವಂತಹಾ ಒಂದು ಯಾತ್ರೆಯಾಗಿತ್ತು.  
    

No comments:

Post a Comment