ಆವಣಿಯ ಕುರಿತಾದ ಒಂದು ಲೇಖನವನ್ನು ಹಿಂದೆ ಬರೆದಿದ್ದೆ. ಅದರ ಕೊನೆಯಲ್ಲಿ ಇನ್ನೊಂದು ಸಲ ಈ ಬೆಟ್ಟದಲ್ಲಿ ಒಂದು ರಾತ್ರಿ ಕಳೆಯಬೇಕು ಎಂದು ನಿಶ್ಚಯಿಸಿದ್ದೆವು. ಮನಸಲ್ಲಿ ಅದೇ ಗುಂಗು. ನಮ್ಮ ಚಾರಣ ತಂಡದೊಂದಿಗೆ ಅದರ ಬಗ್ಗೆ ಹೇಳಿದಾಗ ಎಲ್ಲರೂ ತಯಾರು ಎಂದರು. ತಂಡಕ್ಕೆ ಹೊಸಬರೂ ಸೇರಿಕೊಂಡರು. ಒಟ್ಟು 15 ಜನರು 3 ಕಾರಿನಲ್ಲಿ ಹೋಗುವುದೆಂದಾಯಿತು. ಮೊನ್ನೆ ಜೂನ್ 18,19 ಶನಿವಾರ-ರವಿವಾರದಂದು ಎಲ್ಲಾ ತಯಾರಿಗಳೊಂದಿಗೆ ಹೊರಟೇ ಬಿಟ್ಟೆವು. ಕಸ್ತೂರಿ, ರವಿ, ಕಿರಣ, ಶ್ರುತಿ ಮತ್ತು ನಾನು ಒಂದು ಕಾರಿನಲ್ಲಾದರೆ ವಿಶು, ಪಲ್ಲವಿ, ವೀಣಾ, ಆಚಾರ್ ಭಾವ ಮತ್ತು ಅಶ್ವಿನ್ ಇನ್ನೊಂದರಲ್ಲಿ. ಮುರಳಿ, ಯಮುನಾ, ನಾಗಪ್ಪಯ್ಯ, ನಿಶಾ ಹಾಗೂ ಅರವಿಂದ ಮತ್ತೊಂದು ಕಾರಲ್ಲಿ ಬಂದು ಕೆ.ಅರ್.ಪುರಂನಲ್ಲಿ ನಮ್ಮನ್ನು ಕೂಡಿಕೊಂಡರು. ಅಲ್ಲಿಂದ ಮುಂದೆ ನಮ್ಮ ಗಮ್ಯ ಕೈವಾರಕ್ಕೆ. ಕುಷಿಯಿಂದ ಮಾತಾಡುತ್ತಾ ಸಾಗುತಿದ್ದಂತೆ ಕೈವಾರಕ್ಕೆ ಬೆಳಗ್ಗೆ 10 ಘಂಟೆಗೆ ತಲುಪಿದೆವು.
ಮೊದಲಿಗೆ ಕೈವಾರ ತಾತಯ್ಯನವರ ಮಂದಿರ ನೋಡಿದೆವು. ಬಹಳ ಸುಂದರ ಪ್ರಶಾಂತ ಪರಿಸರ. ನಂತರ ಹತ್ತಿರವೇ ಇರುವ ಅಮರನಾರಾಯಣ ದೇವಾಲಯ ಮತ್ತು ಭೀಮೇಶ್ವರ ದೇಗುಲಕ್ಕೆ ಹೋದೆವು.
ದರ್ಶನವಾದಮೇಲೆ ಯೋಗಿ ನಾರೇಯಣರ ಗುಹೆ ನೋಡಲು ಹೋದೆವು. ಹೊಲ ಬೆಟ್ಟಗಳ ಮಧ್ಯೆ ಇರುವ ಮಾರ್ಗದಲ್ಲಿ ನಡೆದೇ ಹೋದೆವು. ಅಕ್ಕ ಪಕ್ಕದ ಹೊಲಗಳಲ್ಲಿ ಟೊಮೆಟೋ ಮತ್ತು ಅವರೆಕಾಯಿ ಬೆಳೆದಿದ್ದರು. ನಾವೂ ಸ್ವಲ್ಪ ಕಿತ್ತು ತಿಂದೆವು.
ಗುಹೆ ಮತ್ತು ಇತರ ಮಂದಿರಗಳನ್ನು ನೋಡಿಕೊಂಡು ಕೈವಾರಕ್ಕೆ ಬಂದು ಪ್ರಸಾದ ಭೋಜನ ಮಾಡಿದೆವು. ಬಹಳ ಆದರದಿಂದ ನಮಗೆ ಊಟ ಬಡಿಸಿದ್ದರು. ಬಹಳ ಚೆನ್ನಾಗಿತ್ತು ಊಟ. ಅಲ್ಲಿಂದ ಮಧ್ಯಾಹ್ನ 2 ಘಂಟೆಗೆ ಆವಣಿಯತ್ತ ಪಯಣ. ಕೈವಾರದಿಂದ H ಕ್ರಾಸ್ ಗೆ ಬಂದು ಅಲ್ಲಿಂದ ಕೋಲಾರ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮುಳಬಾಗಿಲಿಗೆ 10 ಕಿ.ಮೀ ಮೊದಲೇ ಬಲಕ್ಕೆ ತಿರುಗಿ 12 ಕಿ.ಮೀ. ಹೋದರೆ ಆವಣಿ ತಲುಪುತ್ತೇವೆ. ರಸ್ತೆ ಚೆನ್ನಾಗಿದೆ.
ದೂರದಿದಲೇ ಆವಣಿ ಬೆಟ್ಟ ನಮ್ಮನ್ನು ಕೈ ಬೀಸಿ ಕರೆಯುತಿತ್ತು. ಬೆಟ್ಟದ ಬುಡಕ್ಕೆ ತಲಪುವಾಗ ಸಾಯಂಕಾಲ 4 ಘಂಟೆ. ಪಕ್ಕದಲ್ಲೇ ಇರುವ ಮನೆಯಯವರೊಡನೆ ವಿಜ್ನಾಪಿಸಿಕೊಂಡು ನಮ್ಮ ಮೂರೂ ಕಾರುಗಳನ್ನು ಅವರ ಸುಪರ್ದಿಯಲ್ಲಿ ಬಿಟ್ಟೆವು. ನೀವೇನೂ ಯೋಚನೆ ಮಾಡಬೇಡಿ ಕಾರನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆ ದೊರಕಿತು. ಸಂತೋಷವಾಗಿ ಹೋಗಿಬನ್ನಿ ಎಂದು ಹಾರೈಸಿದರು.
ನಮ್ಮ ಸರಕು ಸರಂಜಾಮುಗಳನ್ನು ಹೊತ್ತುಕೊಂಡು ಬೆಟ್ಟ ಏರಲು ಆರಂಬಿಸಿದೆವು. ಎಲ್ಲರ ಕೈಯಲ್ಲೂ ನೀರಿನ ಬಾಟಲಿಗಳು. ಯಾಕೆಂದರೆ ಮೇಲೆ ಕುಡಿಯುವ ನೀರು ಸಿಗುವುದಿಲ್ಲ. ಅಲ್ಲಲ್ಲಿ ನಿಂತು ದಣಿವಾರಿಸುತ್ತಾ ಮೇಲೇರಿದೆವು.
ಅರವಿಂದ, ನಿಶಾ ಮತ್ತು ಶ್ರುತಿಯರನ್ನು ಕಿಚಾಯಿಸುತ್ತಲೇ ಇದ್ದ. ನಮ್ಮನ್ನು ಹಿಂಬಾಲಿಸುತ್ತಾ ಒಂದು ನಾಯಿ ಬರುತ್ತಾ ಇತ್ತು. ಶ್ರುತಿ ಮತ್ತು ನಿಶಾ ಅದರೊಡನೆ ಗೆಳೆತನವನ್ನೂ ಮಾಡಿಬಿಟ್ಟಿದ್ದರು. ಎಷ್ಟು ಹೇಳಿದರೂ ಅದು ಹಿಂದಕ್ಕೆ ಹೋಗಲೇ ಇಲ್ಲ. ಸರಿ, ಬಂದರೆ ಬರುತ್ತದೆ, ಅದಕ್ಕೆ ಬೋರ್ ಆದಾಗ ವಾಪಸು ಹೋಗಬಹುದು ಎಂದಿದ್ದೆವು. ಇಲ್ಲ ಅದು ಇವತ್ತು ನಮ್ಮನ್ನು ಮೇಲಿನವರೆಗೆ ತಲುಪಿಸಿಯೇ ಸಿದ್ಧ ಎಂಬಂತಿತ್ತು. ಈ ರೀತಿ ನಾಯಿ ಮನುಷ್ಯರನ್ನು ಹಿಂಬಾಲಿಸುವುದು ಮಹಾಭಾರತ ಕಾಲದಲ್ಲೇ ಇತ್ತು. ಪಾಂಡವರ ಸ್ವರ್ಗಾರೋಹಣ ಕಾಲದಲ್ಲಿ ಅವರನ್ನು ನಾಯಿಯೊಂದು ಹಿಂಬಾಲಿಸಿತ್ತು ಎಂದು ತಿಳಿದಿದೆ. ಅದೇ ಒಂದು ಚಟವಾಗಿ ಮುಂದೆ ಅನುವಂಶಿಕವಾಗಿ ನಾಯಿಗಳಿಗೆ ಬಂದಿರಬೇಕು! ಈಗಾಗಲೇ ಅದಕ್ಕೆ ಜಿಮ್ಮಿ ಎಂಬ ನಾಮಕರಣವೂ ಆಗಿತ್ತು. ಬಾಲ ಅಲ್ಲಾಡಿಸುತ್ತಾ ನಮ್ಮ ಹಿಂದೆ ಮುಂದೆ ಅಡ್ಡಾಡುತಿತ್ತು. ಎರಡು ನೀರಿನ ಬಾಟಲಿಗಳನ್ನು ಅದರ ಕತ್ತಿಗೆ ನೇತು ಹಾಕಿದರೆ ನಮ್ಮ ಭಾರ ಸ್ವಲ್ಪ ಕಮ್ಮಿ ಆಗಬಹುದೇನೋ ಎಂಬ ಯೋಚನೆ ಬಂದಿತ್ತು.
ಬೆಟ್ಟದ ಒಂದು ಮಜಲನ್ನು ತಲುಪಿದೆವು. ಅಲ್ಲಿ ದೊಡ್ಡದೊಂದು ಬಂಡೆ ಮುಂದೆ ಚಾಚಿಕೊಂಡಿತ್ತು. ಅಲ್ಲಿ ಸ್ವಲ್ಪ ಕುಳಿತೆವು. ಎದುರುಗಡೆ ಒಂದರ ಮೇಲೆ ಒಂದು ಪೇರಿಸಿಟ್ಟ ಬಂಡೆಗಳು. ತುತ್ತ ತುದಿಯಲ್ಲ್ಲಿ ಚೌಕಾಕಾರದ ಒಂದು ಬಂಡೆ. ಇದನ್ನು ನಾವು ಸೀತಾ ದೇವಿಯ ಸಾಬೂನು! ಎಂದು ಕರೆದೆವು.
ಮುಂದೆ ಸ್ವಲ್ಪ ವಿಶಾಲ ಜಾಗ, ಅಲ್ಲೇ ವಾಲ್ಮೀಕಿ ಆಶ್ರಮವಿದೆ. ಲವ-ಕುಶರ ಜನ್ಮ ಇಲ್ಲೇ ಆಯಿತಂತೆ.' ವಾಲ್ಮೀಕಿ ಮೆಟರ್ನಿಟಿ ಹೋಂ ' ಎಂದೆ ನಾನು. ಪಕ್ಕದಲ್ಲೇ ಪಾಂಡವರು ಪ್ರತಿಷ್ಟಿಸಿದ ಪಂಚಲಿಂಗಗಳ ಗುಡಿ. ಒಳಗೆ ಹೋಗಿ ಅಲ್ಲಿ ಸ್ವಲ್ಪ ಸ್ವಚ್ಛ ಮಾಡಿ ಒಂದು ಬಾಟಲಿ ನೀರಿನಿಂದ ರುದ್ರಾಭಿಷೇಕ ಮಾಡಿದೆವು. ಇಲ್ಲಿ ಶಿವನಿಗೆ ನಮ್ಮಂತಹ ಯಾತ್ರಿಕರಿಂದಲೇ ಪೂಜೆ ಅಷ್ಟೇ.
ಮುಂದೆ ಒಂದು ಬಾಗಿಲುವಾಡವಿತ್ತು. ಅಲ್ಲಿ ತಂಪಾದ ಗಾಳಿ ಬೀಸುತಿತ್ತು. ಮುಂದೆ ಏಕಾಂತ ರಾಮೇಶ್ವರನ ಗುಡಿ. ಅಲ್ಲಿಂದ ಮುಂದೆ ಸ್ವಲ್ಪ ಏರಿದಾಗ ಲಕ್ಷ್ಮಣ ತೀರ್ಥ ಸಿಗುತ್ತದೆ. ಇದನ್ನು ಧನುಷ್ಕೋಟಿ ಎನ್ನುತ್ತಾರೆ. ಪಕ್ಕದಲ್ಲೇ ದೊಡ್ಡ ಗುಂಡಗಾದ ಬಂಡೆ ಇದೆ. ಅಲ್ಲಿ ಕುಳಿತು ನಾವು ಗಂಟು ಬಿಚ್ಚಿದೆವು.
ಎಲ್ಲರೂ ಸೇರಿ ಉತ್ಸಾಹದಿಂದ ಭೇಲ್ ಪುರಿ ಮಾಡಿ ತಿಂದೆವು. ಪ್ರಥಮ ಬಾರಿಗೆ ಚಾರಣ ಬಂದವರಿಗೆ ಇದನ್ನು ಮಾಡುವ ಅವಕಾಶ ದೊರೆಯಿತು. ಬಹಳ ರುಚಿಕರವಾಗಿತ್ತು. ಜೊತೆಗೆ ಕುಡಿಯಲು ಫಾಂಟ ಸಹಾ ಇತ್ತು. ಆಯಾಸವೆಲ್ಲಾ ಮಾಯ!
ಮುಂದೆ ಹೋದಂತೆ ಒಂದು ದೊಡ್ಡ ಕೊಳ ಇದೆ, ನೀರು ಮಾತ್ರ ಪಾಚಿಕಟ್ಟಿಕೊಂಡು ಹಸಿರು ಕಾರ್ಪೆಟ್ ನಂತೆ ತೋರುತಿತ್ತು. ಮಳೆ ಬಂದು ನೀರು ತುಂಬಿದರೆ ಈಜು, ಡೈವ್ ಹೊಡೆಯಬಹುದಿತ್ತು. ಎಂದು ಈಜು ಬಾರದ, ಅರವಿಂದ ಸಲಹೆ ನೀಡಿದ. ಮುಂದುವರಿದಂತೆ ಏರು ಶುರುವಾಗುತ್ತದೆ. ಮೆಟ್ಟಿಲುಗಳನ್ನು ಮಾಡಿದ್ದಾರೆ.
ಅದರಲ್ಲಿ ಏರುತ್ತಾ ಅಂತೂ ನಮ್ಮ ಗಮ್ಯ ಸ್ಥಾನವಾದ ಸೀತಾ ಪಾರ್ವತಿ ದೇವಾಲಯವನ್ನು ತಲುಪಿದೆವು. ಎಲ್ಲರಿಗೂ ಬಹಳ ಸುಸ್ತಾಗಿದ್ದರೂ ಅಲ್ಲಿ ಭರ್ರನೆ ಬೀಸುವ ಗಾಳಿಯಿಂದಾಗಿ ಉಲ್ಲಾಸವಾಯಿತು.
ಮೊದಲು ಒಂದು ಚಹಾ ಬೇಕು ಎಂದು ನಾಗಪ್ಪಯ್ಯ ಭಾವನ ಬೇಡಿಕೆ. ಕೂಡಲೇ ಚಹಾ ಪ್ರವೀಣ ಮುರಳಿ ಕಾರ್ಯೋನ್ಮುಖನಾದ. ನಮ್ಮ ಗ್ಯಾಸ್ ಸ್ಟೋವ್ ಹೊರಬಂತು. ಆದರೆ ಅದನ್ನು ಉರಿಸಲು ಗಾಳಿ,ಬಿಡಲಿಲ್ಲ. ಎಲ್ಲಿಯಾದರೂ ಗಾಳಿಯಿಂದ ರಕ್ಷಣೆಯಿರುವ ಜಾಗವಿದೆಯೋ ಎಂದು ಅಶ್ವಿನ್ ಮತ್ತು ಆಚಾರ್ ಭಾವ ಹುಡುಕಾಡಿದರು. ಕೊನೆಗೆ ದೇವಾಲಯದ ಒಂದು ಪಕ್ಕದಲ್ಲಿ ನೀರು ತುಂಬಿಸಲು ಕಟ್ಟಿರುವ ಸಿಮೆಂಟ್ ಟ್ಯಾಂಕ್ ಕಂಡಿತು. ಅದರೊಳಗೆ ಗ್ಯಾಸ್ ಸ್ಟೋವ್ ಇರಿಸಿದರೆ ಏನೂ ತೊಂದರೆ ಬರಲಾರದು ಎಂದು, ಅದೇ ನಮ್ಮ ಇಂದಿನ ಅಡಿಗೆ ಮನೆ ಎಂದು ನಿಶ್ಚಯಿಸಿದೆವು.
ಸ್ವಲ್ಪಹೊತ್ತಲ್ಲಿ ಚಹಾ ತಯಾರಾಯಿತು. ಸಕ್ಕರೆ ಜಾಸ್ತಿ ಹಾಕಿದ್ದು, ಕಮ್ಮಿ ಹಾಕಿದ್ದು, ಸಕ್ಕರೆ ಇಲ್ಲದ್ದು ಎಂದು ವೆರೈಟಿ ಚಹಾ ಎಲ್ಲರೂ ಕುಡಿದದ್ದಾಯಿತು. ಜೊತೆಗೆ ಶ್ರುತಿ, ಪಲ್ಲವಿಯಿಂದ ಬಿಸ್ಕತ್ತು ಹಂಚಿಕೆ.
ಅಷ್ಟರಲ್ಲೇ ರಾಮ ಬಂಟನಾದ ಕೋತಿಯೊಂದು ಕುತೂಹಲದಿಂದ ಬಂತು. ಕೂಡಲೇ ಜಿಮ್ಮಿ ಅದನ್ನು ದೂರ ಓಡಿಸಿತು. ನಾಯಿಯಿದ್ದದ್ದು ಸಾರ್ಥಕವಾಯಿತು. ಆ ಮೇಲೆ ಇನ್ನೂ 3-4 ಕೋತಿಗಳು ಬಂದವಾದರೂ ಜಿಮ್ಮಿ ಅವುಗಳನ್ನು ಹತ್ತಿರ ಬರಗೊಡಲಿಲ್ಲ. ದೇವಾಲಯದ ಎದುರುಗಡೆ ಸುಮಾರು 50/30 ಅಡಿಗಳಷ್ಟು ವಿಶಾಲ ಜಾಗ, ಅದಕ್ಕೆ ಸಿಮೆಂಟ್ ಹಾಕಿದ್ದಾರೆ. ಸುತ್ತಲೂ ಕಬ್ಬಿಣದ ಪೈಪ್ ನಿಂದ ಆವರಣ ಮಾಡಿದ್ದಾರೆ. ಅಲ್ಲಿಂದ ಕೆಳಗಡೆ ಸ್ವಲ್ಪ ಪ್ರಪಾತ. ಸುತ್ತಲಿನ ಹಳ್ಳಿಗಳು, ಹೊಲ ಗದ್ದೆಗಳು ದೂರದ ಬೆಟ್ಟಗಳೆಲ್ಲಾ ಸುಂದರವಾಗಿ ಕಾಣುತ್ತದೆ.
ಹಿಂದುಗಡೆ ಅಲ್ಲಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಜಾಗ. ನಾವು ಅಲ್ಲೆಲ್ಲ ಸುತ್ತಾಡಿದೆವು. ಅಲ್ಲಿ ಬೆಟ್ಟದ ಅಂಚಿನಲ್ಲಿ ದೊಡ್ಡ ಗೊಳಾಕೃತಿಯ ಹೆಬ್ಬಂಡೆ. ಅದಕ್ಕೆ ಉರುಳು ಬಂಡೆ ಎಂದು ಹೆಸರು. ವಿಶೇಷವೆಂದರೆ ಅದರ ಕೆಳಗಡೆ ಸುಮಾರು 2 ಅಡಿಗಳಷ್ಟು ಎತ್ತರದ ಸಂದಿಯಿದೆ. ಇದರಲ್ಲಿ ಅಂಗಾತ ಮಲಗಿಕೊಂಡು ನಿಧಾನವಾಗಿ ಉರುಳುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆ ಬರಬಹುದು. ಕಡಿಮೆಯೆಂದರೂ 20 ಉರುಳನ್ನು ಹಾಕಬೇಕಾಗುತ್ತದೆ. ಮನಸಲ್ಲಿ ಏನಾದರೂ ನೆನೆದು ಈ ರೀತಿ ಉರುಳುಸೇವೆ ಮಾಡಿದರೆ ಅದು ನೆರವೇರುತ್ತದಂತೆ. ಮೊದಲಿಗೆ ಅರವಿಂದ ಮತ್ತು ನನ್ನ ಸರದಿ. ಆಮೇಲೆ ನಮ್ಮ ಹೆಚ್ಚಿನವರು ಉರುಳುಸೇವೆ ಮಾಡಿದರು. ಕಿರಣನಿಗೆ ಒಂದು ಸಲ ಸಾಕಾಗಲಿಲ್ಲ. 3 ಸಲ ಉರುಳಿದಳು. ಬೇಡವೆಂದು ಹೇಳುತಿದ್ದ ಆಚಾರ್ ಭಾವ, ನಾಗಪ್ಪಯ್ಯ, ಯಮುನಾ ಮತ್ತು ರವಿ ಸಹಾ ಉರುಳಿದರು. ಅಲ್ಲಿಗೂ ಬಂದಿದ್ದ ಕೋತಿಗಳು ನಾವೇನು ಮಾಡುತ್ತಿದ್ದೆವು ಎಂತ ಕುತೂಹಲದಿಂದ ನೋಡುತ್ತಿದ್ದವು. ಪಲ್ಲವಿ ವೀಡಿಯೊ ರೆಕಾರ್ಡ್ ಮಾಡುತಿದ್ದಳು. ಕತ್ತಲಾಗುತ್ತಾ ಬಂತು. ಸೂರ್ಯ ಮುಳುಗಿದ. ನಾವೂ ದೇವಾಲಯದತ್ತ ಹಿಂತಿರುಗಿದೆವು. ನಮ್ಮ ಸರಕುಗಳನ್ನು ಕೋತಿಗಳಿಂದ ರಕ್ಷಿಸಲು ವಿಶು ಮತ್ತು ಅಶ್ವಿನ್, ಜಿಮ್ಮಿಯ ಜೊತೆಯಲ್ಲಿ ಕಾವಲಿದ್ದರು.
ಇನ್ನು ರಾತ್ರಿಯ ಊಟವಾಗಬೇಕಲ್ಲಾ, ಅದರ ತಯಾರಿಗೆ ತೊಡಗಿದೆವು. ಇದರಲ್ಲಿ ನಮ್ಮ ಹೆಂಗಸರ ಪಾಲಿಲ್ಲ. ನಾವೇ ಎಲ್ಲಾ ಮಾಡುತ್ತೇವೆ, ನಮ್ಮ ಸಿಕ್ರೆಟ್ ರೆಸಿಪಿ ಇದೆ ಎಂದು ಅವರನ್ನು ದೂರವಿರಿಸಿದೆವು. ನಾನು, ಮುರಳಿ, ಅಶ್ವಿನ್ ಮತ್ತು ಅರವಿಂದ ಇದರ ಮುಖ್ಯ ಅಡಿಗೆಯವರು.
ಮೊದಲು ಬೀನ್ಸ್, ಟೊಮೆಟೋ, ಈರುಳ್ಳಿ ಧಾರಾಳ ಕೊಚ್ಚಿದೆವು. ಜೊತೆಗೆ ಮೆಣಸಿನಕಾಯಿ, ತೆಂಗಿನ ತುರಿ, ಗರಂ ಮಸಾಲ, ಅರಸಿನ ಪುಡಿ, ಪುಳಿಯೋಗರೆ ಪುಡಿ, ಬೆಲ್ಲ, ಉಪ್ಪು, ಸ್ವಲ್ಪ ಎಣ್ಣೆ ಮತ್ತು ಕಾಳು ಮೆಣಸು ಕುಟ್ಟಿ ಪುಡಿಮಾಡಿ ಪಾತ್ರೆಗೆ ನೀರು ಹಾಕಿ ಬೇಯಲು ಬಿಟ್ಟೆವು. ನಂತರ ಅದಕ್ಕೆ ಅಕ್ಕಿ ಹಾಕಿ ಬೇಯಿಸಿದೆವು. 15 ಜನರೂ ಮತ್ತು ಜಿಮ್ಮಿಗೆ ಬೇಕಾಗುವಷ್ಟು ಹುಗ್ಗಿ ಆಗಬೇಕಲ್ಲಾ. ಅದು ಬೇಯಲು ಸುಮಾರು ಹೊತ್ತು ಬೇಕಾಯಿತು.
ಅಷ್ಟರಲ್ಲಿ ಶ್ರುತಿಗೆ ಕ್ಯಾಂಪ್ ಫಯರ್ ಬೇಕೇ ಬೇಕು ಎಂಬ ಒತ್ತಾಸೆ. ಅಲ್ಲಿನ ಅಷ್ಟು ರಭಸದ ಗಾಳಿಗೆ ಹೇಗೆ ಬೆಂಕಿ ಹಚ್ಚುವುದು ಎಂಬ ಚಿಂತೆ ಎಲ್ಲರಿಗೂ. ನೋಡೋಣ ಎಲ್ಲಾದರೂ ಗಾಳಿ ಕಡಿಮೆಯಿರುವ ಜಾಗವಿದೆಯೋ ಎಂದು ನಾವೆಲ್ಲಾ ಟಾರ್ಚ್ ಹಿಡಿದು ಸರ್ವೆ ಮಾಡಿದೆವು. ಅದೃಷ್ಟಕ್ಕೆ ಬಂಡೆಯ ಹಿಂಭಾಗದಲ್ಲಿ ಆಯಕಟ್ಟಿನ ಒಂದು ಜಾಗ ಸಿಕ್ಕಿತು. ಅಲ್ಲಿ ಎಲ್ಲರಿಗೂ ಕುಳಿತುಕೊಳ್ಳಲು ಬಯಲು ರಂಗಮಂದಿರದಂತಿರುವ ಜಾಗ ಸಿಕ್ಕಿತು.
ಅಲ್ಲಿ ಒಣ ಟೊಂಗೆಗಳು ದೊರೆತವು. ಸುತ್ತಲೂ, ಹಿಂದೆ ಜಾತ್ರೆ ಸಮಯದಲ್ಲಿ ಒಡೆದ ತೆಂಗಿನಕಾಯಿಯ ಚಿಪ್ಪುಗಳ ಚೂರುಗಳು ಧಾರಾಳವಾಗಿ ಹರಡಿದ್ದವು. ಕಸ್ತೂರಿ, ವೀಣನ ನೇತೃತ್ವದಲ್ಲಿ ಶ್ರುತಿ, ನಿಶಾ ಎಲ್ಲರೂ ಸೇರಿ ಅವುಗಳನ್ನು ಓಟ್ಟು ಮಾಡಿ ತಂದರು. ಮೊದಲಿಗೆ ಬೆಂಕಿ ಹಚ್ಚಲು ಕಷ್ಟವಾಯಿತಾದರೂ ಆಮೇಲೆ ವಿಜಯಿಯಾದೆವು. ಸಣ್ಣ ಉರಿ ಕ್ರಮೇಣ ದೊಡ್ಡದಾಯಿತು. ಮುರಳಿಯೂ ಉತ್ಸಾಹದಿಂದ ಮಂತ್ರ ಹೇಳುತ್ತಾ ಹೋಮ ಮಾಡಿದ.
ಸುತ್ತಲೂ ಕತ್ತಲೆ, ಚಳಿಗಾಳಿ, ಬೆಟ್ಟದ ಮೇಲೆ ನಾವು ಮಾತ್ರ. ದೂರದಲ್ಲಿ ಕೆಳಗಿನ ಊರಿನ ದೀಪಗಳ ಬೆಳಕು, ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಆಗತಾನೆ ಮೂಡಿ ಬಂದ ಚಂದಿರ! ವಾಹ್ ಇದೇ ಮಜಾ! ನಾವು ಎಷ್ಟು ಹಣ ಕೊಟ್ಟರೂ ಸಿಟಿಯಲ್ಲಿ ಸಿಗದ ಆನಂದ ಇಲ್ಲಿ ನಮಗೆ ದೊರೆಯಿತು. ಅಷ್ಟರಲ್ಲಿ ಊಟ ರೆಡಿ ಎಂದು ಅಶ್ವಿನ್ ಎಲ್ಲರನ್ನೂ ಬರಹೇಳಿದ.
ಆದರೂ ಚಳಿ ಆಗುತಿತ್ತು. ನಾವೆಲ್ಲಾ ಓಟ್ಟು ಸೇರಿ ರಾತ್ರಿ ತುಂಬಾ ಹೊತ್ತು ಮಜವಾಗಿ ಹರಟುತಿದ್ದೆವು. ಬಿಸಿ ಬಿಸಿ ಚಹಾ ಬಂತು.
ಇಷ್ಟರಲ್ಲಿ ಮುರಳಿ ಮತ್ತು ಕೆಲವರು ಕೆಳಗಡೆ ಹೋಗಿ ಬಂದರು. ತಿಂಗಳ ಬೆಳಕು ಈಗ ಎಲ್ಲಾ ಕಡೆ ಹರಡಿ ಒಂಥರಾ ಸುಂದರ ರಮ್ಯ ವಾತಾವರಣ ಸೃಷ್ಟಿಸಿತ್ತು.
ಯಾವಾಗ ನಿದ್ದೆ ಹತ್ತಿತೋ ತಿಳಿಯದು. ಆಮೇಲೆ ಬೆಳಗ್ಗೆ 6 ಘಂಟೆಗೇ ಎಚ್ಚರವಾದದ್ದು. ಬೆಡ್ ಟೀ ರೆಡಿ ಆಗಿತ್ತು. ಬೆಳಗ್ಗೆ ಅಲ್ಲೇ ಹಿಂದುಗಡೆ ಇರುವ ಅಗ್ನಿ ತೀರ್ಥದಲ್ಲಿ ಮುಖಮಾರ್ಜನ ತೀರಿಸಿಕೊಂಡು ಬಂದೆವು. ಗಟ್ಟಿ ಅವಲಕ್ಕಿ ನೆನೆಸಿಹಾಕಿ ಅದಕ್ಕೆ ಪುಳಿಯೋಗರೆ ಪುಡಿ ಮಿಕ್ಸ್ ಮಾಡಿದೆವು, ಮತ್ತೊಮ್ಮೆ ಚಹಾ ಮಾಡಿದ್ದರು. ಎಲ್ಲರಿಗೂ ನಾಷ್ಟಾ ಆಯಿತು. ಜಿಮ್ಮಿಗೆ ಸಹಾ ಹೊಟ್ಟೆ ತುಂಬಾ ಅವಲಕ್ಕಿ ಪುಳಿಯೋಗರೆ ಸಿಕ್ಕಿತ್ತು.
ದೇವಸ್ಥಾನದ ಅರ್ಚಕರು ಬೆಳಗ್ಗೆ 8 ಘಂಟೆಗೇ ಬರುತ್ತೇನೆ ಎಂದಿದ್ದರು. ಆದರೆ ಅವರ ಸುಳಿವೇ ಇಲ್ಲ. ದೂರದಲ್ಲೆಲ್ಲಾದರೂ ಬರುತ್ತಿರುವುದು ಕಾಣಿಸುವುದೇನೋ ಎಂದು ಕೆಳಗೆ ನೋಡಿದರೂ ಅವರನ್ನು ಕಾಣಲಿಲ್ಲ. ಏನೂ ಮಾಡುವುದು? ಹೊರಗಿನಿಂದಲೇ ಪಾರ್ವತಿ ಅಮ್ಮನಿಗೆ ನಮಿಸಿದೆವು. ಅಲ್ಲೆಲ್ಲಾನೀರು ಚಿಮುಕಿಸಿ ರವಿ ಮತ್ತು ಕಿರಣ ಶುದ್ಧ ಮಾಡಿದರು. ನಾವು ಕೊಂಡುಹೊಗಿದ್ದ ಎಲ್ಲಾ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಹೊತ್ತುಕೊಂಡು, ಅಲ್ಲಿಂದ ಹೊರಟು ಕೆಳಗಿಳಿದೆವು. ಬೇಗನೇ ಬೆಟ್ಟದ ಬುಡ ತಲುಪಿದೆವು. ಕಾರುಗಳು ಕ್ಷೇಮವಾಗಿದ್ದವು. ಮನೆಯವರಿಗೆ ಥ್ಯಾಂಕ್ಸ್ ಹೇಳಿ ಹೊರಗಡೆ ತಂದು ನಮ್ಮ ಲಗ್ಗೇಜ್ ಎಲ್ಲಾ ಅದರಲ್ಲಿ ಇರಿಸಿ, ಪಕ್ಕದಲ್ಲೇ ಇರುವ ರಾಮಲಿಂಗೇಶ್ವರ ದೇವಾಲಯ ನೋಡಲು ಹೋದೆವು. ಬಹಳ ಪುರಾತನ ದೇವಾಲಯ. ರಾಮ,ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯರು ಪ್ರತಿಷ್ಠಾಪಿಸಿದ ಶಿವಲಿಂಗಗಳಿವೆ. ಇದರಲ್ಲಿ ರಾಮಲಿಂಗೇಶ್ವರನಿಗೆ
ಮಾತ್ರ ಪೂಜೆ. ಉಳಿದವರೆಲ್ಲಾ ಪೂಜಾವಂಚಿತರು. ದುರಾದೃಷ್ಟವಶಾತ್ ಇಲ್ಲಿ ಫೋಟೋ ತೆಗೆಯಲು ಅವಕಾಶವಿಲ್ಲ, ಇದು ಕೇಂದ್ರ ಸರಕಾರಕ್ಕೊಳಪಟ್ಟ ಪ್ರಾಚ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ, ಬೇಕಾದರೆ ಬೆಂಗಳೂರಿನಿಂದಲೇ ಅನುಮತಿ ಪಡೆದಿರಬೇಕು ಎಂದು ಅಲ್ಲಿರುವ ಓರ್ವ ಮೇಲ್ವಿಚಾರಕ ನಮ್ಮನ್ನು ತಡೆದನು. ಅಲ್ಲ, ಫೋಟೋ ತೆಗೆದರೆ ದೇವಾಲಯ ಸವೆದು ಹೋಗುತ್ತದೇನೋ? ಅಷ್ಟು ಪ್ರಾಮುಖ್ಯ ಹೊಂದಿದ, ಇದೇ ಇಲಾಖೆಗೆ ಒಳಪಟ್ಟ ಬೇಲೂರು, ಹಳೆಬೀಡುಗಳಲ್ಲಿ ಈ ತೆರನಾದ ನಿರ್ಬಂಧವಿಲ್ಲ. ಇಲ್ಲಿ ಯಾಕೆ ಹೀಗೆ? ಎಂದು ನಿರಾಶೆಯಾಯಿತು. ಆದರೂ ನಾವೂ ಹೊರಗಿನ ಆವರಣದಿಂದ ದೇವಾಲಯದ ಒಂದೆರಡು ಫೋಟೋ ತೆಗೆದೇಬಿಟ್ಟೆವು.
ನಾವು ಅಲ್ಲಿಂದ ಹಿಂತಿರುಗುವಾಗ ಅದೇ ಮೇಲ್ವಿಚಾರಕ ನಮ್ಮನ್ನು ಮಾತಾಡಿಸಿ ನಾವು ರಾತ್ರಿ ಬೆಟ್ಟದ ಮೇಲೆ ಮಲಕೊಂಡಿರಾ? ಬೇಕಿದ್ದರೆ ನಾನೇ ಇಲ್ಲಿ ಎಲ್ಲಾದರೂ ಮಲಗುವ ಏರ್ಪಾಡು ಮಾಡುತಿದ್ದೆ ಎಂದು ತುಂಬಾ ನೊಂದುಕೊಂಡರು. ಪಾಪ ಅವರಿಗೇನು ಗೊತ್ತು, ನಾವು ರಾತ್ರಿ ಬೆಟ್ಟದ ಮೇಲೇ ರಾತ್ರಿ ಕಳೆಯಲು ತಯಾರಾಗಿ ಬಂದವರೆಂದು!
ಆಮೇಲೆ ನಾವು ಶೃಂಗೇರಿ ಶಾರದಾ ಪೀಠ ದೇವಾಲಯಕ್ಕೆ ಹೋದೆವು. ಬಹಳ ಸುಂದರವಾದ ದೇವಾಲಯ.ಅಲ್ಲಿನ ಅರ್ಚಕರಿಗೆ ನಾವು ಹಿಂದಿನ ದಿನ ಬಂದದ್ದು ತಿಳಿದಿತ್ತು. ಇಡೀ ಊರಿಗೇ ತಿಳಿದಿತ್ತು. ಅಷ್ಟು ಚಿಕ್ಕ ಊರು! ಅವರಿಗೆ ನಮ್ಮ ಹುಚ್ಚುತನ ಕಂಡು ಆಶ್ಚರ್ಯವಾಗಿತ್ತು. ಅವರು ಅಲ್ಲಿ ಪೂಜೆ ಕಾರ್ಯ ವಹಿಸಿಕೊಂಡು 3 ವರ್ಷಗಳೇ ಆಯಿತಂತೆ. ಈ ವರ್ಷಗಳಲ್ಲಿ ಯಾರೂ ಅಲ್ಲಿ ಮೇಲೆ ರಾತ್ರಿ ಕಳೆದದ್ದು ಅವರ ಅರಿವಿನಲ್ಲಿಲ್ಲ ಎಂದರು. ಇಲ್ಲಿಗೆ ಬರುವ ಯಾತ್ರಿಕರ ಸಂಖ್ಯೆ ಬಹಳ ವಿರಳ. ನೀವು ಬಂದುದು ತುಂಬಾ ಸಂತೋಷ ಎಂದರು. ಹೀಗೇ ಇಲ್ಲಿಗೆ ಇನ್ನೂ ಹೆಚ್ಚಿನ ಯಾತ್ರಿಗಳು ಬರಲಿ ಎಂದು ಹಾರೈಸಿದರು.
ಪ್ರಸಾದ ಪಡಕೊಂಡು ನಾವು ಆವಣಿಯಿಂದ ಹೊರಟೆವು. ದೂರ ದೂರದವರೆಗೂ ಆವಣಿ ಬೆಟ್ಟ ಕಾಣಿಸುತಿತ್ತು.
ಮುಂದೆ ನಾವು ಕುರುಡುಮಲೆ, ಕೈಲಾಸಗಿರಿ ನೋಡಿಕೊಂಡು ಕೋಲಾರದ ಕೋಟಿಲಿಂಗೇಶ್ವರ ನೋಡಿಕೊಂಡು ಬೆಂಗಳೂರಿಗೆ ಬಂದೆವು.
ಆವಣಿಯು ಕುರುಡುಮಲೆ ಹಾಗೂ ಬಂಗಾರ ತಿರುಪತಿಗೆ ಸಮೀಪದಲ್ಲಿದೆ. ನೀವೆಂದಾದರೂ ಇಲ್ಲಿಗೆ ಹೋದರೆ ಖಂಡಿತಾ ಆವಣಿಗೆ ಹೋಗಿರಿ. ನಿಮ್ಮನ್ನು ಆವಣಿ ನಿರಾಶೆಗೊಳಿಸುವುದಿಲ್ಲ.
ಫೋಟೋ ಕೃಪೆ - ವಿಶ್ವಾಸ್.